ನನ್ನ ತಂದೆಯನ್ನು ನಾನು ನೋಡಿಲ್ಲ. ಅಪ್ಪ ತೀರಿದಾಗ ನನಗೆ ಎಂಟು ತಿಂಗಳು. ಅಪ್ಪನ ಬಗ್ಗೆ ನಾನು ಬೇರೆಯವರಿಂದ ಕೇಳಿದ್ದೇ ಹೆಚ್ಚು. ಬಹುತೇಕ ನಿರ್ದೇಶಕರು ಬಂದು ನಮ್ಮ ತಂದೆಯ ಬಯೋಪಿಕ್ ಮಾಡಬೇಕು ಅನ್ನುತ್ತಿದ್ದರು…
“ಒಂದು ವೇಳೆ ನಾನು ಇಲ್ಲಿಗೆ ಬರದೇ ಹೋಗಿದ್ದರೆ, ಪ್ರಶ್ನೆಯಾಗಿಯೇ ಉಳಿಯುತ್ತಿದ್ದೆನೇನೋ? ಒಳ್ಳೆಯ ಕ್ರಿಕೆಟರ್ ಆಗಬೇಕು ಅಂದುಕೊಂಡಿದ್ದೆ. ಆದರೆ, ಸಿನಿಮಾ ಮೇಲಿನ ಒಲವು ಹೆಚ್ಚಾಯ್ತು. ಇಲ್ಲೇ ಏನಾದರೂ ಪ್ರೂವ್ ಮಾಡಬೇಕು ಅಂತ ಬಂದಿದ್ದೇನೆ…
– ಇದು ಹೊಸ ಪ್ರತಿಭೆ ಅಜಿತ್ ಮಾತು. ಅಷ್ಟಕ್ಕೂ ಯಾರು ಈ ಅಜಿತ್? ಈ ಪ್ರಶ್ನೆ ಸಹಜ. ಒಂದು ಕಾಲದಲ್ಲಿ ಭೂಗತ ಲೋಕದಲ್ಲಿ ಹೆಸರು ಮಾಡಿದ್ದ ಜಯರಾಜ್ ಪುತ್ರನೇ ಈ ಅಜಿತ್. ಹೌದು, ಅಜಿತ್ ಜಯರಾಜ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿ ವರ್ಷವೇ ಕಳೆದಿದೆ. ಇದುವರೆಗೂ ಅಜಿತ್ ಜಯರಾಜ್ ಆರು ಚಿತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರು ಹೀರೋ ಇರುವ ಚಿತ್ರಗಳಲ್ಲೇ ನಟಿಸಿದ್ದ ಅವರೀಗ ಫುಲ್ಫ್ಲೆಡ್ಜ್ ಹೀರೋ ಆಗುತ್ತಿದ್ದಾರೆ ಅನ್ನೋದು ವಿಶೇಷ. ಅದರಲ್ಲೂ ಅವರ ತಂದೆಯ ಬಯೋಪಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದೇ ಹೊಸ ಸುದ್ದಿ.
ಅಜಿತ್ ಅವರ ತಂದೆ ಜಯರಾಜ್ ಅವರ ಬಯೋಪಿಕ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಹಾಗೆ ನೋಡಿದರೆ, ಅಜಿತ್ ಅವರಿಗೆ ಈ ಹಿಂದೆಯೇ, ಅವರ ತಂದೆಯ ಬಯೋಪಿಕ್ನಲ್ಲಿ ನಟಿಸುವ ಅವಕಾಶ ಬಂದಿತ್ತಂತೆ. ಆ ಕುರಿತು ಹೇಳುವ ಅವರು, “ನನ್ನ ತಂದೆಯನ್ನು ನಾನು ನೋಡಿಲ್ಲ. ಅಪ್ಪ ತೀರಿದಾಗ ನನಗೆ ಎಂಟು ತಿಂಗಳು. ಅಪ್ಪನ ಬಗ್ಗೆ ನಾನು ಬೇರೆಯವರಿಂದ ಕೇಳಿದ್ದೇ ಹೆಚ್ಚು. ಬಹುತೇಕ ನಿರ್ದೇಶಕರು ಬಂದು ನಮ್ಮ ತಂದೆಯ ಬಯೋಪಿಕ್ ಮಾಡಬೇಕು ಅನ್ನುತ್ತಿದ್ದರು. ನನಗೆ ಅವರ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ. ಆದರೆ, “ಅಗ್ನಿ’ ಶ್ರೀಧರ್ ಅಂಕಲ್ ನನ್ನ ಜೊತೆಗಿದ್ದರು. ನಮ್ಮ ಫ್ಯಾಮಿಲಿಗೂ ಗೊತ್ತಿದ್ದವರು. ಅವರು ತಂದೆ ಜಯರಾಜ್ ಅವರ ಬಯೋಪಿಕ್ ಮಾಡ್ತೀನಿ ಅಂದಾಗ, ನಾನು ಬೇರೇನೂ ಮಾತಾಡಲೇ ಇಲ್ಲ. ಅವರಿಗೆ ನಮ್ಮ ತಂದೆ ಬಗ್ಗೆ ಗೊತ್ತು. ಶ್ರೀಧರ್ ಅಂಕಲ್ “ನಿನಗೊಂದು ಸರ್ಪ್ರೈಸ್ ಕೊಡ್ತೀನಿ’ ಅಂತ ಹೇಳಿದ್ದರು. ತಂದೆಯ ಬಯೋಪಿಕ್ ಶುರು ಮಾಡಿ, “ಈ ಚಿತ್ರದಲ್ಲಿ ನೀನು ಪ್ರಮುಖ ಪಾತ್ರ ಮಾಡುತ್ತಿದ್ದೀಯಾ’ ಅಂದಾಗಲೇ ಖುಷಿಯಾಯ್ತು’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಅಜಿತ್.
ಸದ್ಯ ಅಜಿತ್ ಆರು ಚಿತ್ರಗಳನ್ನು ಮುಗಿಸಿದ್ದಾರೆ. ಈ ಬಗ್ಗೆ ಮಾತನಾಡುವ ಅಜಿತ್, “ಎಂಟು ಕಥೆ ಕೇಳಿದ್ದೇನೆ. ಯಾವುದನ್ನೂ ಆಯ್ಕೆ ಮಾಡಿಲ್ಲ. ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಮೇ ತಿಂಗಳಲ್ಲಿ ಹೊಸದೊಂದು ಚಿತ್ರ ಶುರುವಾಗಲಿದೆ. ಇನ್ನು, ನನಗೆ ಸುದೀಪ್ ಸರ್ ಬ್ಯಾಕ್ಬೋನ್. ಅವರು ನನ್ನ ಅಣ್ಣನಂತೆ. ನಾನು ಸಿನಿಮಾ ರಂಗಕ್ಕೆ ಬರುವ ಆಸೆ ವ್ಯಕ್ತಪಡಿಸಿದಾಗ, “ಒಳ್ಳೆಯ ಆಯ್ಕೆ’ ಮುಂದುವರೆಸು ಅಂತ ಸಪೋರ್ಟ್ ಮಾಡುತ್ತಿದ್ದಾರೆ’ ಎನ್ನುತ್ತಾರೆ.