Advertisement

“ಕಾಯಕವೇ ಕೈಲಾಸ’ದಂತಿದ್ದ ಅಜ್ಜಮ್ಮ ಇನ್ನಿಲ್ಲ

01:04 PM Apr 16, 2017 | Harsha Rao |

ಉಡುಪಿ: ಎಂಜಿಎಂ ಕಾಲೇಜಿನ ಎದುರು “ಅಜ್ಜಮ್ಮನ ಹೋಟೆಲ್ ‘ ನಡೆಸುತ್ತಿದ್ದ, ವಿದ್ಯಾರ್ಥಿಗಳಿಗೆ “ಅಜ್ಜಮ್ಮ’ ಎಂದು ಆತ್ಮೀಯ ರಾಗಿದ್ದ ಕಮಲಮ್ಮ (90) ಎ. 15ರಂದು ನಿಧನ ಹೊಂದಿದರು. ಮೃತರು ಪುತ್ರ, ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ. 

Advertisement

ಈ ಹೊಟೇಲ್‌ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳ ಪಾಲಿಗಂತೂ ಮನೆಯಂತೇ ಇತ್ತು.  60 -70 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಅನ್ನ ಬಡಿಸುತ್ತಿರುವ ಪ್ರೀತಿಯ ಕೈ ಅವರದ್ದಾಗಿತ್ತು, ದಣಿದ ವಿದ್ಯಾರ್ಥಿಗಳಿಗೆ  ಅನ್ನಪೂರ್ಣೆಯಾಗಿದ್ದ ಆಕೆ “ಕಾಯಕವೇ ಕೈಲಾಸ’ ಎಂಬುಧಿದಕ್ಕೆ ಪ್ರತಿ ರೂಪವಾಗಿದ್ದರು. ಇತ್ತೀಚಿನವರೆಗೂ ಅವರೇ ಬಡಿಸುತ್ತಿದ್ದರು. ಪ್ರೀತಿ ಉಣಿಸುವ ಕೈಗಳಿಗೆ ವ್ಯಾಪಾರಿ ಮನೋಭಾವ ಅಡ್ಡಿ ಆಗಲೇ ಇಲ್ಲ.

ವಿದ್ಯಾರ್ಥಿಗಳ ಚರ್ಚೆ – ಸಂವಾದ, ಯೋಚನೆಗಳಿಗೆ ಉಪ್ಪಿನ ಪೆಟ್ಟಿಗೆಯೇ ಜ್ಞಾನ ಪೀಠವಾಗಿತ್ತು. ವಿದ್ಯಾರ್ಥಿಗಳ ಹೆಗಲ ಭಾರ ಕಡಿಮೆ ಮಾಡುವ ಪುಸ್ತಕದ ತಾಣವೂ ಆಗಿತ್ತು. ಅಜ್ಜಮ್ಮನ ಸಲುಗೆಯನ್ನು ಅನುಭವಿಸಿದ ಕಾಲೇಜಿನ ಹಳೆ ವಿದ್ಯಾರ್ಥಿಗಳು ಕಾಲೇಜಿಗೆ ಬಂದಾಗ ಅಜ್ಜಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಹೋಗುತ್ತಿದ್ದರು. ಎಂಜಿಎಂ ಕಾಲೇಜನ್ನು ಹತ್ತಿರದಲ್ಲಿ ಕಂಡ ಅಜ್ಜಮ್ಮ ಕಾಲೇಜಿನ ಏಳಿಗೆಯನ್ನು ಕಂಡು ಹೆಮ್ಮೆ ಪಡುತ್ತಿದ್ದರು. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕಾಲೇಜಿನ ಕ್ರೀಡಾಕೂಟಗಳನ್ನು ಉದ್ಘಾಟಿಸಿದ್ದರು ಮತ್ತು ವಿದ್ಯಾರ್ಥಿಗಳು ಸಮ್ಮಾನಿಸಿದ್ದರು. 5-6 ವರ್ಷಗಳ ಹಿಂದೆ ಪ್ರಾಕ್ತನ ವಿದ್ಯಾರ್ಥಿಗಳು ಹೊಟೇಲ್‌ನ್ನು ರಿಪೇರಿ ಮಾಡಿದಾಗ “ಅಜ್ಜಮ್ಮ ಕೆಫೆ’ ಎಂದು ನಾಮಕರಣವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next