Advertisement

ತಮಿಳುನಾಡಿನಲ್ಲಿ ಬಿಜೆಪಿ ಪ್ರಭಾವ ಹೆಚ್ಚಲಿದೆ: ಅಣ್ಣಾಮಲೈ

12:22 AM Feb 28, 2023 | Team Udayavani |

ಉಡುಪಿ: ತಮಿಳುನಾಡಿನಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟನಾತ್ಮಕವಾಗಿ ಕಟ್ಟುತ್ತಿದ್ದೇವೆ. ಮುಂದೆ ಬರಲಿರುವ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ದೊಡ್ಡಮಟ್ಟದ ಪ್ರಭಾವ ಬೀರಲಿದ್ದೇವೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡಿನಲ್ಲಿ ಪಕ್ಷ ಹಂತಹಂತವಾಗಿ ಬೆಳೆಯುತ್ತಿದೆ. ದ್ರಾವಿಡ ರಾಜಕೀಯ ಪ್ರಭಾವದ ಜತೆಗೆ ಹೆಚ್ಚು ರಾಜಕೀಯ ಪಕ್ಷಗಳು ಇಲ್ಲಿವೆ. ಬೇರೆ ಬೇರೆ ಸಂದರ್ಭದಲ್ಲಿ ಬಿಜೆಪಿಯ ಸಂಸದರು, ಶಾಸಕರು ಆಯ್ಕೆಯಾಗಿದ್ದರು. 1999ರಲ್ಲಿ ನಾಲ್ಕು ಸಂಸದರು, 2001ರಲ್ಲಿ ನಾಲ್ಕು ಶಾಸಕರು ಹಾಗೂ ಪ್ರಸ್ತುತ 4 ಶಾಸಕರು ಸೇವೆ ಸಲ್ಲಿಸುತ್ತಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯ ಸಾಧನೆ ಮಹತ್ವದ್ದಾಗಿರಲಿದೆ. ಯುವಕರು, ಹಿರಿಯರು, ಮಹಿಳೆಯರು ದೊಡ್ಡ ಮಟ್ಟದಲ್ಲಿ ಪಕ್ಷಕ್ಕೆ ಆಕರ್ಷಿತರಾಗಿ ಬರುತ್ತಿದ್ದಾರೆ. ಶೇ.26ರಷ್ಟು ಬೆಳವಣಿಗೆ ದರವಿದೆ ಎಂದರು.

ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ
ತಮಿಳುನಾಡಿನ ಜನರು ರಾಷ್ಟ್ರೀಯ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದಾರೆ. 1967ರ ವರೆಗೂ ಕಾಂಗ್ರೆಸ್‌ ಇತ್ತು. ಅವರ ಕೆಲವು ಕೆಟ್ಟ ನಿರ್ಧಾರದಿಂದ ತಮಿಳುನಾಡು ಜನ ಅವರನ್ನು ದೂರ ಮಾಡಿದರು. ಅನಂತರ ಕೆಲವು ದ್ರಾವಿಡ ಪಕ್ಷಗಳು ಆಡಳಿತಕ್ಕೆ ಬಂದವು. ರಾಷ್ಟ್ರೀಯ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ತಮಿಳುನಾಡು ಜನರಿಗೆ ಸಾಕಷ್ಟು ಗೌರವವಿದೆ. ಸಮಸ್ಯೆಗೆ ಸ್ಪಂದಿಸುವ ಪಕ್ಷದೊಂದಿಗೆ ಜನ ಸದಾ ಇದ್ದೇ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲಿಯಲು ಅವಕಾಶ
ಕರ್ನಾಟಕದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಸಾಕಷ್ಟು ಬಲಿಷ್ಠವಾಗಿದೆ. ಹಲವು ಮಾಜಿ ಮುಖ್ಯಮಂತ್ರಿಗಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರೊಂದಿಗೆ ಕಾರ್ಯ ನಿರ್ವಹಿಸಲು, ಕಾರ್ಯ ಕರ್ತರೊಂದಿಗೆ ಬೆರೆಯಲು ಪಕ್ಷ ಹೊಸ ಜವಾಬ್ದಾರಿ ನೀಡಿದೆ. ಇದರಿಂದ ತಮಿಳುನಾಡಿನಲ್ಲಿ ಪಕ್ಷವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬೆಳೆಸಲು ಹಿರಿಯರ ಮಾರ್ಗದರ್ಶನ, ಸಲಹೆ ಸಿಗಲಿದೆ. ಕರ್ನಾಟಕದ ಕರಾವಳಿಯಲ್ಲಿ ಸಾಮಾಜಿಕ ವ್ಯವಸ್ಥೆ ತುಂಬಾ ಚೆನ್ನಾಗಿದೆ ಮತ್ತು ಅಭಿವೃದ್ಧಿಯೂ ಕಾಣಬಹುದಾಗಿದೆ. ಬಿಜೆಪಿ ಇಲ್ಲಿ ಎಲ್ಲ ಹಂತದಲ್ಲಿ ಬೆಳೆದಿದೆ. ಗ್ರಾ.ಪಂ.ನಿಂದ ಲೋಕಸಭೆಯವರೆಗೂ ಸದಸ್ಯರಿದ್ದಾರೆ. ಪಕ್ಷದ ಬೇರು ಗಟ್ಟಿಯಾಗಿದೆ. ಹೀಗಾಗಿ ಕಲಿಯಲು ಇದೊಂದು ಅವಕಾಶ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್‌ನಲ್ಲಿ ನಿವೃತ್ತಿಯಿಲ್ಲ
ಕಾಂಗ್ರೆಸ್‌ ಪಕ್ಷದಲ್ಲಿ ನಿವೃತ್ತಿ ಎಂಬುದಿಲ್ಲ. ಪಕ್ಷ ಕಟ್ಟಿದವರನ್ನು ಮೂಲೆಗುಂಪು ಮಾಡಿದ್ದಾರೆ. ಈಗ ಇರುವುದು ಕುಟುಂಬ ಆಧಾರಿತ ಇಂದಿರಾಗಾಂಧಿ ಕಾಂಗ್ರೆಸ್‌ ಮಾತ್ರ. ನಮ್ಮ ಪಕ್ಷದಲ್ಲಿ ಜನರು ನಾಯಕರಾಗುತ್ತಾರೆ. ಕಾಂಗ್ರೆಸ್‌ನಲ್ಲಿ ಹಾಗಿಲ್ಲ ಎಂದರು.

Advertisement

ದಾಖಲೆಯೊಂದಿಗೆ ಬನ್ನಿ
ಸುಳ್ಳು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ದಾಖಲೆಗಳೊಂದಿಗೆ ಚರ್ಚೆಗೆ ಬನ್ನಿ. ತಮಿಳುನಾಡಿನಲ್ಲಿ ಚುನಾವಣೆ ನಡೆಯುತ್ತಿಲ್ಲ. ಆದರೂ ಕಳೆದ ಮೂರು ತಿಂಗಳಲ್ಲಿ 43 ಕೇಂದ್ರ ಸಚಿವರು ಭೇಟಿ ನೀಡಿದ್ದಾರೆ. ನಮ್ಮದು ಜನಸ್ನೇಹಿ ಸರಕಾರ ಹೀಗಾಗಿ ಮಂತ್ರಿಗಳು ಜನರೊಂದಿಗೆ ಇರುತ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಇದ್ದಾಗ ಸಚಿವರ ಭೇಟಿಗೆ 5 ಲಕ್ಷ ರೂ. ಕೊಡಬೇಕಾದ ಪರಿಸ್ಥಿತಿ ಇತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದರು.

ನೈತಿಕತೆ ಇಲ್ಲದ ಸರಕಾರ
ಸದ್ಯ ತಮಿಳುನಾಡಿನಲ್ಲಿ ಇರುವ ಡಿಎಂಕೆ ಸರಕಾರಕ್ಕೆ ನೈತಿಕತೆ ಇಲ್ಲ. ಮುಖ್ಯಮಂತ್ರಿಯವರು ಸೈನಿಕರಿಗೂ ಕನಿಷ್ಠ ಮರ್ಯಾದೆ ನೀಡುತ್ತಿಲ್ಲ. ಇತ್ತೀಚಿಗೆ ಸಾವನ್ನಪ್ಪಿದ ಯೋಧರ ಪರವಾಗಿ ನಾವು ಧ್ವನಿ ಎತ್ತಿದ್ದೇವೆ. ಬಿಜೆಪಿಯಿಂದ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next