Advertisement

ಶಾಂತಿಭಂಗ ಆರೋಪಿಯ ಗಡೀಪಾರಿಗೆ ಮನವಿ

11:41 PM Jul 19, 2019 | Team Udayavani |

ಮೂಡುಬಿದಿರೆ: ಸಾರ್ವಜನಿಕ ಶಾಂತಿ ಭಂಗದ ಹಿನ್ನೆಲೆಯಲ್ಲಿ ಮೂಲ್ಕಿಯಲ್ಲಿ 8, ಬೆಳ್ತಂಗಡಿಯಲ್ಲಿ 5 ಪ್ರಕರಣಗಳು ದಾಖಲಾಗಿದ್ದು ಸದ್ಯ ತೆಂಕಮಿಜಾರು ಗ್ರಾ.ಪಂ. ಕೊಪ್ಪದಕುಮೇರು ನಿವಾಸಿ ರವಿ ದೇವಾಡಿಗ ಅವರನ್ನು ಕೂಡಲೇ ಗ್ರಾಮದಿಂದ ಗಡಿಪಾರು ಮಾಡಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಬಂಗಬೆಟ್ಟು ಶಾಲೆಯಲ್ಲಿ ಶುಕ್ರವಾರ ನಡೆದ ತೆಂಕಮಿಜಾರು ಗ್ರಾಮಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಗ್ರಾ.ಪಂ. ಅಧ್ಯಕ್ಷ ಮಿಜಾರುಗುತ್ತು ಹರಿಪ್ರಸಾದ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮಸಭೆಯಲ್ಲಿ ಗ್ರಾಮಸ್ಥರು ಸೇರಿ ರವಿ ದೇವಾಡಿಗ ಮಾನಭಂಗ ಪ್ರಕರಣ, ಬ್ಲ್ಯಾಕ್‌ ಮೇಲ್, ಹಲ್ಲೆ ಸಹಿತ ಹಲವು ಸಾರ್ವಜನಿಕ ಶಾಂತಿ ಭಂಗ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ತನಿಖೆಗೆ ಹೋದ ಸರ್ಕಲ್ ಇನ್‌ಸ್ಪೆಕ್ಟರ್‌ ಹಾಗೂ ಸಿಬಂದಿಗಳ ಮೇಲೆ ಹಲ್ಲೆ ನಡೆಸಲೆತ್ನಿಸಿರುವುದನ್ನು ಸಭೆಯಲ್ಲಿ ಮಂಡಿಸಿ, ಹೀಗಾದರೆ ನಾವು ಬದುಕುವುದು ಹೇಗೆ? ಈ ಒಬ್ಬನನ್ನು ಬಂಧಿಸಲು 32 ಮಂದಿ ಪೊಲೀಸರು ಬರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಿಡಿಓ ಎನ್‌. ಭಾಗ್ಯಲಕ್ಷ್ಮೀ, ಪಂಚಾಯತ್‌ ಸದಸ್ಯೆ ಲಕ್ಷ್ಮೀ ಅವರು ಕೂಡ ಕಳವಳವ್ಯಕ್ತಪಡಿಸಿದರು.

ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ಪಂಚಾಯತ್‌ ಈತನ ಗಡಿಪಾರಿಗೆ ಜಿಲ್ಲಾಧಿಕಾರಿಯವರಿಗೆ ಮನವಿಗೆ ನಿರ್ಣಯ ಕಳಿಸಿರಿ. ಇನ್ನೊಂದೆಡೆ, ಆತನೊಂದಿಗೆ ಸಂಪರ್ಕವಿರುವ ಪಂಚಾಯತ್‌ ಸದಸ್ಯರು ಆತನ ಜಾಗ ವಿಲೇವಾರಿ ಮಾಡಿಸಿ ದೂರ ಕಳಿಸಲು ಪ್ರಯತ್ನಮಾಡಿರಿ ಎಂದರು.

Advertisement

ಕುಕ್ಕುದಕಟ್ಟೆಯಲ್ಲಿ ದಾರಿದೀಪ ಅಳವಡಿಸಿ
9 ವರ್ಷಗಳಿಂದಲೂ ಕುಕ್ಕುದಕಟ್ಟೆ ಪ್ರದೇಶದಲ್ಲಿ ದಾರಿದೀಪ, ಸೋಲಾರ್‌ ದೀಪ ಅಳವಡಿಸಲು ಗುತ್ತಿಗೆದಾರರು ಸಿಗುವುದಿಲ್ಲ ಎಂಬ ಕಾರಣವೊಡ್ಡಿ ಬಂದ ಹಣ ವಾಪಾಸ್‌ ಹೋಗುವಂತಾಗಿದೆ ಎಂದು ಬಾಲಕೃಷ್ಣ ಆರೋಪಿಸಿದರು. ಈ ಬಗ್ಗೆ ಪಂಚಾಯತ್‌ ಸದಸ್ಯರ ವಿವರಣೆ ಗ್ರಾಮಸ್ಥರಿಗೆ ಸಹ್ಯವಾಗಲಿಲ್ಲ.

ಅಶ್ವತ್ಥಪುರ ಪಾದೆರಸ್ತೆಯ ನಡುವೆ ಇರುವ ವಿದ್ಯುತ್‌ ಕಂಬವನ್ನು ತೆಗೆಯಿರಿ, ಜನರಿಗೆ, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಈ ಕುರಿತು ಮೆಸ್ಕಾಂ ವಿನಾಯಿತಿ ಶುಲ್ಕದಲ್ಲಿ ಕಂಬವನ್ನು ನಿವಾರಿಸಬೇಕು ಎಂದು ಸುಚರಿತ ಶೆಟ್ಟಿ ವಿನಂತಿಸಿದರು.

ಕೊಳಚೆ ನೀರು
ಶಿಕ್ಷಣ ಸಂಸ್ಥೆಯೊಂದರಿಂದ ಹೊರಬರುವ ತ್ಯಾಜ್ಯನೀರು ತನ್ನ ಬಾವಿಯ ನೀರನ್ನು ಕಲುಷಿತಗೊಳಿಸಿದೆ. ಆ ನೀರನ್ನು ಕುಡಿಯಬಾರದು ಎಂದು ಪ್ರಮಾಣಿಸಲಾಗಿದೆ. ಪೊಲೀಸ್‌ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಇದರ ಮೇಲೆ ಪಂಚಾಯತ್‌ ನೀರಿನ ಬಿಲ್ಮೇಲೆ ದಂಡ ವಿಧಿಸಿದೆ. ತಾನು ಕಟ್ಟಲಾರೆ ಎಂದು ಸಂತ್ರಸ್ತ ಸೋಮಪ್ಪ ತಿಳಿಸಿದಾಗ, ಪಿಡಿಓ ಅವರು ಪಂಚಾಯತ್‌ನಿಂದ ಸದ್ರಿ ಸಂಸ್ಥೆಗೆ ಪಂಚಾಯತ್‌ ನೋಟೀಸ್‌, ಪೊಲೀಸ್‌ ದೂರು ಕೊಡಲಾಗಿದೆ. ನೀವು ಬಿಲ್ ಕಟ್ಟಬೇಕಾಗಿಲ್ಲ ಎಂದು ಪ್ರಕರಣ ಮುಗಿಸಿದರು. ಕಸ, ತ್ಯಾಜ್ಯ ಸಂಗ್ರಹಿಸದ ಮನೆಗಳಿಂದಲೂ ಕನಿಷ್ಟ ವಾರ್ಷಿಕ ರೂ. 720 ವಸೂಲು ಮಾಡಲಾಗುತ್ತಿರುವ ಬಗ್ಗೆ ರಾಮಕೃಷ್ಣ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸರಕಾರಿ ಶಾಲೆ ಉಳಿಸಿ
ಮಂಗೇಬೆಟ್ಟು ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು ಕೂಡಲೇ ನೇಮಕ ಮಾಡಿ ಸರಕಾರಿ ಶಾಲೆಯನ್ನು ಉಳಿಸಬೇಕು ಎಂದು ಚೈತನ್ಯಭಟ್ ಕಳವಳವ್ಯಕ್ತಪಡಿಸಿದರು.ಕೃಷಿ ಇಲಾಖೆಯ ಅಧಿಕಾರಿ ಯುಗೇಂದ್ರ ಅವರು ಕೃಷಿ ಇಲಾಖಾವರು ಮಾಹಿತಿ ನೀಡಿದರು. ದೈ.ಶಿ. ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ನೋಡಲ್ ಅಧಿಕಾರಿಯಾಗಿದ್ದರು. ಸಿಬಂದಿ ರಾಕೇಶ್‌ ಭಟ್ ನಿರೂಪಿಸಿ, ವರದಿ ಮಂಡಿಸಿದರು. ಉಪಾಧ್ಯಕ್ಷೆ ಯಶೋಧಾ ಉಪಸ್ಥಿತರಿದ್ದರು.

ಸುರತ್ಕಲ್ನ ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಮಳೆ ನೀರು ಕೊಯ್ಲು ಬಗ್ಗೆ ಮಾಹಿತಿ ನೀಡಿ, ಅತ್ಯಂತ ಸರಳ ಕ್ರಮದಲ್ಲಿ ಮಳೆ ನೀರನ್ನು ಶೋಧಿಸಿ ನೇರವಾಗಿ ಬಾವಿಗೆ ಬಿಡುವ, ಇಂಗಿಸುವ, ಬೋರ್‌ವೆಲ್ ರಿಚಾರ್ಜ್‌ ಮಾಡುವ ವಿಧಾನಗಳನ್ನು ತಿಳಿಸಿಕೊಟ್ಟರು.

ಮಳೆ ನೀರು ಕೊಯ್ಲು ಬಗ್ಗೆ ಮಾಹಿತಿ
ಸುರತ್ಕಲ್ನ ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಮಳೆ ನೀರು ಕೊಯ್ಲು ಬಗ್ಗೆ ಮಾಹಿತಿ ನೀಡಿ, ಅತ್ಯಂತ ಸರಳ ಕ್ರಮದಲ್ಲಿ ಮಳೆ ನೀರನ್ನು ಶೋಧಿಸಿ ನೇರವಾಗಿ ಬಾವಿಗೆ ಬಿಡುವ, ಇಂಗಿಸುವ, ಬೋರ್‌ವೆಲ್ ರಿಚಾರ್ಜ್‌ ಮಾಡುವ ವಿಧಾನಗಳನ್ನು ತಿಳಿಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next