Advertisement

ತತ್‌ಕ್ಷಣ ಗಮನ ಹರಿಸಬೇಕಾದ ಸಮಸ್ಯೆ: ವೈದ್ಯಕೀಯ ಪರೀಕ್ಷೆ ದರ

01:21 PM Jan 31, 2018 | |

ಆಸ್ಪತ್ರೆಗಳಲ್ಲಿ ವಿವಿಧ ರೋಗಗಳ ವೈದ್ಯಕೀಯ ಪರೀಕ್ಷಾ ಶುಲ್ಕದಲ್ಲಿರುವ ವ್ಯತ್ಯಾಸದ ಕುರಿತು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖೀಸಿರುವುದು ಅಪೇಕ್ಷಿತ ನಡೆ. ಇದೇ ವರದಿಯಲ್ಲಿ ಹೆಚ್ಚುತ್ತಿರುವ ಲಿಂಗ ತಾರತಮ್ಯ, ಗಂಡು ಮಗುವಿನ ಮೋಹ ಇತ್ಯಾದಿ ಸಾಮಾಜಿಕ ವಿಚಾರಗಳ ಕುರಿತು ಕೂಡ ಗಮನ ಸೆಳೆಯಲಾಗಿತ್ತು. ಇಂತಹ ಕೆಲ ಕಾರಣಗಳಿಗಾಗಿಯೇ ಈ ಸಾಲಿನ ಆರ್ಥಿಕ ಸಮೀಕ್ಷೆ ಬರೀ ಅಂಕಿಅಂಶಗಳ ನಿಸ್ಸಾರ ವರದಿಯಾಗುವುದರಿಂದ ಬಚಾವಾಗಿದೆ. ಸದ್ಯ ದೇಶದಲ್ಲಿ ವೈದ್ಯಕೀಯ ಪರೀಕ್ಷೆಗಳಲ್ಲಿ ಶೇ. 1000ದಷ್ಟು ವ್ಯತ್ಯಾಸವಿದೆ ಎಂದು ಹೇಳುತ್ತದೆ ವರದಿ. ಇದು ನಿರ್ಲಕ್ಷಿಸಬಹುದಾದ ವಿಷಯವಲ್ಲ. ಒಂದು ಕಡೆ ವೈದ್ಯಕೀಯ 99 ರೂ. ಇದ್ದರೆ ಇನ್ನೊಂದೆಡೆ ಇದೇ ಪರೀಕ್ಷೆಗೆ ಇದರ 100ರಿಂದ 500 ಪಟ್ಟು ಅಧಿಕ ದರ ಇರುತ್ತದೆ. ಈ ದರ ತಾರತಮ್ಯ ಪ್ರದೇಶದಿಂದ ಪ್ರದೇಶಕ್ಕೆ ಮಾತ್ರವಲ್ಲದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಬದಲಾಗುತ್ತದೆ. ಸ್ಪೆಷಾಲಿಟಿ, ಸೂಪರ್‌ ಸ್ಪೆಷಾಲಿಟಿ, ಹೈಟೆಕ್‌ ಆಸ್ಪತ್ರೆಗಳಲ್ಲಿ ಒಂದು ದರವಾದರೆ ಮಧ್ಯಮ ದರ್ಜೆಯ ಅಥವಾ ಸಾಮಾನ್ಯ ದರ್ಜೆಯ ಆಸ್ಪತ್ರೆಯಲ್ಲಿ ಬೇರೊಂದು ದರವಿರುತ್ತದೆ. ಒಂದು ಸಾಮಾನ್ಯ ಎಕ್ಸ್‌-ರೇ ತೆಗೆದುಕೊಳ್ಳುವಾಗಲೇ ಈ ವ್ಯತ್ಯಾಸ ಗಮನಕ್ಕೆ ಬರುತ್ತದೆ. ಇಂತಹ ವ್ಯತ್ಯಾಸ ನಿವಾರಣೆಯಾಗಿ ದೇಶಕ್ಕೊಂದೇ ಆರೋಗ್ಯ ನೀತಿ ಜಾರಿಯಾಗಬೇಕೆನ್ನುವುದು ಬಹುಜನರ ಅಪೇಕ್ಷೆಯೂ ಹೌದು.  ಲಿಕ್ವಿಡ್‌ ಪ್ರೊಫೈಲ್‌, ಥೈರಾಯ್ಡ ಮತ್ತಿತರ ರೋಗಗಳ ಪರೀಕ್ಷೆ ದರದಲ್ಲಿರುವ ವ್ಯತ್ಯಾಸವನ್ನು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ಸಾಲಿಗೆ ಇನ್ನೂ ಅನೇಕ ರೋಗಗಳನ್ನು ಸೇರಿಸಬಹುದು. ಬಹುತೇಕ ಈ ದರಗಳ ನಿಗದಿಯಾಗುವುದು ಆಸ್ಪತ್ರೆಗಳ ದರ್ಜೆಯನ್ನು ಅನುಸರಿಸಿಕೊಂಡು. ದೇಶಕ್ಕೊಂದೇ ಆರೋಗ್ಯ ನೀತಿ ಜಾರಿಯಾದರೆ ಈ ವ್ಯತ್ಯಾಸ ತೊಲಗಿ ಆರೋಗ್ಯ ಸೇವೆಗಳ ಮೇಲಿನ ವೆಚ್ಚ ಕಡಿಮೆಯಾಗಬಹುದು. ಕಳೆದ ವರ್ಷ ಮಾರ್ಚ್‌ನಲ್ಲಿಯೇ ಸರಕಾರ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಘೋಷಿಸಿ ಇದರಲ್ಲಿ ಜನರ ವೈದ್ಯಕೀಯ ಖರ್ಚುವೆಚ್ಚಗಳ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಹಲವು ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಅದರ ಅನುಷ್ಠಾನ ನಿಧಾನ ಗತಿಯಲ್ಲಾಗುತ್ತಿರುವುದರಿಂದ ಜನರಿಗಿನ್ನೂ ಪರಿಣಾಮ ಗೋಚರಕ್ಕೆ ಬಂದಿಲ್ಲ. ಆದರೆ ಮೋದಿ ಸರಕಾರ ಆರೋಗ್ಯ ಕ್ಷೇತ್ರಕ್ಕೆ ಬಹಳ ಪ್ರಾಮು

Advertisement

ಖ್ಯತೆ ನೀಡಿರುವುದನ್ನು ಅಲ್ಲಗಳೆಯಲಾಗದು. ಜನೌಷಧಿ ಕೇಂದ್ರಗಳ ಸ್ಥಾಪನೆ, ಸ್ಟೆಂಟ್‌ ಬೆಲೆ ಇಳಿಕೆ ಇತ್ಯಾದಿ ಜನೋಪಯೋಗಿ ಕ್ರಮಗಳನ್ನು ಸರಕಾರ ಕೈಗೊಂಡಿದೆ. ಆರೋಗ್ಯ ಸೇವೆ ಈಗಲೂ ಖಾಸಗಿ ವ್ಯಕ್ತಿಗಳ ಕೈಯಲ್ಲಿರುವುದರಿಂದ ಈ ಕ್ಷೇತ್ರದಲ್ಲಿ ದಿಢೀರ್‌ ಎಂದು ಯಾವ ಬದಲಾವಣೆಯನ್ನೂ ಮಾಡಲು ಸಾಧ್ಯವಿಲ್ಲ. ಕರ್ನಾಟಕ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ತೊಡಿಸಲು ಕಾನೂನು ತರಲು ಮುಂದಾದಾಗ ವ್ಯಕ್ತವಾದ ಪ್ರತಿಭಟನೆಯೇ ಇದಕ್ಕೆ ಉದಾಹರಣೆ. ಆರೋಗ್ಯ ಸೇವೆಯಲ್ಲಿ ನಮ್ಮ ಸರಕಾರ ಸರಕಾರ ಇನ್ನೂ ಸಾಧಿಸಬೇಕಾದದ್ದು ಬಹಳಷ್ಟು ಇದೆ. ಈಗಲೂ ಶೇ. 70 ಹೊರ ರೋಗಿಗಳು ಮತ್ತು ಶೇ. 60 ಒಳರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಖಾಸಗಿ ಆಸ್ಪತ್ರೆಗಳು. ಚಿಕಿತ್ಸೆಗಾಗಿ ಭಾರತೀಯ  ಜೇಬಿನಿಂದ ಶೇ.70 ಹಣ ಖರ್ಚು ಮಾಡುತ್ತಾನೆ. ಇದೇವೇಳೆ ಡೆನ್ಮಾರ್ಕ್‌ ನವರು ತಮ್ಮ ಜೇಬಿ ನಿಂದ ಖರ್ಚು ಮಾಡುವುದು ಬರೀ ಶೇ. 15. ಉಳಿದ ಖರ್ಚನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಯುಕೆ, ಅಮೆರಿಕ, ಚೀನ ಮತ್ತಿತರ ದೇಶಗಳು ಈ ವಿಚಾರದಲ್ಲಿ ನಮ್ಮಿಂದ ಎಷ್ಟೋ ಮುಂದಿವೆ. ಈ ಕ್ಷೇತ್ರದಲ್ಲಿ ಖಾಸಗಿ ವಲಯ ಬಹುತೇಕ ಏಕಸ್ವಾಮ್ಯ ಹೊಂದಿದೆ ಎಂದರೂ ತಪ್ಪಾಗದು. ಪ್ರಸ್ತುತ ಹೆಚ್ಚಿನ ಖಾಸಗಿ ಆಸ್ಪತ್ರೆಗಳ ಮಾಲಕರು ವ್ಯಾಪಾರಿ ಮನೋಭಾವದ ವರಾಗಿ ರುವುದರಿಂದ ಇಲ್ಲಿ ದುಬಾರಿ ದರ ನಿಗದಿಯಾಗಿರುವುದು ಸಹಜ. ಆರೋಗ್ಯ ಸೇವಾ ಕ್ಷೇತ್ರದಲ್ಲಿರುವ ಎಲ್ಲ ಲೋಪಗಳನ್ನು ನಿವಾರಿಸಿಕೊಳ್ಳಲು ದಕ್ಷ ಮತ್ತು ಪ್ರಬಲ ರಾಷ್ಟ್ರೀಯ ಆರೋಗ್ಯ ನೀತಿಯೊಂದರ ಅಗತ್ಯವಿದೆ. ಆರೋಗ್ಯವನ್ನು ಶಿಕ್ಷಣ ಮತ್ತು ಮಾಹಿತಿ ಮಾದರಿ ಮೂಲಭೂತ ಹಕ್ಕು ಎಂದು ಪರಿಗಣಿಸುವ ಅಂಶ ಕರಡು ನೀತಿಯಲ್ಲಿ ಇದ್ದರೂ ಅನಂತರ ಅದನ್ನು ಕೈಬಿಡಲಾಗಿತ್ತು. ಅದಾಗ್ಯೂ 2025ಕ್ಕಾಗುವಾಗ ಸಾರ್ವಜನಿಕ ಆರೋಗ್ಯ ಸೇವೆಗೆ ಜಿಡಿಪಿಯ ಶೇ. 2.5 ಮೊತ್ತವನ್ನು ವ್ಯಯಿಸುವ ಗುರಿಯನ್ನು ಸರಕಾರ ಇರಿಸಿಕೊಂಡಿದೆ. ಇದು ಸಾಧ್ಯವಾಗಬೇಕಾದರೆ ಪ್ರತಿ ಬಜೆಟ್‌ನಲ್ಲಿ ಆರೋಗ್ಯ ಸೇವೆಯ ಅನುದಾನವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವುದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next