Advertisement

ಎಂಇಎಸ್‌ ಮಣಿಸಲು ಎಲ್ಲಾ ರಾಜಕೀಯ ಪಕ್ಷಗಳೂ ಒಟ್ಟಾಗಬೇಕಿವೆ : ಶೋಭಾ ಕರಂದ್ಲಾಜೆ

08:25 PM Dec 23, 2021 | Team Udayavani |

ಕಾಪು : ಕರ್ನಾಟಕದಲ್ಲಿ ಎಂಇಎಸ್‌ನ ಅಗತ್ಯವಿಲ್ಲ. ಅದು ಇರಬೇಕಾದದ್ದು ಮಹಾರಾಷ್ಟ್ರ ದಲ್ಲಿ ಮಾತ್ರ. ಬೆಳಗಾವಿಯಲ್ಲಿ ಎಂಇಎಸ್‌ನ ಪುಂಡಾಟಿಕೆಯನ್ನು ನಿಲ್ಲಿಸಬೇಕು. ಎಂಇಎಸ್‌ ಮಣಿಸಲು ಎಲ್ಲಾ ರಾಜಕೀಯ ಪಕ್ಷಗಳೂ ಒಟ್ಟಾಗಬೇಕಿವೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಕಾಪುವಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕೀಕರಣ ನಡೆಯಬೇಕಿರುವುದು ಮಹಾರಾಷ್ಟ್ರ ದಲ್ಲಿಯೇ ಹೊರತು ಕರ್ನಾಟಕದಲ್ಲಿ ಅಲ್ಲ. ನಾವು ಕನ್ನಡಿಗರು ಯಾವುದೇ ಜಾತಿ, ಧರ್ಮ, ಭಾಷೆಯನ್ನು ನೋಡುತ್ತಿಲ್ಲ. ಕನ್ನಡಿಗರು ಎಲ್ಲಿ ಹೋದರೂ ಹೊಂದಿಕೊಳ್ಳುತ್ತಾರೆ. ಅದು ಕೇವಲ ಮಹಾರಾಷ್ಟ್ರ ಎಂದಲ್ಲ. ಎಲ್ಲಾ ರಾಜ್ಯಗಳ ಜೊತೆಗೂ ಕನ್ನಡಿಗರು ಹೊಂದಿಕೊಳ್ಳುತ್ತಾರೆ. ಹಾಗೆಯೇ ನಮ್ಮಲ್ಲಿ ಬಂದಿರುವವರಿಗೂ ರಾಜ್ಯ ಸರಕಾರ ಎಲ್ಲಾ ಸೌಲಭ್ಯಗಳನ್ನೂ ತಲುಪಿಸುತ್ತಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ ದ್ರೋಹ, ದೇಶ ದ್ರೋಹದ ಕೇಸ್‌ : ಕನ್ನಡ ಧ್ವಜವನ್ನು ಸುಡುವುದು, ಕರ್ನಾಟಕದ ವಾಹನಗಳಿಗೆ ಹಾನಿ ಮಾಡುವುದು, ಪುತ್ಥಳಿಗಳನ್ನು ಒಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹವರ ವಿರುದ್ಧ ರಾಜ್ಯ ದ್ರೋಹ ಮತ್ತು ದೇಶ ದ್ರೋಹದ ಕೇಸ್‌ ಹಾಕಿ, ಅವರಿಗೆ ಸರಕಾರ ಸೂಕ್ತ ಶಿಕ್ಷೆ ನೀಡಬೇಕು ಎಂದ ಅವರು ಪುಂಡಾಟಿಕೆ ಮಾಡುವವರ ವಿರುದ್ಧ ಉಗ್ರ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದರು.

ಮುಖ್ಯಮಂತ್ರಿ ಬದಲಾವಣೆ ಊಹಾಪೋಹ ಮಾತ್ರ : ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನುವುದು ಊಹಾಪೋಹ ಮಾತ್ರ. ಈ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಅವರಯ ನಿಶ್ಚಿಂತೆಯಿಂದ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸುಭದ್ರ ಸರಕಾರ ನೀಡುತ್ತಿದ್ದಾರೆ. ಅವರೇ ಸರಕಾರವನ್ನು ದಡ ಸೇರಿಸುತ್ತಾರೆ ಎಂದು ಸಚಿವ ಶೋಭಾ ಕರಂದ್ಲಾಜೆ ಹೇಳಿದರು.

ಜನರ ಅಪೇಕ್ಷೆಯಂತೆ ಮತಾಂತರ ನಿಷೇಧ ಕಾಯ್ದೆ : ಮತಾಂತರ ಕಾಯ್ದೆಯಿಂದ ಕಾಂಗ್ರೆಸ್‌ಗೆ ಯಾಕೆ ಹೊಟ್ಟೆಯುರಿ ಎಂದು ಗೊತ್ತಾಗುತ್ತಿಲ್ಲ. ಮತಾಂತರ ನಿಷೇಧ ಕಾಯ್ದೆ ರಾಜ್ಯ ಮತ್ತು ದೇಶದ ಜನರ ಅಪೇಕ್ಷೆಯಾಗಿದೆ. ಲವ್‌ ಜಿಹಾದ್‌, ಚಿಕಿತ್ಸೆ , ಬಡತನ ಮೊದಲಾದ ಕಾರಣಗಳನ್ನು ಮುಂದಿಟ್ಟುಕೊಂಡು ಜನರನ್ನು ಆಮಿಷದ ಮೂಲಕವಾಗಿ ಮತಾಂತರ ಮಾಡಲಾಗುತ್ತಿದೆ. ಮತಾಂತರದ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲಾಗುತ್ತದೆ. ಸಮಾಜದ ಶಾಂತಿ ಕಾಪಾಡಲು ಕಾಯ್ದೆ ಅಗತ್ಯ ಇದೆ. ಓಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ಕಾಂಗ್ರೆಸ್‌ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದು ಅವರು ಟೀಕಿಸಿದರು.

Advertisement

ಬಹುಸಂಖ್ಯಾತರ ಓಟ್‌ ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್‌ : ಕಾಂಗ್ರೆಸ್‌ನದ್ದು ಅಲ್ಪಸಂಖ್ಯಾತ ಓಟಲ್ಲಿ ಗೆಲ್ಲುವ ಪ್ಲ್ಯಾನ್‌. ಹಾಗಾದರೆ ಕಾಂಗ್ರೆಸಿಗರೇ ನಿಮಗೆ ಬಹು ಸಂಖ್ಯಾತರ ಓಟ್‌ ಬೇಡವೇ ಎಂದು ಪ್ರಶ್ನಿಸಿದ ಅವರು, ಅಲ್ಪಸಂಖ್ಯಾತರ ಓಟಿನಲ್ಲಿ ಮಾತ್ರಾ ಕಾಂಗ್ರೆಸ್‌ ಗೆಲ್ಲುತ್ತಿರುವುದಾ ಎಂದು ಜನ ಕೇಳ ಬೇಕಿದೆ.

ಸಿದ್ದರಾಮಯ್ಯ, ಡಿಕೆಶಿ ಸಹಿತ ದೆಹಲಿಯ ನಾಯಕರು ಓಟ್‌ ಬ್ಯಾಂಕ್‌ ಮೇಲೆ ಕಣ್ಣಿಟ್ಟಿದ್ದಾರೆ. ಮತಾಂತರ ಕಾಯ್ದೆ ಕುರಿತಾದ ಕಾಂಗ್ರೆಸ್‌ ನಾಯಕರ ಶುಭನುಡಿಗಳನ್ನು ಜನ ನೋಡುತ್ತಿದ್ದಾರೆ. ಕಾಂಗ್ರೆಸ್ಸಿಗೆ ರಾಜ್ಯದ ಸರಿಯಾದ ಪಾಠ ಕಲಿಸುತ್ತಾರೆ ಎಂದು ಅವರು ತಿರುಗೇಟು ನೀಡಿದರು.

ತೆಗೆಯುವುದಷ್ಟೇ ಕಾಂಗ್ರೆಸಿಗರ ಕೆಲಸ : ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ, ಮತಾಂತರ ನಿಷೇಧ ಕಾಯ್ದೆ ರದ್ಧು ಮಾಡುತ್ತೇವೆ ಎಂದಿರುವ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆ ಅಪ್ರಸ್ತುತವಾಗಿದೆ. ಡಿಕೆಶಿ ಮತ್ತು ಅವರ ಸಹಪಾಠಿಗಳು ನಾವು ಎಲ್ಲಾ ಕಾಯ್ದೆಯನ್ನು ತೆಗೆದುಕಾಕುತ್ತೇವೆ ಎನ್ನುತ್ತಾರೆ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆ ತೆಗೆಯುತ್ತೇವೆ ಎನ್ನುತ್ತಾರೆ. ಕಾಂಗ್ರೆಸ್‌ಗೆ ಬೆಂಬಲ ನೀಡುವ ಇತರರು ಕಾಶ್ಮೀರದ 370ನೇ ವಿಧಿ, ಸಿಎಎ ಕಾಯ್ದೆಯನ್ನು ತೆಗೆಯುತ್ತೇವೆ ಎನ್ನುತ್ತವೆ. ಕಾಂಗ್ರೆಸ್‌ ಎಲ್ಲಾ ಕಾಯ್ದೆಗಳನ್ನು ತೆಗೆಯುವುದರಲ್ಲೇ ಮಗ್ನವಾಗಿದೆ. ರಾಜ್ಯದಲ್ಲಿ ಜಾರಿಗೆ ಬರುತ್ತಿರುವ ಕಾಯ್ದೆಗಳನ್ನು ತೆಗೆಯುವ ಅವಕಾಶ ರಾಜ್ಯದ ಜನತೆ ಕೊಡುವುದಿಲ್ಲ. ಕಾಂಗ್ರೆಸ್‌ ಪಕ್ಷವನ್ನುಎಲ್ಲಿ ಇಡಬೇಕಿತ್ತೋ ಅಲ್ಲೇ ಇಟ್ಟಿದ್ದಾರೆ. ಮುಂದೆಯೂ ಕೂಡಾ ಹಾಗೆಯೇ ಆಗುತ್ತದೆ. ಕಾಂಗ್ರೆಸ್‌ ಇನ್ನಷ್ಟು ಹೀನಸ್ಥಿತಿಗೆ ಹೋಗುತ್ತದೆ ಎಂದು ಭವಿಷ್ಯ ನುಡಿದರು.

ಸ್ವರ್ಣವಲ್ಲಿ ಶ್ರೀಗಳ ಹೇಳಿಕೆಗೆ ವಿರೋಧವಿಲ್ಲ, ಆದರೆ ಕಾನೂನು ಎಲ್ಲರಿಗೂ ಸಮಾನ : ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 21ಕ್ಕೆ ಏರಿಸಿರುವ ಕೇಂದ್ರ ಸರಕಾರದ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸ್ವರ್ಣವಲ್ಲಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ವರ್ಣವಲ್ಲಿ ಸ್ವಾಮಿಜಿ ಮಾತಿಗೆ ನಾನು ವಿರೋಧ ಮಾಡಲ್ಲ. ಆದರೆ ಈ ಕಾನೂನು ಕಾನೂನು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಲ್ಲ. ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಈ ಕಾನೂನನ್ನ ದೇಶದ ಎಲ್ಲರೂ ಪಾಲನೆ ಮಾಡಬೇಕು ಎನ್ನುವುದಷ್ಟೇ ನಮ್ಮ ಅಭಿಪ್ರಾಯವಾಗಿದೆ.

ಶಿಶು ಮತ್ತು ಗರ್ಭಿಣಿ ಮರಣ ತಪ್ಪಿಸಲು ಮದುವೆ ವಯಸ್ಸಿನ ಮಿತಿ ಹೆಚ್ಚಳ : ಮದುವೆ ವಯಸ್ಸಿಗೂ ಜನಸಂಖ್ಯೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಮದುವೆ ವಯಸ್ಸು 21 ಆದರೆ ಯುವತಿಯ ಪದವಿ ಮುಗಿದಿರುತ್ತದೆ. 21ರ ವಯಸ್ಸಿಗೆ ಯುವತಿಗೆ ಪ್ರಭುದ್ಧತೆ ಬಂದಿರುತ್ತದೆ. ಯುವತಿಯರಿಗೆ 22 ಆಗುವ ಮೊದಲು ಯಾರೂ ಮದುವೆ ಮಾಡಬಾರದು. ಇಡೀ ದೇಶದಲ್ಲಿ ಹದಿನೆಂಟನೇ ವಯಸ್ಸಿಗೆ ಮದುವೆ ಮಾಡುತ್ತಾರೆ ಎನ್ನುವುದು ತಪ್ಪು ಅಭಿಪ್ರಾಯವಾಗಿದೆ. ವಯಸ್ಸು 21 ಆದ ನಂತರ ಮಹಿಳೆಯರು ಹೆರುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಗರ್ಭಪಾತ ಆಗಬಹುದು. ದೇಶದಲ್ಲಿ ಮಕ್ಕಳು ಮತ್ತು ಬಾಣಂತಿಯರ ಮರಣ ಸಾವುಗಳು ಜಾಸ್ತಿಯಾಗಿದೆ. ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವೈಜ್ಞಾನಿಕ ವರದಿ ಪರಿಶೀಲನೆ ಮಾಡಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.

ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್‌ ನಾಯಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಮುಖರಾದ ಯಶ್‌ಪಾಲ್‌ ಸುವರ್ಣ, ಸುರೇಶ್‌ ಪಿ. ಶೆಟ್ಟಿ ಗುರ್ಮೆ, ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ದಿನಕರ ಬಾಬು, ಕುತ್ಯಾರು ನವೀನ್‌ ಶೆಟ್ಟಿ, ಕಿರಣ್‌ ಕುಮಾರ್‌ ಕೊಡ್ಗಿ, ವೀಣಾ ಕೆ. ಶೆಟ್ಟಿ, ಗಂಗಾಧರ ಸುವರ್ಣ, ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಸಂದೀಪ್‌ ಶೆಟ್ಟಿ, ಅನಿಲ್‌ ಶೆಟ್ಟಿ ಮಾಂಬೆಟ್ಟು, ಗೋಪಾಲಕೃಷ್ಣ ರಾವ್‌ ಮೊದಲಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next