Advertisement

ಅಧಿಕಾರಿಗಳ ಕೈ ಕಟ್ಟಿ ಹಾಕಿದ ಸುತ್ತೋಲೆಗಳ ತಿದ್ದುಪಡಿ

11:22 AM Aug 23, 2019 | Team Udayavani |

ಬೆಳಗಾವಿ: ಸಂತ್ರಸ್ತರಿಗೆ ಸೂಕ್ತ ಪರಿಹಾರ, ಪುನರ್ವಸತಿ ಸ್ಥಳಾಂತರಕ್ಕೆ ಅಗತ್ಯವಿರುವ ನಿಯಮಾವಳಿಗಳು ಅಧಿಕಾರಿಗಳ ಕೈ ಕಟ್ಟಿ ಹಾಕಿವೆ. ಇದರ ವಿನಾಯಿತಿ ಅಥವಾ ತಿದ್ದುಪಡಿ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಕೊಳ್ಳಲಾಗುವುದು ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ ಗುರುವಾರ ರಾತ್ರಿ 11ಗಂಟೆವರೆಗೂ ನಡೆದ ಪ್ರವಾಹ ಕುರಿತು ಶಾಸಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಎರಡು ದಿನದಲ್ಲಿ ಸಚಿವ ಸಂಪುಟ ನಡೆಸಿ ಇಲ್ಲಿಯ ವರದಿ ನೀಡಲಾಗುವುದು. ಸರ್ಕಾರದ ಮಟ್ಟದಲ್ಲಿ ತೀರ್ಮಾಣ ಮಾಡಿ ಕೆಲವು ಕಾನೂನುಗಳನ್ನು ಹಾಗೂ ಸುತ್ತೋಲೆಗಳನ್ನು ತಿದ್ದುಪಡಿ ಮಾಡಲಾಗುವುದು ಎಂದರು.

ಸಂಪೂರ್ಣ ಮುಳುಗಡೆಯಾದ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕಿದೆ. ಅಧಿಕಾರಿಗಳು ಆಯಾ ಗ್ರಾಮಗಳಿಗೆ ತೆರಳಿ ಗ್ರಾಮ ಸಭೆ ನಡೆಸಬೇಕು. ಅನೇಕ ಹಳ್ಳಿಗಳನ್ನು ಸ್ಥಳಾಂತರ ಮಾಡುವಂತೆ ಹೇಳಿದರೂ, ಹಕ್ಕುಪತ್ರಗಳನ್ನು ಕೊಟ್ಟರೂ ಇನ್ನೂ ಸ್ಥಳಾಂತರಗೊಂಡಿಲ್ಲ. ಹೀಗಾಗಿ ಎಷ್ಟು ಪುನರ್ವಸತಿ ಮಾಡಬೇಕು ಎಂಬುದರ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚಿಸಬೇಕು ಎಂದು ಹೇಳಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಪ್ರವಾಹ ನಿಂತ ಮೇಲೆ ಪ್ರದೇಶವನ್ನು ಸ್ವಚ್ಛವಾಗಿ ಇಡಬೇಕು. ಈ ನಿಟ್ಟಿನಲ್ಲಿ ಫಾಗೀಂಗ್‌ ಮಷೀನ್‌ಗಳನ್ನು ನೀಡಬೇಕಾಗಿದೆ. ಮಾನವೀಯತೆ ದೃಷ್ಟಿಯಿಂದ ಕೆಲಸ ಮಾಡಬೇಕಾಗಿದೆ. ಅಗತ್ಯ ಇರುವ ಕಡೆಗೆ ಕ್ರಮ ಕೈಗೊಳ್ಳಬೇಕು ಎಂದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಕಾನೂನು ದೃಷ್ಟಿಗಿಂತಲೂ ಮಾನವೀಯತೆಯಿಂದ ಕೆಲಸ ಮಾಡಬೇಕು. ಕಾನೂನು ಹೇಳುತ್ತ ಹೋದರೆ ಯಾವುದೂ ಕೆಲಸ ಆಗುವುದಿಲ್ಲ. ಎಲ್ಲರೂ ಕೂಡಿ ಕೆಲಸ ಮಾಡಿದರೆ ಬಡವರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.

Advertisement

ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಸಮಸ್ಯೆ ಆಗದಂತೆ ಸರ್ಕಾರ ಎಚ್ಚರ ವಹಿಸಲಾಗುತ್ತಿದೆ. ವಿಮೆ ತುಂಬಲು ಆಗಸ್ಟ್‌ 31 ಆಗುವ ಬದಲು ಜುಲೈ 31ಕ್ಕೆಆಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಶಾಸಕ ಅನಿಲ ಬೆನಕೆ ಮಾತನಾಡಿ, ಉತ್ತರದಲ್ಲಿ 500ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಶೇ. 50ರಷ್ಟು ಮನೆ ಬಿದ್ದರೂ ಅವುಗಳನ್ನು ಸಂಪೂರ್ಣ ಮನೆ ಹಾನಿ ಎಂಬುದನ್ನೇ ಪರಿಗಣಿಸಬೇಕು. ಬಡವರ ಕಡೆಯಿಂದ ಅನಾವಶ್ಯಕ ಹೆಚ್ಚಿನ ದಾಖಲೆಗಳನ್ನು ಕೇಳಬಾರದು ಎಂದು ಮನವಿ ಮಾಡಿದರು.

ಶಾಸಕ ಆನಂದ ಮಾಮನಿ ಮಾತನಾಡಿ, ಸರ್ಕಾರಿ ಪ್ರೌಢ ಶಾಲೆಗೆ ಕೇವಲ ಒಂದೂವರೆ ಲಕ್ಷ ಯಾವುದಕ್ಕೂ ಸಾಲುವುದಿಲ್ಲ. ಎತ್ತುಗಳು ಮೃತಪಟ್ಟರೆ ಕೇವಲ 25 ಸಾವಿರ ರೂ. ನೀಡಲಾಗುತ್ತಿದ್ದು, ಅದರ ಬೆಲೆ ಮಾರುಕಟ್ಟೆಯಲ್ಲಿ ಒಂದೂವರೆ ಲಕ್ಷ ರೂ.ಇದೆ. ಇದನ್ನು ಹೆಚ್ಚಿಸಬೇಕು ಎಂದರು.

ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಕೇವಲ ಚಿಕ್ಕೋಡಿ ತಾಲೂಕಿಗಷೇr ಗಮನ ಹರಿಸದೇ ಮಲಪ್ರಭಾ ನದಿ ತೀರದ ಜನರ ಬಗ್ಗೆಯೂ ಕಾಳಜಿ ವಹಿಸಬೇಕು. ನಮ್ಮಲ್ಲಿ 50 ಸಾವಿರ ಜನ ನಿರಾಶ್ರಿತರಾಗಿದ್ದು, ಸದ್ಯ ತಾತ್ಕಾಲಿಕ ಶೆಡ್‌ ನಿರ್ಮಿಸಬೇಕು. ಕೂಡಲೇ ಶಾಲೆಗಳನ್ನು ಆರಂಭಿಸಬೇಕು. ನೇಕಾರರ ಬಗ್ಗೆ ಅನುಕಂಪ ತೋರಿಸಬೇಕು ಎಂದರು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮೊದಲು ಮಾಡಿದ ಸಮೀಕ್ಷೆ ವರದಿಯನ್ನು ಪರಿಗಣಿಸಬೇಕು ಎಂದರು.

ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಮಾತನಾಡಿ, ತಾಲೂಕಾಗಿದ್ದರೂ ಅನೇಕ ಕಚೇರಿಗಳೇ ಬಂದಿಲ್ಲ. ಪ್ರವಾಹದಿಂದ ನಮ್ಮಲ್ಲಿಯೂ ಅನೇಕ ಸಮಸ್ಯೆಗಳಾಗಿವೆ. ಟೆಂಡರ್‌ ಗಳನ್ನು ಮಾಡಿ ವಿಶೇಷ ಅನುದಾನ ನೀಡಬೇಕು ಎಂದರು.ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿದರು.

ಪ್ರಾಥಮಿಕ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 42733 ಮನೆಗಳಿಗೆ ಹಾನಿಯಾಗಿದ್ದು, 96458 ಕುಟುಂಬಗಳು ಪ್ರವಾಹದಿಂದ ಬಾತಗೊಂಡಿವೆ. ಇದರಲ್ಲಿ 42317 ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಉಳಿದ ಕುಟುಂಬಗಳಿಗೆ ನಾಳೆ ಸಂಜೆಯವರೆಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಮಾಹಿತಿಯನ್ನು ನೀಡಿದರು.

ಇದುವರೆಗೆ 28 ಕೋಟಿ ರೂ. ಒಟ್ಟಾರೆ ಪರಿಹಾರ ನೀಡಲಾಗಿದೆ. ಪ್ರವಾಹ ಪರಿಸ್ಥಿತಿ ನಿರ್ವಹಣೆ ಮತ್ತು ಪರಿಹಾರ ವಿತರಣೆಗಾಗಿ ಇದುವರೆಗೆ 127 ಕೋಟಿ ರೂ. ಅನುದಾನವನ್ನು ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಪೊಲೀಸ್‌ ಆಯುಕ್ತ ಬಿ.ಎಸ್‌.ಲೋಕೇಶ್‌ ಕುಮಾರ್‌, ಜಿಪಂ ಸಿಇಒ ಡಾ. ರಾಜೇಂದ್ರ ಕೆ.ವಿ., ಎಸ್‌ ಪಿ ಲಕ್ಷ್ಮಣ ನಿಂಬರಗಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next