Advertisement

ಕುಂದಾಪುರ: ಬೆಳಕಿಲ್ಲದ ರಸ್ತೆಯಲ್ಲಿ ಮತ್ತೊಂದು ಬಲಿ; ಕಾರು ಢಿಕ್ಕಿಯಾಗಿ ವ್ಯಕ್ತಿ ಸಾವು

01:52 AM Mar 04, 2022 | Team Udayavani |

ಕುಂದಾಪುರ: ಕತ್ತಲ ಕೂಪದಂತಿರುವ ಕುಂದಾಪುರದ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಮತ್ತೂಂದು ಅವಘಡ ಸಂಭವಿಸಿದೆ. ಪಾದಚಾರಿಗೆ ಕಾರು ಢಿಕ್ಕಿಯಾಗಿ ಸ್ಥಳದಲ್ಲೇ ಪಾದಚಾರಿ ಸಾವನ್ನಪ್ಪಿದ ದುರ್ಘ‌ಟನೆ ರಾಷ್ಟ್ರೀಯ ಹೆದ್ದಾರಿಯ ನೆಹರೂ ಮೈದಾನ ಸಮೀಪ ನಡೆದಿದೆ.

Advertisement

ರಾಮದುರ್ಗ ಮೂಲದ ಕೂಲಿ ಕಾರ್ಮಿಕನಾಗಿದ್ದ ಶಿವಪ್ಪ (32) ಮೃತ ಪಟ್ಟವರು.

ರಾತ್ರಿ ಸುಮಾರು 7.45ರ ವೇಳೆಗೆ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಉಡುಪಿ ಕಡೆಯಿಂದ ಬಂದ ಕಾರು ಢಿಕ್ಕಿಯಾಗಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನ ಸ್ಥಳಕ್ಕೆ ಕುಂದಾಪುರ ಸಂಚಾರಿ ಠಾಣಾ ಎಸ್‌ಐ ಸುಧಾಪ್ರಭು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬೀದಿ ದೀಪವಿಲ್ಲದ್ದೇ ಕಾರಣ :

Advertisement

ಕುಂದಾಪುರದ ಮೇಲ್ಸೆತುವೆ ಕಾಮಗಾರಿ ಮುಗಿದು, ಸಂಚಾರ ಆರಂಭಗೊಂಡು ಸರಿ ಸುಮಾರು ಒಂದು ವರ್ಷ ಆಗುತ್ತಿದೆ. ಇನ್ನೂ ಸಹ ಫ್ಲೈಓವರ್‌, ಅಂಡರ್‌ಪಾಸ್‌ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿಗೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರು ಬೀದಿ ದೀಪದ ವ್ಯವಸ್ಥೆ ಮಾಡಿಲ್ಲ. ಹೆದ್ದಾರಿಯಲ್ಲಿ ದಾರಿ ದೀಪವಿಲ್ಲದೆ ಇರುವುದರಿಂದ ವಾಹನ ಚಾಲಕರಿಗೆ ಪಾದಚಾರಿಗಳು ಕಾಣಿಸದೆ, ಅಪಘಾತಗಳು ಸಂಭವಿಸುತ್ತವೆ. ಬೆಳಕಿನ ವ್ಯವಸ್ಥೆ ಅಳವಡಿಸಲು ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. “ಉದಯವಾಣಿ’ಯು ಈ ಬಗ್ಗೆ ಅನೇಕ ಬಾರಿ ವಿಶೇಷ ವರದಿ ಪ್ರಕಟಿಸಿತ್ತು.

ಆಕ್ರೋಶ :

ಇದು ಫ್ಲೈಓವರ್‌ನಲ್ಲಿ ಸಂಚಾರ ಆರಂಭಗೊಂಡ ಬಳಿಕ 6ನೇ ಅಪಘಾತ ಎನ್ನಲಾಗಿದೆ. ಬೀದಿದೀಪದ ವ್ಯವಸ್ಥೆಯಿಲ್ಲದೆ ಸಾಲು – ಸಾಲು ಅಪಘಾತ ವಾಗುತ್ತಿದ್ದರೂ, ಗಂಭೀರವಾಗಿ ಪರಿಗಣಿಸದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next