Advertisement

ಸ್ಕೀಯಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಅಂಚಲ್‌ ಠಾಕೂರ್‌

06:48 PM Apr 01, 2021 | Team Udayavani |

ಕೆಲವು ಸಾಧನೆಗಳೇ ಹಾಗೆ. ಪರ್ವತ ಏರಿದ ಮೇಲೆ ಕೆಳಗಿನ ಇಳಿಜಾರು ನೋಡುವಾಗ ಎದೆ ಝಲ್ಲೆನ್ನುತ್ತದೆ…

Advertisement

ಈ ಸಾಧನೆ ನಿಜವೇನಾ ಎಂಬ ಬೆರಗು ಮೂಡುತ್ತದೆ. ಶಿಖರ ಸಾಧನೆ ಆತ್ಮತೃಪ್ತಿ ತರುತ್ತದೆ. ಸುಲಭವಾಗಿ ದಕ್ಕಿದ್ದು ಸಾಧನೆ ಎನಿಸಿಕೊಳ್ಳುವುದಿಲ್ಲ. ಇತಿಹಾಸ ನಿರ್ಮಾಣ ದಿನ ಬೆಳಗಾದರೆ ಸಾಧ್ಯವಾಗುವುದಿಲ್ಲ. ನೆಲದಾಳದ ಲೋಹದ ತುಣುಕು ಅಪರಂಜಿ ಚಿನ್ನವಾಗಬೇಕಾದರೆ, ಬೆಂಕಿಯಲ್ಲಿ ಬೇಯಬೇಕು. ಸಾಧಕನೂ ಅಷ್ಟೆ, ಕಷ್ಟಗಳಲ್ಲಿ ನೋಯಬೇಕು, ಸವಾಲುಗಳನ್ನೆದುರಿಸಿ ಕಾದಬೇಕು, ಬೀಳಬೇಕು, ಮೈಕೊಡವಿ ಏಳಬೇಕು.

ಯಾರೋ ಸಾಗಿದ ಕಾಲು ಹಾದಿ ಅನುಸರಿಸಿದರೆ ನಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ. ನಮ್ಮ ಗುರಿಯ ಮಾರ್ಗ ನಾವೆ ನಿರ್ಮಿಸಿಕೊಳ್ಳಬೇಕು. ಸಂದರ್ಭಗಳು ಹಾಗೆಯೇ ಇರುತ್ತದೆ. ಇಡೀ ಜಗತ್ತೇ ತನ್ನ ವಿರುದ್ಧವಾಗಿದೆ ಎಂಬ ಭಾವನೆ ಬಲಿಯುತ್ತಿರುತ್ತದೆ. ಕಷ್ಟಗಳು ಬರುವಾಗ ಸಾಲು ಸಾಲಾಗಿ ಬರುತ್ತದೆ. ನಿಲುಗಡೆಯೇ ಇಲ್ಲದ ಜಡಿ ಮಳೆಯಂತೆ ಹೆದರಿಸುತ್ತಿರುತ್ತವೆ. ಈಗಲೋ ಆಗಲೋ ಮುಳುಗುವಂತಿರುವ ಒಡಕಲು ದೋಣಿಯಲ್ಲಿ ದಡವೇ ಕಾಣದ ಸಾಗರ ಮಧ್ಯದಲ್ಲಿ ಅತಂತ್ರವಾದ ಅಸಹಾಯಕತೆ ಸೃಷ್ಟಿಸಿಬಿಟ್ಟಿರುತ್ತವೆ.

ಮುಳುಗುನೀರಿನ ಅಂಥ ದಾರುಣ ಕ್ಷಣ ಮನುಷ್ಯ ಜಾತಿಯ ದೈತ್ಯ ಶಕ್ತಿ ಅನಾವರಣಕ್ಕೆ ವೇದಿಕೆಯಾಗಿಬಿಡುತ್ತದೆ. ಜೀವನ್ಮರಣ ಸಂದಿಗ್ಧದಲ್ಲಿ ಸಿಲುಕಿದಾಗಲೂ ಹೋರಾಡುವ, ಬದುಕುವುದಕ್ಕೊಂದು ಹೊಸ ದಾರಿಯನ್ನು ಹುಡುಕುವ ಶಕ್ತಿಯನ್ನು, ಛಾತಿಯನ್ನು ಪ್ರಕೃತಿ ಮನುಷ್ಯನಿಗೆ ಕೊಟ್ಟಿದೆ. ಕೋಟೆಯ ಎಲ್ಲ ಬಾಗಿಲುಗಳನ್ನು ಮುಚ್ಚಿದರೂ, ಬೆಳಕು ತೂರುವುದಕ್ಕೊಂದು ಸಣ್ಣ ಕಿಂಡಿ ಇದ್ದರು ಸಾಕು ಜೀವನ ಹೋರಾಟ ಮುಂದುವರೆಸುವುದಕ್ಕೆ. ಇದಕ್ಕೆ ಅಂಚಲ್‌ ಠಾಕೂರ್‌ ಅವರ ಸಾಧನೆಯೇ ಉತ್ತಮ ನಿದರ್ಶನ.

ಕ್ರೀಡಾಕೂಟ ಆರಂಭಕ್ಕೂ ಮೊದಲು ಪದಕ ಗೆಲ್ಲುವೆ ಅನ್ನುವ ಯಾವುದೇ ಭರವಸೆ ನನಗೆ ಇರಲಿಲ್ಲ. ಒಂದು ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಸ್ಪರ್ಧೆಯನ್ನು ಪೂರ್ತಿಗೊಳಿಸಬೇಕು ಅನ್ನುವುದು ಮಾತ್ರ ನನ್ನ ಗುರಿಯಾಗಿತ್ತು. ಆದರೆ, ಪದಕ ಬಂದಿದೆ. ಈಗಲೂ ಪದಕ ಗೆದ್ದಿರುವುದನ್ನು ನಂಬಲಾಗುತ್ತಿಲ್ಲ. ಇದು ಟರ್ಕಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕೀಯಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಮನಾಲಿ ಸುಂದರಿ ಅಂಚಲ್‌ ಠಾಕೂರ್‌ ಮಾತು.

Advertisement

ಹೌದು, ಅಂಚಲ್‌ ಕ್ರೀಡಾಕೂಟಕ್ಕೂ ಮುನ್ನ ಪದಕ ಗೆಲ್ಲುವ ಯಾವುದೇ ಭರವಸೆಯನ್ನು ಇಟ್ಟುಕೊಂಡವರಲ್ಲ. ಯಾಕೆಂದರೆ ಅಲ್ಲಿ ಆಸ್ಟ್ರೇಲಿಯಾ, ಸ್ವಿಟ್ಜರ್ಲೆಂಡ್‌, ಕೆನಡಾ, ಫ್ರಾನ್ಸ್‌, ಇಟಲಿ ದೇಶದ ಕ್ರೀಡಾಪಟುಗಳದ್ದೇ ಅಬ್ಬರ. ಇಂತಹ ಕಠಿನ ಎದುರಾಳಿಗಳ ಎದುರು ಸ್ಪರ್ಧಿಸಿ ಭಾರತಕ್ಕೆ ಕಂಚಿನ ಪದಕ ತಂದಿರುವುದು ಸಾಮಾನ್ಯ ಸಂಗತಿಯಲ್ಲ.

ದುಬಾರಿ ಕ್ರೀಡೆ: ಇದು ಚಳಿಗಾಲದಲ್ಲಿ ಮಾತ್ರ ನಡೆಯುವ ಕ್ರೀಡೆ. ಪಾದಗಳಿಗೆ ಸ್ಕೀಗಳನ್ನು ಕಟ್ಟಿಕೊಂಡು ಹಿಮದಲ್ಲಿ ಜಾರುತ್ತಾ ಹೋಗಬೇಕು. ಎರಡೂ ಕೈಯಲ್ಲಿ ಕೋಲುಗಳನ್ನು ಹಿಡಿದು ಅದನ್ನೇ ಹಿಡಿತದ ಸಾಧನವಾಗಿ ಬಳಸಿಕೊಳ್ಳಬೇಕು. ನೋಡಲು ಈ ಕ್ರೀಡೆ ಸುಲಭ ಅನ್ನಿಸುತ್ತದೆ. ಆದರೆ ಇದು ತುಂಬಾ ಕಠಿನ ಮತ್ತು ದುಬಾರಿ ಕ್ರೀಡೆಯೂ ಹೌದು. ಒಂದು ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಅಂದರೆ, ಒಬ್ಬ ಸ್ಪರ್ಧಿಗೆ ಕನಿಷ್ಠ ಅಂದರೂ 5 ರಿಂದ 10 ಲಕ್ಷ ರೂ. ಖರ್ಚು ಬೀಳುತ್ತದೆ. ಹೀಗಾಗಿ ಕ್ರೀಡಾಪಟುಗಳು ಸರಕಾರದ ನೆರವನ್ನು ಬಯಸುತ್ತಿರುತ್ತಾರೆ.

ಸ್ಕೀಯಿಂಗ್‌ ಸ್ಪರ್ಧಿಗಳಿಗೆ ಸ್ಫೂರ್ತಿ
ಇದು ಹಿಮದಲ್ಲಿ ಮಾತ್ರ ನಡೆಯುವ ಕ್ರೀಡೆ. ಹೀಗಾಗಿ ಸಹಜವಾಗಿ ಭಾರತದಲ್ಲಿ ಯಾವ ಯಾವ ರಾಜ್ಯಗಳಲ್ಲಿ ಹಿಮ ಇದೆಯೋ ಅಲ್ಲಿ ಮಾತ್ರ ಸ್ಪರ್ಧಿಗಳು ಕಂಡುಬರುತ್ತಾರೆ. ಹೆಚ್ಚಿನದಾಗಿ ಜಮ್ಮು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಸ್ಕೀಯಿಂಗ್‌ ಸ್ಪರ್ಧಿಗಳು ಇದ್ದಾರೆ.  ಈ ಕ್ರೀಡೆಯಲ್ಲಿ ಇಲ್ಲಿಯವರೆಗೂ ಒಂದೂ ಅಂತಾರಾಷ್ಟ್ರೀಯ ಪದಕ ಗೆಲ್ಲದ ಭಾರತಕ್ಕೆ ಅಂಚಲ್‌ ಮೊದಲ ಪದಕ ತಂದಿದ್ದಾರೆ. ಇದು ಇತರೇ ಸ್ಪರ್ಧಿಗಳಿಗೆ ಸ್ಫೂರ್ತಿಯಾಗಿದೆ. ಯುವ ಕ್ರೀಡಾಪಟುಗಳನ್ನು ಸ್ಕೀಯಿಂಗ್‌ ಅತ್ತ ಸೆಳೆಯುತ್ತಿದೆ.

2022ರ ಚಳಿಗಾಲದ ಒಲಿಂಪಿಕ್ಸ್‌ ಮೇಲೆ ಕಣ್ಣು
ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಅಂಚಲ್‌ರ ಮುಂದಿನ ಗುರಿ 2022ರಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ ನಲ್ಲಿ ಪದಕ ಗೆಲ್ಲುವುದು. ಹೀಗಾಗಿ ತಾನು ಇನ್ನಷ್ಟು ಕಠಿನ ಅಭ್ಯಾಸ ನಡೆಸುವುದಾಗಿ ತಿಳಿಸಿದ್ದಾರೆ.

ಇಟಲಿ, ಆಸ್ಟ್ರೇಲಿಯಾದಲ್ಲಿ ತರಬೇತಿ
15ರ ಬಾಲಕಿಯಾಗಿದ್ದಾಗ 2012ರಲ್ಲಿ ನಡೆದ ಚಳಿಗಾಲದ ಯೂತ್‌ ಒಲಿಂಪಿಕ್ಸ್‌ನಲ್ಲಿ ಅಂಚಲ್‌ ಪಾಲ್ಗೊಂಡಿದ್ದರು. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಇದನ್ನು ಗಮನಿಸಿದ ತಂದೆ ರೋಷನ್‌ ಠಾಕೂರ್‌ ಕಷ್ಟದ ಸ್ಥಿತಿಯಲ್ಲಿಯೂ ಅಂಚಲ್‌ ಅವರನ್ನು ಆಸ್ಟ್ರೇಲಿಯಾ ಮತ್ತು ಇಟಲಿಗೆ ಕಳುಹಿಸಿ ತರಬೇತಿ ಕೊಡಿಸಿದರು. ಇದುವೇ ಅಂಚಲ್‌ ಜೀವನಕ್ಕೆ ಸಿಕ್ಕ ಟರ್ನಿಂಗ್‌ ಪಾಯಿಂಟ್‌.

ತಂದೆಯೇ ಮೊದಲ ಗುರು
ಅಂಚಲ್‌ಗೆ ಸ್ಕೀಯಿಂಗ್‌ ರಕ್ತಗತವಾಗಿ ಬಂದಿರುವ ಕ್ರೀಡೆ. ಈಕೆಯ ತಂದೆ ರೋಷನ್‌ ಲಾಲ್‌ ಠಾಕೂರ್‌, ಮಾಜಿ ರಾಷ್ಟ್ರೀಯ ಸ್ಕೀಯಿಂಗ್‌ ಆಟಗಾರ. ಈ ಹಿನ್ನೆಲೆ ಸಹಜವಾಗಿಯೇ ಅಂಚಲ್‌ ಅವರನ್ನು ಸ್ಕೀಯಿಂಗ್‌ ಆಟದತ್ತ ಸೆಳೆದಿದೆ. ನಿವೃತ್ತಿಯ ಅನಂತರ ರೋಷನ್‌ ಲಾಲ್‌ ಯುವ ಪ್ರತಿಭೆಗಳಿಗೆ ತರಬೇತಿ ನೀಡಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಬಾಲಕಿ ಅಂಚಲ್‌ ಕೂಡ ತಂದೆಯ ಜತೆ ತೆರಳುತ್ತಿದ್ದಳು. ಹೀಗೆ ಬಾಲಕಿಯಾಗಿದ್ದಾಗಲೇ ಸ್ಕೀಯಿಂಗ್‌ ನೋಡುತ್ತ ಬೆಳೆದ ಈಕೆ ಅನಂತರ ತಾನೂ ಅಂಗಳಕ್ಕೆ ಇಳಿಯಲು ನಿರ್ಧರಿಸಿದಳು. ಆಗ ಮೊದಲ ಮಾರ್ಗದರ್ಶನ ಸಿಕ್ಕದ್ದೆ ತಂದೆಯಿಂದ.

 ಅಭಿ ಸುಳ್ಯ 

Advertisement

Udayavani is now on Telegram. Click here to join our channel and stay updated with the latest news.

Next