Advertisement

ಭತ್ತ ನಾಟಿಗೆ ಅಣಿಯಾದ ಅನ್ನದಾತ

06:05 PM Aug 03, 2021 | Team Udayavani |

ಹುಣಸಗಿ: ಕಳೆದ ಹಿಂಗಾರು ಹಂಗಾಮಿನಲ್ಲಿ ಭತ್ತಕ್ಕೆ ಉತ್ತಮ ಬೆಲೆ ಸಿಗದೇ ಕೊರೊನಾ ತಂದೊಡ್ಡಿದ ಆಘಾತದಿಂದ ಕೈ ಸುಟ್ಟುಕೊಂಡ ಅನ್ನದಾತರು ಇದೀಗ ಮುಂಗಾರು ಭತ್ತ ನಾಟಿ ಮಾಡುತ್ತಿದ್ದಾರೆ. ಕೊರೊನಾ ಎರಡನೇ ಅಲೆಗೆ ಕೂಲಿ ಸಿಗದೇ ಪರದಾಡಿದ ಕೂಲಿ ಕಾರ್ಮಿಕರಿಗೆ ಸದ್ಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದೆಲ್ಲೆಡೆ ಕೆಲಸ ಸಿಕ್ಕಿದ್ದು ಕೃಷಿ ಚಟುವಟಿಕೆ ಸದ್ದು ಮಾಡಿದೆ.

Advertisement

ಜೂನ್‌ನಲ್ಲಿ ನಾಟಿಗಾಗಿ ಸಸಿ ಹಾಕಿದ್ದರು. ಜುಲೈನಲ್ಲಿ ಸಸಿಗಳು ಸಂಪೂರ್ಣ ನಾಟಿ ಹಂತಕ್ಕೆ ಬಂದಿದ್ದು, ಕಾರ್ಮಿಕರಿಂದ ಕೀಳಿಸಲಾಗುತ್ತಿದೆ. ಈಗಾಗಲೇ ಶೇ.50 ಭತ್ತ ನಾಟಿ ಮಾಡಲಾಗಿದೆ. ಇನ್ನು ಶೇ.50 ಭತ್ತ ನಾಟಿಯಲ್ಲಿ ರೈತರು ನಿರತರಾಗಿದ್ದಾರೆ.

ಸುರಪುರ-ಹುಣಸಗಿ ಪ್ರದೇಶದಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ 54,758 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಆದರೆ ಕಳೆದ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿ ನಷ್ಟ ಅನುಭವಿಸಿದ ರೈತರು ಈಗ ಭತ್ತದ ಗದ್ದೆಯಲ್ಲಿ ಪರ್ಯಾಯ ಬೆಳೆ ಕೂಡ ಹಾಕಿದ್ದಾರೆ. ಹೀಗಾಗಿ ಈ ಬಾರಿ ಭತ್ತ ನಾಟಿ ಸ್ವಲ್ಪ ಕ್ಷೀಣಿಸಿದೆ ಎನ್ನಲಾಗುತ್ತಿದೆ.

ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾಗಿದ್ದರಿಂದ ರೈತರಿಗೆ ಮುಂಗಾರು ಹಂಗಾಮಿನಲ್ಲಿ ನೀರಿನ ಸಮಸ್ಯೆ ಇಲ್ಲ. ಹಾಗಾಗಿ ಖುಷಿಯಿಂದಲೇ ರೈತರು ನಾಟಿ ಕಾರ್ಯ ಕೈಗೊಂಡಿದ್ದು ಇಲ್ಲಿನ ರೈತರು ಪ್ರತಿ ವರ್ಷ ಬೇಸಿಗೆ ಹಂಗಾಮಿನಲ್ಲಿ ಮಾತ್ರ ನೀರಿನ ಚಿಂತೆ ಎದುರಿಸಬೇಕಿತ್ತು. ಕೆಲ ವರ್ಷ ಹಿಂಗಾರು ಹಂಗಾಮಿಗೂ ನೀರು ಸಿಗದೇ ಬರ ಎದುರಿಸಿದ್ದು ಮಾತ್ರ ಹೊಸದೇನಲ್ಲ.

ದುಬಾರಿ ಕೂಲಿ: ಭತ್ತ ನಾಟಿ ಮಾಡಲು ಪ್ರತಿ ಎಕರೆಗೆ 2,500 ರಿಂದ 3,000 ರೂ.ದಂತೆ ಕಾರ್ಮಿಕರು ನಾಟಿ ಮಾಡುತ್ತಾರೆ. ಹೆಚ್ಚಿನ ಕೂಲಿ ಪಡೆಯಲು ಸಂಜೆಯಾದರೂ ಕೃಷಿ ಚಟುವಟಿಕೆಯಲ್ಲಿ ಇರುತ್ತಾರೆ. ಪ್ರತಿಯೊಬ್ಬರು 15 ರಿಂದ 20 ಸಾವಿರ ರೂ. ದುಡಿಮೆ ಮಾಡಿಕೊಳ್ಳುತ್ತಾರೆ. ಭತ್ತ ಕಟಾವಿಗೆ ಬರುವವರೆಗೂ ನಿರಂತರ ಕೂಲಿ ಸಿಗುತ್ತದೆ ಎನ್ನುತ್ತಾರೆ ಕಾರ್ಮಿಕರು.

Advertisement

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ಭತ್ತಕ್ಕೆ (ಎಂಎಸ್‌ಪಿ) ಪ್ರಕಾರ 72 ರೂ. ಬೆಂಬಲ ಬೆಲೆ ನೀಡಿ ಕ್ವಿಂಟಲ್‌ ಭತ್ತಕ್ಕೆ 1,940 ರೂ. ಏರಿಕೆ ಮಾಡಿದೆ. ಆದರೆ ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ಸ್ವಾಮಿನಾಥನ್‌ ಆಯೋಗದ ಪ್ರಕಾರ ಭತ್ತ ಪ್ರತಿ ಕ್ವಿಂಟಲ್‌ಗೆ ಬೆಂಬಲ ಬೆಲೆ ಸೇರಿ 5 ಸಾವಿರ ರೂ. ದರ ನಿಗಯಾಗಬೇಕಿದೆ ಎನ್ನುವುದು ರೈತ ಸಂಘಟನೆ ಮುಖಂಡರ ಆಗ್ರಹ. ಹಲವು ಬಾರಿ ಹೋರಾಟ ಮಾಡಿದರೂ ಭತ್ತಕ್ಕೆ ಈವರೆಗೂ ಉತ್ತಮ ಬೆಲೆ ದೊರಕದೇ ಅನ್ನದಾತರು ಸಂಕಷ್ಟ ಎದುರಿಸುವುದು ತಪ್ಪಿಲ್ಲ. ರಾಸಾಯನಿಕ ಗೊಬ್ಬರ ದರ ಏರಿಕೆಯಾಗಿದೆ. ರೈತರ ಭತ್ತಕ್ಕೆ ಬೆಲೆ ಮಾತ್ರ ಏರಿಕೆ ಕಂಡಿಲ್ಲ ಎನ್ನುವುದು ರೈತರ ಅಸಮಾಧಾನ.

ಕಳೆದ ಮುಂಗಾರು-ಹಿಂಗಾರು ಭತ್ತದ ಬೆಲೆ ಕುಸಿತದಿಂದ ರೈತರು ನಷ್ಟಕ್ಕೀಡಾಗಿದ್ದಾರೆ. ಉತ್ತಮ ಬೆಲೆ ಇದ್ದರೆ ರೈತರಿಗೆ ಸಾವಿಲ್ಲ. ಭತ್ತವೇ ರೈತರಿಗೆ ಉಸಿರಾಗಿದೆ.  ದೀರ್ಘ‌ಕಾಲ ಕೆಲಸ ಸಿಗುವುದರಿಂದ ಕಾರ್ಮಿಕರಿಗೂ ವರದಾನವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಬೆಂಬಲ ಬೆಲೆ ಸೇರಿ ಕ್ವಿಂಟಲ್‌ಗೆ 5000 ರೂ. ಬೆಲೆ ನಿಗ ಪಡಿಸಬೇಕು.
ಬಸನಗೌಡ ಹುಡೇದ, ರೈತ

*ಬಾಲಪ್ಪ.ಎಂ. ಕುಪಿ

Advertisement

Udayavani is now on Telegram. Click here to join our channel and stay updated with the latest news.

Next