Advertisement

‌ಸರ್ವರಿಗೂ ಅಚ್ಚುಮೆಚ್ಚು ಸೂಳೇಭಾವಿ ಸರಕಾರಿ ಪ್ರೌಢಶಾಲೆ

05:42 PM Jun 02, 2022 | Team Udayavani |

ಅಮೀನಗಡ: ಸುಸಜ್ಜಿತ ಕಟ್ಟಡ, ಉತ್ತಮ ಬೋಧನೆ, ಕ್ರಿಯಾಶೀಲ ಶಿಕ್ಷಕ ವೃಂದ, ನೂರಾರು ಮಕ್ಕಳು. ಇದು ಯಾವುದೋ ಖಾಸಗಿ ಶಿಕ್ಷಣ ಸಂಸ್ಥೆಯಲ್ಲ ಸಮೀಪದ ಸೂಳೇಭಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆ.

Advertisement

ಶಾಲೆಯಲ್ಲಿ ಸದ್ಯದ ದಾಖಲಾತಿ ಪ್ರಕಾರ ಎಂಟನೇ ತರಗತಿಯಲ್ಲಿ 156 ಮಕ್ಕಳು, ಒಂಬತ್ತನೇ ತರಗತಿಯಲ್ಲಿ 195 ಮಕ್ಕಳು, ಹತ್ತನೇ ತರಗತಿಗೆ 197 ಮಕ್ಕಳು ದಾಖಲಾಗಿದ್ದು, ಒಟ್ಟು 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ದಾಖಲಾಗುವ ಮಕ್ಕಳ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯೂ ಹೆಚ್ಚಿದೆ. ಶಾಲೆಯಲ್ಲಿ ಒಟ್ಟು 17 ಜನ ಶಿಕ್ಷಕರಿದ್ದಾರೆ. 12 ಸುಸಜ್ಜಿತ ಕೊಠಡಿಗಳಿವೆ. ಸಕಲ ಸೌಲಭ್ಯಗಳಿವೆ. ಶಾಲಾ ಆವರಣದಲ್ಲಿನ ಸುಂದರ ಕೈತೋಟ ಇಡೀ ಶಾಲೆಗೆ ಮೆರಗು ತಂದಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಶಾಲೆಯಲ್ಲಿ ಪರಿಣಿತ ಬೋಧಕ ವರ್ಗದವರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಶಿಕ್ಷಣ ಜತೆಗೆ ಪಠ್ಯೇತರ ಶೈಕ್ಷಣಿಕ ಚಟುವಟಿಕೆ, ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಲಾಗುತ್ತಿದೆ. ಶಿಕ್ಷಕರ-ಪಾಲಕರ ನಡುವೆ ಉತ್ತಮ ಸಂಬಂಧವಿದೆ. ಶಾಲೆಯ ಅಭಿವೃದ್ಧಿಯಲ್ಲಿ ಎಲ್ಲ ಶಿಕ್ಷಕರು ಹೆಚ್ಚು ಆಸಕ್ತಿ ವಹಿಸುತ್ತಾರೆ. ಶಾಲೆಯಲ್ಲಿನ ಉತ್ತಮವಾದ ಶೈಕ್ಷಣಿಕ ವಾತಾವರಣ ಕಂಡು ಗ್ರಾಮಸ್ಥರು ಹಾಗೂ ಪಕ್ಕದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಕಳುಹಿಸಲು ಮುಂದಾಗಿದ್ದಾರೆ.

ವಿದ್ಯಾರ್ಥಿ-ಗುರುಗಳ ಬಾಂಧವ್ಯ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಈ ಶಾಲೆಯಲ್ಲಿ ಉತ್ತಮ ಪಾಠ ಬೋಧನೆ ಮಾಡುವುದರ ಜತೆಗೆ ಮಕ್ಕಳನ್ನು ಪ್ರೀತಿಸುವ ಶಿಕ್ಷಕರ ವೃಂದ ಇದೆ. ಮಕ್ಕಳಿಗೂ ತಮ್ಮ ಗುರುಗಳ ಮೇಲೆ ಎಲ್ಲಿಲ್ಲದ ಗೌರವ. ಇದರಿಂದ ವಿದ್ಯಾರ್ಥಿಗಳ-ಗುರುಗಳ ಮಧ್ಯೆ ಉತ್ತಮ ಬಾಂಧವ್ಯವಿದೆ. ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿಯೊಂದು ತರಗತಿಯಲ್ಲಿ ಎ, ಬಿ, ಸಿ ಎಂದು ಮೂರು ತರಹದ ವಿಭಾಗಗಳನ್ನು ಮಾಡಿ ಶಿಕ್ಷಣ ನೀಡಲಾಗುತ್ತಿದೆ.

ಗೈರಾದರೆ ಮಕ್ಕಳ ಮನೆಗೆ ಭೇಟಿ: ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಹೆಚ್ಚು ದಿನ ಗೈರಾದರೆ ಮಕ್ಕಳ ಮನೆಗೆ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಭೇಟಿ ನೀಡಿ ಅವರ ಪಾಲಕರಿಗೆ ಮತ್ತು ಮಕ್ಕಳಿಗೆ ಶೈಕ್ಷಣಿಕ ತಿಳಿವಳಿಕೆ ನೀಡಿ ಅವರಿಗೆ ಶಾಲೆಯತ್ತ ಆಕರ್ಷಣೆ ಮಾಡಿ ಹಾಜರಾತಿ ಹೆಚ್ಚಳ ಮಾಡಲಾಗುತ್ತಿದೆ.

ಉತ್ತಮ ಸಾಧನೆ: 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಶಾಲೆಯ 202 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು. ಅದರಲ್ಲಿ 190 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯ ಫಲಿತಾಂಶ ಶೇ.94.5 ಪಡೆದಿದೆ. 23 ವಿದ್ಯಾರ್ಥಿಗಳು ಸಮಾಜ ವಿಜ್ಞಾನದಲ್ಲಿ ನೂರಕ್ಕ ನೂರು ಅಂಕ ಪಡೆದರೆ 6 ವಿದ್ಯಾರ್ಥಿಗಳು ಹಿಂದಿ ವಿಷಯ, ಓರ್ವ ವಿದ್ಯಾರ್ಥಿ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ಸಾಧನೆ ಮಾಡಿದ್ದಾರೆ.

Advertisement

ಅಮೃತ ಯೋಜನೆಗೆ ಆಯ್ಕೆ: ಸೂಳೇಭಾವಿ ಸರ್ಕಾರಿ ಪ್ರೌಢಶಾಲೆ ತಾಲೂಕಿನಲ್ಲಿಯೇ ಅತಿ ಹೆಚ್ಚು ದಾಖಲಾತಿ ಹೊಂದಿರುವ ಶಾಲೆಯಾಗಿದೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದರಿಂದ ಪ್ರತಿವರ್ಷ ಉತ್ತಮ ಫಲಿತಾಂಶ ಪಡೆಯುತ್ತದೆ. ಶಾಲೆಯ ಪ್ರಗತಿ ಮತ್ತು ಮಕ್ಕಳ ದಾಖಲಾತಿ ಅನುಗುಣವಾಗಿ ಶಾಲೆ ಈ ಬಾರಿ ಅಮೃತ ಯೋಜನೆಗೆ ಆಯ್ಕೆಯಾಗಿದೆ. ಈ ಯೋಜನೆಯಡಿ ಶಾಲೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಹೈಟೆಕ್‌ ಬೋಧನಾ ಕೊಠಡಿ ನಿರ್ಮಿಸಲಾಗುತ್ತದೆ. ಶಾಲೆಯ ಮೈದಾನ ಅಭಿವೃದ್ಧಿಗೆ ಗ್ರಾಪಂ ಆಡಳಿತ ಮಂಡಳಿ ಮುಂದಾಗಿದೆ. ಇದಕ್ಕೆ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅವರು ಸಾಥ್‌ ನೀಡಿದ್ದಾರೆ.

ಶಾಲಾ ಅಭಿವೃದ್ಧಿಗೆ ಪಣ: ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿಗೆ ಗ್ರಾಮದ ಹಿರಿಯ ರಾಜಕಾರಣಿಗಳು, ಯುವ ನಾಯಕರು ಮತ್ತು ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಶಾಲಾ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಶಾಲೆಯಲ್ಲಿರುವ ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರ್ಷಕೊಮ್ಮೆ ಸನ್ಮಾನ ಮಾಡಿ ಪ್ರೋತ್ಸಾಹಧನ ನೀಡಲಾಗುತ್ತದೆ. ಸರ್ಕಾರದ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರು ಸಾಥ್‌ ನೀಡಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಕುರಿತು ಜಾಗೃತಿ ಮೂಡಿಸಿ ಶಾಲೆಗೆ ಕರೆತಂದು ಅವರ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯಲ್ಲಿ ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ನಿರಂತರವಾಗಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಇದರಿಂದ ನಮ್ಮ ಶಾಲೆ ಹೆಚ್ಚು ದಾಖಲಾತಿ ಹೊಂದಿದೆ ಮತ್ತು ಪ್ರತಿವರ್ಷ ಉತ್ತಮ ಫಲಿತಾಂಶ ಪಡೆಯುತ್ತಿದೆ ಎನ್ನುತ್ತಾರೆ ಶಾಲೆ ಗಣಿತ ಶಿಕ್ಷಕ ಮಹಾದೇವ ಬಸರಕೋಡ.

ಸಮರ್ಪಣ ಭಾವದ ಶಿಕ್ಷಕ ವೃಂದ ಮತ್ತು ಶಾಲೆ ಶೈಕ್ಷಣಿಕ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿರುವ ಎಸ್‌ಡಿಎಂಸಿ, ಗ್ರಾಮದ ಜನಪ್ರತಿನಿಧಿಗಳ ಸಹಕಾರದಿಂದ ಮಕ್ಕಳಿಗೆ ಶಾಲೆಯಲ್ಲಿ ಉತ್ತಮವಾದ ಕಲಿಕಾ ವಾತಾವರಣ ನಿರ್ಮಿಸಲಾಗಿದೆ. ಇದರಿಂದ ಮಕ್ಕಳಿಗೆ ಸರ್ವತೋಮುಖ ಶಿಕ್ಷಣ ನೀಡಲು ಸಾಧ್ಯವಾಗಿದೆ.  -ಎಚ್‌.ಎಂ. ಹಾಲನ್ನವರ, ಪ್ರಭಾರಿ ಉಪ ಪ್ರಾಚಾರ್ಯ

 –ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next