Advertisement

ಅಪಾರ ಜ್ಞಾನತೃಷೆ, ದೂರದರ್ಶಿತ್ವದ ನಾಯಕ ಅಂಬೇಡ್ಕರ್‌

10:19 AM Apr 14, 2022 | Team Udayavani |

ಡಾ| ಬಿ. ಆರ್‌. ಅಂಬೇಡ್ಕರ್‌ ಅವರಿಗೆ ಓದು ಒಂದು ತಪಸ್ಸು. ಅವರಿಗೆ ಮನುಷ್ಯರ ಒಡನಾಟಕ್ಕಿಂತ ಪುಸ್ತಕಗಳ ಒಡನಾಟವೇ ಹೆಚ್ಚು ಆನಂದ ಕೊಡುತ್ತಿತ್ತು.ಅವರ ಓದಿನ ಕ್ರಮವೂ ತುಂಬಾ ಭಿನ್ನವಾಗಿತ್ತು. ಅವರು ಇಡೀ ರಾತ್ರಿ ಓದುತ್ತಲೇ ಇರುತ್ತಿದ್ದರಂತೆ. ಒಮ್ಮೆ ಪತ್ನಿ ರಮಾಬಾಯಿ ಬೆಳಿಗ್ಗೆ ಚಹಾ ಕೊಡಲು ಹೋದರೆ ಅಂಬೇಡ್ಕರ್‌, “ಇದೇನು ರಾತ್ರಿ ಹೊತ್ತಿನಲ್ಲಿ ಚಹಾ ತಂದೆ’ ಅಂತ ಕೇಳಿದ್ದರಂತೆ. ಹೀಗೆ ದೇಶ, ಕಾಲವನ್ನೇ ಮರೆತು ಅಧ್ಯಯನದಲ್ಲಿ ಮುಳುಗಿಬಿಡುವ ಅಂಬೇಡ್ಕರ್‌ ಅವರ ದೊಡ್ಡ ಶಕ್ತಿಯೇ ಅಪಾರ ಜ್ಞಾನ, ಅಧ್ಯಯನಶೀಲತೆ, ಸಂಶೋಧನಗುಣ. ಅವರ ಈ ಅಪಾರ ಓದೇ ನಮ್ಮ ಸಂವಿಧಾನವನ್ನು ಸರ್ವಶ್ರೇಷ್ಠವಾಗಿಸಿದ್ದು.

Advertisement

“ಯಾವುದು ನನಗೆ ವಿಷಯಗಳ ಬಗ್ಗೆ ತಿಳಿವಳಿಕೆಯನ್ನು ಕೊಡುತ್ತದೆಯೋ ಯಾವುದು ನನ್ನ ವಿಕಾಸ ಮಾಡುವುದೋ ಅದೇ ನನಗೆ ವಿನೋದವನ್ನು, ಆನಂದವನ್ನೂ ಉಂಟು ಮಾಡುತ್ತದೆ’ ಎಂದು ಅಂಬೇಡ್ಕರ್‌ ತಮ್ಮ ಓದಿನ ಹವ್ಯಾಸದ ಬಗೆಗೆ ಹೇಳಿಕೊಳ್ಳುತ್ತಿದ್ದರು. ಇದು ಅವರ ವ್ಯಕ್ತಿತ್ವದ ಗುಣವನ್ನೂ ಹೇಳುತ್ತದೆ.

ತಮ್ಮ ಓದು ಮತ್ತು ಬದುಕಿನ ನಡುವೆ ಅಂತರವನ್ನೇ ಕಾಣಿಸದೆ ಜ್ಞಾನದಾಹ ಮೆರೆದವರು ಅವರು. ಅಂಬೇಡ್ಕರ್‌ ಯಾವತ್ತೂ ಎಲ್ಲ ಕಾಲದಲ್ಲೂ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಆದರ್ಶ ಮತ್ತು ಪ್ರೇರಣೆಯಾಗುವುದು ಇದೇ ಕಾರಣದಿಂದ. ಅವರಿಗಿದ್ದ ಜ್ಞಾನತೃಷೆ ಅಸಾಧಾರಣವಾದ್ದು. 50ಸಾವಿರಕ್ಕೂ ಮಿಕ್ಕಿದ ಪುಸ್ತಕ ಸಂಗ್ರಹ ಅವರಲ್ಲಿತ್ತು. ಅಂದರೆ ಅವರ ಜ್ಞಾನ ದಾಹ ಯಾವ ಮಟ್ಟದ್ದು ಎಂಬುದನ್ನು ಊಹಿಸಿಕೊಳ್ಳಬಹುದು. ಅವರ ಓದಿನ ವ್ಯಾಪ್ತಿ ನೋಡಿದರೆ ಎಂಥವರನ್ನು ನಿಬ್ಬೆರಗಾಗಿಸುತ್ತದೆ. ಅಷ್ಟು ವೈವಿಧ್ಯಮಯ, ವೈರುಧ್ಯಮಯ ಆಗಿತ್ತು ಅದು.

ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಅಪರಾಧಶಾಸ್ತ್ರ, ಸಾಂಸ್ಕೃತಿಕ ಮಾನವಶಾಸ್ತ್ರ ಕಾನೂನು, ರಾಜಕೀಯ, ತಣ್ತೀಶಾಸ್ತ್ರ, ಇತಿಹಾಸ, ಭೂಗೋಳ, ಸಾಹಿತ್ಯ, ಶಾಸ್ತ್ರ, ಪುರಾಣ…ಹೀಗೆ ವಿಷಯ ವ್ಯಾಪ್ತಿ ಬೆಳೆಯುತ್ತದೆ. ಅವರ ದುಡಿಮೆಯ ಬಹುಪಾಲನ್ನು ಪುಸ್ತಕ ಖರೀದಿಗೆ ಬಳಸುತ್ತಿದ್ದರು. ಅಂಬೇಡ್ಕರ್‌ ಜೀವನ ಚರಿತ್ರೆ ಬರೆದ ಖ್ಯಾತ ಜೀವನ ಚರಿತ್ರಕಾರ ಧನಂಜಯ ಕೀರ್ತಿ ಹೇಳುವಂತೆ ವೀರ ಸಾವರ್ಕರ್‌ ಮತ್ತು ಬಾಲಗಂಗಾಧರ ತಿಲಕ್‌ ಬಿಟ್ಟರೆ ಇಷ್ಟೊಂದು ಬೃಹತ್‌ ಪ್ರಮಾಣದ ಪುಸ್ತಕ ಸಂಗ್ರಹ ಮತ್ತು ಓದು ಅಂಬೇಡ್ಕರ್‌ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಆದರೆ ತಮ್ಮ ಬಡತನ ಮತ್ತು ಜಾತಿಯ ಕಾರಣದಿಂದ ಅವರಿಗೆ ಪುಸ್ತಕಗಳ ಸಹಜ ಅನುಕೂಲ ಒದಗಿಬರಲಿಲ್ಲ. ಓದಿಗೂ ಅವರು ಹೋರಾಡಬೇಕಾಯಿತು.

ಅಂಬೇಡ್ಕರ್‌ ಅವರದು ಆದರ್ಶದ ಓದಾಗಿತ್ತು. ಅದಕ್ಕೊಂದು ಉದಾತ್ತ ಗುರಿ ಇತ್ತು. ದೊಡ್ಡ ಕಾಣೆRàಯೇ ಇತ್ತು. ಒಂದು ತಾತ್ವಿಕ, ಸತ್ಯಶೋಧದ ಜತೆಗೆ ಸ್ವಾಭಿಮಾನ, ಘನತೆಯ ಹುಡುಕಾಟವೂ ಅವರ ಓದಿಗಿತ್ತು. ಆದ್ದರಿಂದಲೇ ಎಂದೂ ಅವರು ಓದನ್ನು ಬಿಡಲಿಲ್ಲ. 1913ರಲ್ಲಿ ಅಮೆರಿಕದಲ್ಲಿ ಓದುತ್ತಿ¨ªಾಗ ಪತ್ನಿ ರಮಾಬಾಯಿಗೆ ಬರೆದ ಒಂದು ಪತ್ರದಲ್ಲಿ ಹೀಗೆ ಹೇಳುತ್ತಾರೆ “ರಮಾ, ನಮ್ಮ ದೇಶದಲ್ಲಿರುವ ಬಡ, ಅನಕ್ಷರಸ್ಥ ಮುಗ್ಧ ಜೀವಿಗಳನ್ನು ಮನುಷ್ಯರನ್ನಾಗಿ ಮಾಡಬೇಕಾಗಿದೆ. ಅವರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ಅದಕ್ಕಾಗಿಯೇ ನನ್ನ ಬೌದ್ಧಿಕ, ಮಾನಸಿಕ ಹಾಗೂ ವಾಚನಶಕ್ತಿ ಹೆಚ್ಚಿಸಿಕೊಳ್ಳಬೇಕಾಗಿದೆ. ಆ ಕಾರಣದಿಂದಲೇ ಇಲ್ಲಿ ನಾನು ಅನ್ನ, ನೀರು, ಮೋಜು, ಮಸ್ತಿ ಎಲ್ಲದಕ್ಕೂ ಬೆನ್ನು ತಿರುಗಿಸಿ ಜ್ಞಾನದ ಅಗ್ನಿಕುಂಡದಲ್ಲಿ ನನ್ನನ್ನೇ ನಾನು ತಳ್ಳಿಕೊಂಡು ಬೇಯುತ್ತಿದ್ದೇನೆ’.

Advertisement

ಆಸೆ ಇದ್ದರೂ ಬಡತನದ ಕಾರಣದಿಂದ ಹಣದ ಕೊರತೆಯಾದಾಗ ಒಂದು ಹೊತ್ತು ಊಟ ಮಾಡದೆ ಉಳಿಸಿದ ಹಣದಲ್ಲಿ ಪುಸ್ತಕ ಖರೀದಿ ಮಾಡುತ್ತಿದ್ದರಂತೆ. ಗ್ರಂಥಾಲಯವನ್ನು ದೇವಾಲಯ ಎಂದು ತಿಳಿದವರು ಅಂಬೇಡ್ಕರ್‌. ಆದ್ದರಿಂದ ಸಾರ್ವಜನಿಕ ಗ್ರಂಥಾಲಯವನ್ನು ಅತ್ಯಂತ ಹೆಚ್ಚು ಬಳಸುತ್ತಿದ್ದವರು ಅವರು. ಕಾರ್ಲ್ ಮಾರ್ಕ್ಸ್, ಸಾವರ್ಕರ್‌ ಬಳಸುತ್ತಿದ್ದ ಗ್ರಂಥಾಲಯದಲ್ಲೇ ಅಂಬೇಡ್ಕರ್‌ ಕೂಡ ಓದಿದ್ದರು. ಅಂಬೇಡ್ಕರ್‌ ಓದು ಕೂಡ ಅಷ್ಟೇ ಗಂಭೀರ ಮತ್ತು ಆಳವಾಗಿತ್ತು. ಸಂಶೋಧನಪೂರ್ಣವಾಗಿತ್ತು. ಅವರು ಓದಿದ ಪ್ರತೀ ಪುಸ್ತಕಗಳ ಬಗ್ಗೆ ಟಿಪ್ಪಣಿ ಮಾಡಿಡುತ್ತಿದ್ದರು. “ಒಮ್ಮೆ ಒಂದು ಗ್ರಂಥ ಓದಲು ಶುರು ಮಾಡಿದರೆಂದರೆ ಇಡೀ ಗ್ರಂಥವನ್ನು ನುಂಗುವವರಂತೆ ಅತ್ಯಂತ ವೇಗವಾಗಿ ಅದನ್ನು ಓದಿ ಮುಗಿಸುತ್ತಿದ್ದರು’ ಎಂದು ಅವರ ಸಹಪಾಠಿಯಾಗಿದ್ದ ನವೆಲ್‌ ಬತನಾ ಬರೆದಿದ್ದಾರೆ.

ಲಂಡನ್‌ನ ಬ್ರಿಟಿಷ್‌ ಮ್ಯೂಸಿಯಂ ಲೈಬ್ರರಿ ಬಾಗಿಲು ತೆರೆಯುವ ಮೊದಲೇ ಅಂಬೇಡ್ಕರ್‌ ಹಾಜರಿರುತ್ತಿದ್ದರು. ಸಂಜೆ ಬಾಗಿಲು ಹಾಕುವ ವರೆಗೂ ಶ್ರದ್ಧೆಯಿಂದ ಅಧ್ಯಯನ ಮಾಡುತ್ತಿದ್ದ ಕತೆ ಎಲ್ಲರಿಗೂ ಗೊತ್ತೇ ಇದೆ. ಅ ಗ್ರಂಥಾಲಯದಲ್ಲಿ ಅತೀ ಹೆಚ್ಚು ಪುಸ್ತಕಗಳನ್ನು ಎರವಲು ಪಡೆದು ಓದಿದ ಪ್ರಪಂಚದ ಏಕೈಕ ವ್ಯಕ್ತಿ ಅಂಬೇಡ್ಕರ್‌ ಎಂಬುದು ಅಲ್ಲಿ ದಾಖಲಾಗಿದೆ. ಇದು ಭಾರತೀಯರಿಗೆ ಹೆಮ್ಮೆ ಮೂಡಿಸುತ್ತದೆ.

ಕಾಶಿ ವಿವಿ ಸ್ಥಾಪಿಸಿದ ಮದನ ಮೋಹನ ಮಾಲವೀಯರು ಅಂಬೇಡ್ಕರ್‌ ಅವರನ್ನು ಸರಸ್ವತೀ ಪುತ್ರ ಎಂದೇ ಕರೆದಿದ್ದರು. ಒಮ್ಮೆ ಮಾಲವೀಯರು ಅಂಬೇಡ್ಕರ್‌ ಅವರಲ್ಲಿ ಕೇಳಿದ್ದರಂತೆ. ನಿಮ್ಮ ಅಷ್ಟು ಗ್ರಂಥಭಂಡಾರವನ್ನು ಕಾಶಿ ವಿವಿ ಗೆ ಕೊಡಿ ಅಂತ. ಹಾಗೆ ಆ ಕಾಲದ ದೊಡ್ಡ ಕೈಗಾರಿಕೋದ್ಯಮಿ ಬಿರ್ಲಾ ಅವರು ಅಂಬೇಡ್ಕರ್‌ ಅವರ ಸಂಗ್ರಹದ 50ಸಾವಿರ ಪುಸ್ತಕ ಖರೀದಿಸಲು 2ಲಕ್ಷ ರೂಪಾಯಿ ಕೊಡಲು ಮುಂದೆ ಬಂದಿದ್ದರು. ಆದರೆ ತಮ್ಮ ಪ್ರಾಣದಂತೆ ಪ್ರೀತಿಸುತ್ತಿದ್ದ ಪುಸ್ತಕಗಳನ್ನು ಅಂಬೇಡ್ಕರ್‌ ಯಾರಿಗೂ ಮಾರಲಿಲ್ಲ. ತಮ್ಮ ಇಳಿ ವಯಸ್ಸಿನಲ್ಲಿ ಆರೋಗ್ಯ ತುಂಬಾ ಹದಗೆಟ್ಟಾಗ ಅವರೇ ಸ್ಥಾಪಿಸಿದ ಜನತಾ ಶಿಕ್ಷಣ ಸಂಸ್ಥೆಗೆ ದಾನ ಮಾಡಿ ವಿದ್ಯಾರ್ಥಿಗಳು ಇದನ್ನು ಬಳಸಿಕೊಳ್ಳಬೇಕೆಂಬ ಆಶಯ ವ್ಯಕ್ತಪಡಿಸಿದ್ದರು.

ಅಂಬೇಡ್ಕರ್‌ ಅವರ ಆಳವಾದ ಅಧ್ಯಯನ ಮತ್ತು ಬೌದ್ಧಿಕತೆಯ ಕಾರಣದಿಂದಲೇ ಆಧುನಿಕ ಭಾರತದಲ್ಲಿ ಹೊಸ ಕನಸುಗಳು, ಆದರ್ಶಗಳು, ಉದಾತ್ತ ಮೌಲ್ಯಗಳು ಚಿಗುರೊಡೆದವು. ಇದೇ ನಮ್ಮ ಸಂವಿಧಾನವನ್ನು ಸಂಪುಷ್ಟಗೊಳಿಸಿದ್ದು. ಅಂಬೇಡ್ಕರ್‌ ಅವರನ್ನು ನೆನೆಯುವುದೆಂದರೆ ಮಹಾಜ್ಞಾನಮಾರ್ಗದಲ್ಲಿ ಅಡಿ ಇಟ್ಟಂತೆ.

-ಜಿ. ಪಿ. ಪ್ರಭಾಕರ ತುಮರಿ, ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next