Advertisement

ಆಗಲಿದೆಯೇ ಭವಿಷ್ಯದ ಹೆಬ್ಬಾಗಿಲು?

12:22 PM Jan 05, 2021 | Team Udayavani |

ಬೆಂಗಳೂರು: ಬೆಂಗಳೂರಿನ ಹೃದಯಭಾಗದಿಂದ ವಿಮಾನ ನಿಲ್ದಾಣಕ್ಕೆ ಸೋಮವಾರ ಆರಂಭಗೊಂಡ ಐದು ಡೆಮು ರೈಲುಗಳ ಕಾರ್ಯಾಚರಣೆ ಒಂದು ಪ್ರಯೋಗ ಅಷ್ಟೇ. ಇದು ಯಶಸ್ವಿಯಾದರೆ, ಉದ್ದೇಶಿತ ಹಾಲ್ಟ್ ಸ್ಟೇಷನ್‌ ಭವಿಷ್ಯದ ರೈಲು ಸೇವೆಗಳಿಗೆ ಹೆಬ್ಟಾಗಿಲು ಆಗಲಿದೆ. ಆದರೆ, ಪ್ರಯೋಗದ ಯಶಸ್ಸು ಜನರ ಸ್ಪಂದನೆಯನ್ನು ಅವಲಂಬಿಸಿದೆ!

Advertisement

ಹಾಲ್ಟ್ಸ್ಟೇಷನ್‌ ಬೆನ್ನಲ್ಲೇ ಯಲಹಂಕ-ದೇವನಹಳ್ಳಿ ನಡುವೆ ಮಾರ್ಗ ವಿದ್ಯುದ್ದೀಕರಣ ನಿರ್ಮಾಣಗೊಳ್ಳುತ್ತಿದೆ. ದೊಡ್ಡಜಾಲ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಕ್ರಾಸಿಂಗ್‌ ಕಲ್ಪಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಮಧ್ಯೆ ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿ ಹಾಗೂ ವೈಟ್ ಫೀಲ್ಡ್‌ ನಿವಾಸಿಗಳು ಕೂಡ ಕಾರ್ಮೆಲ್‌ರಾಂ, ಹೀಲಳಿಗೆ ನಿಲ್ದಾಣದಿಂದಲೂ ಏರ್‌ ಪೋರ್ಟ್‌ಗೆ ರೈಲು ಸೇವೆ ಕಲ್ಪಿಸುವ ಬಗ್ಗೆ ಒತ್ತಾಯ ಕೇಳಿಬರುತ್ತಿದೆ. ಒಂದು ವೇಳೆ ಈಗಿನ ಪ್ರಯೋಗ ಯಶಸ್ವಿಯಾದರೆ, ಮುಂದಿನ “ರೈಲ್ವೆ ಹಾದಿ’ ಸುಗಮ ಆಗಲಿದೆ.

ಹಾಲ್ಟ್ ಸ್ಟೇಷನ್‌ ಬೇಕು ಎನ್ನುವುದು ದಶಕದ ಬೇಡಿಕೆ ಆಗಿತ್ತು. ಅದರ ಬಳಕೆಯಾದಷ್ಟೂ ಸೌಲಭ್ಯಗಳು ಹೆಚ್ಚಾಗುತ್ತವೆ. ಹಾಗಾಗಿ, ಇಲ್ಲಿ ಪ್ರಯಾಣಿಕರ ಜವಾಬ್ದಾರಿ ಮುಖ್ಯ. ನೀರಸ ಪ್ರತಿಕ್ರಿಯೆ ವ್ಯಕ್ತವಾದರೆ, ರೈಲ್ವೆ ಕೂಡ ಈ ಬಗ್ಗೆ ನಿರಾಸಕ್ತಿ ಹೊಂದುವ ಸಾಧ್ಯತೆ ಇದೆ ಎಂದು ಸಿಟಿಜನ್‌ ಫಾರ್‌ ಸಿಟಿಜನ್‌ ಸಂಯೋಜಕ ರಾಜಕುಮಾರ್‌ ದುಗರ್‌ ತಿಳಿಸಿದ್ದಾರೆ.

ಯಲಹಂಕ-ದೇವನಹಳ್ಳಿ ನಡುವಿನ ಮಾರ್ಗವಿದ್ಯುದ್ದೀಕರಣ ಕಾರ್ಯ ಅಂತಿಮ ಹಂತದಲ್ಲಿದೆ. ಇದು ಪೂರ್ಣಗೊಂಡರೆ, ಮೈಸೂರು, ಮಂಡ್ಯದಿಂದ ನೇರವಾಗಿ ಏರ್‌ಪೋರ್ಟ್‌ಗೆ ರೈಲು ಮಾರ್ಗ ಮುಕ್ತವಾಗಲಿದೆ. ಅದೇರೀತಿ, ಹೊಸೂರಿನಿಂದಲೂ ನೇರವಾಗಿ ಸೇವೆ ಕಲ್ಪಿಸಬಹುದು. ಇದರಿಂದ ಸಮಯ ಉಳಿತಾಯದ ಜತೆಗೆ ಪ್ರಯಾಣಿಕರಿಗೆ ಸಂಚಾರದಟ್ಟಣೆ ಕಿರಿಕಿರಿಯಿಂದ ಮುಕ್ತಿ ದೊರೆಯಲಿದೆ. ಇದರೊಂದಿಗೆ ನಗರದ ಮೇಲಿನ ಒತ್ತಡವೂ ತಗ್ಗಲಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಈ ಮಧ್ಯೆ ದೊಡ್ಡಜಾಲ ಮೇಲ್ದರ್ಜೆಗೇರಿಸುವ ಬಗ್ಗೆಯೂ ಸರ್ಕಾರದ ಹಂತದಲ್ಲಿ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿದ ತಾರಾ ಅನುರಾಧ

Advertisement

ಆರಂಭದಲ್ಲಿ ತುಸು ಕಷ್ಟ’: ಬೆಳಗಿನಜಾವ ಹಾಗೂ ತಡರಾತ್ರಿಯಲ್ಲಿ ಹತ್ತಿರದ ನಿಲ್ದಾಣಗಳಿಗೆ ಬಂದುರೈಲುಗಳನ್ನು ಏರಿ, ಹಾಲ್ಟ್ ಸ್ಟೇಷನ್‌ಗೆ ಬರಬೇಕು. ಅಲ್ಲಿಂದ ಶೆಟಲ್‌ ಸೇವೆಗಳಿಗೆ ಕಾದು, 5 ಕಿ.ಮೀ. ದೂರದ ಏರ್‌ ಪೋರ್ಟ್‌ ತಲುಪುವುದು ಆರಂಭದಲ್ಲಿ ತುಸು ಕಷ್ಟಅನಿಸಬಹುದು. ಉದಾಹರಣೆಗೆ ರಾಜಾಜಿನಗರದಲ್ಲಿ ಮನೆ ಇದ್ದರೆ, ಮೆಜೆಸ್ಟಿಕ್‌ ಅಥವಾ ಮಲ್ಲೇಶ್ವರಕ್ಕೆ ತೆರಳಿ, ಅಲ್ಲಿಕೌಂಟರ್‌ನಲ್ಲಿ ಟಿಕೆಟ್‌ ಪಡೆದು, ರೈಲು ಹತ್ತಿ ಹೋಗಬೇಕಾಗುತ್ತದೆ. ಅಂದರೆ ಫ‌ಸ್ಟ್‌ ಅಥವಾ ಲಾಸ್ಟ್‌ಮೈಲ್‌ ಕನೆಕ್ಟಿವಿಟಿ ಇಲ್ಲದೆ ಕಿರಿಕಿರಿ ಆಗಬಹುದು. ಒಮ್ಮೆ ಈ  ವ್ಯವಸ್ಥೆಗೆ ಹೊಂದಿಕೊಂಡರೆ, ಮುಂದಿನ ದಿನಗಳಲ್ಲಿ ಇದು”ನೆಮ್ಮದಿಯ ಸೇವೆ’ ಆಗಲಿದೆ ಎಂದು ಉಪನಗರ ರೈಲು ತಜ್ಞ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ.ರೈಲು ಸೇವೆಗಳಿಗೆ ಪೂರಕವಾಗಿ ಬಿಎಂಟಿಸಿಯು ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಬಸ್‌ ಸೇವೆಗಳನ್ನು ಕಲ್ಪಿಸುವ ಅವಶ್ಯಕತೆ ಇದೆ. ಇದಕ್ಕೂ ಮುನ್ನ ಹೆಚ್ಚಾಗಿ ಯಾವಭಾಗದ ಪ್ರಯಾಣಿಕರು ಈ ರೈಲುಗಳನ್ನು ಬಳಕೆ ಮಾಡುತ್ತಾರೆಎಂಬುದರ ಅಧ್ಯಯನ ನಡೆಸಬೇಕು. ಅದಕ್ಕೆ ತಕ್ಕಂತೆ ಮಿಡಿಬಸ್‌ಗಳನ್ನು ಪರಿಚಯಿಸುವ ಬಗ್ಗೆ ಚಿಂತನೆ ಆಗಬೇಕು. ಜತೆಗೆ ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ಕೂಡ ಇರುತ್ತವೆ. ಇದರಿಂದಾಗಿ ಅಷ್ಟೇನೂ ಸಮಸ್ಯೆ ಆಗದು ಎಂದು ಅಭಿಪ್ರಾಯಪಡುತ್ತಾರೆ.

ಮೈಸೂರು-ಹಾಲ್ಟ್  ಸ್ಟೇಷನ್‌; ಚಿಂತನೆ ಇದೆ : ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತರೆ, ತಡೆರಹಿತ ರೈಲು ಸೇವೆಗಳನ್ನು ಪರಿಚಯಿಸುವ ಚಿಂತನೆ ಇದೆ. ಈ ಪ್ರತಿ ನಿಲ್ದಾಣದಲ್ಲಿ 1 ನಿಮಿಷ ನಿಲುಗಡೆಯಾದರೂ, ಅದು ಸಹಜ ವೇಗ ಪಡೆದುಕೊಳ್ಳಲು 5-6 ನಿಮಿಷ ಆಗುತ್ತದೆ. ಇನ್ನು ವಿದ್ಯುದ್ದೀಕರಣ ಪೂರ್ಣಗೊಂಡರೆ, ಮೈಸೂರು, ಮಂಡ್ಯದಿಂದ ನಗರಕ್ಕೆ ಬರುವ ರೈಲುಗಳ ಸೇವೆಯನ್ನು ಏರ್‌ಪೋರ್ಟ್‌ ಹಾಲ್ಟ್ ಸ್ಟೇಷನ್‌ಗೆ ವಿಸ್ತರಿಸುವ ಚಿಂತನೆಯೂ ಇದೆ. ಹೊಸೂರಿನಿಂದಲೂ ಸೇವೆ ಕಲ್ಪಿಸಬಹುದು.ಇ. ವಿಜಯಾ, ಉಪ ಪ್ರಧಾನ ವ್ಯವಸ್ಥಾಪಕಿ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲೆ

 

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next