Advertisement

ಅಡುಗೆ ವಿಜ್ಞಾನದಲ್ಲೂ ಸೈ ಎನಿಸಿದ ವ್ಯೋಮ ವಿಜ್ಞಾನಿ!

03:29 AM Jul 17, 2021 | Team Udayavani |

ಕರ್ನಾಟಕದ ಕುವರ ವಿಜ್ಞಾನಿ ಡಾ| ಯು.ಆರ್‌.ರಾವ್‌ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದವರು ಎನ್ನುವುದಕ್ಕಿಂತ ಪ್ರಸಿದ್ಧಿಯೇ ಅವರನ್ನು ಆವರಿಸಿತು ಎನ್ನುವುದು ಸೂಕ್ತ. ಎಷ್ಟೋ ಜನರಿಗೆ ಪ್ರಸಿದ್ಧಿಯು “ಅಹಂ’ಗೆ ಕಾರಣವಾಗು ತ್ತದೆಯಾದರೆ ರಾವ್‌ ಅವರಿಗೆ ಸರಳತೆಯೇ ಭೂಷಣವಾಯಿತು. “ಹಿತೋಪದೇಶ’ ಗ್ರಂಥ “ವಿದ್ಯಾ ದದಾತಿ ವಿನಯಂ’ ಎಂದು ಸಾರುತ್ತದೆ. ಇದರರ್ಥ ವಿದ್ಯೆಯು ವಿನಯವನ್ನು ಕೊಡುತ್ತದೆ ಎಂದು. ವಿದ್ಯೆ “ಅಹಂ’ ತಂದಿತ್ತರೆ ಅದು ವಿದ್ಯೆಯೇ ಅಲ್ಲ ಎಂಬ ಧ್ವನ್ಯಾರ್ಥವಿದೆ. ವಿನಯದಿಂದ ಸಿಗುವುದು ಸತ್ಪಾತ್ರ ವ್ಯಕ್ತಿತ್ವ. ಇದು ಡಾ|ರಾವ್‌ ಅವರಿಗೆ ಲಭಿಸಿತ್ತು.

Advertisement

ಜಗತ್ತಿನ ಶ್ರೇಷ್ಠ ವ್ಯೋಮ ವಿಜ್ಞಾನಿ ಡಾ| ಯು. ಆರ್‌. ರಾವ್‌ ಖಾಸಗಿ ಬದುಕು ಹೇಗಿತ್ತು? ಮನೆಯಲ್ಲಿ ಶುಚಿ ರುಚಿಯಾದ ಅಡುಗೆ ಮಾಡು ತ್ತಿದ್ದರು. ದೇವಸ್ಥಾನಗಳಿಗೆ ಹೋದರೆ ಭರ್ಜರಿ ಸ್ವಾಗತ ನಿರೀಕ್ಷಿಸದೆ ಸರತಿ ಸಾಲಿನಲ್ಲಿ ತಮ್ಮ ಪಾಡಿಗೆ ತಾವು ದೇವರ ದರ್ಶನ ಮಾಡುತ್ತಿದ್ದರು.

ಭಾರತದ ಮೊದಲ ಕೃತಕ ಉಪಗ್ರಹ “ಆರ್ಯ ಭಟ’ವನ್ನು 1975ರಲ್ಲಿ ಆಗಸಕ್ಕೆ ಹಾರಿಸಿದವರು ರಾವ್‌. ಇಸ್ರೋ ಅಧ್ಯಕ್ಷರಾದ ಬಳಿಕ ಅವರ ರಾಕೆಟ್‌ ತಂತ್ರಜ್ಞಾನದ ಕೊಡುಗೆಯಿಂದಾಗಿ 1992ರಲ್ಲಿ ಎಎಸ್‌ಎಲ್‌ವಿ ರಾಕೆಟ್‌ ಉಡಾವಣೆ ಸಾಧ್ಯವಾಯಿತು. ಮೊದಲು ಉಪಗ್ರಹ ತಯಾರಿ, ಅನಂತರ ಉಡಾವಣೆ ವಾಹನವಾಯಿತು. ಭಾರತಕ್ಕೆ ಬರುವ ಮುನ್ನ ಅಮೆರಿಕದಲ್ಲಿದ್ದರು. ಅಲ್ಲಿನ ಐಶಾರಾಮಿ ಸೌಲಭ್ಯವನ್ನೆಲ್ಲ ಬಿಟ್ಟು ಭಾರತಕ್ಕೆ ಬಂದು ಮಾಡಿದ ಸಾಧನೆಯನ್ನು ಹೇಳಿಕೊಳ್ಳುತ್ತಿರಲಿಲ್ಲ. ಆರಂಭದಲ್ಲಿ ಸುಸಜ್ಜಿತ ಪ್ರಯೋಗಾಲಯವಿರಲಿಲ್ಲ, ಅನುಭವಿಗಳಿರಲಿಲ್ಲ. ಬೆಂಗಳೂರು ಹೊರವಲಯ ಪೀಣ್ಯದ ಕೈಗಾರಿಕ ಪ್ರದೇಶದಲ್ಲಿ ಚಟುವಟಿಕೆ ಆರಂಭಿಸಿದರು. 25 ಎಂಎಸ್ಸಿ ಭೌತಶಾಸ್ತ್ರ ಪದವೀಧ ರರು, 25 ಎಂಜಿನಿಯರುಗಳನ್ನು ಕಲೆ ಹಾಕಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮೇಳೈಸಿದರು. ಎಲ್ಲರೂ ಫ್ರೆಶ್‌ ಪದವೀಧರರು. ಅವರಿಗೆ ಜ್ಞಾನ, ಛಲ ಇತ್ತೇ ವಿನಾ ಏನು ಮಾಡಬೇಕೆಂದು ಗೊತ್ತಿರಲಿಲ್ಲ. ಯುವ ಉತ್ಸಾಹೀ ತಂಡದಿಂದ ಸಾಧ್ಯವಾಯಿತು ಎಂದು ರಾವ್‌ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಎ.ಪಿ. ಭಟ್‌ ಅವರಲ್ಲಿ ಹೇಳುತ್ತಿದ್ದರು.

1088ರಲ್ಲಿ ಆರಂಭಗೊಂಡ ಜಗತ್ತಿನ ಅತೀ ಹಳೆಯ ವಿ.ವಿ., ರೇಡಿಯೋ ತಂತ್ರಜ್ಞಾನದ ಮಾಕೋ ìನಿ ಕಲಿತ ಇಟಲಿಯ ಬೊಲೊಗ್ನ (ಬೊಲೊನಿಯ) ವಿ.ವಿ.ಯಲ್ಲಿ 1992ರಲ್ಲಿ ರಾವ್‌ ಅವರಿಗೆ ಗೌ. ಡಾಕ್ಟರೇಟ್‌ ಪ್ರದಾನವಾಯಿತು. ಕರ್ನಾಟಕದ ಬಹುತೇಕ ಎಲ್ಲ ವಿ.ವಿ.ಗಳೂ ಗೌರವ ನೀಡಿದ್ದವು. ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಒಲಿದವು. 2010ರ ಮಾ. 10ರಂದು (ಜನ್ಮದಿನ) ಗೂಗಲ್‌ ಡೂಡಲ್‌ ರಚಿಸಿ ಗೌರವ ಸೂಚಿಸಿತ್ತು.

ಭೌಮ ವ್ಯಕ್ತಿತ್ವದ ಈ ವಿಜ್ಞಾನಿಗೆ ಹಾಲಿಗೆ ಹದವಾಗಿ ಹೆಪ್ಪು ಬೆರೆಸಿ ಮಾರನೇ ದಿನ ಬೆಳಗ್ಗೆ ಗಟ್ಟಿ ಮೊಸರಿನ ಪಾತ್ರೆ ಇಡುವಾಗ ಎಲ್ಲಿಲ್ಲದ ಖುಷಿ. ಮನೆಗೆ ಬರುತ್ತಿದ್ದುದು ರಾತ್ರಿ ಸುಮಾರು 8 ಗಂಟೆಗೆ. ಆಗ ಪತ್ನಿ ಯಶೋದಾ ರಾವ್‌ ಅವರ ಅಡುಗೆ ಕೆಲಸ ಮುಗಿಯದೆ ಇದ್ದರೆ ಅಡುಗೆ ಮನೆ ಪ್ರವೇಶಿಸಿ ಅಚ್ಚುಕಟ್ಟಾಗಿ ಊಟಕ್ಕೆ ಅಣಿ ಮಾಡುತ್ತಿದ್ದರು. ಸ್ವಾಸ್ತಿಕ್‌ ಸೊಸೈಟಿ ಆಫ್ ಇಂಡಿಯಾ ಸಂಘಟನೆ ಮೂಲಕ ವಿಶೇಷ ಚೇತನ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಯಶೋದಾ ಸಕ್ರಿಯರಾಗಿದ್ದರು. ಕೆಲವು ದಿನ ಈ ಚಟುವಟಿಕೆಯಲ್ಲಿದ್ದಾಗ ಅವರ ಗೆಳತಿಯರಿಗೆ ಮನೆಗೆ ಹೋಗಿ ಅಡುಗೆ ಮಾಡಲು ಚಡಪಡಿಕೆ ಇರುತ್ತಿತ್ತು. ಯಶೋದಾರಿಗೆ ಈ ಚಿಂತೆ ಇರುತ್ತಿರಲಿಲ್ಲ. ಪತ್ನಿಯ ಸದುದ್ದೇಶ ತಿಳಿದುಕೊಂಡಿದ್ದ ರಾವ್‌ ಅಡುಗೆ ಸಿದ್ಧಪಡಿಸಿಡುತ್ತಿದ್ದರು.

Advertisement

ಯಶೋದಾ ಕಾಟನ್‌ ಸೀರೆಗಳನ್ನು ಮಾತ್ರ ಉಡುತ್ತಿದ್ದರು. ಸೀರೆಗಳನ್ನೂ ಆಯ್ದು ತರುತ್ತಿದ್ದುದು ರಾಯರೇ. ಅವರು ಬದುಕಿದ್ದೂ ಮಧ್ಯಮವರ್ಗದ ಜೀವನ ಶೈಲಿಯಲ್ಲಿ. ಯಶೋದಾರ ಸ್ನೇಹವೆಲ್ಲ ಮಧ್ಯಮ ವರ್ಗದ ಗೆಳತಿಯರೊಂದಿಗೆ. ಅತೀ ಸಿರಿವಂತರ ಸ್ನೇಹ ಬೆಳೆಸುವುದು, ಪಾರ್ಟಿಗಳಿಗೆ ಹಾಜರಾಗುವುದು ಇಷ್ಟವಿರಲಿಲ್ಲ.

ವೃತ್ತಿ ಸಂಬಂಧಿತ ಟೆನ್ಶನ್‌ ಹೇಗಿದ್ದಿರಬಹುದು? ಸೆಟಲೈಟ್‌ ಉಡಾಯಿಸುವ ಮುನ್ನಾ ದಿನಗಳ ಲ್ಲಿಯೂ ನಿರಾಳವಾಗಿರುತ್ತಿದ್ದರು. ಆಗಲೂ ಮನೆಯ ದಿನಚರಿ, ಮಧ್ಯರಾತ್ರಿವರೆಗೆ ಓದು ನಡೆಯು ತ್ತಿತ್ತು. ಒಮ್ಮೆ ಇವರ ಅಪಹರಣ ವಿಷಯ ಭಾರೀ ಸುದ್ದಿ ಯಾದಾಗ ಕೇಳಿ ಸುಮ್ಮನೆ ನಕ್ಕರಂತೆ. ಭಾರತೀಯ ವಿಜ್ಞಾನ ಮಂದಿರದ ಸಭೆಯೊಂದರಲ್ಲಿ ಬಾಂಬು ಸಿಡಿಯಬಹುದು ಎಂದು ಗುಲ್ಲೆದ್ದು ಬೇರೆ ಸಭಾಂಗಣಕ್ಕೆ ಕರೆದೊಯ್ದಾಗಲೂ ಅಷ್ಟೇ ನಿರ್ಲಿಪ್ತತೆ ಇತ್ತು.

ಒಮ್ಮೆ ಅದಮಾರು ಮಠದ “ವಿಜ್ಞಾನಪ್ರಿಯ’ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಯು.ಆರ್‌. ರಾವ್‌ ಅವರಿಗೆ ಸಮ್ಮಾನ ಏರ್ಪಡಿಸಿದ್ದರು. ಅವರ ತಮ್ಮ ಕೃಷ್ಣಮೂರ್ತಿ ರಾವ್‌ (2006ರ ವರೆಗೆ ಉಡುಪಿಯಲ್ಲಿ ಮೂರ್ತಿ ಸ್ಕೂಲ್‌ ಆಫ್ ಕಾಮರ್ಸ್‌ ನಡೆಸುತ್ತಿದ್ದರು) ಅವರ ಪತ್ನಿ ಸೀತಾರಿಗೆ ಭೇಟಿಯಾಗಬೇಕೆಂದಿತ್ತು. ಭದ್ರತೆ ಕಾರಣ ರಾವ್‌ ಮಣಿಪಾಲದ ಹೊಟೇಲ್‌ ವ್ಯಾಲಿವ್ಯೂನಲ್ಲಿ ಉಳಿಯುತ್ತಿದ್ದರು. ರಾಯರು ಮರುದಿನ ಬೆಳಗ್ಗೆ ಹೋಗುವವರಿದ್ದರು. ರಾತ್ರಿ ವಾಹನದಲ್ಲಿ ಸೀತಾ ಹೊಟೇಲ್‌ಗೆ ಹೋಗಿ ಸ್ವಾಗತಕಾರರಿಗೆ ಹೇಳಿದರು. ಮಹಡಿಯಲ್ಲಿ ಮಾಹೆ ವಿ.ವಿ.ಯ ದಿಗ್ಗಜರ ಜತೆ ಇದ್ದ ಡಾ| ರಾವ್‌, ಸ್ವಾಗತಕಾರ ಹೇಳಿದ್ದೇ ತಡ, ಕೆಳಗೆ ಬಂದು “ಈ ರಾತ್ರಿಯಲ್ಲಿ ಒಬ್ಬಳೇ ಏಕೆ ಬಂದೆ?’ ಎಂದು ಕೇಳಿ ಮಹಡಿಗೆ ಕರೆದೊಯ್ದು ಅಲ್ಲಿದ್ದ ಗಣ್ಯಾತಿಗಣ್ಯರಿಗೆ ಪರಿಚಯ ಮಾಡಿಸಿಕೊಟ್ಟರು. “ಹಿಂದೆಲ್ಲ ಬೆಂಗಳೂರಿನ ಮನೆಗೆ ಹೋದಾಗ ಯಶೋದಕ್ಕನನ್ನು ನನ್ನೊಂದಿಗೆ ಮಾತನಾಡಲು ಬಿಟ್ಟು ಅಡುಗೆ ತಯಾರಿಸುತ್ತಿದ್ದರು. ಅಷ್ಟೂ ಫ್ರೆಂಡ್ಲಿ, ವೆರಿ ಹೋಮ್ಲಿ. ತುಂಬಾನೆ ಗ್ರೇಟ್‌. ಆಫ್ಟರ್‌ ಆಲ್‌ ನಾನೇನೂ ಅಲ್ಲ, ಆದರೂ ನನ್ನನ್ನು ಪರಿಚಯಿಸುವಾಗ ತಮ್ಮನ ಹೆಂಡತಿ ಮಾತ್ರವಲ್ಲ, ನನ್ನ ಸೋದರ ಮಾವನ ಮಗಳು ಎಂದು ಅಭಿಮಾನದಿಂದ ಹೇಳುತ್ತಿದ್ದರು’ ಎಂಬ ಮಾತನ್ನು ಸೀತಾ ಅಷ್ಟೇ ಅಭಿಮಾನದಿಂದ ಬಿಚ್ಚಿಡುತ್ತಾರೆ.

ಎಷ್ಟೇ ಎತ್ತರಕ್ಕೆ ಬೆಳೆಯಲಿ, ಬೆಳೆ(ಸಿ)ದ ಪರಿಸರ, ಸಮಾಜ, ಸ್ನೇಹಿತರು, ಬಂಧುಗಳನ್ನು ಹೇಗೆ ನೋಡಿಕೊಳ್ಳಬೇಕು, ಹೇಗೆ ಬದುಕಬೇಕೆಂಬುದಕ್ಕೆ ಆದರ್ಶರಾಗಿದ್ದ ಡಾ| ರಾವ್‌ “ವಿದ್ಯಾ ದದಾತಿ ವಿನಯಂ’ ಮಾತಿಗೆ ಅನ್ವರ್ಥವಾಗಿದ್ದರು ಎಂಬುದನ್ನು ಜು. 24ರಂದು ಅವರ ಪುಣ್ಯತಿಥಿ ಸಂದರ್ಭ ಸ್ಮರಿಸಲಾ ಗುತ್ತಿದೆ. 1932ರ ಮಾ. 10ರಂದು ಉಡುಪಿಯಲ್ಲಿ ಜನಿಸಿದ ರಾವ್‌ 2017ರ ಜು. 24ರಂದು 85ನೆಯ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರೆ ಹತ್ತೇ ತಿಂಗಳಲ್ಲಿ ಅದೇ ತಾರೀಕಿನಂದು (2018ರ ಮೇ 24) ಯಶೋದಾ ನಿಧನ ಹೊಂದಿದರು.

ನಿರ್ಲಿಪ್ತ ಭಾವ
ವೃತ್ತಿ ಸಂಬಂಧಿತ ಟೆನ್ಶನ್‌ ಹೇಗಿದ್ದಿರಬಹುದು? ಸೆಟಲೈಟ್‌ ಉಡಾಯಿಸುವ ಮುನ್ನಾ ದಿನಗಳಲ್ಲಿಯೂ ನಿರಾಳವಾಗಿರುತ್ತಿದ್ದರು. ಆಗಲೂ ಮನೆಯ ದಿನಚರಿ, ಮಧ್ಯರಾತ್ರಿವರೆಗೆ ಓದು ನಡೆಯುತ್ತಿತ್ತು. ಒಮ್ಮೆ ಇವರ ಅಪಹರಣ ವಿಷಯ ಭಾರೀ ಸುದ್ದಿಯಾದಾಗ ಕೇಳಿ ಸುಮ್ಮನೆ ನಕ್ಕರಂತೆ. ಭಾರತೀಯ ವಿಜ್ಞಾನ ಮಂದಿರದ ಸಭೆಯೊಂದರಲ್ಲಿ ಬಾಂಬು ಸಿಡಿಯಬಹುದು ಎಂದು ಗುಲ್ಲೆದ್ದು ಬೇರೆ ಸಭಾಂಗಣಕ್ಕೆ ಕರೆದೊಯ್ದಾಗಲೂ ಅಷ್ಟೇ ನಿರ್ಲಿಪ್ತತೆ ಇತ್ತು.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next