Advertisement

ಮಾನ್ವಿಯ ಮಿಲ್‌ಗೆ ಅನ್ನಭಾಗ್ಯದ ಅಕ್ಕಿ?

07:04 PM Feb 17, 2021 | Team Udayavani |

ಸಿಂಧನೂರು: ತಾಲೂಕಿನ ವಿವಿಧ ಮೂಲೆಯಿಂದ ಅಕ್ರಮವಾಗಿ ಸಾಗಣೆಯಾಗುವ ಅನ್ನಭಾಗ್ಯದ ಅಕ್ಕಿ ಗಡಿ ದಾಟಿ ಪಕ್ಕದ ತಾಲೂಕಿನ ಮಿಲ್‌ ಸೇರುತ್ತಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಸ್ಥಳೀಯವಾಗಿ ತಲೆ ಎತ್ತಿರುವ ಬ್ರೋಕರ್‌ಗಳ ಮೂಲಕ ಅಕ್ಕಿ ಸಂಗ್ರಹಿಸಿ ಕಾಳಸಂತೆಗೆ ರವಾನಿಸುತ್ತಿದ್ದು, ಮಿಲ್‌ಗ‌ಳಲ್ಲಿ ಪಾಲಿಶ್‌ ಆದ ಮೌಲ್ಯವರ್ಧನೆಗೊಂಡು ಇದೇ ಅಕ್ಕಿ ಮುಕ್ತ ಮಾರುಕಟ್ಟೆ ಬರುತ್ತಿದೆ. ಸದ್ದಿಲ್ಲದೇ ಕೆಜಿಗೆ 12ರಿಂದ 13 ರೂ.ನಂತೆ ಬಿಡಿಯಾಗಿ ಚೀಲದ ಲೆಕ್ಕದಲ್ಲಿ ಸಂಗ್ರಹಿಸಿ, ಅದನ್ನು ವಾಹನಗಳ ಮೂಲಕ ಸಾಗಣೆ ಮಾಡಿ ಮಿಲ್‌ಗ‌ಳಲ್ಲಿ ಸಾವಿರಾರು ಕ್ವಿಂಟಲ್‌ ಲೆಕ್ಕದಲ್ಲಿ ದಾಸ್ತಾನು ಮಾಡಿಕೊಳ್ಳಲಾಗುತ್ತದೆ. ಬಳಿಕ ಅದೇ ಅಕ್ಕಿಗೆಪಾಲಿಶ್‌ ಮಾಡಿ, ಮುಕ್ತ ಮಾರುಕಟ್ಟೆಗೆ ಬಿಡುವ ಮೂಲಕಲಾಭ ಮಾಡಿಕೊಳ್ಳುವುದು ಈ ದಂಧೆಯ ಕೈಚಳಕ ಎಂಬ ದೂರು ಕೇಳಿ ಬಂದಿವೆ.

ದಿನಕ್ಕೆ 1600 ಚೀಲಕ್ಕೂ ಅಧಿಕ: ತಾಲೂಕಿನ ಗ್ರಾಮವೊಂದರಿಂದ ನಸುಕಿನ ವೇಳೆ ಸಾಗಿಸುತ್ತಿದ್ದ ಒಂದು ವಾಹನ ಸೆರೆಯಾಗುತ್ತಿದ್ದಂತೆ ಬೇರೆ ಬೇರೆ ಮಾಹಿತಿಗಳು ಹೊರ ಬಿದ್ದಿದೆ. ನಗರದ ವ್ಯಕ್ತಿಯೊಬ್ಬರು ಬರೋಬ್ಬರಿ 20 ಗಾಡಿಗಳಲ್ಲಿ ನಿತ್ಯವೂ ಅಕ್ಕಿಕಳಿಸುತ್ತಾರೆ. 50 ಕೆಜಿ ತೂಕದ 1600ಕ್ಕೂ ಹೆಚ್ಚು ಚೀಲ ಪಡಿತರ ಅಕ್ಕಿ ಗಡಿ ದಾಟಿ ಮಾನ್ವಿಯ ಮಿಲ್‌ ಸೇರುತ್ತದೆ ಎಂಬ ಮಾಹಿತಿ ಹೊರ ಬಿದ್ದಿದೆ. ಆಂತರಿಕವಾಗಿ ದೊಡ್ಡ ಮಟ್ಟದಲ್ಲಿ ವ್ಯಾಪಿಸಿರುವಜಾಲಕ್ಕೆ ಪ್ರಭಾವಿಗಳ ಕೃಪಾಕಟಾಕ್ಷವೇ ಶ್ರೀರಕ್ಷೆ ಎನ್ನಲಾಗಿದೆ. ಈ ನಡುವೆ ವಾಹನದಲ್ಲಿ 4 ಪಂಜಾಬ್‌ ಸರ್ಕಾರವೆಂದು ಬರೆದ ಚೀಲಗಳು ಪತ್ತೆಯಾಗಿದ್ದು, ಅಂತಾರಾಜ್ಯ ನಂಟಿನ ಗುಮಾನಿಯೂ ದಟ್ಟವಾಗಿದೆ.

ಕೂಲಿ ಕೆಲಸಕ್ಕೆ ಬಂದವರು ಅಂದರ್‌: ಬೇರೆಡೆ ಕೂಲಿ ಕೆಲಸಕ್ಕೆ ಹೋದರೆ ದಿನವೊಂದಕ್ಕೆ 500 ರೂ.ಬಂದರೆ ಅದೇ ಹೆಚ್ಚು. ಆದರೆ, ಅಕ್ಕಿ ಸಾಗಣೆಯ ದಂಧೆಯಲ್ಲಿ ತೊಡಗಿದ ಯುವಕರಿಗೆ ದಿನಕ್ಕೆ 800 ರೂ.ನಂತೆ ಕೊಡುತ್ತಾರೆ. ಸಹಜವಾಗಿಯೇ ಕೂಲಿಯ ಆಕರ್ಷಣೆಗೆ ಬಿದ್ದ ಯುವಕರು ದೊಡ್ಡ ಜಾಲದ ಬಲೆಗೆ ಬೀಳುತ್ತಿದ್ದಾರೆ. ಪೊಲೀಸ್‌ ದಾಳಿ ಹಾಗೂ ಜಪ್ತಿ, ವಿಚಾರಣೆ ಸಂದರ್ಭದಲ್ಲಿ ಇವರೇ ಆರೋಪಿಗಳಾಗಿ ಜೈಲು ಸೇರುತ್ತಿದ್ದಾರೆ.

ಮಂಗಳವಾರ ಪೊಲೀಸರು ಜಪ್ತಿ ಮಾಡಿದ ವಾಹನದಲ್ಲಿದ್ದವರ ಪೈಕಿ ಮೂವರು ಮಾನ್ವಿ ತಾಲೂಕಿನವರು. ಒಬ್ಬರು ಸಾಲಗುಂದಾದವರು. ಇಲ್ಲಿಂದ ಮಾನ್ವಿಗೆ ನೇರವಾಗಿ ಲಿಂಕ್‌ ವ್ಯಾಪಿಸಿಕೊಂಡಿದೆ. ಅಕ್ರಮ ಅಕ್ಕಿ ಸಾಗಣೆಯಲ್ಲಿತೊಡಗಿದವರು ಸುಲಭವಾಗಿ ಸೆರೆ ಸಿಕ್ಕಿದ್ದು, ಈ ದಂಧೆಯ ಪ್ರಮುಖ ಸೂತ್ರಧಾರಿಯ ಹೆಸರು ಕೇಳಿ ಬಂದರೂ ಅವರ ಕುರಿತು ಯಾವುದೇ ಲಿಖೀತ ದೂರು ಸಲ್ಲಿಕೆಯಾಗಿಲ್ಲ. ತನಿಖೆಚುರುಕುಗೊಳಿಸಿ ಅಕ್ರಮ ದಂಧೆಯ ಬೇರುಗಳನ್ನು ಬಯಲಿಗೆಎಳೆದಾಗ ಮಾತ್ರ ಈ ದಂಧೆಗೆ ಕಡಿವಾಣ ಸಾಧ್ಯ ಎಂಬ ಮಾತು ಕೇಳಿ ಬಂದಿವೆ.

Advertisement

ಮಾತನಾಡ್ತೀನಿ ಅಂದವರು ಯಾರು? :

ಒಂದು ಗಾಡಿ ಅಕ್ಕಿ ಬೆಳಗ್ಗೆಯೇ ಜಪ್ತಿಯಾದ ನಂತರ ಸೆರೆ ಸಿಕ್ಕ ಆರೋಪಿಗಳ ಪರ ಮಾನ್ವಿಯ ಪ್ರಭಾವಿ ವ್ಯಕ್ತಿ, ಸಿಂಧನೂರಿನ ವ್ಯಕ್ತಿಯೊಬ್ಬರು ಎಫ್‌ಐಆರ್‌ ದಾಖಲಾಗದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆಂದು ಹೇಳಲಾಗಿದೆ. ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ವ್ಯಕ್ತಿಗಳನ್ನು ವಿಚಾರಿಸಿದಾಗ, ನಾವು ಇಬ್ಬರಿಗೆ ಕರೆ ಮಾಡಿದ್ದೇವೆ. ಅವರು ಮಾತಾಡ್ತೀವಿ ಅಂದ್ರು. ಆಮೇಲೆ ಏನಾಯ್ತೋ ಗೊತ್ತಿಲ್ಲ. ಪದೇ ಪದೆ ಫೋನ್‌ ಮಾಡಬೇಡಿ ಅಂದ್ರು, ಅದಕ್ಕೆ ಸುಮ್ಮನಾದೆವು ಎನ್ನುವ ಮಾತು ಕೇಳಿ ಬಂತು.

ಆಹಾರ ಇಲಾಖೆ ಸಿಬ್ಬಂದಿ ಜತೆಗೆ ಸ್ಥಳಕ್ಕೆ ಹೋದಾಗ ಒಂದು ಗಾಡಿ ಅಕ್ಕಿ ಸಿಕ್ಕಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ. ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆ ನಡೆದಿದೆ. – ಜಿ.ಚಂದ್ರಶೇಖರ್‌, ಸಿಪಿಐ, ಸಿಂಧನೂರ

ಎಲ್ಲಿ ಅಕ್ಕಿ ಕಾಣಿಸಿದರೂ ಅದು ಆಹಾರ ಇಲಾಖೆಯದ್ದು ಅಂತಾರೆ. ನಾವು ಮೊದಲು ಎಫ್‌ ಐಆರ್‌ ಮಾಡಿಸುತ್ತೇವೆ. ಹೌದೋ ಅಲ್ಲವೋ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಮಾಹಿತಿ ಬಂದರೆ ನಾವು ಕೇಸ್‌ ಕೊಡಲು ಹಿಂದೆ-ಮುಂದೆ ನೋಡುವುದಿಲ್ಲ. ದಾಳಿ ನಡೆಸಲು ನಾವು ಸಿದ್ಧ.  –ಅರುಣ್‌ ಕುಮಾರ್‌ ಸಂಗಾವಿ, ಉಪನಿರ್ದೇಶಕರು, ಆಹಾರ ನಾಗರಿಕ ಸರಬಾರಜು ಇಲಾಖೆ

 

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next