ಅಜೆಕಾರು: ಮರ್ಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಹಿಂದೆಂದಿಗಿಂತಲೂ ನೀರಿನ ಸಮಸ್ಯೆ ತೀವ್ರ ಉಲ್ಬಣಿಸಿದ್ದು ಹೊಳೆ ಹಳ್ಳಗಳ ನೀರು ಬರಿದಾಗಿದೆ.
ದೆಪ್ಪುತ್ತೆ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ಹಲವು ವರ್ಷಗಳಿಂದ ಪರಿಸರದ ನಾಗರಿಕರಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಬೇಗನೆ ಕಿಂಡಿ ಅಣೆಕಟ್ಟಿನ ನೀರು ಬತ್ತಿ ಹೋಗಿದ್ದು ಸ್ಥಳೀಯರಿಗೆ ನೀರು ಪೂರೈಸುವುದು ಪಂಚಾಯತ್ ಆಡಳಿತಕ್ಕೆ ಸಮಸ್ಯೆಯಾಗಿದೆ.
ದೆಪ್ಪುತ್ತೆ ಕಿಂಡಿ ಅಣೆಕಟ್ಟಿನ ಮೇಲ್ಭಾಗದ ಹೊಳೆಯಲ್ಲಿರುವ ಕೆಲ ಗುಂಡಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಶೇಖರಣೆಗೊಂಡಿದ್ದು ಈ ನೀರನ್ನು ತೋಡುಗಳ ನಿರ್ಮಿಸುವ ಮಾಡುವ ಮೂಲಕ ಕಿಂಡಿಅಣೆಕಟ್ಟಿಗೆ ನೀರು ಸರಬರಾಜು ಮಾಡಿ ನೀರು ಪೂರೈಕೆಗೆ ಮರ್ಣೆ ಪಂಚಾಯತ್ ಆಡಳಿತ ಕ್ರಮ ಕೈಗೊಂಡಿದೆ.
ಜೆಸಿಬಿ ಮೂಲಕ ಹೊಳೆಯಲ್ಲಿ ತೋಡುಗಳನ್ನು ನಿರ್ಮಿಸಿ ನೀರನ್ನು ಹರಿಸಲಾಗುತ್ತಿದ್ದು ಇದು ಸಹ ಕೆಲ ದಿನಗಳಿಗಷ್ಟೇ ಸಾಕಾಗಬಹುದು. ಅನಂತರದ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ನೀರಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಹಳ್ಳಗಳಿಂದ ನೀರು ಹರಿಸಲು ತೋಡು ನಿರ್ಮಾಣ ಮಾಡುವ ಸಂದರ್ಭ ಪಂಚಾಯತ್ ಅದ್ಯಕ್ಷ ದಿನೇಶ್ ಕುಮಾರ್, ಪಿಡಿಒ ತಿಲಕ್ರಾಜ್ ಮೊದಲಾದವರು ಉಪಸ್ಥಿತರಿದ್ದರು.