Advertisement

ವೋಟಿಗೆ ಅಹಿಂದ ಜಪ: ಬಿಜೆಪಿ, ಕಾಂಗ್ರೆಸ್‌ನಿಂದ ಚುನಾವಣೆಗಾಗಿ ಸಿದ್ಧತೆ

07:28 AM Aug 31, 2017 | Team Udayavani |

ರಾಜ್ಯದಲ್ಲಿ ಚುನಾವಣೆ ಪೂರ್ವ ತಯಾರಿ ಶರವೇಗ ಪಡೆದುಕೊಂಡಿದೆ. ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ಅಹಿಂದ ವೋಟ್‌ ಬ್ಯಾಂಕ್‌ಗೆ ಲಗ್ಗೆ ಹಾಕಲು ಸಜ್ಜಾಗಿವೆ. ಉಭಯ ಪಕ್ಷಗಳು ಬುಧವಾರ ಮಹತ್ವದ ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳು ಹೇಗಿರಬೇಕು ಎನ್ನುವ ಬಗ್ಗೆ ಚರ್ಚಿಸಿವೆ. 

Advertisement

ಯುಪಿ ಮಾದರಿಯಲ್ಲಿ ಅಖಾಡಕ್ಕೆ ಬಿಜೆಪಿ ಸಜ್ಜು
ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರನ್ನೊಳಗೊಂಡ ಹಿಂದೂಪರ ಮತಬ್ಯಾಂಕ್‌ ಸೃಷ್ಟಿಯೊಂದಿಗೆ ಅಲ್ಪಸಂಖ್ಯಾತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಮನ್ವಯತೆ ಯೊಂದಿಗೆ ಎದುರಿಸಲು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಒಮ್ಮತಕ್ಕೆ ಬಂದಿವೆ. ಎಲ್ಲಾ ಸಮುದಾಯಗಳನ್ನೊಳಗೊಂಡ ಹಿಂದೂಪರ ವೋಟ್‌ಬ್ಯಾಂಕ್‌ ಸೃಷ್ಟಿಸುವುದರೊಂದಿಗೆ ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯತಂತ್ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಯಶ ಕಂಡಿದೆ. ಈ ಹಿನ್ನೆಲೆಯಲ್ಲಿ ಅದೇ
ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಬುಧವಾರ ಕೇಶವಕೃಪಾದಲ್ಲಿ ನಡೆದ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಹಿಂದೂಪರ ಮತಗಳನ್ನು ಕ್ರೋಢೀಕರಿಸುವ ವಿಚಾರದಲ್ಲಿ ಆರ್‌ಎಸ್‌ಎಸ್‌ ನೆರವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವ ಬಗ್ಗೆಯೂ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಇದರ ಜತೆಗೆ ಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರದ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟಗಳನ್ನು ಆಯೋಜಿಸುವಾಗ ಆರ್‌ಎಸ್‌ಎಸ್‌ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಸಂಘಟನಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವಾಗ ಎರಡೂ ಕಡೆಯ ಮುಖಂಡರು ಒಟ್ಟಾಗಿ ಕುಳಿತು ನಿರ್ದಾರ ಕೈಗೊಳ್ಳುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದು  ತಿಳಿದುಬಂದಿದೆ. 

ಮಹತ್ವದ ಸಭೆ: ಪ್ರತಿ ಆರು ತಿಂಗಳಿಗೊಮ್ಮೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರು ಒಟ್ಟಾಗಿ ಕುಳಿತು ಸಂಘಟನೆ ಕುರಿತಂತೆ ನಿರ್ಧಾರಗಳನ್ನು ಕೈಗೊಳ್ಳುವ ಪರಿವಾರದ ಸಭೆ ನಡೆಯುತ್ತದೆಯಾದರೂ ಇತ್ತೀಚಿನ ದಿನಗಳಲ್ಲಿ ಸಮನ್ವಯತೆ ಕೊರತೆ ಎದುರಾಗಿತ್ತು. ಬಿಜೆಪಿಯ ಪ್ರಮುಖ ತೀರ್ಮಾನಗಳಿಂದ ಆರ್‌ಎಸ್‌ಎಸ್‌ ಮುಖಂಡರನ್ನು ದೂರವಿಡಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ರಾಜ್ಯಕ್ಕೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಎರಡೂ ಕಡೆಯವರೊಂದಿಗೆ ಸಮಾಲೋಚನೆ ನಡೆಸಿ ಒಟ್ಟಾಗಿ ಹೋಗುವಂತೆ ಸೂಚನೆ ನೀಡಿದ್ದರು. ಈ  ಹಿನ್ನೆಯಲ್ಲಿ ಬುಧವಾರ ನಡೆದ ಸಭೆ ಹೆಚ್ಚು ಮಹತ್ವ ಪಡೆದಿತ್ತು. 

ಸಭೆಯಲ್ಲಿ ಆರ್‌ಎಸ್‌ಎಸ್‌ನಿಂದ ಬಿಜೆಪಿ ಪದಾಧಿಕಾರಿಗಳಾಗಿ ನಿಯೋಜನೆಗೊಂಡಿರುವ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್‌ ಕೂಡ ಭಾಗವಹಿಸಿದ್ದರಿಂದ ಎರಡೂ ಕಡೆಯವರಲ್ಲಿ ಸಮನ್ವಯ ಮೂಡಿಸುವುದು ಕಷ್ಟವಾಗಲಿಲ್ಲ.  ರಾಜ್ಯ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿದ ಈ ಇಬ್ಬರೂ ನಾಯಕರು, ಮುಂದೆ ಸಮನ್ವಯದ ಕೊರತೆ ಎದುರಾಗಲೇ ಬಾರದು. ಪಕ್ಷ ಸಂಘಟನೆ ಮತ್ತು ಸರ್ಕಾರದ ವಿರುದ್ಧದ ಹೋರಾಟದಲ್ಲಿ ಆರ್‌ಎಸ್‌ಎಸ್‌ ಸಲಹೆಗಳನ್ನು ಪಡೆಯಬೇಕು. ಅದೇರೀತಿ ಆರ್‌ಎಸ್‌ಎಸ್‌ ಮುಖಂಡರು ಕೂಡ ಬಿಜೆಪಿ ನಾಯಕರ ಜತೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು ಎನ್ನಲಾಗಿದೆ. 

Advertisement

“ನವಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ’ಗೆ ಸಿದ್ಧತೆ, ಮುಂದಿನ ತಿಂಗಳು ನಡೆಯಲಿರುವ “ಮಂಗಳೂರು ಚಲೋ’ ಹೋರಾಟ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಎರಡೂ ಕಡೆಯವರು ಸಮನ್ವಯದೊಂದಿಗೆ ಅನುಷ್ಠಾನಕ್ಕೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಜನಸಂಪರ್ಕ ಅಭಿಯಾನದ ವೇಳೆ ದಲಿತರ ಕೇರಿಗಳಿಗೆ ಭೇಟಿ ನೀಡಿ ಅವರ ಮನೆಗಳಲ್ಲಿ ಉಪಹಾರ ಸೇವಿಸಿದ್ದು ಮತ್ತು ಅದಕ್ಕೆ ಪ್ರತಿಯಾಗಿ  ದಲಿತ ಕುಟುಂಬಗಳನ್ನು ತಮ್ಮ ಮನೆಗೆ ಕರೆಸಿ ಸಹಭೋಜನ ಮಾಡಿರುವ ಬಗ್ಗೆ ಆರ್‌ಎಸ್‌ ಎಸ್‌ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖಂಡರಾದ ಮುಕುಂದ್‌, ಸುಧೀರ್‌, ಗುರುಪ್ರಸಾದ್‌, ಶಂಕರಾನಂದ, ನರೇಂದ್ರ, ವಿ.ನಾಗರಾಜ…, ಬಿಜೆಪಿ ನಾಯಕರಾದ ಬಿ.ಎಸ್‌.ಯಡಿಯೂರಪ್ಪ, ಅನಂತಕುಮಾರ್‌ ಮತ್ತಿತರರು ಪಾಲ್ಗೊಂಡಿದ್ದರು.

ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಕೈ ತಯಾರಿ
ಬೆಂಗಳೂರು: ವಿಧಾನಸಭೆ ಚುನಾವಣೆಯ ಸಿದ್ಧತೆಯಲ್ಲಿರುವ ಆಡಳಿತ ಪಕ್ಷ ಕಾಂಗ್ರೆಸ್‌, ಡಿಸೆಂಬರ್‌ನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಬೃಹತ್‌ ಸಮಾವೇಶ ನಡೆಸಲು ತೀರ್ಮಾನಿಸಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ನೇತೃತ್ವದಲ್ಲಿ ಬುಧವಾರ ಸಂಜೆ ನಡೆಸಿದ ಹಿಂದುಳಿದ ವರ್ಗಗಳ ಘಕಟದ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ನೀಡಿರುವ ಯೋಜನೆಗಳು ಹಾಗೂ ದೇವರಾಜ್‌ ಅರಸು ಅವರು ಹಿಂದುಳಿದ ವರ್ಗಕ್ಕೆ ನೀಡಿರುವ ಕೊಡುಗೆಯನ್ನು ಜನರಿಗೆ ತಲುಪಿಸಲು ಈ ಬೃಹತ್‌ ಸಮಾವೇಶ ನಡೆಸಲಾಗುತ್ತಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಚುನಾವಣೆ ವರ್ಷವಾಗಿರುವುದರಿಂದ ಸರ್ಕಾರದ ಕೆಲಸಗಳನ್ನು ಜನರಿಗೆ ತಲುಪಿಸಬೇಕು. ಮುಂದಿನ ಆರು ತಿಂಗಳು ಹಿಂದುಳಿದ ವರ್ಗದ ಪದಾಧಿಕಾರಿಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹಿಂದುಳಿದ ವರ್ಗದ ಪಾತ್ರ ಮಹತ್ವದ್ದಾಗಿದೆ. ದೇವರಾಜ್‌ ಅರಸು ಹಿಂದುಳಿದ ವರ್ಗದ ಧ್ವನಿಯಾಗಿದ್ದರು. ಅನೇಕ ಹಿಂದುಳಿದ ವರ್ಗದ ನಾಯಕರನ್ನು ಸೃಷ್ಟಿ ಮಾಡಿದ್ದಾರೆ. ಸಿದ್ದರಾಮಯ್ಯ ಕೂಡ ಹಿಂದುಳಿದ ವರ್ಗದಿಂದ ಬಂದು ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಬರುವ ಬೇರೆ ಪಕ್ಷದ ನಾಯಕರನ್ನು ಕರೆ ತರುವಂತೆ ಪರಮೇಶ್ವರ್‌ ಸೂಚಿಸಿದ್ದಾರೆ. ಕಾಂಗ್ರೆಸ್‌ ಚುನಾವಣಾ ರಣನೀತಿಗೆ ಬಿಜೆಪಿ ಬೆದರಿದೆ ಎಂದು ಪರಮೇಶ್ವರ್‌ ತಿಳಿಸಿದ್ದಾರೆ. ಇದೇ ವೇಳೆ ನೂತನವಾಗಿ ಒಬಿಸಿ ಘಟಕಕ್ಕೆ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ವಿಧಾನ ಪರಿಷತ್‌ ಸದಸ್ಯ ಎಂ.ಡಿ. ಲಕ್ಷ್ಮೀ ನಾರಾಯಣ ಅಧಿಕಾರ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next