Advertisement

ಕಪ್ಪತ್ತಗುಡ್ಡ ರಕ್ಷಣೆಗೆ ಫೆ.13 ರಿಂದ 15 ಅಹೋರಾತ್ರಿ ಧರಣಿ ಆರಂಭ

03:45 AM Feb 06, 2017 | Team Udayavani |

ಬೆಂಗಳೂರು: ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಫೆಬ್ರವರಿ 13 ರಿಂದ 15 ರವರೆಗೆ ಜನಸಂಗ್ರಾಮ ಪರಿಷತ್ತು ಹಾಗೂ ಸ್ಥಳೀಯ ಸಂಘಟನೆಗಳ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ.

Advertisement

ನಗರದ ಎಂ.ಜಿ. ರಸ್ತೆಯಲ್ಲಿನ ನಮ್ಮ ಮೆಟ್ರೋ ರಂಗೋಲಿ ಕೇಂದ್ರದಲ್ಲಿ ಭಾನುವಾರ ಜಗದ್ಗುರು ತೋಂಟದಾರ್ಯ ಮಹಾಸಂಸ್ಥಾನ ಮಠದ ಸಹಯೋಗದಲ್ಲಿ ಏರ್ಪಡಿಸಿದ್ದ “ಗಣಿಗಾರಿಕೆಗೆ ಬಲಿಯಾಯ್ತಾ ಕಪ್ಪತ್ತಗುಡ್ಡ’ ಕುರಿತು ಸುಧೀರ್‌ ಶೆಟ್ಟಿ ಅವರ ಛಾಯಾಚಿತ್ರ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌. ಹಿರೇಮಠ, ಜೀವವೈವಿಧ್ಯತೆಯಿಂದ ಕೂಡಿದ ಕಪ್ಪತ್ತಗುಡ್ಡದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗದಗ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ್‌ ಅವರು  ಈ ಹಿಂದೆ ಪ್ರತಿಪಕ್ಷದಲ್ಲಿದ್ದಾಗ  ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಳ್ಳಿ-ಹಳ್ಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದರು. ಆದರೆ, ಅವರೇ ಕಪ್ಪತ್ತಗುಡ್ಡದ ವಿನಾಶಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸಿ ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಮೂರು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಹೇಳಿದರು.

ಕಪ್ಪತ್ತಗುಡ್ಡಕ್ಕೆ ಮೊದಲ ಗಂಡಾಂತರ ಬಂದಿದ್ದು 2011ರಲ್ಲಿ. ಅಂದು ಪೋಸ್ಕೊ ಆ ಭಾಗದಲ್ಲಿ ಕಾರ್ಖಾನೆ ಸ್ಥಾಪನೆಗೆ ಮುಂದಾಯಿತು. ಪೋಸ್ಕೊ ಉದ್ದೇಶ ಕಾರ್ಖಾನೆ ಸ್ಥಾಪನೆಗೆ ಕೇವಲ ರೈತರ ಭೂಮಿ ಸ್ವಾಧೀನ ಪಡೆದುಕೊಳ್ಳುವುದು ಆಗಿರಲಿಲ್ಲ. ಕಪ್ಪತ್ತಗುಡ್ಡ ಮತ್ತು ತುಂಗಭದ್ರಾ ಮೇಲೂ ಆ ಕಂಪೆನಿ ಕಣ್ಣಿಟ್ಟಿತ್ತು. ಎಲ್ಲರ ಹೋರಾಟದ ಫ‌ಲವಾಗಿ ಅದು ಸಾಧ್ಯವಾಗಲಿಲ್ಲ. ಆದರೆ, ಈಗ ಪಟ್ಟಭದ್ರಹಿತಾಸಕ್ತಿಗಳ ಒತ್ತಡದಿಂದ ಮತ್ತೆ ಕಪ್ಪತ್ತಗುಡ್ಡಕ್ಕೆ ಗಂಡಾಂತರ ಬಂದಿದೆ. ಇದರ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.1882ರಲ್ಲಿದ್ದ ಬ್ರಿಟಿಷ್‌ ಸರ್ಕಾರ, 80 ಸಾವಿರ ಎಕರೆ ವಿಸ್ತೀರ್ಣದ ಕಪ್ಪತ್ತಗುಡ್ಡವನ್ನು ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಿತ್ತು. ಈಗ ಅದನ್ನು ಕೇವಲ ಸಂರಕ್ಷಿತ ಪ್ರದೇಶವಾಗಿ ಮಾರ್ಪಡಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ನಿವೃತ್ತ ಲೋಕಾಯುಕ್ತ ನ್ಯಾ.ಎನ್‌. ಸಂತೋಷ್‌ ಹೆಗ್ಡೆ ಮಾತನಾಡಿ, ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡುವುದರಿಂದ ಪರಿಸರಕ್ಕೆ ಮಾತ್ರವಲ್ಲ; ಸ್ಥಳೀಯ ಜನಜೀವನಕ್ಕೂ ಧಕ್ಕೆ ಉಂಟಾಗಲಿದೆ. ಇದು ಕೇವಲ ಆ ಭಾಗದ ಜನರ ಹೋರಾಟ ಆಗಬಾರದು. ಇದರಲ್ಲಿ ರಾಜ್ಯದ ಎಲ್ಲ ಭಾಗದ ಜನರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಚಟುವಟಿಕೆಗಳು ನಡೆಯಬಾರದು ಎಂಬ ನಿಯಮಗಳಿದ್ದರೂ, ಸರ್ಕಾರದಲ್ಲಿ ಇರುವವರೇ ತಮಗೆ ಬೇಕಾದಂತೆ ವರ್ತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮನುಷ್ಯನ ದುರಾಸೆ ಎಷ್ಟಿದೆ ಎಂಬುದು ಕಪ್ಪತ್ತಗುಡ್ಡದಲ್ಲಿ ನಡೆಯುತ್ತಿರುವ ಪರಿಸರ ನಾಶದ ಚಿತ್ರಗಳಿಂದ ಗೊತ್ತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರವಾದಿ ಯಲ್ಲಪ್ಪರೆಡ್ಡಿ ಮಾತನಾಡಿ, ಕಪ್ಪತ್ತಗುಡ್ಡ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. ಪರಿಸರವಾದಿ ಸುರೇಶ್‌ ಹೆಬ್ಳೀಕರ್‌, ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ಛಾಯಾಗ್ರಾಹಕ ಸುಧೀರ್‌ ಶೆಟ್ಟಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next