Advertisement

karnataka polls 2023: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಬದ್ಧ: ಜಗದೀಶ ಶೆಟ್ಟರ್ 

11:39 AM Apr 29, 2023 | Team Udayavani |

ಹುಬ್ಬಳ್ಳಿ: ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ
ಜಗದೀಶ ಶೆಟ್ಟರ ಅವರು ವಾರ್ಡ್‌ 48, 49ರ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪ್ರಚಾರ ಕೈಗೊಂಡರು.

Advertisement

ಶಿರೂರು ಪಾರ್ಕ್‌, ಅಕ್ಷಯ ಕಾಲೋನಿ ಇನ್ನಿತರ ಬಡಾವಣೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಶಿರೂರು ಪಾರ್ಕ್‌ನ ಟೆಂಡರ್‌ ಶ್ಯೂರ್‌ ರಸ್ತೆ ಉತ್ತರ ಕರ್ನಾಟಕದ ಪ್ರಥಮ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತೋಳನಕೆರೆ ಅಭಿವೃದ್ಧಿಪಡಿಸಲಾಗಿದ್ದು, ಸುತ್ತಮುತ್ತಲಿನ ಬಡಾವಣೆಗಳ ಉದ್ಯಾನಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಕಾಳಿದಾಸ ನಗರ, ರಾಜೀವ ನಗರ, ಹನುಮಂತ ನಗರ, ಶ್ರೇಯಾ ಎಸ್ಟೇಟ್‌ ಮುಂತಾದ ಬಡಾವಣೆಗಳಲ್ಲಿ ಪ್ರಮುಖ ರಸ್ತೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಬದ್ಧ ಎಂದರು. ನಂತರ ಜವಳಿ ಗಾರ್ಡನ್‌, ವಿದ್ಯಾನಗರದ ಕೆಲ ಭಾಗಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ವಿಧಾನಪರಿಷತ್ತು ಸದಸ್ಯ ಸಲೀಂ ಅಹ್ಮದ್‌, ಮುಖಂಡರಾದ ಮೋಹನ ಲಿಂಬಿಕಾಯಿ, ಪ್ರಫುಲ್ಲಚಂದ್ರ ರಾಯನಗೌಡ್ರ, ಅನಿಲಕುಮಾರ ಪಾಟೀಲ, ರಜತ ಉಳ್ಳಾಗಡ್ಡಿಮಠ, ದೊರೈರಾಜ್‌ ಮಣಿಕುಂಟ್ಲ ಇನ್ನಿತರರಿದ್ದರು.

ಲಿಂಗಾಯತ ನಾಯಕತ್ವ ಮೂಲೆಗುಂಪಿಗೆ ಷಡ್ಯಂತ್ರ
ಹುಬ್ಬಳ್ಳಿ: ಅಪ್ಪಿತಪ್ಪಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇನಾದರೂ ಬಂದರೆ ಲಿಂಗಾಯತ ನಾಯಕತ್ವ ಹೊರಗಿಟ್ಟು ಸರಕಾರ ರಚಿಸುವ ಷಡ್ಯಂತ್ರ ನಡೆದಿದ್ದು, ಅದರ ಭಾಗವಾಗಿಯೇ ಲಿಂಗಾಯತ ನಾಯಕರನ್ನು ಮೂಲೆಗುಂಪಾಗಿಸುವ, ಹೊರಹೋಗುವಂತೆ ಮಾಡುವ ವಿದ್ಯಮಾನಗಳು ನಡೆದಿವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಲಿಂಗಾಯತ ನಾಯಕತ್ವ ಎಂದು ಬಂದಾಗ
ಬಿ.ಎಸ್‌.ಯಡಿಯೂರಪ್ಪ ನಂತರದಲ್ಲಿ ನಾನೇ ಹಿರಿಯ ನಾಯಕನಾಗಿದ್ದೆ. ನಾನು ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ನನಗೆ ಟಿಕೆಟ್‌ ನಿರಾಕರಣೆ ಷಡ್ಯಂತ್ರ ನಡೆಸಲಾಯಿತು. ಶೆಟ್ಟರ ಅವರನ್ನು ಏನು ಮಾಡಿದರೂ ಸ್ವಲ್ಪ ಸಿಟ್ಟಾಗಬಹುದು, ಅವರನ್ನು ಸಮಾಧಾನಪಡಿಸಿ ನಂತರ ಮೂಲೆಗುಂಪು ಮಾಡಬಹುದು ಎಂಬುದು ಬಿಜೆಪಿಯ ಅನೇಕರ ಅನಿಸಿಕೆಯಾಗಿತ್ತು. ಶೆಟ್ಟರ ಶಕ್ತಿ ಗೊತ್ತಿರಲಿಲ್ಲ. ನಾನು ಕಾಂಗ್ರೆಸ್‌ ಸೇರಿದ ನಂತರದಲ್ಲಿ ಬಿಜೆಪಿಯಲ್ಲಿ ತಳಮಳ ಶುರುವಾಗಿದೆ ಎಂದರು.

ಜನರಿಂದಲೇ ಚಾಲೆಂಜ್‌ ಸ್ವೀಕಾರ: ಒಬ್ಬ ಜಗದೀಶ ಶೆಟ್ಟರ ಸೋಲಿಸಲು ಕೇಂದ್ರ-ರಾಜ್ಯ ಸರಕಾರ, ಇಡೀ ಬಿಜೆಪಿಯೇ ಟೊಂಕ ಕಟ್ಟಿ ನಿಂತಿದೆ. ರಾಷ್ಟ್ರ-ರಾಜ್ಯಮಟ್ಟದ ನಾಯಕರು ಪದೇ ಪದೇ ಆಗಮಿಸಿ ಸೋಲಿಸುವ ಚಾಲೆಂಜ್‌ ಮಾಡಿದ್ದಾರೆ. ಆದರೆ, ಕ್ಷೇತ್ರದ ಜನತೆ ಶೆಟ್ಟರ ಅವರನ್ನು ಗೆಲ್ಲಿಸಲೇಬೇಕು ಎಂಬ ಚಾಲೆಂಜ್‌ ಸ್ವೀಕರಿಸಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದಲೇ ಈ ರಿಸ್ಕ್ ತೆಗೆದುಕೊಂಡಿದ್ದೇನೆ. ಅವರು ಏನೇ ಕುತಂತ್ರ ನಡೆಸಿದರೂ ಹೆದರುವ ಮಾತು ಇಲ್ಲ. ನನ್ನ ವಿರುದ್ಧ ಆರೋಪ, ಅನ್ಯಾಯ ಮಾಡಿದಷ್ಟು ಜನರಲ್ಲಿ ನನ್ನ ಬಗ್ಗೆ ಅಭಿಮಾನ, ಅನುಕಂಪ ಹೆಚ್ಚಲಿದೆ. ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ ಶೆಟ್ಟರ ಅವರು ಗೆಲ್ಲುವುದಿಲ್ಲ ಎಂದು ಹೇಳಿದ್ದರು. ಆದರೆ, ಕಾಂಗ್ರೆಸ್‌ ಅಭಿಮಾನಿಯೊಬ್ಬ ಶೆಟ್ಟರ ಗೆಲುವು ನೂರಕ್ಕೆ ನೂರಷ್ಟು ಖಚಿತ ಎಂದು ರಕ್ತದಲ್ಲಿ ಬರೆದಿದ್ದಾನೆ. ಜನರ ಮನಸ್ಸಿನಲ್ಲಿ ಈ ಸ್ಥಾನ ಪಡೆದಿರುವುದಕ್ಕೆ ಸಂತಸ ಮೂಡಿದೆ. ಆ ಅಭಿಮಾನಿಯನ್ನು ಸನ್ಮಾನಿಸಿದೆ ಎಂದು ಹೇಳಿದರು.

Advertisement

ನಾನು ಪಕ್ಷ ತೊರೆದಿದ್ದಕ್ಕೆ ಪಕ್ಷದ್ರೋಹ ಮಾಡಿದ್ದಾಗಿ ಆರೋಪಿಸುತ್ತಿದ್ದಾರೆ. ಆಪರೇಷನ್‌ ಕಮಲ ಹೆಸರಲ್ಲಿ ಕಾಂಗ್ರೆಸ್‌
-ಜೆಡಿಎಸ್‌ ಶಾಸಕರು, ಸಚಿವರನ್ನು ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಕರೆತಂದು ಬಿಜೆಪಿ ಸರಕಾರ ರಚಿಸಿತ್ತು. ಅವರು ಪಕ್ಷದ್ರೋಹ ಮಾಡಿದ್ದಾರೆ ಎಂದು ಅನ್ನಿಸಲಿಲ್ಲವೆ? ಪಕ್ಷದ್ರೋಹಿಗಳನ್ನು ಸೇರಿಸಿಕೊಂಡು ಸರಕಾರ ರಚಿಸಿದರಲ್ಲ. ನಿಮಗೊಂದು ನ್ಯಾಯ, ನನಗೊಂದು ನ್ಯಾಯವೆ ಎಂದು ಖಾರವಾಗಿ ಪ್ರಶ್ನಿಸಿದರು.

ತಾವೇನು ಮಾಡುತ್ತಿದ್ದೇವೆ
ಎಂದು ಯೋಚಿಸಲಿ
ಅಭಿಮಾನಿಯೊಬ್ಬ ನನ್ನ ಭಾವಚಿತ್ರ ಪ್ರದರ್ಶಿಸಿದರೆ ಅದರ ಮೇಲೆ ನೀರು ಸುರಿಯುವ, ಆತನ ಕೈಯಿಂದ
ಚಿತ್ರ ಕಸಿದುಕೊಳ್ಳು ಇಬ್ಬರು ಮೂವರು ಮುಗಿಬೀಳುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನೊಂದು ಪಕ್ಷದ
ಗೂಂಡಾಗಿರಿ ಬಗ್ಗೆ ಆರೋಪಿಸುತ್ತಿದ್ದ ನಾಯಕರು ಇದೀಗ ತಾವು ಮಾಡುತ್ತಿರುವುದೇನು ಎಂಬುದನ್ನು ಯೋಚನೆ
ಮಾಡಲಿ. ಕೆಲವರಿಗೆ ಅಧಿಕಾರ-ಹಣದ ಮದಬಂದಿದೆ. ಈ ಚುನಾವಣೆ ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಇದ್ದಂತಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಯಾವ ಜವಾಬ್ದಾರಿ ವಹಿಸುತ್ತದೆಯೋ ನೋಡೋಣ. ಸದ್ಯ ವಿಧಾನಸಭೆ ಚುನಾವಣೆ ಬಗ್ಗೆ ಮಾತ್ರ ಯೋಚಿಸೋಣ ಎಂದು ಶೆಟ್ಟರ ಹೇಳಿದರು.

ಪಾಲಿಕೆ ಹಲವು ಸದಸ್ಯರು ನನ್ನ ಬಗ್ಗೆ ಒಳ್ಳೆಯ ಭಾವನೆ ಹೊಂದಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಅವರ ಮೇಲೆ ಒತ್ತಡ ತರುವ, ಗೂಢಾಚಾರಿಕೆ ನಡೆಸುವ ಕಾರ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಪಾಲಿಕೆ ಸದಸ್ಯರನ್ನು ಸಂಪರ್ಕಿಸಿ ಒತ್ತಡ ತಂತ್ರ ಪ್ರಯೋಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ನನ್ನ ಮನೆ ಸುತ್ತ ಗುಪ್ತಚರ ಕಾರ್ಯ ನಡೆಯುತ್ತಿದ್ದು, ಯಾರು ಬರುತ್ತಾರೆ ಎಂಬುದರ ಮಾಹಿತಿ ಪಡೆದು ನಂತರ ಅವರ ಮೇಲೆ ಒತ್ತಡ ತರುವ, ಬೆದರಿಕೆ
ಹಾಕುವ ಯತ್ನಗಳು ನಡೆಯುತ್ತಿವೆ.
-ಜಗದೀಶ ಶೆಟ್ಟರ, ಹು-ಧಾ
ಸೆಂಟ್ರಲ್‌ ಕಾಂಗ್ರೆಸ್‌ ಆಭ್ಯರ್ಥಿ

 

Advertisement

Udayavani is now on Telegram. Click here to join our channel and stay updated with the latest news.

Next