ಮೈಸೂರು: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಜಾnನಾರ್ಜನೆಗೆ ಪೂರಕವಾಗುವಂತೆ ರಾಜ್ಯಾದ್ಯಂತ 100 ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಕಲಿಸು ಫೌಂಡೇಷನ್ ರಾಯಭಾರಿಯೂ ಆಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಬುಧವಾರ ಕುವೆಂಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಿಸು ಫೌಂಡೇಷನ್ನ 2018ರ ಕಾರ್ಯಯೋಜನೆಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಕ್ಕಳ ಬೌದ್ಧಿಕ ವಿಕಸನಕ್ಕೆ ಗ್ರಂಥಾಲಯಗಳು ಅವಶ್ಯಕ. ಹೀಗಾಗಿ ಶಾಲೆಗಳಲ್ಲಿ ಗ್ರಂಥಾಲಯಗಳಿದ್ದರೆ ಶಿಕ್ಷಣದ ಗುಣಮಟ್ಟ ಕೂಡ ವೃದ್ಧಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಲಿಸು ಫೌಂಡೇಷನ್ವತಿಯಿಂದ ಶಾಲಾ ಗ್ರಂಥಾಲಯಗಳ ಆರಂಭಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
40 ಸಾವಿರ ಮಕ್ಕಳಿಗೆ ಲಾಭ: ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ 100 ಶಾಲೆಗಳಲ್ಲಿ ಗ್ರಂಥಾಲಯ ಆರಂಭಿಸಿದರೆ ಸುಮಾರು 40 ಸಾವಿರ ವಿದ್ಯಾರ್ಥಿಗಳಿಗೆ ಅದರ ಲಾಭ ದೊರೆಯಲಿದೆ ಎಂದು ಹೇಳಿದರು. ಶಾಲೆಗಳಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಮೊದಲ ಹಂತದಲ್ಲಿ ಗ್ರಂಥಾಲಯಗಳ ಆರಂಭದ ಕಡೆಗೆ ಗಮನ ನೀಡಿದ್ದು, ಎರಡನೇ ಹಂತದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದರು.
ಎನ್.ರಂಗರಾವ್ ಅಂಡ್ ಸನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತನಾಡಿ, ಕಲಿಸು ಫೌಂಡೇಷನ್ ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಯುವ ಸಮುದಾಯ ಈ ರೀತಿ ತಮ್ಮನ್ನು ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು. ಕಲಿಸು ಫೌಂಡೇಷನ್ನ ಮುಖ್ಯಸ್ಥ ಎಂ.ಎಂ.ನಿಖೀಲೇಶ್ ಮಾತನಾಡಿ, ಪ್ರತಿ 500ಮೀಟರ್ಗೆ ಒಂದೊಂದು ಶಾಲೆ ತೆರೆಯುತ್ತಿರುವ ಕಾರಣ ಸಮಸ್ಯೆಯಾಗಿದೆ.
ಮಕ್ಕಳು ಇಲ್ಲದ ಶಾಲೆಗಳನ್ನು ಮುಚ್ಚಿದರೆ, ಅದರ ನಿರ್ವಹಣೆಯ ಹಣವನ್ನು ಮಕ್ಕಳಿರುವ ಶಾಲೆಗೆ ಬಳಸಿದರೆ ಉತ್ತಮವಾಗಲಿದೆ. ಇದರಿಂದ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ನೆರವಾಗಲಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಸನ್ಪ್ಯೂರ್ ಕಂಪನಿಯ ನಿರ್ದೇಶಕ ಇಮ್ರಾನ್ ಖಾನ್, ಮತ್ತಿತರರು ಇದ್ದರು.