Advertisement

ನನ್ನತಪ್ಪಿಲ್ಲ;ಹೆಣ್ತನ ಇದೆ ಎಂಬಮಾತ್ರಕ್ಕೆ ಯಾಕೀ ಹಿಂಸೆ:ರೇವತಿಪ್ರಶ್ನೆ

11:01 AM Nov 19, 2018 | |

ವಿದ್ಯಾಗಿರಿ (ಮೂಡಬಿದಿರೆ) : ಹೆಣ್ಣಿನ ಭಾವನೆ, ಗಂಡು-ಹೆಣ್ಣಿನ ದೈಹಿಕ ರಚನೆ ಹೊಂದಿ ಜನಿಸಿದ್ದು ನನ್ನ ತಪ್ಪಲ್ಲ. ಆದರೂ ಯಾಕಿಷ್ಟು ಹಿಂಸೆ ನೀಡುತ್ತೀರಿ? ಸಮಾಜಕ್ಕೆ ಪ್ರಶ್ನೆ ಹಾಕಿದವರು ಚೆನ್ನೈಯ ಮಂಗಳಮುಖಿ  ರೇವತಿ. ಆಳ್ವಾಸ್‌ ನುಡಿಸಿರಿಯ ಎರಡನೇ ದಿನವಾದ ಶನಿವಾರ ಸಂಜೆ ನಡೆದ ‘ನನ್ನ ಕಥೆ-ನಿಮ್ಮ ಜತೆ’ಯಲ್ಲಿ ಮಾತನಾಡಿದ ಅವರು, ತನ್ನ ಜೀವನ ವೃತ್ತಾಂತವನ್ನು ವಿವರಿಸಿದರು.

Advertisement

ನನ್ನ ಮೂಲ ಹೆಸರು ದೊರೆಸ್ವಾಮಿ. ನಾವು ನಾಲ್ವರು ಗಂಡು ಮಕ್ಕಳು. 6-7ನೇ ತರಗತಿವರೆಗೆ ನನ್ನಲ್ಲಿ ಯಾವ ಭಾವನೆಯೂ ಇರಲಿಲ್ಲ. ಬಳಿಕ ನನ್ನ ವರ್ತನೆ ಹೆಣ್ಣಿನಂತಾಯಿತು. ಹೆಣ್ಣಿನಂತೆ ಉಡುಗೆ- ತೊಡುಗೆ ಧರಿಸಲು ಆಸೆಯಾಯಿತು. ಟೀಚರ್‌, ಸಹಪಾಠಿಗಳು ಮೂದಲಿಸಿದರು. 10ನೇ ತರಗತಿಗೆ ಶಿಕ್ಷಣ ಮುಗಿಸಿ ಮನೆ ಬಿಟ್ಟು ದಿಲ್ಲಿಗೆ ಹೋದೆ. ಅಲ್ಲಿ ನಮ್ಮವರು ಸಿಕ್ಕಿ, ಜತೆಸೇರಿ ಭಿಕ್ಷೆ ಬೇಡಲಾರಂಭಿಸಿದೆ. ಅಲ್ಲಿಂದ ಬದಲಾದೆ ಎಂದರು.

ದಿಲ್ಲಿಯಿಂದ ಮನೆಗೆ ಪತ್ರ ಬರೆದೆ. ತಾಯಿಗೆ ಸೀರಿಯಸ್‌ ಇದೆ ಎಂಬ ಮರುಪತ್ರ ಬಂತು. ರೈಲೇರಿ ಊರಿಗೆ ಬಂದೆ. ಮನೆಗೆ ಬಂದಾಗ ತಾಯಿ ಕ್ಷೇಮದಿಂದಿದ್ದರು. ಅದು ನನ್ನನ್ನು ಕರೆಯಿಸಲು ಹೂಡಿದ ತಂತ್ರವಾಗಿತ್ತು. ಅಣ್ಣ ಕ್ರಿಕೆಟ್‌ ಬ್ಯಾಟ್‌ನಿಂದ ಮನಸೋ ಇಚ್ಛೆ ಥಳಿಸಿದ. ಹೇಗೋ ತಪ್ಪಿಸಿಕೊಂಡು ಬೆಂಗಳೂರು ಸೇರಿದೆ ಎಂದು ವಿವರಿಸಿದರು ರೇವತಿ. ಬೆಂಗಳೂರಿನಲ್ಲಿ ಪೊಲೀಸರ ಲೈಂಗಿಕ ಚಿತ್ರಹಿಂಸೆ ಎದುರಿಸಬೇಕಾಯಿತು. ಕೊನೆಗೆ ಸಂಗಮ ಎಂಬ ಲೈಂಗಿಕ ಅಲ್ಪಸಂಖ್ಯಾಕರ ಸಂಘಟನೆಗೆ ಸೇರಿ ಹೋರಾಡಲು ನಿರ್ಧರಿಸಿದೆ. ನಿರಂತರ ಹೋರಾಟದಿಂದಾಗಿ ಈಗ ಸಶಕ್ತರಾಗಿದ್ದೇವೆ. ಸದ್ಯ ಸಹವರ್ತಿಗಳಲ್ಲಿ ಪೊಲೀಸ್‌ ಎಸ್‌ಐ, ಡಾಕ್ಟರ್‌ ಆಗಿದ್ದಾರೆ ಎಂದು ಹೇಳಿ ಖುಷಿಪಟ್ಟರು ರೇವತಿ.

ಭಿಕ್ಷೆ ಬೇಡದೆ ಇನ್ನೇನು ಮಾಡಲಿ?
ನಾನು ಬದಲಾದಾಗ ಉದ್ಯೋಗ ಅರಸಿ ಊರೂರು, ಅಂಗಡಿ-ಮಳಿಗೆಯನ್ನು ಸುತ್ತಾಡಿದ್ದೇನೆ. ಆದರೆ ಯಾರೂ ಉದ್ಯೋಗ ನೀಡಿಲ್ಲ. ನೋವಿನ ಸಂಗತಿಯೆಂದರೆ ಶೌಚಾಲಯ ಬಳಸಲೂ ಅವಕಾಶ ನೀಡಲಿಲ್ಲ. ಹೊಟ್ಟೆಪಾಡಿಗೆ ಏನು ಮಾಡಬೇಕು ಎಂದು ಯೋಚಿಸಿದಾಗ ಭಿಕ್ಷಾಟನೆ ಮತ್ತು ಲೈಂಗಿಕ ಕಾರ್ಯಕರ್ತೆಯಾಗಿ ಬದಲಾಗ ಬೇಕಾಯಿತು. ಉದ್ಯೋಗವೇ ಇಲ್ಲದಿದ್ದ ಮೇಲೆ ಮತ್ತೇನನ್ನು ಮಾಡಬೇಕಿತ್ತು ಎಂದವರು ಪ್ರಶ್ನಿಸಿದರು. ಈ ಮಾತುಗಳನ್ನು ಆಲಿಸಿ ಸಮ್ಮೇಳನಾಧ್ಯಕ್ಷೆ ಡಾ| ಮಲ್ಲಿಕಾ ಘಂಟಿ ಕಂಬನಿದುಂಬಿದರು.

ದಯಮಾಡಿ ಒಪ್ಪಿಕೊಳ್ಳಿ!
ಶಿವ-ವಿಷ್ಣುವಿಗೆ ಹುಟ್ಟಿದ ಅಯ್ಯಪ್ಪ ದೇವರನ್ನು ಪೂಜಿಸುವ ಈ ಸಮಾಜ ನಮ್ಮನ್ನು ಒಪ್ಪುವುದಿಲ್ಲ ಎನ್ನುವುದು ಬೇಸರದ ವಿಚಾರ. ನನ್ನದೊಂದು ವಿನಮ್ರ ಮನವಿಯಿದೆ: ನಿಮ್ಮ ಮನೆಯಲ್ಲಿ ನನ್ನಂತಹ ಮಗು ಹುಟ್ಟಿದರೆ ದಯವಿಟ್ಟು ಪ್ರೀತಿಯಿಂದಲೇ ಒಪ್ಪಿಕೊಳ್ಳಿ, ಹಿಂಸಿಸಬೇಡಿ. ಹೆಣ್ಣು-ಗಂಡಿನಂತೆಯೇ ನಮ್ಮನ್ನೂ ಸ್ವೀಕರಿಸಿ. ನಾವೂ ಮನುಷ್ಯರು ಎಂಬ ಸಾಮಾನ್ಯ ತಿಳಿವಳಿಕೆಯಿಂದ ಸ್ಪಂದಿಸಿ. ಪ್ರತೀ ಮನೆಯಲ್ಲಿ ತಾಯಿಯು ಹೆಣ್ಣುಮಗುವಿಗೆ ಕಲಿಸುವ ಶಿಷ್ಟಾಚಾರ, ನೀತಿನಿಯಮಗಳನ್ನು ಗಂಡುಮಗುವಿಗೂ ಕಲಿಸಲಿ. ಲೈಂಗಿಕ ಅಲ್ಪಸಂಖ್ಯಾಕರ ಭಾವನೆಗಳು ಏನು ಎಂಬ ಬಗ್ಗೆ ಗಂಡು ಮಕ್ಕಳಿಗೆ ಪ್ರತೀ ಮನೆಯಲ್ಲಿ ತಾಯಿ ಹೇಳಿಕೊಡಲಿ.
– ರೇವತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next