Advertisement

ಅಂಗನವಾಡಿ ಆಹಾರ ಕಳಪೆ, ಸೌಕರ್ಯ ಇಲ್ಲ !

01:32 AM Jun 16, 2024 | Team Udayavani |

ಬೆಂಗಳೂರು: ರಾಜ್ಯದ ಅಂಗನವಾಡಿಗಳಿಗೆ ಪೂರೈಕೆ ಆಗುತ್ತಿರುವ ಸಿದ್ಧ ಆಹಾರ ಪದಾರ್ಥಗಳು ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸೇವನೆಗೆ ಯೋಗ್ಯವಾಗಿಲ್ಲ. ಹಾಗೆಯೇ ರಾಜ್ಯದ ಬಹುತೇಕ ಅಂಗನವಾಡಿ ಗಳು ಮೂಲ ಸೌಕರ್ಯದ ಕೊರತೆಯಿಂದ ಬಳಲುತ್ತಿವೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ರಾಜ್ಯ ಹೈಕೋರ್ಟ್‌ಗೆ ವರದಿ ಸಲ್ಲಿಸುವುದಾಗಿ ತಿಳಿಸಿದೆ.

Advertisement

ಶನಿವಾರ ಶಾಂತಿನಗರದಲ್ಲಿರುವ ನ್ಯಾಯ ದೇಗುಲದಲ್ಲಿ ಪತ್ರಿಕಾಗೋಷ್ಠಿ ನಡೆದ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಎಂ.ಎಲ್‌. ರಘುನಾಥ್‌, ನಾವು ನಗರದ ನಾಲ್ಕು ಅಂಗನ ವಾಡಿಗಳಿಗೆ ತೆರಳಿದ್ದಲ್ಲದೆ, ಜಿಲ್ಲಾ ಮತ್ತು ತಾಲೂಕು ಹಂತದಲ್ಲಿಯೂ ಪರಿಶೀಲಿಸಿದಾಗ ಅಂಗನವಾಡಿಗಳಿಗೆ ಪೂರೈಸುವ ಆಹಾರದ ಗುಣಮಟ್ಟ ಸರಿಯಾಗಿಲ್ಲ ಎಂದು ತಿಳಿದು ಬಂದಿದೆ ಎಂದಿದ್ದಾರೆ.

ಬೆಂಗಳೂರು ನಗರದ ಸರಬಂಡೆ ಪಾಳ್ಯ ಅಂಗನವಾಡಿ ಕೇಂದ್ರಕ್ಕೆ ನಾವು ಜೂ. 12ರಂದು ದಿಢೀರ್‌ ಭೇಟಿ ನೀಡಿ ಅಲ್ಲಿನ ಆಹಾರ ಪೊಟ್ಟಣಗಳನ್ನು ತೆರೆದು ರುಚಿ ನೋಡಿದ್ದೆವು. ಅಂದು ನಮ್ಮ ಜತೆಗಿದ್ದ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಅಪೌಷ್ಟಿಕತೆ ನಿವಾರಣ ರಾಜ್ಯ ಸಲಹಾ ಸಮಿತಿಯ ಸದಸ್ಯ ಎ.ಎನ್‌. ವೇಣುಗೋಪಾಲ ಗೌಡ ಅವರು ಆಹಾರವು ಮಕ್ಕಳಿಗೆ ನೀಡಲು ಯೋಗ್ಯವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಆಹಾರವು ದುರ್ವಾಸನೆ ಬರುತ್ತಿತ್ತು. ಅದೇ ರೀತಿ ರಾಜ್ಯದ ಹಲವೆಡೆಯಿಂದ ಆಹಾರದ ಗುಣಮಟ್ಟದ ಬಗ್ಗೆ ಆಕ್ಷೇಪಗಳು ಬಂದಿವೆ ಎಂದು ಅವರು ತಿಳಿಸಿದರು.

ಅಂಗನವಾಡಿಗಳಲ್ಲಿ ಕೊಡುವ ಖಿಚಡಿ, ಉಪ್ಪಿಟ್ಟು ಮತ್ತಿತರ ಸಿದ್ಧ ಆಹಾರಗಳ ಬಗ್ಗೆ ತಕರಾರಿದೆ. ಈಗ ಅಂಗನವಾಡಿಗಳಲ್ಲಿ ನೀಡುವ ಆಹಾರದ ಮಾದರಿಯನ್ನು ಪ್ರಯೋಗಾ ಲಯಕ್ಕೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದರು.

ಮೂಲಸೌಕರ್ಯದ ಕೊರತೆ
ಅಂಗನವಾಡಿಗಳಲ್ಲಿ ಮೂಲ ಸೌಕರ್ಯದ ಕೊರತೆಯಿದೆ. ಅಡು ಗೆಗೆ ಪ್ರತ್ಯೇಕ ಕೊಠಡಿಗಳಿಲ್ಲ. ಸ್ವತ್ಛ ಕುಡಿಯುವ ನೀರಿಲ್ಲ. ಅಡುಗೆ ಮಾಡಲು, ಪಾತ್ರೆ ತೊಳೆಯಲು, ಕುಡಿಯಲು ಒಂದೇ ಮೂಲದ ನೀರು ಬಳಕೆಯಾಗುತ್ತಿದ್ದು, ಸ್ವತ್ಛತೆಯ ಸಮಸ್ಯೆಯೂ ಇದೆ. ನಗರಗಳ ಅಂಗನವಾಡಿಗಳ ಸ್ಥಿತಿ ಶೋಚನೀಯವಾಗಿದ್ದು, ತಾಲೂಕು ಮಟ್ಟದ ಅಂಗನವಾಡಿಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ತಿಳಿಸಿದರು.

Advertisement

1,500 ಕೇಂದ್ರಗಳಿಗೆ ಭೇಟಿ
ರಾಜ್ಯದಲ್ಲಿ ಒಟ್ಟು 65,911 ಅಂಗನವಾಡಿಗಳಿದ್ದು, ಬೆಂಗಳೂರು ನಗರದಲ್ಲಿ 2,420 ಇವೆ. ಈ ಪೈಕಿ 1,500 ಅಂಗನವಾಡಿಗಳಿಗೆ ಭೇಟಿ ನೀಡಲಾಗಿದ್ದು, ಇನ್ನಷ್ಟು ಕಡೆ ಭೇಟಿ ನೀಡಿ ಹೈಕೋರ್ಟ್‌ಗೆ ನಮ್ಮ ವರದಿ ನೀಡುತ್ತೇವೆ ಎಂದರು.

ನಿಧಿಯಿದೆ, ಬಳಕೆಯಿಲ್ಲ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ದೊಡ್ಡ ಪ್ರಮಾಣದ ನಿಧಿಯಿದ್ದರೂ ಸದ್ಬಳಕೆ ಮಾಡುತ್ತಿಲ್ಲ. ಕ್ರಿಯಾಯೋಜನೆಯಿಲ್ಲ. ವರದಿ ನೀಡಿದಾಗ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ಮತ್ತೆ ಕರ್ತವ್ಯ ಮರೆಯುತ್ತಾರೆ ಎಂದು ರಘುನಾಥ್‌ ಬೇಸರ ವ್ಯಕ್ತಪಡಿಸಿದರು.

ಸಿಎ ಸೈಟ್‌ಗಳಲ್ಲಿ ಅಂಗನವಾಡಿ ಕಟ್ಟಿ
ಸರಕಾರ ಸಿಎ ನಿವೇಶನಗಳಲ್ಲಿ ಅಂಗನವಾಡಿ ನಿರ್ಮಾಣ ಮಾಡ ಬೇಕು. ಆಹಾರದ ಗುಣಮಟ್ಟ ಕಾಪಾಡಬೇಕು, ಅಡುಗೆಗೆ ಪ್ರತ್ಯೇಕ ಕೊಠಡಿ ಇರಬೇಕು. ಶುದ್ಧ ನೀರು ಸಿಗಲು ಕ್ರಮ ಕೈಗೊಳ್ಳಬೇಕು ಎಂದು ರಘುನಾಥ್‌ ಹೇಳಿದ್ದಾರೆ.

ಹಾಸ್ಟೆಲ್‌, ಆಸ್ಪತ್ರೆಗಳ ಆಹಾರವೂ ಪರಿಶೀಲನೆ
ಸರಕಾರಿ ಹಾಸ್ಟೆಲ್‌ಗ‌ಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಸ್ಟೆಲ್‌ಗ‌ಳು, ಸರಕಾರಿ ಆಸ್ಪತ್ರೆಗಳ ಸಹಿತ ಸರಕಾರದಿಂದ ಆಹಾರ ಪೂರೈಕೆ ಆಗುತ್ತಿರುವ ಕಡೆಗಳಿಗೆ ಈ ಸಮಿತಿ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲನೆ ಮಾಡುತ್ತದೆ ಎಂದು ತಿಳಿಸಿದರು. ರಾಜ್ಯ ಹೈಕೋರ್ಟ್‌ ಆದೇಶದ ಮೇರೆಗೆ ಅಪೌಷ್ಟಿಕತೆ ನಿವಾರಣ ಸಲಹಾ ಸಮಿತಿ ರಚನೆ ಯಾಗಿದ್ದು, ಅದು ಅಂತಿಮ ವರದಿ ಯನ್ನು ಹೈಕೋರ್ಟ್‌ಗೆ ನೀಡಲು ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ ಅಂಗನವಾಡಿಗಳ ಆಹಾರ ಗುಣ ಮಟ್ಟದ ಪರಿಶೀಲನೆ ನಡೆಸಲಾಗಿದೆ.

ಲೋಕ ಅದಾಲತ್‌
ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜ್ಯದ ಪ್ರಕರಣಗಳನ್ನು ಇತ್ಯರ್ಥ ಮಾಡಲು ಜು. 29ರಿಂದ ಆ. 3ರ ವರೆಗೆ ವಿಶೇಷ ಲೋಕ ಅದಾಲತ್‌ ಹಮ್ಮಿಕೊಳ್ಳಲಾಗಿದೆ ಎಂದು ರಘುನಾಥ್‌ ತಿಳಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲಾ ಹಂತದಲ್ಲಿ ವಕೀಲರು, ಕಕ್ಷಿದಾರರು ಭಾಗಿಯಾಗಿ ತಮ್ಮ ಪ್ರಕರಣದ ವಿಲೇವಾರಿಗೆ ಪ್ರಯತ್ನಿಸಬಹುದಾಗಿದೆ. ರಾಜಿ ಸಂಧಾನ, ಮಧ್ಯಸ್ತಿಕೆಯ ಮೂಲಕ ಇತ್ಯರ್ಥ ವಾಗಬಹುದಾದ ಪ್ರಕರಣಗಳ ಕಕ್ಷಿದಾರರಿಗೆ ಈಗಾಗಲೇ ನೋಟಿಸ್‌ ನೀಡುವ ಮೂಲಕ ವಿಶೇಷ ಲೋಕಅದಾಲತ್‌ನಲ್ಲಿ ಭಾಗಿಯಾಗಲು ಸೂಚಿಸಲಾಗಿದೆ ಎಂದು ತಿಳಿಸಿದರು. ಜು. 13ರಂದು ರಾಜ್ಯದಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌ ಹಮ್ಮಿಕೊಂಡಿದ್ದು, ಕಕ್ಷಿದಾರರು ತಮ್ಮ ಪ್ರಕರಣಗಳ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next