Advertisement

ಸರ್ಕಾರಿ ಶಾಲೆ ನೋಡಿ ಮೂಗು ಮುರಿಯದಿರಿ!

10:54 AM Sep 05, 2019 | Naveen |

ಮಹಾದೇವ ವಡಗಾಂವ
ಆಳಂದ:
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿದು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಇಂದಿನ ದಿನಮಾನಗಳಲ್ಲಿ ಅಪರೂಪ ಎನ್ನುವಂತೆ ತಾಲೂಕಿನ ಸಾಲೇಗಾಂವ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದರಿಯ ಶಾಲೆ ಎನ್ನಿಸಿಕೊಳ್ಳುತ್ತಿದೆ.

Advertisement

ಕುಗ್ರಾಮವಾದರೂ ಶೈಕ್ಷಣಿಕ ವಾತಾವರಣ ಬೆಳೆದ ಹಿನ್ನೆಲೆಯಲ್ಲಿ ಇದುವರೆಗೂ ಗ್ರಾಮಸ್ಥರು 2 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ದೇಣಿಗೆ ಹಣದಲ್ಲಿ ಒಂದು ಲಕ್ಷ ರೂ. ವೆಚ್ಚದಲ್ಲಿ ವೇದಿಕೆ ನಿರ್ಮಾಣ, 20 ಸಾವಿರ ರೂ. ವೆಚ್ಚದಲ್ಲಿ ಗಣಕ ಯಂತ್ರ, 10 ಸಾವಿರ ರೂ. ವೆಚ್ಚದಲ್ಲಿ ಪ್ರೊಜೆಕ್ಟರ್‌, ಮೂರು ಸಾವಿರ ವೆಚ್ಚದಲ್ಲಿ 65 ಊಟದ ತಟ್ಟೆ, ನೀರು ಸಂಗ್ರಕ್ಕೆ 500 ಲೀಟರ್‌ ಸಾಮರ್ಥ್ಯದ ಸಿಂಟ್ಯಾಕ್ಸ್‌, ನೀರೆತ್ತುವ ಮೋಟಾರ್‌, ಎಂಟು ಸಾವಿರ ರೂ.ದಲ್ಲಿ ಆವರಣದಲ್ಲಿ ಕಲ್ಲು ಹಾಸಿಗೆ ಹೀಗೆ ಬಂದ ದೇಣಿಗೆಯನ್ನೇ ಸದ್ಭಳಕೆ ಮಾಡಿದ ಹಿನ್ನೆಲೆಯಲ್ಲಿ ಶಾಲೆಯ ಮಕ್ಕಳಿಗೆ ಒಳ್ಳೆಯ ವಾತಾವರಣ ಸೃಷ್ಟಿಯಾಗಿದೆ.

ಈ ಶಾಲೆಗೆ ಕಳೆದ ಎಂಟು ವರ್ಷಗಳಿಂದ ಏಕೋಪಾಧ್ಯ ಶಿಕ್ಷಕರಾಗಿದ್ದ ರವಿ ಚಿಕ್ಕಮಂಗಳೂರು ಅವರು, ಸತತ ಪ್ರಯತ್ನದ ಫಲದಿಂದ ಶಾಲೆಯ ಚಿತ್ರವಣನ್ನೇ ಬದಲಿಸುವ ಮೂಲಕ ಶಾಲೆಯೊಂದಿಗೆ ತಾವು ಸಹ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಪಾಲಕರ ಹಾಗೂ ವಿದ್ಯಾರ್ಥಿಗಳ ಪ್ರೀತಿ ಪಾತ್ರರಾಗಿದ್ದಾರೆ.

ಶಾಲೆ ಆರಂಭಗೊಂಡು 13 ವರ್ಷಗಳ ಅವಧಿಯಲ್ಲಿ ಎಂಟು ವರ್ಷ ಒಬ್ಬರೇ ಶಿಕ್ಷಕರಾಗಿದ್ದ ರವಿ ಅವರು, ಕೇವಲ ಶಾಲೆಗೆ ಶಿಕ್ಷಕರಾಗಿರದೇ, ಹೆಚ್ಚಿನ ಒತ್ತು ನೀಡಿ ಮಕ್ಕಳ ಕಲಿಕಾ ಗುಣಮಟ್ಟ, ಬ್ಯಾಂಕಿಂಗ್‌ ವ್ಯವಸ್ಥೆ, ಆವರಣದಲ್ಲಿ ಪರಿಸರ ಸಂರಕ್ಷಣೆಗಾಗಿ ಪ್ರತಿಯೊಂದು ಮಗುವಿನ ಮೂಲಕ ಹತ್ತಾರು ಗಿಡ, ಮರ ಬೆಳೆಸಲು ಪ್ರೋತ್ಸಾಹ, ಶಾಲಾ ಕೈತೋಟ, ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಮಿಂಚುವಂತೆ ಮಾಡಿದೆ. ಕ್ರೀಡೆ, ಮೊರಾರ್ಜಿ, ಕಿತ್ತೂರುರಾಣಿ ಚೆನ್ನಮ್ಮ, ಆದರ್ಶ ಶಾಲೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನವರು ಪಾಸಾಗುವಂತೆ ನೋಡಿಕೊಳ್ಳಲಾಗಿದೆ.

ಈ ಸದ್ಯ ಶಾಲೆಯಲ್ಲಿ ರವಿ ಮತ್ತು ವೆಂಕಟೇಶ ಗುತ್ತೇದಾರ ಎನ್ನುವ ಇಬ್ಬರು ಶಿಕ್ಷಕರು ಸೇರಿ ಮಕ್ಕಳ ಕಲಿಕೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಮೂಲಕ ಇನ್ನೂಳಿದ ಶಾಲೆಗಳಿಗೆ ಮಾದರಿಯಾಗಿದ್ದಾರೆ ಎಂದು ಪಾಲಕರು ಹೇಳಿಕೊಂಡಿದ್ದಾರೆ.

Advertisement

ಹಸಿರು ವನ ಶಾಲೆಗೊಂದು ವನ, ಮಗುವಿಗೊಂದು ಮರ ಯೋಜನೆ ಅಡಿಯಲ್ಲಿ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಸಿ ನೆಟ್ಟು ಅದರ ಬೆಳವಣಿಗೆ ಸಂಪೂರ್ಣ ಜವಾಬ್ದಾರಿ ವಹಿಸುವ ಮೂಲಕ ಆವರಣದಲ್ಲಿ ಹೊಂಗೆ, ಅರಳಿ, ಮಾವು, ಬೇವು, ತುಳಿಸಿ, ತೇಗ, ಅಶೋಕ, ನುಗ್ಗೆ ಕರಿಬೇವು, ಹುಣಿಸೆ, ಬದಾಮಿ ಹೀಗೆ ಅನೇಕ ಬೆಳೆದ ಮರಗಳು ಕಂಗಳಿಸುತ್ತಿವೆ.

ಬ್ಯಾಂಕಿಂಗ ವ್ಯವಸ್ಥೆ: ಶಾಲೆಯಲ್ಲೇ ವಿದ್ಯಾರ್ಥಿಗಳ ಖಾತೆ ತೆರೆದು ಉಳಿತಾಯದ ಹವ್ಯಾಸ ಬೆಳೆಸುವ ಮೂಲಕ ಬ್ಯಾಂಕ್‌ ವ್ಯವಹಾರದ ಜ್ಞಾನ ಮೂಡಿಸಲಾಗಿದೆ.

ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದ ವರೆಗೂ ಮುಂಚೂಣಿಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಕೈಗನ್ನಡಿಯಾಗಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ಪೂರಕ ಎನ್ನುವುದಕ್ಕೆ ಹೆಚ್ಚಿನವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಆದರ್ಶ, ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ಶಾಲೆಗಳ ನೇಮಕಾತಿಯಲ್ಲಿ ಅನೇಕ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅಲ್ಲದೇ, ಗಣಿತ ಕಲಿಕಾ ಪರೀಕ್ಷೆಯಲ್ಲೂ ಮೂರು ಪ್ರಶಸ್ತಿಗಳನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.

ಶಾಲೆಯ ಕೋಣೆಗಳಲ್ಲಿ ಗೋಡೆ ಬರಹ ಹಾಗೂ ಚಿತ್ರ ರಚನೆಯಲ್ಲಿ ಸ್ವತಃ ಶಿಕ್ಷಕ ರವಿ ಅವರು ಮಕ್ಕಳೊಂದಿಗೆ ಸೇರಿ ಅಂದ, ಚಂದವಾಗಿ ಮೂಡಿಸಿರುವುದು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next