Advertisement

ಎನ್‌ಎಸ್‌ಎಲ್‌ ಕಾರ್ಖಾನೆ ಜತೆ ರೈತರ ಸಂಧಾನ ವಿಫಲ

11:03 AM Sep 30, 2019 | Team Udayavani |

ಆಳಂದ: ನೆರೆಯ ಸಕ್ಕರೆ ಕಾರ್ಖಾನೆಗಳ ಬೆಲೆ ನೀಡಬೇಕು ಎಂದು ಭೂಸನೂರ ಹತ್ತಿರದ ಎನ್‌
ಎಸ್‌ಎಲ್‌ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರು ಆರಂಭಿಸಿದ ಧರಣಿ ಸತ್ಯಾಗ್ರಹಕ್ಕೆ ಸ್ಪಂದನೆ ದೊರೆಯದೇ ಇರುವ ಹಿನ್ನೆಲೆಯಲ್ಲಿ ರವಿವಾರವೂ ಮುಂದುವರಿದಿದೆ.

Advertisement

ಧರಣಿಗೆ ಮಣಿದಿರುವ ಜಿಲ್ಲಾಡತ ರವಿವಾರ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಸಹಾಯಕ ಆಯಕ್ತ ಗೋಪಾಲ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸುಭಾಷ ಗುತ್ತೇದಾರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಎನ್‌ಎಸ್‌ಎಲ್‌ ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ರಾಧಾಕೃಷ್ಣ ಹಾಗೂ ಕಬ್ಬು ಬೆಳೆಗಾರರು, ಮುಖಂಡರು ಪಾಲ್ಗೊಂಡಿದ್ದರು.

ಈ ಸಭೆಯಲ್ಲಿ ಒಮ್ಮತಕ್ಕೆ ಬಾರದೆ ಇರುವುದರಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತೂಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೇ, ನಿರ್ಣಯ ಆಗುವ ವರೆಗೆ ಸತ್ಯಾಗ್ರಹ ಹಿಂದಕ್ಕೆ ಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕಾರ್ಖಾನೆ ಎದುರು ಧರಣಿ ಮುಂದುವರಿಸಿದರು.

ಕಾರ್ಖನೆಯಿಂದ ಕಬ್ಬಿನ ಬಾಕಿ ಪ್ರತಿಟನ್‌ಗೆ 160 ರೂ., ಸಬ್ಸಿಡಿ ಹಣ 138 ರೂ. ಸೇರಿ 298 ರೂ.ಗಳನ್ನು ವಿಳಂಬ ಮಾಡದೆ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಕಾರ್ಖಾನೆ ಉಪಾಧ್ಯಕ್ಷರು ಮಾತನಾಡಿ, ನೆರೆಯ ಕಾರ್ಖಾನೆಗಳ ಬೆಲೆ ನೀಡುವ ಕುರಿತು ನಾವು ಯಾವುದೇ ಭರವಸೆ ನೀಡಿಲ್ಲ. ಕೇಳಿದ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಂತೆ ಆಕ್ರೋಶಗೊಂಡ ಮುಖಂಡರು ಉಪಾಧ್ಯಕ್ಷರ ವಿರುದ್ಧ ಹರಿಹಾಯ್ದರು.

Advertisement

ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆಗೆ ಕಳೆದ ಹಂಗಾಮಿನಲ್ಲಿ ಪೂರೈಕೆ ಮಾಡಿದ ರೈತರ ಪ್ರತಿಟನ್‌ ಕಬ್ಬಿಗೆ 2250 ರೂ. ಬೆಲೆ ನೀಡುವುದಾಗಿ ಹೇಳಿ, 1954 ರೂ. ಮಾತ್ರ ಪಾವತಿಸಿ ಇನ್ನುಳಿದ 298 ರೂ. ಬಾಕಿ ಹಣ ನೀಡಬೇಕಾಗಿದೆ. ಇದರಲ್ಲಿ ಈಗಾಗಲೇ ಸರ್ಕಾರ 138 ರೂ. ಬಿಡುಗಡೆಯಾಗಿದೆ. ಈ ಹಣವನ್ನು ನೀಡಿಲ್ಲ. ನೆರೆಯ ಕಾರ್ಖಾನೆಗಳ ಬೆಲೆಯಂತೆ 160 ರೂ.ಗಳನ್ನು ಕಾರ್ಖಾನೆಯಿಂದ ನೀಡಲೇಬೇಕು ಎಂದು ಒತ್ತಾಯಿಸಿದರು.

ಇದರಿಂದಾಗಿ ಮುಖಂಡರು ಹಾಗೂ ಕಾರ್ಖಾನೆಯವರು ಯಾವುದೇ ಒಪ್ಪಂದಕ್ಕೆ ಬಾರದೆ ಸಭೆ ಮುಂದೂಡಲ್ಪಟ್ಟಿತು. ಸಹಾಯಕ ಆಯುಕ್ತ ಗೋಪಾಲ ಕೃಷ್ಣ ಮಾತನಾಡಿ, ಸರ್ಕಾರದ 138 ರೂ. ಸಬ್ಸಿಡಿ ಹಣವನ್ನು ಶೀಘ್ರವೇ ಪಾವತಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ ನೆರೆಯ ಕಾರ್ಖಾನೆಗಳ ಬೆಲೆ ನೀಡಲು ಎನ್‌ಎಸ್‌ಎಸ್‌ ಎಲ್‌ ಹಿಂದೇಟು ಹಾಕಿದ್ದರಿಂದ ಸಭೆ ಒಮ್ಮತಕ್ಕೆ ಬಾರದಿದ್ದಕ್ಕೆ ಸೆ. 30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವ ಕುರಿತು ನಿರ್ಧರಿಸಲಾಯಿತು.

ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಧರ್ಮರಾಜ ಸಾಹು, ರಮೇಶ ಲೋಹಾರ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ, ಕಿಸಾನಸಭಾ ಜಿಲ್ಲಾ
ಅಧ್ಯಕ್ಷ ಮೌಲಾ ಮುಲ್ಲಾ, ಮೈನೋದ್ದೀನ್‌ ಜವಳಿ, ಕಲ್ಯಾಣಿ ಜಮಾದಾರ ಮತ್ತಿತರರು ಪರಿಸ್ಥಿತಿ ಹೀಗೆ ಮುಂದುವರಿದರೆ ಅ.3ರಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ, ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ, ಚಂದ್ರಕಾಂತ ಭೂಸನೂರ, ಶರಣಬಸಪ್ಪ ಮಲಶೆಟ್ಟಿ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next