Advertisement
ಮುಂಗಾರು ಹಂಗಾಮಿನ ಕೃಷ್ಣಾಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ನಮ್ಮ ಜಮೀನುಗಳಿಗೆ ಕಾಲುವೆ ನೀರು ಪೂರೈಸಲಿಲ್ಲ. ಹಿಂಗಾರು ಹಂಗಾಮಿಗೂ ನೀರು ಬರುತ್ತಿಲ್ಲ. ಆದ್ದರಿಂದ ನಮಗೆ ವೈಜ್ಞಾನಿಕ ಬೆಳೆ ಪರಿಹಾರ ನೀಡಿ ಇಲ್ಲವೇ ತಿಮ್ಮಾಪುರ ಏತ ನೀರಾವರಿ ಯೋಜನೆಯ ಡಿ.ಸಿ-1ಕಾಲುವೆಗೆ ನೀರು ಹರಿಸಿ ಎಂದು ರೈತರು ಒಕ್ಕೊರಲಿನಿಂದ ಆಲಮಟ್ಟಿ ಅಣೆಕಟ್ಟು ಅಧೀಕ್ಷಕ ಅಭಿಯಂತರರ ಕಚೇರಿ ಆವರಣದಲ್ಲಿ ಅವರ ವಾಹನ ತಡೆದು ಪ್ರತಿಭಟಿಸಿದರು.
Related Articles
Advertisement
ಕೊನೆಗೆ ನ್ಯಾಯೋಚಿತವಾಗಿ ಕೊಡಬೇಕಾದ ನೀರನ್ನಾದರೂ ಕೊಡಬೇಕಲ್ಲವೇ?. ನ.25ರಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದರೂ ಕೂಡ ಇನ್ನುವರೆಗೂ ನಮ್ಮ ಗ್ರಾಮಗಳಿಗೆ ನೀರು ತಲುಪಿಲ್ಲ. ಆದ್ದರಿಂದ ನೀರಾವರಿ ನಿಯಮದಂತೆ ಮೊದಲು ಕಾಲುವೆಯ ಕೊನೆಯಂಚಿನ ರೈತರ ಜಮೀನಿಗೆ ನೀರೊದಗಿಸಬೇಕಾಗಿತ್ತು. ಆದರೆ ಅಧಿಕಾರಿಗಳ ನೀರು ನಿರ್ವಹಣಾ ವ್ಯವಸ್ಥೆಯಲ್ಲಿ ವಿಫಲವಾಗಿದ್ದರ ಪರಿಣಾಮ ಕಾಲುವೆಯ ಕೊನೆಯಂಚಿನ ಗ್ರಾಮಗಳಿಗೆ ನೀರು ಹರಿಯುತ್ತಿಲ್ಲ ಎಂದು ಆರೋಪಿಸಿದರು.
ನಂತರ ರೈತರನ್ನು ಸಮಾಧಾನ ಮಾಡಿದ ಅಧೀಕ್ಷಕ ಅಭಿಯಂತರ್ ಎಸ್.ಎಂ.ಜೋಶಿಯವರು, ಈ ಕುರಿತು ಈಗಾಗಲೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ಅಧ್ಯಕ್ಷರ ಆದೇಶದ ಮೇರೆಗೆ ಡಿ.4ರವರೆಗೆ ಕಾಲುವೆಗಳಿಗೆ ನೀರು ಹರಿಸಲಾಗುವುದು. ಆದ್ದರಿಂದ ನಿರ್ವಹಣಾ ವ್ಯವಸ್ಥೆಯಲ್ಲಿ ಲೋಪವಾಗದಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವೆಂಕಟೇಶ ಹಳ್ಳೂರ, ಬಸವರಾಜ ಬಳೂಲದ, ಪ್ರಭು ಅಳವಂಡಿ, ಗುರುಬಸಪ್ಪ ವಡ್ಡರಕಲ್ಲ, ರಾಮಣ್ಣ ಮೂಕಿ, ರಾಮನಗೌಡ ಮೇಟಿ, ಭೀಮಶಿ ಪೂಜಾರ, ಸಂಗಣ್ಣ ಹುಡೇದ, ಶಂಕ್ರಪ್ಪ ಪಡಿಯಣ್ಣವರ ಮೊದಲಾದವರಿದ್ದರು.