Advertisement

ಮಡಿಕೇರಿಯಲ್ಲಿ ಮಾದಕ ವ್ಯಸನಿಗಳಿಂದ ಆತಂಕ  

04:52 PM Apr 10, 2017 | Team Udayavani |

ಮಡಿಕೇರಿ: ಕರ್ತವ್ಯದಲ್ಲಿ ಖಡಕ್‌ ಆಗಿದ್ದ ವರ್ತಿಕಾ ಕಟಿಯಾರ್‌ ಅವರು ಟಿಪ್ಪುಜಯಂತಿ ಸಂದರ್ಭ ನಡೆದ ಗಲಭೆಯಿಂದಾಗಿ ಕೊಡಗು ಜಿಲ್ಲೆಯನ್ನು ಬಿಡಬೇಕಾಯಿತು. ಅನಂತರ ಬಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್‌ ಅವರ ಮೇಲೆ ಆರಂಭದಲ್ಲಿ ಜಿಲ್ಲೆಯ ಜನರಿಗೆ ಅಪಾರ ವಿಶ್ವಾಸವಿತ್ತು.

Advertisement

ಕಾರಣ 2016ರ ಟಿಪ್ಪು ಜಯಂತಿ ಸೇರಿದಂತೆ ಕೆಲವು ಕ್ಲಿಷ್ಟಕರ ಪರಿಸ್ಥಿತಿಯನ್ನು ಅವರು ಯಶಸ್ವಿಯಾಗಿಯೇ ನಿಭಾಯಿಸಿದ್ದರು. ಇದೇ ಕಾರಣಕ್ಕಿರಬೇಕು ಎಸ್‌ಪಿ ಇಂದು ನಿರಾಳರಾಗಿದ್ದಾರೆ. ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರದ ಜನನಿಬಿಡ ಪ್ರದೇಶದಲ್ಲೇ ಕೊಲೆಯಾದರೂ ಅಮಾಯಕ ವರ್ತಕರ ಮೇಲೆ ದಾಳಿಯಾದರೂ ಎಸ್‌ಪಿ ರಾಜೇಂದ್ರಪ್ರಸಾದ್‌ ಅವರು ಕಾನೂನು ಸುವ್ಯವಸ್ಥೆ ಬಿಗಿಗೊಳಿಸುವಂತೆ ಪೊಲೀಸರಿಗೆ ಖಡಕ್‌ ಸೂಚನೆಯನ್ನು ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿವೆ.

ಇತ್ತೀಚೆಗೆ ನಗರದ ಕನ್ನಂಡಬಾಣೆಯಲ್ಲಿ ರಾತ್ರಿ 10-11 ಗಂಟೆ ಸುಮಾರಿನಲ್ಲಿ ಗೋಕುಲ್‌ ಎಂಬ ಯುವಕನ ಕೊಲೆಯಾಗಿದೆ. ಇದಾದ ಕೆಲವೇ ದಿನಗಳಲ್ಲಿ ಕೈಗಾರಿಕಾ ಬಡಾವಣೆಯಲ್ಲಿ ರಾತ್ರಿ 9-10 ಗಂಟೆಯ ಆಸುಪಾಸಿನಲ್ಲಿ ವರ್ತಕ ಜ‚ಬೇರ್‌ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಮಾ. 31ರಂದು ಸಂಜೆ 6-7 ಗಂಟೆ ಸುಮಾರಿಗೆ ಸ್ಟೋನ್‌ಹಿಲ್‌ ಬಳಿ ರವಿ ಎಂಬಾತನ ಕೊಲೆ ಬರ್ಬರವಾಗಿ ನಡೆದಿದೆ. ಇಂದು ನಗರದಲ್ಲಿ ಯಾವ ಹೊತ್ತಿನಲ್ಲಿ, ಯಾರನ್ನು ಬೇಕಾದರೂ ಕೊಲ್ಲಬಹುದು, ಹಲ್ಲೆ ನಡೆಸಿ ರಕ್ತ ಹರಿಸಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಡ್ಡೆ ಹುಡುಗರಿಗೆ, ಪುಡಿ ರೌಡಿಗಳಿಗೆ ಪೊಲೀಸರ ಭಯವೇ ಇಲ್ಲದಂತ್ತಾಗಿದೆ. ನಗರದ ಖಾಸಗಿ ಬಸ್‌ ನಿಲ್ದಾಣ ಹಾಗೂ ಇಂದಿರಾಗಾಂಧಿ ವೃತ್ತದಲ್ಲಿ ಮಾತ್ರ ತಮ್ಮ ವಾಹನದೊಂದಿಗೆ ಕಾಣಿಸಿಕೊಳ್ಳುವ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಪೋಲಿ, ಪುಂಡರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡಿಕೊಂಡು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಪ್ರದೇಶಗಳಿಗೆ ತೆರಳುತ್ತಲೇ ಇಲ್ಲ ಎನ್ನುವ ಅಸಮಾಧಾನ ಸಾರ್ವಜನಿಕರಿಂದ ವ್ಯಕ್ತವಾಗಿದೆ. 

ಕೊಡಗು ಪೊಲೀಸ್‌ ಇಲಾಖೆಗೆ ಅನೇಕ ನೂತನ ವಾಹನಗಳನ್ನು ಸರಕಾರ ನೀಡಿದೆ. ಇವುಗಳನ್ನು ಬಳಸಿ ಕೊಂಡು ನೈಟ್‌ಬೀಟ್‌ ಮಾಡಲು ಅವಕಾಶವಿದೆ. ಗೋಕುಲ್‌ ಎಂಬಾತನ ಕೊಲೆ ನಡೆದಾಗಲೇ ಪೊಲೀಸರು ಎಚ್ಚೆತ್ತುಕೊಂಡಿದ್ದಲ್ಲಿ ನಗರದ ಹೃದಯ ಭಾಗದಲ್ಲೇ ಜುಬೇರ್‌ ಎಂಬಾತನ ಮೇಲೆ ಹಲ್ಲೆ ಮತ್ತು ರವಿ ಎಂಬಾತನ ಕೊಲೆ ನಡೆಯುತ್ತಿರಲಿಲ್ಲ.

ಮಡಿಕೇರಿ ನಗರದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಗಲ್ಲಿಗಲ್ಲಿಗಳಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತಿರುವ ಪುಡಿ ರೌಡಿಗಳು ಗಾಂಜಾ, ಮದ್ಯ, ಮಾದಕ ದ್ರವ್ಯಗಳನ್ನು ಸೇವಿಸಿ “ಡೀಲ್‌, ಸ್ಕೆಚ್‌, ಮರ್ಡರ್‌’ ಎಂದು ಕಾನೂನಿಗೆ ವಿರುದ್ಧವಾದ ಮಾತುಗಳನ್ನು ಸಾರ್ವಜನಿಕವಾಗಿ ಆಡುತ್ತ ಜನರಲ್ಲಿ ಆತಂಕವನ್ನು ಸೃಷ್ಟಿಸುತ್ತಿದ್ದಾರೆ. 

Advertisement

ಮಾದಕ ದ್ರವ್ಯಗಳಿಗೆ ದಾಸರಾದವರು ಕೆಲವು ಬಡಾವಣೆಗಳ ಶಾಂತಿಯನ್ನು ಕೆಡಿಸುತ್ತಿದ್ದಾರೆ. ಕೇವಲ 17ರಿಂದ 24ರ ಹರೆಯದ ಯುವ ಸಮೂಹ ಹಾದಿ ತಪ್ಪುತ್ತಿದ್ದು, ಭಯ ಹುಟ್ಟಿಸಬೇಕಾದ ಪೊಲೀಸರೇ ನಮಗ್ಯಾಕೆ ಬೇಕು ಎಂದು ಕೈಕಟ್ಟಿ ಕುಳಿತಂತೆ ಕಂಡು ಬರುತ್ತಿದೆ. 

ಪೋಲಿ ಹುಡುಗರ ದಂಡು ರಾತ್ರಿ ಕಂಠಪೂರ್ತಿ ಕುಡಿದು ಹತ್ತು ಗಂಟೆಯ ಅನಂತರ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ಸಾಮಾನ್ಯ ವಾಗಿದೆ. ನಗರದಲ್ಲಿ ಎಲ್ಲೂ ಪೊಲೀಸ್‌ ಬೀಟ್‌ ಸಮರ್ಪಕವಾಗಿ ನಡೆಯದೇ ಇರುವುದರಿಂದ ಪುಡಿ ರೌಡಿಗಳು ರಾಜಾರೋಷವಾಗಿ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹಗಲಿನ ವೇಳೆಯಲ್ಲಿ ಕೂಡ ಅಲ್ಲಲ್ಲಿ ಗುಂಪು ಸೇರುವ ಪೋಲಿ ಪುಂಡರ ದಂಡು ಮಹಿಳೆ, ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. 
 
ಕೆಲವು ಆಟೋರಿಕ್ಷಾಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕಾರ್ಯಾಚರಣೆಯಲ್ಲಿ ತೊಡಗುತ್ತಿದ್ದು, ಈ ಬಗ್ಗೆ ಪೊಲೀಸರು ನಿಗಾ ವಹಿಸುತ್ತಿಲ್ಲ. ಮಳೆಗಾಲ ಆರಂಭವಾಗದಿದ್ದರೂ ಸೈಡ್‌ಕಟ್‌ಗಳನ್ನು ಎರಡೂ ಬದಿಗೆ ಅಳವಡಿಸಿಕೊಂಡು ನಿರ್ಜನ ಪ್ರದೇಶಗಳಲ್ಲಿ ನಿಲ್ಲುವ ಆಟೋರಿûಾಗಳು ಸಂಶಯವನ್ನು ಹುಟ್ಟು ಹಾಕುತ್ತಿವೆ. ಕೆಲವು ರಿûಾ ಚಾಲಕರು ನಿಯಮಕ್ಕೆ ವಿರುದ್ಧವಾಗಿ ಸೌಂಡ್‌ ಸಿಸ್ಟಮ್‌ಗಳ ಕಿರಿಕಿರಿಯನ್ನುಂಟು ಮಾಡುತ್ತಿದ್ದು, ಮದ್ಯವ್ಯಸನಿಗಳಾಗಿಯೂ ಆತಂಕವನ್ನು ಸೃಷ್ಟಿಸುತ್ತಿದ್ದಾರೆ. ಅತಿವೇಗದ ಚಾಲನೆ ಮೂಲಕ ಅಪಾಯವನ್ನು ತಂದೊಡ್ಡಿ ಕೊಳ್ಳುತ್ತಿದ್ದು, ಪೊಲೀಸರು ಸಾರ್ವಜನಿಕರ ಹಿತ ದೃಷ್ಟಿ ಯಿಂದ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ. 

ಹಿಂದೆ ಠಾಣಾಧಿಕಾರಿಗಳಾಗಿದ್ದ ಚಂದ್ರಶೇಖರ್‌, ಜೇಮ್ಸ್‌, ಭರತ್‌, ಬೋಪಣ್ಣ ಅವರು ಮಾದಕ ವ್ಯಸನಿ ಗಳಾಗಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಪೋಕರಿಗಳಿಗೆ ಲಾಠಿ ರುಚಿ ತೋರಿಸುತ್ತಿದ್ದರು. ನಗರದ ವಿವಿಧ ಬಡಾವಣೆಗಳಿಗೆ ಆಗಿಂದ್ದಾಗ್ಗೆ ಸುತ್ತು ಹಾಕಿ ಸಾರ್ವ ಜನಿಕ ವಲಯದಲ್ಲಿ ವಿಶ್ವಾಸವನ್ನು ಮತ್ತು ಧೈರ್ಯವನ್ನು ಮೂಡಿಸುತ್ತಿದ್ದರು. ಆದರೆ ಈಗಿನ ಸಿಬಂದಿ ಎಲ್ಲ ಮುಗಿದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಆಗಮಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. 

ನಗರದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿರುವುದ ರಿಂದ ಪೊಲೀಸ್‌ ಅಧಿಕಾರಿಗಳು 23 ವಾರ್ಡ್‌ಗಳ ನಗರಸಭಾ ಸದಸ್ಯರೊಂದಿಗೆ ಚರ್ಚಿಸಿ ಪ್ರತಿ ವಾರ್ಡ್‌ಗೆ ಪೊಲೀಸ್‌ ಬೀಟ್‌ ಹಾಕುವ ಅಗತ್ಯವಿದೆ. ಸಾರ್ವಜನಿಕರ ಸಹಯೋಗದಲ್ಲಿ ಪೊಲೀಸ್‌ ತಂಡವನ್ನು ರಚಿಸಿ ನಿಯಮ ಮೀರುತ್ತಿರುವ ಯುವ ಸಮೂಹದ ಮೇಲೆ ನಿಗಾ ಇರಿಸಬೇಕು ಮತ್ತು ಮಾದಕ ದ್ರವ್ಯಗಳ ಸರಬರಾಜುದಾರರನ್ನು ತತ್‌ಕ್ಷಣ ಬಂಧಿಸುವ ಅಗತ್ಯವಿದೆ. ಎಸ್‌ಪಿ ರಾಜೇಂದ್ರ ಪ್ರಸಾದ್‌ ಅವರು ಆರಂಭದ ಚುರುಕುತನವನ್ನು ಮತ್ತೂಮ್ಮೆ ಪ್ರದರ್ಶಿಸಿದರೆ ಒಂದಷ್ಟು ಜೀವಗಳು ಉಳಿಯಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಜಿಲ್ಲಾ ಪೊಲೀಸ್‌ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಐಜಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಪೊಲೀಸರಿಗೆ ಮೊದಲೇ ಸಿಕ್ಕಿತ್ತಾ ಸುಳಿವು?
ಗೋಕುಲ್‌ ಹತ್ಯೆ ನಡೆಯುವುದಕ್ಕೂ ಮೊದಲೇ ಈ ಘಟನೆ ನಡೆಯುತ್ತದೆ ಎನ್ನುವ ಸಣ್ಣದೊಂದು ಸುಳಿವು ಪೊಲೀಸರಿಗೆ ಸಿಕ್ಕಿತ್ತು ಎನ್ನುವ ಮಾಹಿತಿ ಇದೆ. ಆದರೂ ಪೊಲೀಸರು ಎಚ್ಚೆತ್ತುಕೊಂಡಿರಲಿಲ್ಲ ಎನ್ನುವ ಅಸಮಾಧಾನ ವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೂಮ್ಮೆ ಗ್ಯಾಂಗ್‌ ವಾರ್‌ ನಡೆಯುವ ಬಗ್ಗೆ ಈಗಾಗಲೇ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಈಗಲಾದರೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬುವುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next