Advertisement

ಅಲೆಕ್ಕಾನ ಫಾಲ್ಸ್, ದಟ್ಟಡವಿಯ ನಡುವೆ ಜಲಧಾರೆ

07:53 AM Jan 10, 2019 | |

ಗೆಳೆಯರ ಜತೆ ಸುತ್ತಾಡಬೇಕು, ಮೋಜು, ಮಸ್ತಿಯೊಂದಿಗೆ ಪ್ರವಾಸಿ ತಾಣದಲ್ಲಿ ಕಾಲ ಕಳೆಯಬೇಕು ಎಂಬ ಬಹು ದಿನಗಳ ಕನಸಿನ ಬಗ್ಗೆ ವಾಟ್ಸಪ್‌ ಗಳಲ್ಲಿ ಕೆಲವು ತಿಂಗಳುಗಳ ಕಾಲ ಚರ್ಚೆ ನಡೆಸಿ ಕೊನೆಗೊಂದು ದಿನ ಚಾರ್ಮಾಡಿ ಘಾಟ್‌ ಗೆ ಹೋಗುವ ಎಂಬ ತೀರ್ಮಾನ ಅಂತಿಮವಾಯಿತು. ಎಲ್ಲರೂ ಬೆಳ್ತಂಗಡಿ ತಾಲೂಕಿನವರೇ ಆಗಿದ್ದರಿಂದ ಹತ್ತಿರವೇ ಇರುವ ಚಾರ್ಮಾಡಿ ಘಾಟ್‌ಗೆ ಹೋಗಲು ನಿಶ್ಚಯಿಸಿದೆವು.

Advertisement

ಊರಿನಿಂದ ಕೇವಲ 21 ಕಿ.ಮೀ. ದೂರದಲ್ಲಿರುವ ಚಾರ್ಮಾಡಿ ಘಾಟ್‌ಗೆ ಎಲ್ಲರ ಇಚ್ಛೆಯಂತೆ 7 ಜನರ ತಂಡ 4 ಬೈಕ್‌ನಲ್ಲಿ ಹೊರಟು ಬಿಟ್ಟಿತು. ಘಾಟಿ ರಸ್ತೆಗಳು ತುಂಬಾ ಎತ್ತರವಾಗಿದ್ದು, ಹಾವು ಸುತ್ತಿದಂತೆ ವಕ್ರವಕ್ರವಾಗಿದ್ದವು. ಇಲ್ಲಿ ಸಾಗುವಾಗ ನಮ್ಮ ಕಿರುಚಾಟ, ಬೊಬ್ಬೆಗಳಿಗೇನೂ ಕಡಿಮೆಯಿಲ್ಲ. ಬೈಕ್‌ನ ಹಿಂದೆ ಕುಳಿತವರಿಗೆ ಸೆಲ್ಫಿ ತೆಗೆಯುವ ಕೆಲಸವಾದರೆ ಬೈಕ್‌ ಸವಾರರು ನಿಧಾನವಾಗಿ ಚಲಿಸಬೇಕಿದ್ದರಿಂದ ಧ್ಯಾನವೆಲ್ಲ ರಸ್ತೆಯ ಕಡೆಗೆ ಇರಿಸಬೇಕಾಗಿತ್ತು.

ಸುಮಾರು 8- 10 ಕಿ.ಮೀ. ಸಾಗಿದಂತೆ ಜೇನುಕಲ್ಲಿನ ಅಣ್ಣಪ್ಪ ಸ್ವಾಮಿಯ ದರ್ಶನವಾಯಿತು. ಇಲ್ಲಿ ಪ್ರಾರ್ಥನೆಗೈದು ಇಲ್ಲಿ ಸ್ಥಳ ಪುರಾಣದ ಬಗ್ಗೆ ಮಾತನಾಡುತ್ತ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ದಾರಿ ಮಧ್ಯದಲ್ಲಿ ಸಿಕ್ಕ ಚಿಕ್ಕ ಪುಟ್ಟ ನೀರಿನ ಧಾರೆಯ ಬಳಿ ತೆರಳಿ ನೀರಿನಲ್ಲಿ ಆಟವಾಡುತ್ತಾ, ಫೋಟೋ ತೆಗೆದು ಖುಷಿ ಪಟ್ಟೆವು. ಬಳಿಕ ಫೋಟೋಗಳಿಗೆ ಒಂದೊಂದು ರೀತಿಯ ಕಮೆಂಟ್ ಕೊಡುತ್ತ ಚಾರ್ಮಾಡಿ ಘಾಟಿ ತಲುಪಿದ್ದೇ ತಿಳಿಯಲಿಲ್ಲ.

ಅಲ್ಲಿ ನೋಡಿದರೆ ಘಾಟಿಯ ಲ್ಯಾಂಡ್‌ಮಾರ್ಕ್‌ ಎಂಬಂತಿದ್ದ ಒಂದು ಮರದ ಹತ್ತಿರ ನಿಂತು ಫೋಟೋ ಕ್ಲಿಕ್ಕಿಸುತ್ತಿದ್ದ ಪ್ರವಾಸಿಗರೇ ದಂಡೇ ನೆರೆದಿತ್ತು. ಹಚ್ಚ ಹಸುರಿನ ಹುಲ್ಲು, ಮರದ ಜತೆಗೆ ಮಂಜು ನಮ್ಮನ್ನು ಕೈ ಬೀಸಿ ಕರೆಯುವಂತಿತ್ತು. ಅದನ್ನು ನೋಡುತ್ತಾ ನಮ್ಮ ಕಿರುಚಾಟ ಮತ್ತೂ ಜೋರಾಗಿತ್ತು.

ಮಂಜು ಮುಸುಕಿದ ವಾತಾವರಣದ ಜತೆಗೆ ಚಳಿ ಮೈ ನವಿರೇಳಿಸುವಂತಿತ್ತು. ರಸ್ತೆ ಬದಿ ನಿಂತು ಹಾಗೇ ನೊಡುತ್ತಾ ಕಾರಿಡಾರ್‌ ದಾಟಿ ಮುಂದೆ ಹೋಗುವ ಸಾಹಸ ಮಾಡಿದೆವು. ಮುಂದೆಮುಂದೆ ಸಾಗುತ್ತಿದ್ದಂತೆ ಯಾವುದೋ ಒಂದು ಪ್ರಪಾತಕ್ಕೆ ಇಳಿಯುತ್ತಿದ್ದೇವೆ ಎಂದೆನಿಸುತ್ತಿತ್ತು. ಕಾರಿಡಾರ್‌ ದಾಟುತ್ತಿದ್ದಂತೆ ಅಲ್ಲೇ  ಹಾಕಿದ ಎಚ್ಚರಿಕೆ ಫ‌ಲಕ ಕಂಡರೂ ಕಾಣದಂತೆ ನಡೆದವು. ನಮ್ಮ ಜತೆ ಇದ್ದ ಗೆಳತಿಯರು ಹೇಗೊ ಕೈ ಕೈ ಹಿಡಿದು ಮುನ್ನಡೆದರು. ಎಲ್ಲರಿಗೂ ತುಂಬಾ ದೂರದಿಂದ ನೀರಿನ ಶಬ್ಧ ಕಿವಿಗೆ ಅಪ್ಪಳಿಸುವಂತೆ ಭಾಸವಾಯಿತು. ಅದರ ಕಾಣುವಿಕೆಗೆ ಹಾತೊರೆಯುತ್ತಿದ್ದ ನಮಗೆ ಕೇವಲ 500 ಮೀ. ಮುಂದೆ ಹೋದಂತೆ ಕಂಡಿದ್ದು ಎತ್ತರವಾದ ಜಲಪಾತ. ಇದನ್ನು ಕಂಡು ಭಯದೊಂದಿಗೆ ಖುಷಿಯೂ ಇಮ್ಮಡಿಯಾಯಿತು. ಕುಣಿದು ಕುಪ್ಪಳಿಸಿದೆವು.

Advertisement

ಇದನ್ನು ಅಲೆಕ್ಕಾನ ಫಾಲ್ಸ್ ಅಥವಾ ಚಾರ್ಮಾಡಿ ಫಾಲ್ಸ್ ಎನ್ನುತ್ತಾರೆ ಎಂದು ಗೆಳತಿಯೊಬ್ಬಳು ಅನುಭವದ ಮಾತನ್ನು ಹೊರಹಾಕಿದಳು. ಘಾಟಿಗೆ ಬಂದವರಲ್ಲಿ ಈ ಜಲಪಾತವನ್ನು ನೋಡದೇ ಹೋಗುವವರು ಹೆಚ್ಚು. ಏಕೆಂದರೆ ಅಲ್ಲಿ ಹಾಕಿರುವ ಎಚ್ಚರಿಕಾ ಫ‌ಲಕವನ್ನು ಕಂಡು ತಮ್ಮ ಸಂಸಾರದ ಜತೆ ಕಾರಿಡಾರ್‌ ದಾಟಿ ಬರಲು ಹಿಂಜರಿಯುತ್ತಾರೆ. ನಾವು ಆ ಜಲಪಾತದಿಂದ 100 ಮೀ. ದೂರದಲ್ಲಿ ನಿಂತಿದ್ದರೂ ಮೇಲಿಂದ ಬೀಳುತ್ತಿರುವ ನೀರು ಕೆಳಗಿನ ಕಲ್ಲಿಗೆ ಅಪ್ಪಳಿಸಿ ನಮ್ಮ ಮೇಲೆಯೇ ಎರಗುತ್ತಿದ್ದವು. ಇದರ ಎತ್ತರ ಸುಮಾರು 300 ಮೀ. ಗಳಷ್ಟಿರಬಹುದು. ಇದರ ಕೆಳಗೆ ನಿಂತು ಮೋಜುಮಸ್ತಿ ಮಾಡಬಹುದು ಎಂದುಕೊಂಡರೆ ಮೂಳೆ ಕೂಡ ಸಿಗಲಾರದು ಎಂಬುದು ಖಚಿತ. ಆದರೂ 30 ಮೀಟರ್‌ ದೂರದಲ್ಲಿ ಆಟವಾಡತೊಡಗಿದೆವು.

ಅಷ್ಟರಲ್ಲಿ ಗೆಳತಿಯೊಬ್ಬಳ ಬಾಯಿಯಿಂದ ಹಸಿವಿನ ಪದ ಹೊರಬಿತ್ತು. ಏಕೆಂದರೆ ಅಮ್ಮ ಮಾಡಿಕೊಟ್ಟ ಪಲಾವ್‌ ಅವಳ ಬ್ಯಾಗಿನಿಂದ ಅವಳನ್ನು ಕರೆಯುತ್ತಿತ್ತು. ಚಿಕ್ಕ ಬುತ್ತಿಯಾದರು ಎಂಟು ಜನರು ಕೂಡ ಅವಳ ಬುತ್ತಿಗೆ ಮುಗಿಬಿದ್ದೆವು. ಒಬ್ಬೊಬ್ಬರಿಗೆ ಒಂದೊಂದೇ ತುತ್ತು ಸಿಕ್ಕಿದರೂ ಹಸಿವು ನೀಗಿದ ಅನುಭವವಾಯಿತು.

ಅಲ್ಲೇ ಹತ್ತಿರ ಜಲಪಾತವನ್ನೇ ಹೋಲುವ ಚಿಕ್ಕದೊಂದು ನೀರು ಹರಿದು ಬರುವ ಜಾಗ ಕಂಡು ಅಲ್ಲಿ ಎಲ್ಲರೂ ನೀರಿನ ಕೆಳಗಡೆ ಕುಳಿತು ಚಳಿ ಎಂಬುದನ್ನೇ ಮರೆತು ಸಂಭ್ರಮಿಸಿದೆವು. ಸುಮಾರು 3 ಗಂಟೆಗಳ ಕಾಲ ಕಳೆದು ಒದ್ದೆ ಬಟೆಯಲ್ಲೇ  ಗಾಡಿ ನಿಲ್ಲಿಸಿದ ಸ್ಥಳಕ್ಕೆ ಬರುತ್ತಿದ್ದಾಗ ಅಲ್ಲಿ ನೆರೆದಿದ್ದ ಪ್ರವಾಸಿಗರೆಲ್ಲರೂ ದುರುಗುಟ್ಟಿ ನೋಡಿದಂತೆ ಭಾಸವಾಗುತ್ತಿತ್ತು. ಏಕೆಂದರೆ ನಾವು ಪಡೆದ ಜಲಪಾತದ ಖುಷಿ ಅವರು ಪಡೆದಿರಲಿಲ್ಲ. ಅಷ್ಟರಲ್ಲಿ ಮಧ್ಯಾಹ್ನವಾಗಿದ್ದರೂ ಚಳಿಯಂತೂ ಕಡಿಮೆಯಾಗಿರಲಿಲ್ಲ. ಹಾಗೇ ಬೈಕ್‌ ಹತ್ತಿ ಮನೆಯತ್ತ ಹಿಂತಿರುಗುತ್ತಿದ್ದಾಗ ಜೇನುಕಲ್ಲಿನ ಪಕ್ಕ ನೋಡಿದ್ದ ಚರುಂಬುರಿ ಮತ್ತು ಬಿಸಿ ಜೋಳದ ಅಂಗಡಿಗೆ ಹೋಗಿ ಹೊಟ್ಟೆ ತುಂಬುವವರೆಗೂ ತಿಂದು, ಅಲ್ಲೇ ನೆರೆದಿದ್ದ ಕೋತಿಗಳ ಜತೆಗೆ ಆಟವಾಡಿ, ಮರಳಿ ಬೆಳ್ತಂಗಡಿ ತಲುಪಿದಾಗ ಮಧ್ಯಾಹ್ನ ಎರಡು ಗಂಟೆ ಕಳೆದಿತ್ತು.

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಬೆಳ್ತಂಗಡಿಗೆ 60 ಕಿ.ಮೀ. ದೂರ.
· ಬೆಳ್ತಂಗಡಿಯಿಂದ ಚಾರ್ಮಾಡಿ 21 ಕಿ.ಮೀ. ದೂರದಲ್ಲಿದೆ.
· ಬಸ್‌ ಸೌಲಭ್ಯ ಸಾಕಷ್ಟಿದೆ. ಉತ್ತಮ.
· ಖಾಸಗಿ ವಾಹನ ಮಾಡಿಕೊಂಡು ತೆರಳಿದರೆ ಉತ್ತಮ.
· ಘಾಟಿ ಪ್ರದೇಶವಾದ್ದರಿಂದ ಊಟ, ವಸತಿ ವ್ಯವಸ್ಥೆ ಹತ್ತಿರದಲ್ಲಿಲ್ಲ.
· ತಿಂಡಿ, ನೀರು ಕಟ್ಟಿಕೊಂಡು ಹೋದರೆ ಹೆಚ್ಚು ಹೊತ್ತು ಕಾಲಕಳೆಯಲು ಅನುಕೂಲ

ವಿಕ್ರಮ್‌ ಗಾಣಿಗ ಕುದ್ರಡ್ಕ

Advertisement

Udayavani is now on Telegram. Click here to join our channel and stay updated with the latest news.

Next