Advertisement

ಭಾರತೀಯ ಕೃಷಿ ಪದ್ಧತಿ ವಿಶ್ವಕ್ಕೆ ಮಾದರಿ: ಚೆಟ್ರಿ

05:06 PM Nov 18, 2019 | Naveen |

ಆನಂದಪುರ: ಭಾರತದ ಕೃಷಿ ಪದ್ಧತಿ ಅತ್ಯಂತ ಉತ್ಕೃಷ್ಟವಾಗಿದ್ದು, ಜಗತ್ತು ಭಾರತೀಯ ಕೃಷಿ ಪದ್ಧತಿಯನ್ನು ನೋಡಿ ಕಲಿತುಕೊಳ್ಳಬೇಕಾದದ್ದು ಸಾಕಷ್ಟಿದೆ ಎಂದು ಅಮೆರಿಕಾದ ಮೌಂಟೇನ್‌ ರೋಸ್‌ ಹರ್ಬ್ಸ್ ನ ಮುಖ್ಯಸ್ಥೆ ಜೆನ್ನಿಫರ್‌ ಚೆಟ್ರಿ ಹೇಳಿದರು.

Advertisement

ಸಮೀಪದ ಹೊಸಗುಂದದಲ್ಲಿ ಭಾನುವಾರ ಹೊಸಗುಂದ ಉತ್ಸವದ ಅಂಗವಾಗಿ ಏರ್ಪಡಿಸಿದ್ದ “ಕೃಷಿ ಮತ್ತು ಬದುಕು’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸಾವಯವ ಕೃಷಿ ಪದ್ಧತಿಗೆ ವಿಶ್ವದಾದ್ಯಂತ ಮಾನ್ಯತೆ ಸಿಗುತ್ತಿದೆ. ಬೇರೆ ಬೇರೆ ಕೃಷಿ ಪದ್ಧತಿಗಳಿದ್ದಾಗ್ಯೂ ಅವೆಲ್ಲವೂ ಕೃಷಿಕರಲ್ಲಿ ಹೊಸ ಉತ್ಸಾಹವನ್ನು ತುಂಬುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಕೃಷಿಯೊಂದಿಗೆ ನಮ್ಮ ರೈತರು ಸಹಬಾಳ್ವೆ ನಡೆಸುವಂತೆ ಆಗಬೇಕು. ಇಂತಹ ವಿಚಾರ ಸಂಕಿರಣದ ಮೂಲಕ ಕೃಷಿಯಲ್ಲಿ ಉನ್ನತಿ ಸಾಧಿಸುವ ಬಗ್ಗೆ ಅರಿತುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಮೌಂಟೇನ್‌ ರೋಸ್‌ ಹರ್ಬ್ಸ್ ಸಂಸ್ಥೆ ಕಳೆದ 30 ವರ್ಷಗಳಿಂದ ಭಾರತದ ಆರ್ಯುವೇದಿಕ್‌ ಮಾರುಕಟ್ಟೆ ಮತ್ತು ಸಾವಿರಾರು ರೈತರ ಜೊತೆ ನೇರ ಸಂಪರ್ಕವನ್ನು ಹೊಂದಿದೆ. ಇಲ್ಲಿನ ಅನೇಕ ಔಷಧೀಯ ವಸ್ತುಗಳನ್ನು ನಮ್ಮ ಸಂಸ್ಥೆ ಖರೀದಿಸುವ ಜೊತೆಗೆ ರೈತರ ಸಮಸ್ಯೆಗಳಿಗೆ ಕಾಲಕಾಲಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಪ್ರಸ್ತುತ ಅನೇಕ ಸವಾಲುಗಳನ್ನು ಸಹ ಎದುರಿಸುವಂತೆ ಆಗಿತ್ತು. ಆದರೆ ಗೆಲುವಿಗಿಂತ ಸೋಲಿನಲ್ಲಿಯೇ ಹೆಚ್ಚು ಪಾಠ ಕಲಿಯಬೇಕು ಎನ್ನುವುದು ನಮ್ಮ ಸಂಸ್ಥೆಯ ಉದ್ದೇಶ. ಈ ನಿಟ್ಟಿನಲ್ಲಿ ಭಾರತೀಯ ಕೃಷಿಗೆ ಯಾವತ್ತೂ ಸೋಲು ಇಲ್ಲ ಎಂದು ಹೇಳಿದರು.

ಕೃಷಿ ಉಳಿಸಿಕೊಳ್ಳುವ ತುರ್ತು ಅಗತ್ಯ: ಕಾರ್ಯಕ್ರಮದ ಕುರಿತು ದಿಕ್ಸೂಚಿ ಭಾಷಣ ಮಾಡಿದ ಸಾವಯವ ಕೃಷಿ ಮಿಷನ್‌ ಅಧ್ಯಕ್ಷ ಅ.ಶ್ರೀ. ಆನಂದ್‌, ನಮ್ಮಲ್ಲಿ ಕೃಷಿ ಕ್ರಮ ಬೇರೆ ಬೇರೆ ಇದ್ದರೂ, ಎಲ್ಲವೂ ಕೃಷಿ ಅಭಿವೃದ್ಧಿಗೆ ಬಳಕೆ ಆಗುತ್ತದೆ. ನಮ್ಮ ಹಳ್ಳಿ, ಕೃಷಿ, ಗೋವುಗಳನ್ನು ಉಳಿಸಿಕೊಳ್ಳುವ ತುರ್ತು ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚು ಇದೆ. ಪ್ರಸ್ತುತ ನಮ್ಮ ಮಕ್ಕಳು, ಗೋವು ನಮ್ಮ ಜೊತೆಯಲ್ಲಿ ಇಲ್ಲ. ಆಸ್ತಿ ಇದೆ, ಆದರೆ ಅದನ್ನು ಅಭಿವೃದ್ಧಿಪಡಿಸುವ ಆಸಕ್ತಿ ನಮ್ಮಲ್ಲಿ ಉಳಿದಿಲ್ಲ. ನಾವು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಉಳಿಸಿಕೊಳ್ಳುವುದು, ಜಮ್ಮು- ಕಾಶ್ಮೀರವನ್ನು ನಮ್ಮದಾಗಿಸಿಕೊಳ್ಳುವುದು ಎಷ್ಟು ಮುಖ್ಯವೋ ನಮ್ಮ ನೆಲ- ಮೂಲ ಸಂಸ್ಕೃತಿಗಳಲ್ಲಿ ಒಂದಾಗಿರುವ ಕೃಷಿಯನ್ನು ಉಳಿಸಿಕೊಳ್ಳುವುದು ಸಹ ಎಲ್ಲದ್ದಕ್ಕಿಂತ ಮುಖ್ಯವಾಗಿದೆ ಎಂದು ಹೇಳಿದರು.

ನಮ್ಮಲ್ಲಿ ಶೂನ್ಯ ಬಂಡವಾಳ ಕೃಷಿ, ಜೀವಚೈತನ್ಯ ಕೃಷಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ ಸೇರಿದಂತೆ ಅನೇಕ ವಿಧಾನಗಳಿವೆ. ಒಂದು ಕೃಷಿ ಪದ್ಧತಿಯವರನ್ನು ಕಂಡರೆ ಮತ್ತೂಂದು ಕೃಷಿ ಪದ್ಧತಿಯವರಿಗೆ ಆಗುವುದಿಲ್ಲ. ಇಂತಹ ಗೊಂದಲಗಳ ನಿವಾರಣೆಗೆ ನಾವು ಹೆಚ್ಚು ಗಮನ ಹರಿಸಬೇಕಾಗಿದೆ. ಎಲ್ಲ ಕೃಷಿ ಪದ್ಧತಿಗಳ ಉದ್ದೇಶವೂ ಪ್ರಕೃತಿ ಒಪ್ಪುವ ಉತ್ಪನ್ನಗಳನ್ನು ಗ್ರಾಹಕನ ಬಳಿಗೆ ಒಯ್ಯಬೇಕು ಎನ್ನುವುದೇ ಆಗಿರುತ್ತದೆ. ನಾವು ಗ್ರಾಹಕರಿಗೆ ಉತ್ಪನ್ನದ ರೂಪದಲ್ಲಿ ಅನ್ನದ ಅಗಳನ್ನು ಪೂರೈಕೆ ಮಾಡುತ್ತಿದ್ದೇವೆ ಎನ್ನುವ ವಿಶಾಲ ಮನೋಭಾವ ಬೆಳೆಯುವವರಲ್ಲಿ ಇರಬೇಕು ಎಂದರು.

Advertisement

ಇಂದಿನ ದಿನಮಾನಗಳಲ್ಲಿ ಕೃಷಿಕ ತೀರಾ ಹತಾಶನಾಗಿದ್ದಾನೆ. ಆತನಲ್ಲಿ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎನ್ನುವ ಉತ್ಸಾಹ ಉಳಿದಿಲ್ಲ. ನಮ್ಮ ವ್ಯವಸ್ಥೆ ಸಹ ರೈತರಲ್ಲಿ ಆತ್ಮಚೈತನ್ಯ ತುಂಬುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ರೈತರಲ್ಲಿ ಉತ್ಸಾಹ ಕಡಿಮೆ ಆಗುತ್ತಿರುವ ಬಗ್ಗೆ ಆತ್ಮಾವಲೋಕನದ ಅಗತ್ಯವಿದೆ. ನಮ್ಮ ಮಗ, ಮಗಳು, ಸೊಸೆ ಕೃಷಿಯಲ್ಲಿಯೇ ಬದುಕಿನ ಸಂತೃಪ್ತಿ ಕಟ್ಟಿಕೊಳ್ಳುವ ಮನೋಭೂಮಿಕೆ ವೃದ್ಧಿಸುವ ಅಗತ್ಯವಿದೆ. ಇಂತಹ ಕಾರ್ಯಾಗಾರಗಳು ಕೃಷಿಯ ಮೇಲೆ ಬೆಳಕು ಚೆಲ್ಲಿ ರೈತರ ಮೊಗದಲ್ಲಿ ಕುಂದಿರುವ ಉತ್ಸಾಹದ ಚಿಲುಮೆಯನ್ನು ಮತ್ತೆ ಚಿಮ್ಮಿಸುವಂತೆ ಆಗಬೇಕು ಎಂದು ತಿಳಿಸಿದರು.

“ಜೀವ ಚೈತನ್ಯ ಕೃಷಿ’ ವಿಷಯ ಕುರಿತು ಬೆಂಗಳೂರಿನ ಬಯೋ ಡೈನಾಮಿಕ್‌ ಅಸೋಸಿಯೇಶನ್‌ ಆಫ್‌ ಇಂಡಿಯಾದ ಅಧ್ಯಕ್ಷ ಡಾ| ಸಂದೀಪ್‌ ಕಾಮತ್‌, “ಎಲ್ಲರ ಒಳಿತಿಗಾಗಿ ಸಾವಯವ ಕೃಷಿ’ ವಿಷಯ ಕುರಿತು ಬೆಂಗಳೂರು ಗ್ರೀನ್‌ಪಾತ್‌ ಆರ್ಗ್ಯಾನಿಕ್‌ನ ಎಚ್‌. ಆರ್‌. ಜಯರಾಮ್‌, ಶೂನ್ಯ ಬಂಡವಾಳ ಕೃಷಿ ಕುರಿತು ಪ್ರಗತಿಪರ ಕೃಷಿಕ ಸಿ.ಜಿ.ಹರ್ಷವರ್ಧನ್‌ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಅಮೆರಿಕಾದ ಮೌಂಟೇನ್‌ ರೋಸ್‌ ಹರ್ಬ್ಸ್ ಸಂಸ್ಥೆ ವತಿಯಿಂದ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಪದವಿ ಶಿಕ್ಷಣ ಪಡೆಯಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಹೊಸಗುಂದದ ಗಣಪತಿ ಶೆಟ್ಟಿ ಅವರ ಪುತ್ರಿ ಹರ್ಷಿತಾ ಅವರಿಗೆ ರೂ. 35 ಸಾವಿರ ರೂ. ಆರ್ಥಿಕ ಸಹಕಾರ ನೀಡಲಾಯಿತು.

ನವದೆಹಲಿ ಭಾರತೀಪೀಠದ ಶ್ರೀ ಸರ್ವಾನಂದ ಸರಸ್ವತಿ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಜ್ಯೋತಿ ಕೋವಿ, ಸುಧೀಂದ್ರ ದೇಶಪಾಂಡೆ, ಜೇಕಬ್‌ ಇನ್ನಿತರರು ಇದ್ದರು. ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಮುಖ್ಯಸ್ಥ ಸಿ.ಎಂ.ಎನ್‌. ಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧ್ವರಾಜ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next