Advertisement

ಕೊರೊನಾದಿಂದ ಕಂಗಾಲಾದ ಅಮೆರಿಕ

09:38 AM Mar 19, 2020 | mahesh |

ಭಾರತೀಯರೂ ಹಿಂದೆ ಬೀಳಲಿಲ್ಲ. “ಪಟೇಲ್‌ ಬ್ರದರ್ಸ್‌’ ಎಂಬುದು ಇಲ್ಲಿರುವ ಭಾರತೀಯ ದಿನಸಿ ಅಂಗಡಿಗಳ ಪೈಕಿ ದೊಡ್ಡದಾದ ಮಳಿಗೆ. ಮುಗಿಬಿದ್ದ ಗ್ರಾಹಕರ ಬೇಡಿಕೆ ಪೂರೈಸಲು ಈ ಅಂಗಡಿಗೂ ಕಷ್ಟವಾಯಿತು. ಅಕ್ಕಿ, ಬೇಳೆಯಂತಹ ಅಗತ್ಯದ ದಿನಸಿ ಸಿಕ್ಕಿದವರಿಗೆ ಸಿಕ್ಕಿತು, ಇಲ್ಲದವರಿಗೆ ಇಲ್ಲ …

Advertisement

ಕೊರೆಯುವ ಚಳಿ, ಸುರಿಯುವ ಹಿಮ ಪಾತದಿಂದ ಬಸವಳಿದಿದ್ದ ಅಮೆರಿಕದ ಜನತೆ ಬರಲಿರುವ ವಸಂತನಾಗಮನಕ್ಕೆ ಸಜ್ಜಾಗುತ್ತಿತ್ತು. ದಕ್ಷಿಣ ಭಾರತೀಯರ ಹಬ್ಬ “ಯುಗಾದಿ’ಯೊಂದಿಗೆ ಹೊಸ ವರ್ಷ ಆರಂಭವಾಗುವುದರಿಂದ ಆ ಬಗ್ಗೆ ಸಿದ್ಧತೆಯೂ ಜೋರಾಗಿ ಸಾಗಿತ್ತು. ಇಂಥ ಸಮಯದಲ್ಲಿಯೇ ಒಕ್ಕರಿಸಿತಲ್ಲ, ಕೊರೊನಾ ಎಂಬ ಮಹಾಮಾರಿ! ಚೀನಾದಲ್ಲಿ ಹುಟ್ಟಿತೆನ್ನಲಾದ ಕಣ್ಣಿಗೆ ಕಾಣದ ಈ ಕ್ಷುದ್ರ ಜೀವಿ ವಿಮಾನ ಹತ್ತಿಳಿದು ಶರವೇಗದಲ್ಲಿ ಜಗತ್ತನ್ನೆಲ್ಲಾ ಸಂಚರಿಸಿ, ವಿಶ್ವದ ದಿಗ್ಗಜರನ್ನೆಲ್ಲಾ ದಿಕ್ಕುಗೆಡಿಸಿತ್ತು. ಬೀದೀಲಿ ಹೋಗೋ ಮಾರಿಯನ್ನು ಮನೆಗೆ ಬಾ ಎಂದು ಕರೆಯುವ ಮೊದಲೇ ಮನೆ ಯೊಳಗೆ ಬಂದು ಕೂತಾಗಿತ್ತು. ಆಗ ಬೆಚ್ಚಿಬಿದ್ದಿತು ಅಮೆರಿಕ! ಎಲ್ಲೆಲ್ಲೂ ಭಯ, ಆತಂಕದ ವಾತಾವರಣ! ಯಾರನ್ನೂ ಯಾರೂ ಮುಟ್ಟದ, ಯಾರನ್ನು ಯಾರೂ ನಂಬದ ವಾತಾವರಣ. ಅಲ್ಲಿ ಬಂತಂತೆ..ಇಲ್ಲಿ ಕಾಣಿಸಿ ಕೊಂಡಿತಂತೆ ಎಂಬ ಅಂತೆಕಂತೆಗಳ ನಡುವೆ ಅಮೆರಿಕದ ಹಲವಾರು ರಾಜ್ಯಗಳಲ್ಲಿ ಕೊರೊನಾ ಹಾಜರಿ ಹಾಕಿತ್ತು. “ಇಲಿನಾಯ್‌’ ರಾಜ್ಯದ ಕೆಲವು ನಗರಗಳಲ್ಲಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯಾದ್ಯಂತ ತುರ್ತು ಪರಿಸ್ಥಿತಿ ಸಾರಲಾಗಿದೆ. ಶಾಲೆಗಳಿಗೆ ರಜೆ, ಆಫೀಸುಗಳಲ್ಲಿ ಕೆಲಸ ಮಾಡುವವರಿಗೆ ಮನೆಯಿಂದ ಕೆಲಸ ಮಾಡುವಂತೆ ಆದೇಶ ಹೊರಟಿದೆ!

ಇದೇ ಸಮಯದಲ್ಲಿ ಶುರುವಾಯಿತು ನೋಡಿ, ಭಯ, ಗಾಬರಿ ತುಂಬಿದ ಇಂಗ್ಲೀಷಿನಲ್ಲಿ ‘ಕಚnಜಿc’ ಎಂದು ಕರೆಸಿಕೊಳ್ಳುವ ವರ್ತನೆ! ಪತ್ರಿಕೆಯಲ್ಲಿ, ಟಿವಿಯಲ್ಲಿ ಓದುವ, ನೋಡುವ ಥರಾವರಿ ಸುದ್ದಿಗಳು ಜನ ಮನದಲ್ಲಿ ಆತಂಕಭರಿತ ಮನೋಭಾವವನ್ನು ಹುಟ್ಟು ಹಾಕಿತು. ಎಂತಹ ಸಂದರ್ಭದಲ್ಲಿಯೂ ಸಂಯಮ ಕಾಯ್ದುಕೊಳ್ಳುವ ಅಮೆರಿಕನ್ನರಲ್ಲಿ ಅದೇನೋ ಚಡಪಡಿಕೆ. ಇದ್ದಕ್ಕಿದ್ದಂತೆ ಜನರಲ್ಲಿ ಕೊಳ್ಳು ಬಾಕತನ ಮುಗಿಲುಮುಟ್ಟಿತು. ಒಂದು ವೇಳೆ ಕೊರೊನ ವೈರಸ್‌ ಹರಡುವಿಕೆಯಿಂದಾಗಿ ಅಂಗಡಿ ಮುಂಗಟ್ಟುಗಳೆಲ್ಲಾ ಮುಚ್ಚಿ, ಜನರೆಲ್ಲಾ ಮನೆಯಲ್ಲೇ ಇರುವಂತಾದರೆ ಗತಿಯೇನು? ಆ ಸಮಯಕ್ಕೆ ಬೇಕಾಗುವಷ್ಟು ಆಹಾರ ಪದಾರ್ಥಗಳು ಸಿಗದಂತಾದರೇ? ಹೀಗೆಂದು ಭಯಭೀತರಾದ ಜನರೆಲ್ಲಾ ಇಲ್ಲಿರುವ ದಿನಸಿ ಅಂಗಡಿಗಳ ಮುಂದೆ ಸಾಲು ಗಟ್ಟಿ ನಿಂತರು. ಬ್ರೆಡ್‌, ಉಪ್ಪು, ಸಕ್ಕರೆ, ನೀರಿನ ಬಾಟಲುಗಳು ಎಣ್ಣೆ, ಪಾಸ್ತಾದಿಂದ ಹಿಡಿದು ಫ್ರಿಡ್ಜ್ ಲ್ಲಿ ಶೈತ್ಯೀಕರಿಸಿಟ್ಟಿರುವ ತರಕಾರಿಗಳವರೆಗೆ ಕೈಗೆ ಸಿಕ್ಕ ಆಹಾರ ಸಾಮಗ್ರಿಗಳನ್ನೆಲ್ಲಾ ಶಾಪಿಂಗ್‌ ಕಾರ್ಟುಗಳಲ್ಲಿ ಪೇರಿಸಿ ಕೊಂಡರು. ಚೆಕ್‌ ಔಟ್‌ ಲೈನ್‌ ತಲುಪಲು ಕಡಿಮೆ ಯೆಂದರೆ ಒಂದರಿಂದ ಎರಡು ತಾಸು ಸಮಯ ಕಾಯುವಂತಹ ಪರಿಸ್ಥಿತಿ ಸೃಷ್ಟಿಯಾಯಿತು.

ಈ ಸಮಯದಲ್ಲಿ ಅತಿ ಆಶ್ಚರ್ಯ ತರಿಸಿದ ವರ್ತನೆಯೆಂದರೆ ಇಲ್ಲಿ ಶೌಚಕ್ಕೆ ಬಳಸುವ ಟಾಯ್ಲೆಟ್‌ ಪೇಪರುಗಳನ್ನು ಜನರು ಮಿತಿಮೀರಿ ಕೊಂಡು ಸಂಗ್ರಹಿಸಿ, ಅಂಗಡಿಯ ಕಪಾಟುಗಳನ್ನೇ ಬರಿದಾಗಿ ಸಿದ್ದು! ನೀರಿನ ಸಹಾಯವಿಲ್ಲದೆ ಕೈಗಳನ್ನು ಶುದ್ಧಗೊಳಿ ಸುವ ಸ್ಯಾನಿಟೈಸರ್‌ಗಳಂತೂ ಎಲ್ಲಿಯೂ ಸಿಕ್ಕದಾದವು. ಪ್ರತಿಯೊಂದು ಅಂಗಡಿಗಳ ಮುಂದೆಯೂ ಸಾಲು ಹಿಡಿದು ನಿಂತ ಜನರ ಬೇಡಿಕೆಯನ್ನು ಪೂರೈಸಲಾರದೆ ಮಾರಾಟಗಾರರು ಸೋತುಹೋದರು. “ದಯವಿಟ್ಟು ಅಳತೆ ಮೀರಿ ಖರೀದಿಸಬೇಡಿ. ಇತರರಿಗೂ ಸ್ವಲ್ಪ ಉಳಿಸಿ’ ಎಂದು ಖರೀದಿಗೆ ಮಿತಿ ಹೇರಿದವು. ಇಲ್ಲಿಯ ಜನರಿಗೆ ಟಾಯ್ಲೆಟ್‌ ಪೇಪರುಗಳಿಲ್ಲದ ಬದುಕನ್ನು ಊಹಿಸಿಕೊಳ್ಳಲೂ ಆಗದೆಂಬುದು

ಈ ಸಂದರ್ಭದಲ್ಲಿ ಅರಿವಾಯಿತು. ಇಲ್ಲಿಯ ಪ್ರಮುಖ ವ್ಯಾಪಾರಿ ಮಳಿಗೆಗಳಾದ ಟಾರ್ಗೆಟ್‌, ವಾಲ್ಮಾರ್ಟ್‌, ಕಾಸ್ಟ್ಚೊ (Costco)… ಮುಂತಾದವುಗಳಲ್ಲಿಗೆ ಎಂದಿನಂತೆ ವ್ಯಾಪಾರಕ್ಕೆಂದು ಹೋದವರು ಖಾಲಿ ಕಪಾಟುಗಳನ್ನು ಕಂಡು ಬರಿಗೈಯಲ್ಲಿ ಮರಳಬೇಕಾಯಿತು. ಟಾಯ್ಲೆಟ್‌ ಪೇಪರ್‌ ಖರೀದಿಗಾಗಿ ಅಂಗಡಿಗಳಲ್ಲಿ ನಡೆದ ಜಗಳ, ಕದನಗಳ ವಿಡಿಯೋಗಳೂ ವಾಟ್ಸ್‌ ಆಪಿನಲ್ಲಿ ಹರಿದಾಡಿದವು.

Advertisement

ಭಾರತೀಯರೂ ದಿನಸಿ ಸಂಗ್ರಹದಲ್ಲಿ ಹಿಂದೆ ಬೀಳಲಿಲ್ಲ. “ಪಟೇಲ್‌ ಬ್ರದರ್ಸ್‌’ ಎಂಬುದು ಇಲ್ಲಿರುವ ಹಲವಾರು ಭಾರತೀಯ ದಿನಸಿ ಅಂಗಡಿಗಳ ಪೈಕಿ ದೊಡ್ಡದಾದ ಮಳಿಗೆ. ಇಲ್ಲಿ ಸಿಗದ ಪದಾರ್ಥಗಳಿಲ್ಲ. ಭಾರತೀಯರಿಗೆ ಅತ್ಯಗತ್ಯವಾದ ದಿನಸಿ ವಸ್ತುಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿಯೇ ಶೇಖರಿಸಿರಲಾಗುತ್ತದೆ. ಅದರೆ, ಕರೊನಾ ಹಾವಳಿಯಿಂದಾಗಿ ಮುಗಿಬಿದ್ದ ಭಾರತೀಯ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಈ ಅಂಗಡಿಗೂ ಅಸಾಧ್ಯವೇ ಆಯಿತು..”ದಯವಿಟ್ಟು ಎರಡು ವಾರಗಳಿಗಾಗುವಷ್ಟೇ ಖರೀದಿಸಿ. ನಾವು ಖಾಲಿಯಾದಂತೆ ಹೊಸ ದಾಸ್ತಾನು ತರಿಸುತ್ತೇವೆ..’ ಎಂದು ಸೂಚನಾ ಫ‌ಲಕಗಳನ್ನು ಅಂಟಿಸಿದರೂ ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಕ್ಕಿ, ಬೇಳೆಯಂತಹ ಅಗತ್ಯದ ದಿನಸಿಗಳು ಕೂಡ ಸಿಕ್ಕಿದವರಿಗೆ ಸಿಕ್ಕಿತು, ಇಲ್ಲದವರಿಗೆ ಇಲ್ಲ ಎನ್ನುವಂತಹ ಕೊರತೆ ಏರ್ಪಟ್ಟಿತು.

ಇಂಥ ಅತಿರೇಕ, ಅಪಸವ್ಯಗಳ ನಡುವೆಯೂ ಕೆಲವು ಸಹೃದಯರು ತಮ್ಮದೇ ಸಣ್ಣ ಸಂಘಟನೆಗಳ ಮೂಲಕ ಸಮಾಜ ಸೇವೆಗೆ ನಿಂತಿದ್ದು ನಿಜಕ್ಕೂ ಶ್ಲಾಘನೀಯ. ಕೈಕಾಲು ಗಟ್ಟಿ ಇರುವವರು, ಆರೋಗ್ಯವಂತರೇನೋ ಈ ನೂಕುನುಗ್ಗಲಿನ ಚಕ್ರವ್ಯೂಹದೊಳಹೊಕ್ಕು ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಆದರೆ ಈ ರೀತಿ ತಮ್ಮ ಕಾರುಗಳನ್ನು ಚಲಾಯಿಸಿಕೊಂಡು ಬಂದು, ಹನುಮಂತನ ಬಾಲದಂತಹ ಸರತಿಯ ಸಾಲಿನಲ್ಲಿ ನಿಲ್ಲಲಾರದ ವಯೋವೃದ್ಧರ ಪಾಡೇನು? ಈ ರೀತಿಯ ಹಿರಿಯ ನಾಗರೀಕರಿಗೆ, ಅಶಕ್ತರಿಗೆ ಸಹಾಯ ಮಾಡಲು ಕೆಲವರು ಮುಂದಾದರು. ಯಾವುದೇ ಸಮಾಜದಲ್ಲಿ ಹಿರಿಯರು ಮತ್ತು ಕಿರಿಯರು ಹೇಗೆ ನಡೆಸಿಕೊಳ್ಳಲ್ಪಡುತ್ತಾರೆಂಬುದು ಆ ಸಮುದಾಯದ ಗುಣಮಟ್ಟವನ್ನು ನಿರ್ಧರಿಸುವ ವಿಷಯವಾದ್ದರಿಂದ ಗೋಜಲಿನ ನಡುವೆಯೇ ವ್ಯಕ್ತವಾದ ಇಂತಹ ನೆರವು ನೀಡುವ ಮನೋಭಾವ ನಿಜಕ್ಕೂ ನಮ್ಮಲ್ಲಿ ಹೆಮ್ಮೆ ಮೂಡಿಸಿತು. ಈ ರೀತಿ ಯೋಚಿಸುವ ಮನಸ್ಸುಗಳು ಹೆಚ್ಚಾದಷ್ಟೂ ಸಮಾಜ ಸ್ವಸ್ಥವಾಗಿರುವುದರಲ್ಲಿ ಅನುಮಾನವಿಲ್ಲ.

ಬರೀ ಅಜ್ಜ-ಅಜ್ಜಿಯರ ಮಾತುಗಳಲ್ಲಿ, ಕಥೆ ಕಾದಂಬರಿಗಳಲ್ಲಿ ಮಾತ್ರ ಕಂಡಿದ್ದ ಭೀಕರ ಸಮಸ್ಯೆಯೊಂದಕ್ಕೆ ನಮ್ಮ ತಲೆಮಾರು ಸಾಕ್ಷಿಯಾಯಿತು. ಕೊನೆ ಎಂದು? ಎಂದರಿಯದ ಮಹಾನ್‌ ವಿಪತ್ತಿಗೆ ಇಂದು ಜಗತ್ತು ಮುಖಾಮುಖೀ ಯಾಗಿರುವುದು ನಿಜ. ಆದರೆ ಯಾವ ಸಂಕಷ್ಟಗಳೂ ಶಾಶ್ವತವಲ್ಲ. ಆತ್ಮಬಲ, ಒಗ್ಗಟ್ಟಿನಿಂದ ಇದನ್ನು ಎದುರಿಸಲು ಸಾಧ್ಯವಿದೆ. ಆದರೆ ಅದಕ್ಕೆ ಪ್ರತಿಯೊ ಬ್ಬರೂ ತಮಗೆ ತಾವೇ ನಿರ್ಬಂಧಗಳನ್ನು ವಿಧಿಸಿ ಕೊಂಡು. ತಮ್ಮ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡಬೇಕಾಗಿದೆ. ಕೊರೊನ ಹಿಡಿತದಿಂದ ಕಂಗಾಲಾಗಿರುವ ಜಗತ್ತು ನೆಮ್ಮದಿಯಿಂದ ನಗುವ ದಿನ ಬೇಗ ಬರಲಿ!

ಆಶ್ಚರ್ಯ ತರಿಸಿದ ವರ್ತನೆಯೆಂದರೆ ಇಲ್ಲಿ ಶೌಚಕ್ಕೆ ಬಳಸುವ ಟಾಯ್ಲೆಟ್‌ ಪೇಪರುಗಳನ್ನು ಜನರು ಮಿತಿಮೀರಿ ಕೊಂಡು ಸಂಗ್ರಹಿಸಿ, ಅಂಗಡಿಯ ಕಪಾಟುಗಳನ್ನೇ ಬರಿದಾಗಿ ಸಿದ್ದು!

“ದಯವಿಟ್ಟು 2 ವಾರಗಳಿಗಾಗುವಷ್ಟೇ ಖರೀದಿಸಿ. ನಾವು ಖಾಲಿಯಾದಂತೆ ಹೊಸ ದಾಸ್ತಾನು ತರಿಸುತ್ತೇವೆ..’ ಎಂದು ಸೂಚನಾ ಫ‌ಲಕ ಅಂಟಿಸಿದರೂ ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ.

  • ತ್ರಿವೇಣಿ ಶ್ರೀನಿವಾಸರಾವ್‌ ಶಿಕಾಗೊ, ಅಮೆರಿಕ
Advertisement

Udayavani is now on Telegram. Click here to join our channel and stay updated with the latest news.

Next