Advertisement

ಅನಂತ ಭಟ್‌-ಗಿರಿಧರ ನಾಯಕ್‌ಗೆ ಕೊಂಕಣಿ ಯಕ್ಷರತ್ನ ಪ್ರಶಸ್ತಿ 

06:00 AM Mar 09, 2018 | Team Udayavani |

ಮೂರು ದಶಕಗಳಿಂದ ಸಾಂಸ್ಕೃತಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಕೊಂಕಣಿ ಸಾಂಸ್ಕೃತಿಕ ಸಂಘ ಮಾ.11ರಂದು ಮಂಗಳೂರಿನ ಪುರಭವನದಲ್ಲಿ ಶ್ರೀ ಕೃಷ್ಣ ಪರಂಧಾಮ ಕೊಂಕಣಿ ಯಕ್ಷ ಪ್ರದರ್ಶನದೊಂದಿಗೆ ಯಕ್ಷ ಕಲಾವಿದರಾದ ಅನಂತ ರಾಮ ಭಟ್‌ ಮತ್ತು ಗಿರಿಧರ ಪಿ. ನಾಯಕ್‌ರಿಗೆ ಕೊಂಕಣಿ ಯಕ್ಷರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.ಸಂಘದ ಸದಸ್ಯರು ಮತ್ತು ಹವ್ಯಾಸಿ ಕಲಾವಿದರು ಪ್ರದರ್ಶಿಸಲಿರುವ ಶ್ರೀಕೃಷ್ಣ ಪರಾಂಧಮ ಆಖ್ಯಾನವನ್ನು ಎಂ.ಶಾಂತರಾಮ ಕುಡ್ವಾ ರಚಿಸಿದ್ದಾರೆ ಹಾಗೂ ಎಂ.ಆರ್‌. ಕಾಮತ್‌ ಸಂಭಾಷಣೆ ಬರೆದಿದ್ದಾರೆ. 

Advertisement

ಗಣೇಶ್‌ಪುರ ಗಿರೀಶ್‌ ನಾವಡ ತರಬೇತಿ ನೀಡಿದ್ದಾರೆ. 10ರ ಹರೆಯದ ಬಾಲಕರಿಂದ ತೊಡಗಿ 72ರ ಹಿರಿಯರು ವೇಷಧಾರಿಗಳಾಗಿರುವುದು ಇದರ ಈ ಪ್ರದರ್ಶನದ ವೈಶಿಷ್ಟ. ಕೆಲ ಮಹಿಳಾ ಕಲಾವಿದರೂ, ಯಕ್ಷಗಾನ ವಿದ್ಯಾರ್ಥಿಗಳೂ ಇದ್ದಾರೆ. ಯಾದವರ ಅಂತ್ಯ ಮತ್ತು ಶ್ರೀಕೃಷ್ಣ ನಿರ್ಯಾಣದ ಕಥಾಭಾಗವನ್ನು ಒಳಗೊಂಡಿರುವ ಪ್ರಸಂಗವಿದು. ಕೊಂಕಣಿ ಸಾಂಸ್ಕೃತಿಕ ಕೇಂದ್ರದ ಆರನೇ ಕೊಂಕಣಿ ಯಕ್ಷಗಾನ ಪ್ರಸಂಗವಿದು. 

ಅನಂತರಾಮ ಭಟ್‌
 ಕಲ್ಲಮುಂಡ್ಕೂರ್‌ ರಾಮ ಭಟ್‌ ಮತ್ತು ಪದ್ಮಾವತಿ ದಂಪತಿಯ ಪುತ್ರ ಭಾಗವತ ಅನಂತ ರಾಮ ಭಟ್‌. 1929,ಅ.4ರಂದು ಜನಿಸಿದ ಇವರು ಬಾಲ್ಯದಲ್ಲೇ ಯಕ್ಷಗಾನದ ಅಭಿರುಚಿ ಹೊಂದಿದ್ದರು. ಮುಂದೆ ಯಕ್ಷ ಕಲಾವಿದರಾಗಿ ಮೆರೆಯಲು ಇದು ತಳಹದಿಯಾಯಿತು. 
ರಾಘವೇಂದ್ರ ಶೆಣೈ ಇವರ ಗುರು. ಶ್ರೀ ಕಾಶೀ ಮಠದ ವೃಂದಾವನಸ್ಥ ಯತಿವರ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಪಾದಂಗಳವರ ಸಮಕ್ಷಮ ತಮ್ಮ ತಂಡದೊಂದಿಗೆ ಕೊಂಕಣಿ ಯಕ್ಷಗಾನ ಪ್ರದರ್ಶಿಸಿ ಮುಂಬಯಿಯಲ್ಲಿ “ಜನಪ್ರಿಯ ಯಕ್ಷಗಾನ ಮಂಡಳಿ’ಯ ಉಗಮಕ್ಕೆ ಕಾರಣಕರ್ತರಾದವರಲ್ಲಿ ಓರ್ವರು. ಭಾಗವತರಾಗಿ 30 ವರ್ಷಗಳಿಂದ ಯಕ್ಷರಂಗಕ್ಕೆ ತಮ್ಮ ಸಿರಿಕಂಠ ಧಾರೆ ಎರೆದಿದ್ದಾರೆ. ಕನ್ನಡ/ಕೊಂಕಣಿ ಯಕ್ಷ ಪಾತ್ರಧಾರಿ, ಪ್ರಸಂಗ ಕರ್ತರೂ ಹೌದು. ಕಿನ್ನಿಗೋಳಿಯ ಯಕ್ಷಲಹರಿ, ಮುಂಬಯಿಯ ಯಕ್ಷಗಾನ ಸಾಹಿತ್ಯ ಪರಿಷತ್‌ನ ಸಮ್ಮಾನ ಪಡೆದಿದ್ದಾರೆ.

ಗಿರಿಧರ್‌ ಪಿ. ನಾಯಕ್‌ 
 ಮಿತ್ತಬೈಲಿನ ಪುರಷೋತ್ತಮ ನಾಯಕ್‌ ಮತ್ತು ರೋಹಿಣಿ ದಂಪತಿಯ ಪುತ್ರ ಗಿರಿಧರ್‌ ನಾಯಕ್‌. 1963,ನ.27ರಂದು ಜನಿಸಿದ ಇವರು ವ್ಯವಹಾರ ನಿಮಿತ್ತ ದುಬೈಯಲ್ಲಿದ್ದರೂ ಕೊಂಕಣಿ ಸಾಂಸ್ಕೃತಿಕ ಸಂಘದ ಹಾಗೂ ಊರಿನ ಇತರ ಯಕ್ಷಗಾನ ಪ್ರದರ್ಶನಗಳಲ್ಲಿ ಸಕ್ರಿಯ ತೊಡಗುವಿಕೆ ತಪ್ಪಿಲ್ಲ. ದುಬೈನ ಯಕ್ಷ ಮಿತ್ರ ತಂಡದ ಮುಖ್ಯ ಕಲಾವಿದ. 
ರಂಗಭೂಮಿ ಕಲಾವಿದ ಹಾಗೂ ಹಿನ್ನೆಲೆ ಗಾಯಕರೂ ಆಗಿದ್ದು, ನಾಟಕಗಳಲ್ಲಿ ಬಾಲ, ಸ್ತ್ರೀ ವೇಷ, ನಾಯಕ , ಖಳ ನಾಯಕ, ಹಾಸ್ಯ ಪಾತ್ರಗಳಲ್ಲಿ ಮತ್ತು ಯಕ್ಷಗಾನದಲ್ಲಿ ಶ್ರೀ ಕೃಷ್ಣ, ಈಶ್ವರ, ಜಮದಗ್ನಿ ಷಣ್ಮುಖ. ರಕ್ತಬೀಜ, ಮಹಿಷಾಸುರ, ಹನುಮಂತ ಮುಂತಾದ ವೇಷ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮಿತ್ತಬೈಲಿನ ಶ್ರೀರಾಮ ಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿ ಧಾರ್ಮಿಕ ಚಟುವಟಿಕೆಗಳಲ್ಲೂ ದುಡಿಯುತ್ತಿದ್ದಾರೆ.   

ಸಂದೀಪ್‌ ನಾಯಕ್‌ ಸುಜೀರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next