ಮಂಡ್ಯ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅವರ ಪ್ರೇರಣೆಯಿಂದ ಅಪ್ಪು ಜನೋತ್ಸವವನ್ನು ನ.19, 20ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ತಿಳಿಸಿದರು.
ನಗರದ ರೈತ ಸಭಾಂಗಣದ ಆವರಣದಲ್ಲಿ ಕುವೆಂಪು ಪ್ರತಿಮೆ ಬಳಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಆಯೋಜಿಸಿದ್ದ ಬೈಕ್ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿ, ಪುನೀತ್ ರಾಜ್ಕುಮಾರ್ ಅವರ ಸಾಧನೆ, ಆದರ್ಶ ಮತ್ತು ಮಾನವತಾವಾದದ ಸ್ಮರಣೆಗೆ ಸೀಮಿತವಾಗದೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಮೆರವಣಿಗೆ: ಸಾಮಾಜಿಕ ಬದಲಾವಣೆ ಮತ್ತು ಸಾಂಸ್ಕೃತಿಕ ಸಮನ್ವಯತೆ ಆಶಯದೊಡನೆ ಆಯೋಜಿಸಿರುವ ಈ ಸಮಾರಂಭ ನ.19ರ ಬೆಳಗ್ಗೆ 10.30ಕ್ಕೆ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಮತ್ತು ಸಾಮಾಜಿಕ ಜಾಗೃತಿ ಸ್ತಬ್ಧ ಚಿತ್ರ, ಕಲಾ ತಂಡಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದರು.
ನ.20ರಂದು ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10.30ಕ್ಕೆ ಪುನೀತ್ ರಾಜ್ ಉತ್ಸವ ಆಯೋಜಿಸಲಾಗಿದ್ದು, ಡಾ.ರಾಜ್ಕುಮಾರ್ ಅವರ 205 ಚಿತ್ರಗಳ ಛಾಯಾಚಿತ್ರ ಪ್ರದರ್ಶನ, ಅಪ್ಪು ಅವರ ಆದರ್ಶ ಮತ್ತು ಸಾಧನೆ ಸಮಾಲೋಚನೆ, ಯುವಜನರ ಆದ್ಯತೆ, ಸವಾಲು, ಮಾನವೀಯ ಮೌಲ್ಯಗಳ ಮಹತ್ವ ಕುರಿತು ಚಿಂತನೆ ನಡೆಸಲಾಗುವುದು. ಅಲ್ಲದೇ, ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
Related Articles
ಈಗಾಗಲೇ ಭಿತ್ತಿ ಪತ್ರ ಬಿಡುಗಡೆ ಅಭಿಯಾನ ಆರಂಭಗೊಂಡಿದ್ದು, ವಿವಿಧ ಜನ ವರ್ಗ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನ ನಡೆಸಲಾಗುತ್ತದೆ. ಪುನೀತ್ ರಾಜ್ಕುಮಾರ್ರ ಪರೋಪಕಾರ ಮನೋಭಾವವನ್ನು ಜನಸಾಮಾನ್ಯರಿಗೆ ತಲುಪಿಸಲು ಅಪ್ಪು ಜನೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಕೌಟಿಲ್ಯ ರಘು, ಡಿಜೆಸಿಎಂ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ತಿರುಮಲಾಪುರ ನಾರಾಯಣ್, ಮುಖಂಡರಾದ ಎಂ.ಕೃಷ್ಣ, ಹಾಲಹಳ್ಳಿ ಪುಟ್ಟಸ್ವಾಮಿ, ಡಿ.ರಮೇಶ್, ಪ್ರದೀಪ್, ಅಮ್ಜದ್ಪಾಷಾ, ಆನಂದ, ಎಚ್.ಪಿ.ಸತೀಶ್, ಕಾಂತರಾಜು, ನಾರಾಯಣಸ್ವಾಮಿ, ಹನುಮಂತಯ್ಯ ಮತ್ತಿತರರು ಉಪಸ್ಥಿತರಿದ್ದರು.
ಪುನೀತ್ರ ಪ್ರಭಾವದಿಂದ ಸಾಮಾಜಿಕ ಬದಲಾವಣೆ : ಡಾ.ರಾಜ್ಕುಮಾರ್-ಪುನೀತ್ ಅವರನ್ನು ಕೇವಲ ಕಲಾವಿದರನ್ನಾಗಿ ಪರಿಗಣಿಸಲಾಗದೆ, ಅವರ ಪ್ರಭಾವದಿಂದ ಉಂಟಾಗಿರುವ ಸಾಮಾಜಿಕ ಬದಲಾವಣೆ ಅಪೂರ್ವವಾದದ್ದು ಎಂದು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಕೌಟಿಲ್ಯ ರಘು ಬಣ್ಣಿಸಿದರು. ಕನ್ನಡ ಚಿತ್ರರಂಗಕ್ಕೆ ಉತ್ತಮ ಸ್ಥಾನಮಾನ ತಂದುಕೊಟ್ಟ ಡಾ.ರಾಜ್ಕುಮಾರ್, ಸಾಮಾಜಿಕ, ಪೌರಾಣಿಕ ಮತ್ತು ಐತಿಹಾಸಿಕ ಸಮಗ್ರ ಹಿನ್ನೆಲೆ ಪ್ರತಿನಿಧಿ ಸುತ್ತಾ, ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಇವರದ್ದೇ ಹಾದಿಯಲ್ಲಿ ಸಾಗುತ್ತಾ ಹೊಸ ಪರಂಪರೆಯನ್ನು ಹುಟ್ಟುಹಾಕಿದ ಅದ್ವಿ ತೀಯ ಶಕ್ತಿ ಪುನೀತ್ ಎಂದು ಬಣ್ಣಿಸಿದರು.