Advertisement

ಆಳ್ವಾಸ್‌ ವಿರಾಸತ್‌ಗೆ ರಜತ ಸಂಭ್ರಮ

06:00 AM Dec 28, 2018 | Team Udayavani |

 ವಿರಾಸತ್‌ ಎಂದರೆ ಸಾಂಸ್ಕೃತಿಕ ಸಂಭ್ರಮ, ವೈಭವ. ಆಳ್ವಾಸ್‌ ವಿರಾಸತ್‌ಗೆ ಇದೀಗ ರಜತ ಸಂಭ್ರಮ. 25 ವರ್ಷಗಳ ಹಿಂದೆ ಮೂಡುಬಿದಿರೆಯ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ನೆಲೆಮನೆ ಸಮಾಜ ಮಂದಿರದ ಬಯಲು ರಂಗಮಂಟಪದಲ್ಲಿ ವಿರಾಸತ್‌ ಪ್ರಾರಂಭವಾದಾಗ ಕಲೆತ ಮಂದಿ ಸುಮಾರು 500. ಈಗ ಈ ಸಂಖ್ಯೆ ಕನಿಷ್ಟ 50,000! 

Advertisement

ಮುಂದೆ ಮಹಾವೀರ ಕಾಲೇಜಿನ ಬಯಲು ರಂಗಮಂಟಪಕ್ಕೆ , ಬಳಿಕ ಧವಲಾ ಕಾಲೇಜಿನ ಬಯಲಿಗೆ. ಮುಂದೆ ಸಾವಿರ ಕಂಬದ ಬಸದಿಯ ಆವರಣಕ್ಕೆ. ಸಂಪಿಗೆ ಮರದಡಿ, ಮುಂದೆ ವಿಶಾಲವಾದ ಆವರಣದಲ್ಲಿ. ಸುತ್ತಲೂ ಮುರಗಲ್ಲಿನ ಪಾಗಾರಗಳ ನಡುವೆ ಅತ್ಯಂತ ಇಕೋಯಿಸ್ಟಿಕ್‌ ಆಗಿ ಕಾರ್ಯಕ್ರಮಗಳು ಮೂಡಿಬಂದಾಗ ಜನ ಪುಳಕಿತರಾದರು. ಆ ಹೊತ್ತಿಗೆ ಪ್ರೇಕ್ಷಕರ ಸಂಖ್ಯೆ ಸುಮಾರು ನಾಲ್ಕೈದು ಸಾವಿರಕ್ಕೇರಿದ್ದು ಆಗಿನ ದಾಖಲೆ. ಮುಂದೆ ಮಿಜಾರು ಶೋಭಾವನದೆತ್ತರಕ್ಕೆ ಸಾಗಿತು ವಿರಾಸತ್‌. ಕೆಲವಾರು ವರ್ಷಗಳ ಬಳಿಕ ಮತ್ತೆ ಮೂಡುಬಿದಿರೆ ವಿದ್ಯಾಗಿರಿಯ ಪ್ಯಾಲೇಸ್‌ ಗ್ರೌಂಡ್‌ಗೆ. ಈಗ ಕೆಲವು ವರ್ಷಗಳಿಂದ ವಿದ್ಯಾಗಿರಿಯ ಸನಿಹ ಇರುವ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಕನಿಷ್ಟ 50,000 ಮಂದಿಯ ನಡುವೆ ವಿಜ್ರಂಭಿಸುತ್ತಿದೆ “ಆಳ್ವಾಸ್‌ ವಿರಾಸತ್‌’ ಎಂಬ ಗಂಧರ್ವ ಲೋಕ. 

ದೇಶ ವಿದೇಶಗಳ ಪ್ರಖ್ಯಾತ ಕಲಾವಿದರನ್ನು ಕೇವಲ ನಗರವಾಸಿಗಳು ಮಾತ್ರ ನೋಡುವುದಲ್ಲ, ಕೇಳುವುದಲ್ಲ; ಮೂಡುಬಿದಿರೆಯಂಥ, ಸಣ್ಣ ಊರಿನ ಮಂದಿಗೂ ಈ ಭಾಗ್ಯ ಬೇಕು ಎಂಬ ದೂರಗಾಮಿ ಚಿಂತನೆಯನ್ನು ಹೊಂದಿದ್ದ ಡಾ| ಎಂ. ಮೋಹನ ಆಳ್ವರು ವಿದ್ಯಾಸಂಸ್ಥೆಗಳಿಲ್ಲದ ಕಾಲದಲ್ಲಿಯೇ ಊರಿನ ವಿದ್ಯಾಸಂಸ್ಥೆಗಳ ಸಹಕಾರದೊಂದಿಗೆ ವಿರಾಸತ್‌ನ್ನು ಬರಮಾಡಿಕೊಳ್ಳುವಲ್ಲಿ ಸಫಲರಾದರು. ಇನ್ನೊಂದೆಡೆ, ಇಂಥ ಸಾಂಸ್ಕೃತಿಕ ಉತ್ಸವಗಳಿಗೆ ತಕ್ಕ ಸೌಂದರ್ಯಪ್ರಜ್ಞೆ ಹೊಂದಿರುವ ಪ್ರೇಕ್ಷಕ ವರ್ಗವೂ ತಯಾರಾಗಬೇಕು ಎಂಬ ಆಶಯವೂ ಇತ್ತು. ಮತ್ತೂಂದೆಡೆ ಯುವಜನತೆ ಈ ಉತ್ಸವದಿಂದ ಪ್ರೇರಣೆಗೊಂಡು ಕಲಾಭಿರುಚಿಯೊಂದಿಗೆ ಕಲಾವಿದರೂ ಆಗಿ ಹೊರಹೊಮ್ಮುವಂತಾದರೆ ಎಷ್ಟೊಂದು ಚೆನ್ನು ಎಂಬ ದೂರದೃಷ್ಟಿಯೂ ಇತ್ತು. 25 ವರ್ಷಗಳಲ್ಲಿ ಈ ಮೂರೂ ಅಶಯಗಳು ನಿಜವಾಗಿವೆ.  ಇಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದಲ್ಲಿ ಶಾಸ್ತ್ರೀಯ, ಜಾನಪದ ನ್ರತ್ಯ, ಸಂಗೀತ, ಯಕ್ಷಗಾನ, ನಾಟಕಾದಿ ವಿವಿಧ ವಿಭಾಗಗಳಲ್ಲಿ 350 ಮಂದಿ ವಿದ್ಯಾರ್ಥಿ ಕಲಾವಿದರಿರುವ ಕಲಾತಂಡಗಳು ರೂಪುಗೊಂಡಿವೆ. 

ಯಾರೆಲ್ಲ ಬಂದಿದ್ದಾರೆ?
ಸಾಂಸ್ಕೃತಿಕ ಲೋಕದ ಸುಪ್ರಸಿದ್ದರೆನಿಸಿದವರೆಲ್ಲ ವಿರಾಸತ್‌ಗೆ ಬಂದಿದ್ದಾರೆ. ಪದ್ಮಾ ಸುಬ್ರಹ್ಮಣ್ಯಂ. ಚಿತ್ರಾ ವಿಶ್ವೇಶ್ವರನ್‌, ಸ್ವಪ್ನ ಸುಂದರಿ, ವಸುಂಧರಾ ದೊರೆಸ್ವಾಮಿ, ಶ್ರೀಧರ್‌ ದಂಪತಿ, ಬಿಜು ಸತ್ಪತಿ, ಶೀಲಾ ಉನ್ನಿಕೃಷ್ಣನ್‌, ಝಾಕೀರ್‌ ಹುಸೇನ್‌, ಜೇಸುದಾಸ್‌, ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಮೈಸೂರು ಮಂಜುನಾಥ್‌, ನಿರುಪಮಾ ರಾಜೇಂದ್ರ, ಪ್ರವೀಣ್‌ ಗೋಡಿಡಿ, ಬಾಲಮುರಳಿ ಕೃಷ್ಣ, ಶಿವಮಣಿ, ಬಾಲಭಾಸ್ಕರ್‌, ಶಂಕರ ಮಹಾದೇವನ್‌, ವಿಜಯ ಪ್ರಕಾಶ್‌, ಮಲೇಶಿಯಾದ ಇಬ್ರಾಹಿಂ ತಂಡ…ಹೀಗೆ ಈ ಪಟ್ಟಿ ದೊಡ್ಡದೇ ಇದೆ. 

ವಿರಾಸತ್‌ ಪ್ರಶಸ್ತಿ
ಸಾಂಸ್ಕೃತಿಕ ಪ್ರತಿಭಾಸಂಪನ್ನ, ಕಲಾವಿದರಿಗೆ “ಆಳ್ವಾಸ್‌ ವಿರಾಸತ್‌ ಪ್ರಶಸ್ತಿ’ ನೀಡಿ ಗೌರವಿಸುವ ಪರಂಪರೆ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಬಾರಿಯ ವಿರಾಸತ್‌ ಪ್ರಶಸ್ತಿ ಪದ್ಮಶ್ರೀ ಹರಿಹರನ್‌ ಅವರಿಗೆ. 

Advertisement

ವೇದಿಕೆ ನಿರ್ಮಾಣಕ್ಕೊಂದು ಹೊಸ ಭಾಷ್ಯ 
 ಒಂದು ಕಾಲದಲ್ಲಿ ಸಾವಿರ ಕಂಬದ ಬಸದಿ ಆವರಣದಲ್ಲಿ ದಿನಕ್ಕೊಂದು ಬಗೆಯ ವೇದಿಕೆಯಂತೆ ಏಳುದಿನ ವೈವಿಧ್ಯಮಯ  ವೇದಿಕೆಗಳು ಕಂಗೊಳಿಸಿದವು. ಬಿದಿರು, ಹೆಂಚು, ಹೂವು, ತೆಂಗಿನ ಸಿರಿ, ಅಡಿಕೆ ಹಾಳೆ, ಥರ್ಮೋಪೋಮ್‌ ಹೀಗೆ ವಿವಿಧ ಮಾಧ್ಯಮಗಳಲ್ಲಿ ರಾತೋರಾತ್ರಿ ವೇದಿಕೆಗಳನ್ನು ನಿರ್ಮಿಸಿ, ಮರುದಿನ ಕಾರ್ಯಕ್ರಮ ಮುಗಿದ ತಕ್ಷಣ ಕಳಚಿ ಹೊಸದೊಂದು ವೇದಿಕೆಯನ್ನು ನಿರ್ಮಿಸಿದ ಸಾಹಸಕ್ಕೆ ಬೆಲೆ ಕಟ್ಟಲಾಗದು. ಇದು ಮುಂದುವರಿಯುತ್ತ ಬಂದಂತೆಲ್ಲ, “ವೇದಿಕೆ ನಿರ್ಮಾಣ’ ಎಂಬುದು ಒಂದು ಸಜನಶೀಲ ಕಲೆಯಾಗಿ ಮಾರ್ಪಡಾಗುವಂತಾಗಿದ್ದರೆ, ನಾಡಿನಾದ್ಯಂತ ಹೊಸ ಹೊಸ ರೂಪಗಳನ್ನು ಪಡೆಯುವಂತಾಗಿದ್ದರೆ ಅದಕ್ಕೆ ಮೂಲ ಪ್ರೇರಣೆ ಆಳ್ವಾಸ್‌ ವಿರಾಸತ್‌.ಕರಾವಳಿಗೆ ಒರಿಸ್ಸಾದ ಗೂಡುದೀಪಗಳನ್ನು ತರಿಸಿದ್ದು ವಿರಾಸತ್‌ಗೆ. 

ಸಮಯಪ್ರಜ್ಞೆ 
 ವಿರಾಸತ್‌ ಸಮಯ ಪ್ರಜ್ಞೆಗೂ ಹೆಸರಾಗಿದೆ. ಟಿ.ವಿ. ಕಾರ್ಯಕ್ರಮದ ಸಮಯದ ಶಿಸ್ತು ಇಲ್ಲಿಗೆ ಬಂದಿದೆ. ಜನ ಬರಬೇಕು ಎಂದು ಸೆಲೆಬ್ರಿಟಿಗಳ ಮರ್ಜಿ ಕಾಯುವ ಕೆಲಸ ಮಾಡಿಲ್ಲ. 

ವಿದೇಶಿಯರ ಆಗಮನ 
ಇಂಗ್ಲೆಂಡ್‌, ಜರ್ಮನಿ, ಫ್ರಾನ್ಸ್‌, ಅಮೆರಿಕ ಮೊದಲಾದ ದೇಶಗಳಿಂದಲೂ ಆಳ್ವಾಸ್‌ ವಿರಾಸತ್‌ಗೆ ಬಂದಿದ್ದಾರೆ, ಬರುತ್ತಿದ್ದಾರೆ. ಪೀಟರ್‌, ಎಡ್ವಿನ್‌ನಂಥ ವಿದೇಶೀಯರು ಇಲ್ಲೇ ನೆಲೆಸಿದ್ದಾರೆ. 

ವಿರಾಸತ್‌ ಎಂದರೆ ಕೇವಲ ನ್ರತ್ಯ, ಗಾಯನ, ವಾದನಗಳಷ್ಟೇ ಅಲ್ಲ, ಈ ನಾಡಿನಲ್ಲಿ ಸಾಂಸ್ಕೃತಿಕವಾಗಿ ಹಾಸುಹೊಕ್ಕಾಗಿರುವ ಚಿತ್ರ, ಶಿಲ್ಪ ಕಲೆಗಳನ್ನೂ ಪರಿಚಯಿಸುವ ಶಿಬಿರ, ಕಾರ್ಯಾಗಾರಗಳನ್ನು ಏರ್ಪಡಿಸುತ್ತ ಬರಲಾಗಿದೆ. ರಾಷ್ಟ್ರ ಮಟ್ಟದ ವರ್ಣವಿರಾಸತ್‌, ಶಿಲ್ಪ ವಿರಾಸತ್‌ನಂಥ ಕಲಾ ಶಿಬಿರಗಳನ್ನೂ ಏರ್ಪಡಿಸುವ ಮೂಲಕ ವಿರಾಸತ್‌ನ ಸಾಧ್ಯತೆಗಳನ್ನು ಅರಳಿಸುವ ಕೆಲಸ ನಡೆಯುತ್ತಿದೆ.
ಈ ಬಾರಿ ಜ.4 ರಿಂದ 6 ರವರೆಗೆ ನಡೆಯುವ ವಿರಾಸತ್‌ ಉತ್ಸವದಲ್ಲಿ ಹರಿಹರನ್‌, ಲೆಸ್ಲೆ ಲಿವಿಸ್‌ ಬಳಗದ ರಸ ಸಂಯೋಗ, ಸುಖೀÌಂದರ್‌ ಸಿಂಗ್‌ ಬಳಗದ ಗಾನ ತರಂಗ, ಮಧುಲಿತ ಮೊಹಪಾತ್ರ ನಿರ್ದೇಶನದಲ್ಲಿ ಒಡಿಸ್ಸಿ ನ್ರತ್ಯ, ಚೆನ್ನೈ ಶೆ„ಲಸುಧಾ ಅಕಾಡೆಮಿಯ ಕೂಚುಪುಡಿ ನ್ರತ್ಯ, ಶಂಕರ್‌ ಮಹಾದೇವನ್‌ ಬಳಗದ ಚಿತ್ರ ರಸಸಂಜೆ, ಕೋಲ್ಕತ್ತದ ಭರತನಾಟ್ಯ ಮಾತ್ರವಲ್ಲ ಆಳ್ವಾಸ್‌ ತಂಡಗಳಿಂದ ಮೋಹಿನಿಯಾಟ್ಟಂ, ಭರತನಾಟ್ಯ, ಕಥಕ್‌, ಮಣಿಪುರಿ ಧೋಲ್‌ ಚಲಂ, ಸ್ಟಿಕ್‌ ಡ್ಯಾನ್ಸ್‌, ಭಾಂಗಾx, ಮಲ್ಲಕಂಬ, ದಾಂಡಿಯಾ, ಬಂಜಾರ, ಯಕ್ಷಗಾನ, ಶ್ರೀಲಂಕನ್‌ ಕ್ಯಾಂಡಿಯನ್‌ ಡ್ಯಾನ್ಸ್‌ ಸಂಯೋಜಿಸಲಾಗಿದೆ.

ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next