Advertisement

ಹದಗೆಟ್ಟ ದಿಲ್ಲಿಯ ವಾಯು ಗುಣಮಟ್ಟ, ನಗರಗಳು ಹಸಿರಾಗಬೇಕು

02:09 AM Nov 04, 2019 | sudhir |

ದಿಲ್ಲಿ ಮತ್ತೂಮ್ಮೆ ಗ್ಯಾಸ್‌ ಚೇಂಬರ್‌ ಆಗಿದೆ. ಇದು ರಾಷ್ಟ್ರದ ರಾಜಧಾನಿ ಎದುರಿಸುತ್ತಿರುವ ವಾರ್ಷಿಕ ಸಮಸ್ಯೆ. ದೀಪಾವಳಿ ಹಬ್ಬಕ್ಕಾಗುವಾಗ ನಗರದ ವಾಯುಮಾಲಿನ್ಯ ಮಿತಿಮೀರುತ್ತದೆ. ಹಬ್ಬಕ್ಕೆ ಸುಡುವ ಸುಡುಮದ್ದು ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿತ್ತು. ಆದರೆ ಈ ವರ್ಷ ಸುಡುಮದ್ದು ಬಳಕೆ ಬಹಳ ಕನಿಷ್ಠವಾಗಿತ್ತು. ಇದರ ಹೊರತಾಗಿಯೂ ದಿಲ್ಲಿ ಗ್ಯಾಸ್‌ ಚೇಂಬರ್‌ ಆಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಮಾಲಿನ್ಯ ಪಿಎಂ2.5 ಮಟ್ಟಕ್ಕೆ ತಲುಪಿರುವ ಕಾರಣ ಶಾಲೆಗಳಿಗೆ ರಜೆ ಸಾರಲಾಗಿದೆ. ಗೋಚರತೆ ಕುಸಿದಿರು ವುದರಿಂದ 30ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಇಲ್ಲವೇ ಮಾರ್ಗ ಬದಲಿಸಲಾಗಿದೆ. ಅಸ್ವಸ್ಥರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ತೀವ್ರ ಆತಂಕಕ್ಕೊಳಗಾಗಿದ್ದರೆ. ಆರೋಗ್ಯ ಸಮಸ್ಯೆ ಇಲ್ಲದವರು ಕೂಡ ಮಾಲಿನ್ಯದಿಂದಾಗಿ ವಿವಿಧ ಸಮಸ್ಯೆಗಳಿಗೆ ಗುರಿಯಾಗುತ್ತಿರುವ ಕುರಿತು ವರದಿಯಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ದೃಶ್ಯ ಪುನರಾವರ್ತನೆಯಾಗುತ್ತಿದ್ದರೂ ಇನ್ನೂ ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗದಿರುವುದು ದುರದೃಷ್ಟಕರ.

Advertisement

ಕಳೆದ ವರ್ಷ ಇದೇ ರೀತಿ ದಿಲ್ಲಿಯ ವಾಯು ಗುಣಮಟ್ಟ ಕುಸಿದಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಮಾಲಿನ್ಯ ತಡೆಗಟ್ಟುವ ಸಾಲುಸಾಲು ಕ್ರಮಗಳನ್ನು ಘೋಷಿಸಿದ್ದವು. ಕೇಂದ್ರವಂತೂ ದಿಲ್ಲಿಯನ್ನು ಹಸಿರುಗೊಳಿಸಿ ಚಳಿಗಾಲದಲ್ಲಿ ಜನಜೀವನ ಸಹ್ಯವಾಗುವಂತೆ ಮಾಡುವ ಹಲವು ಯೋಜನೆಗಳನ್ನು ಘೋಷಿಸಿತ್ತು. ಆದರೆ ಯಾವುದೂ ಕಾರ್ಯರೂಪಕ್ಕೆ ಬಂದಂತೆ ಕಾಣಿಸುವುದಿಲ್ಲ. ಇದ್ದುದರಲ್ಲಿ ತುಸು ಕ್ರಿಯಾಶೀಲವಾಗಿ ವರ್ತಿಸಿದ್ದು ದಿಲ್ಲಿ ಸರಕಾರವೇ. ವಾಯುಮಾಲಿನ್ಯ ಹದಗೆಡುವ ಸುಳಿವು ಸಿಕ್ಕಾಗಲೇ ದಿಲ್ಲಿ ಸರಕಾರ ತನ್ನ ಬಹುಚರ್ಚಿತ ವಾಹನಗಳ ಸಮ-ಬೆಸ ನಿಯಮವನ್ನು ಜಾರಿಗೆ ತಂದಿದೆ. ಜೊತೆಗೆ ಮಾಸ್ಕ್ ವಿತರಣೆ, ಆಸ್ಪತ್ರೆಗಳನ್ನು ಸಜ್ಜಾಗಿಟ್ಟುಕೊಳ್ಳುವಂಥ ಉಪಕ್ರಮಗಳನ್ನು ಕೈಗೊಂಡು ಅಷ್ಟರಮಟ್ಟಿಗೆ ಜನರ ಬವಣೆ ನೀಗಿಸುವ ಪ್ರಯತ್ನ ಮಾಡಿದೆ.

ದಿಲ್ಲಿಯ ಜನದಟ್ಟಣೆ ಮತ್ತು ವಾಹನ ನಿಬಿಡ‌ತೆ ಮಾಲಿನ್ಯಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದೆ. ವಾಹನಗಳ ಸಂಖ್ಯೆಯನ್ನು ಕಡಿಮೆಗೊಳಿ ಸುವುದೊಂದೇ ಇದಕ್ಕೆ ಪರಿಹಾರವಾದರೂ ಇದಕ್ಕೆ ತದ್ದಿರುದ್ಧವಾಗಿ ವರ್ಷದಿಂದ ರಸ್ತೆಗಿಳಿಯುವ ವಾಹನಗಳು ಹೆಚ್ಚುತ್ತಿವೆ. ದಿಲ್ಲಿ ಎಂದಲ್ಲ ಎಲ್ಲಾ ದೊಡ್ಡ ನಗರಗಳ ಕತೆಯೂ ಇದುವೇ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸಬೇಕೆಂಬ ಬೇಡಿಕೆ ಕೇಳಿ ಬಂದು ಅನೇಕ ವರ್ಷಗಳಾಗಿದ್ದರೂ ಈ ನಿಟ್ಟಿನಲ್ಲಿ ನಮ್ಮ ಆಡಳಿತ ಯಂತ್ರ ಗುಣಾತ್ಮಕವಾದ ಸಾಧನೆಯನ್ನೇನೂ ಮಾಡಿಲ್ಲ. ಹರ್ಯಾಣ, ಪಂಜಾಬ್‌, ಉತ್ತರ ಪ್ರದೇಶಗಳಲ್ಲಿ ಕೊಯ್ಲು ಮುಗಿದ ಬಳಿಕ ರೈತರು ಬೈಹುಲ್ಲನ್ನು ಗದ್ದೆಯಲ್ಲೇ ಸುಡುವುದರಿಂದ ದಿಲ್ಲಿಯ ವಾತಾವರಣ ಹದಗೆಡುತ್ತದೆ. ಗಾಳಿಯ ದಿಕ್ಕು ಈ ನಿಟ್ಟಿನಲ್ಲಿ ನಿರ್ಣಾಯಕವಾಗುತ್ತದೆ. ಆದರೆ ಇದಕ್ಕೆ ಪೂರ್ಣವಾಗಿ ರೈತರನ್ನು ದೂಷಿಸಿ ಪ್ರಯೋಜನವಿಲ್ಲ. ಲಕ್ಷಗಟ್ಟಲೆ ಕ್ವಿಂಟಾಲ್‌ ಬೈಹುಲ್ಲನ್ನು ಇಟ್ಟುಕೊಂಡು ಅವರು ಮಾಡುವುದಾದರೂ ಏನು ಎಂಬ ಸಮಸ್ಯೆಗೆ ಉತ್ತರ ಸಿಗುವ ತನಕ ಈ ಸಮಸ್ಯೆ ಮುಂದುವರಿಯಲಿದೆ. ಉತ್ತರ ಸಿಗಬೇಕಾದರೆ ರಾಜ್ಯಗಳ ಜೊತೆಗೆ ಕೇಂದ್ರ ಸರಕಾರವೂ ಸೇರಿಕೊಂಡು ಪರಿಹಾರದ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಆದರೆ ರಾಜಕೀಯ ಸ್ಥಿರತೆ ಇರುವುದರ ಹೊರತಾಗಿಯೂ ಇಂಥ ಶಾಶ್ವತ ಪರಿಹಾರಗಳತ್ತ ಇನ್ನೂ ಮುಂದಾಗಿರುವುದು ನಮ್ಮ ವ್ಯವಸ್ಥೆಯ ಚಲ್ತಾ ಹೈ ಧೋರಣೆಗೊಂದು ಉತ್ತಮ ಉದಾಹರಣೆ.

ನಮ್ಮ ನಗರಗಳನ್ನು ಹಸಿರುಗೊಳಿಸುವ ಸಮರೋಪಾದಿಯಲ್ಲಿ ಆಗದಿದ್ದರೆ ಮುಂಬರುವ ದಿನಗಳಲ್ಲಿ ಎಲ್ಲ ಮಹಾನಗರಗಳ ಪರಿಸ್ಥಿತಿಯೂ ದಿಲ್ಲಿಯಂತೆಯೇ ಆಗಲಿದೆ. ಈ ನಿಟ್ಟಿನಲ್ಲಿ ನಗರಾಡಳಿತವನ್ನು ತೊಡಗಿಸಿ ಕೊಳ್ಳಲು ಸರಕಾರಗಳು ಮುಂದಾಗಬೇಕು. ನಗರ ಹಸಿರೀಕರಣ ಎಂಬ ಯೋಜನೆಯನ್ನು ಪ್ರತಿ ವರ್ಷ ಘೋಷಿಸಲಾಗುತ್ತಿದ್ದರೂ ಯಾವ ನಗರವೂ ಹಸಿರಾಗುವುದು ಕಾಣಿಸುತ್ತಿಲ್ಲ. ಇದಕ್ಕಾಗಿ ಸಮಗ್ರವಾದ ನೀತಿಯ ಜೊತೆಗೆ ಸಾಕಷ್ಟು ಬಜೆಟ್‌ ಅನುದಾನವೂ ಅಗತ್ಯವಿದೆ. ಕನಿಷ್ಠ ಇನ್ನಾದರೂ ಆಡಳಿತ ವ್ಯವಸ್ಥೆ ಈ ನಿಟ್ಟಿನಲ್ಲಿ ಚಿಂತಿಸುವುದು ಅಗತ್ಯ. ಮಾಲಿನ್ಯ ನಿಯಂತ್ರಣದಲ್ಲಿ ದಿಲ್ಲಿಯೇ ಉಳಿದ ನಗರಗಳಿಗೆ ಮೇಲ್ಪಂಕ್ತಿಯಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next