Advertisement

ಜನಕನಂಥ ಅಪ್ಪನೂ, ರಾಮನವಮಿಯ ನೆನಪೂ…

03:50 AM Apr 19, 2017 | Harsha Rao |

ಸು. ರಂ. ಎಕ್ಕುಂಡಿಯವರ “ಮಿಥಿಲೆ’ ಕವನದ, ಮಗಳ ಮನೆ ತುಂಬಿಸುತ ಬೀಳ್ಕೊಡಲು ಜನಕನು/ ಹನಿದುಂಬಿದವು ಮಿಥಿಲೆಯ ಹೃದಯ – ಕಣ್ಣು, ಮಗಳೆ ಮಂಗಲವಿರಲಿ ಎಂದು ಉಡುಗೊರೆಯಿತ್ತ/ ಬಂಗಾರದ ಕರಡಿಗೆ ತುಂಬ ಹೊಲದ ಮಣ್ಣು, ಸಾಲುಗಳನ್ನು ಓದುವಾಗಲೆಲ್ಲ ನನಗೆ ಅಪ್ಪ, ಅಪ್ಪನಿಗೆ ತುಂಬಾ ಇಷ್ಟವಿದ್ದ ಎರೆಹೊಲದ ಮಣ್ಣು ಒಟ್ಟೊಟ್ಟಿಗೆ ನೆನೆಪಾಗುತ್ತವೆ.

Advertisement

ಇಡೀ ಜೀವಮಾನ ಕೃಷಿಯನ್ನು ನೆಚ್ಚಿಯೇ ಅಪ್ಪ ಬದುಕಿದ್ದು ಕೃಷಿ ಎಂದರೆ ನನಗೆ ನೆನಪಾಗುವುದೂ ಒಂದು ಅಪ್ಪ, ಇನ್ನೊಂದು ರಾಮನವಮಿ.

ಒಂದು ಸಲ ಸುಗ್ಗಿ ಮುಗಿದ ಮೇಲೆ ಅತ್ತೆಯನ್ನು ನೋಡಲು ಬಂದ ಗಂಡಿನವರು, ಮನೆ ಮುಂದಿನ ಕಣದಲ್ಲಿ ಕಾಳುಗಳನ್ನು ಆರಿಸುತ್ತಿದ್ದ ಅಪ್ಪನನ್ನು ನೋಡಿ, ಕಡು ಬಡವರ ಮನೆಗೆ (ತಕ್ಕ ಮಟ್ಟಿಗೆ ಸ್ಥಿತಿವಂತರೇ ನಾವು) ಬಂದೆವೇನೋ ಎಂದು ಮಾತನಾಡಿಕೊಂಡಿದ್ದು ಅಪ್ಪನ ಕಿವಿಗೆ ಬಿದ್ದಿತ್ತು. ಹೆಣ್ಣು ನೋಡುವ ಕಾರ್ಯಕ್ರಮ ನಡೆಯುತ್ತಿ¨ªಾಗ ಎಲ್ಲರಿಗೂ ಚಹಾ ಸರಬರಾಜು ಮಾಡುತ್ತಿದ್ದ ನನ್ನ ಕರೆದ ಅಪ್ಪ, ಬೀಗರ ಮುಂದೆ ತಿಂಡಿ ತಟ್ಟೆ ಇಡುವ ಬದಲು ಬಂಗಾರದ ಬಟ್ಟಲಲ್ಲಿ (ನಮ್ಮ ಮನೆಯಲ್ಲಿ ಇವತ್ತಿಗೂ ಇದೆ ಆ ಬಂಗಾರದ ತಟ್ಟೆ) ಬೆಳ್ಳಿ ನಾಣ್ಯಗಳನ್ನೂ ತುಂಬಿ ಇಡಲು ಹೇಳಿದರು, ನಾನು ಹಾಗೆಯೇ ಮಾಡಿದೆ.

ಮುಖ ಮುಖ ನೋಡಿಕೊಳ್ಳತೊಡಗಿದ ಅವರಿಗೆ ಅಪ್ಪ, “ನಿಮ್ಮೆದುರಿಗೆ ಶ್ರೀಮಂತಿಕೆ ಪ್ರದರ್ಶನ ಮಾಡುವುದು ನಮ್ಮ ಉದ್ದೇಶವಲ್ಲ. ಒಳ ಬರುವಾಗ ನೀವಾಡಿದ ಮಾತಿಗೆ ಇದು ಉತ್ತರವಷ್ಟೇ. ಎಷ್ಟೇ ಶ್ರೀಮಂತರಿದ್ದರೂ ಹಣವನ್ನು ತಿನ್ನಲಾಗುವುದಿಲ್ಲ ಅನ್ನವನ್ನೇ ತಿನ್ನಬೇಕು ಎಂದು ತಿಳಿದು ಬದುಕುವ ರೈತರು ನಾವು’ ಎಂದರು. ಅಪ್ಪನ ಯೋಚನೆ, ಜೀವನಶೈಲಿಗೆ ಮಾರು ಹೋದ ಹುಡುಗ, ವರದಕ್ಷಿಣೆ, ವರೋಪಚಾರ ಬಯಸದೇ ಅತ್ತೆಯನ್ನು ಕೈ ಹಿಡಿದಿದ್ದು ಈಗ ಹಳೆಯ ಕಥೆ.

ನಾವೆಲ್ಲ ಚಿಕ್ಕವರಿ¨ªಾಗ ಕೆಲಸದ ಮೇಲೆ ಹೊರಗಡೆ ಹೋದ ಅಪ್ಪಮನೆಗೆ ಬರುವಾಗ ಮಧ್ಯರಾತ್ರಿಯಾಗಿದ್ದರೂ ತಿಂಡಿ ತಂದೇ ತರುತ್ತಿದ್ದರು. ಮತ್ತು ಆ ಸರೂರಾತ್ರಿಯಲ್ಲಿ ನಮ್ಮನ್ನ, ಕಾಕಂದಿರ ಮಕ್ಕಳನ್ನೂ ಎಬ್ಬಿಸಿ, ತಿನ್ನಿಸಿ ಮಲಗಿಸುತ್ತಿದ್ದರು. ನಮ್ಮ ಮನೆಯಲ್ಲಿ ಎಲ್ಲರಿಗೂ ಕೆನೆ ಹಾಲು ಅನ್ನವೆಂದರೆ ವಿಚಿತ್ರ ಪ್ರೀತಿ. ಈಗಲೂ ಅಪ್ಪನ ಊಟದ ಸಮಯದಲ್ಲಿ ಮನೆಯಲ್ಲಿದ್ದರೆ ತಪ್ಪದೇ ನನಗೆ ಕೆನೆ ಹಾಲು- ಅನ್ನ ಕಲಸಿ, ತಿನ್ನಿಸುತ್ತಾರೆ. ಅಕ್ಕ ಮೊದಲ ಸಲ ಗಂಡನ ಮನೆಗೆ ಹೋಗುವಾಗಲೂ ಅಪ್ಪತಿನ್ನಿಸಿ ಕಳಿಸಿದ್ದರು.

Advertisement

ಅದು ದೊಡ್ಡಕ್ಕನ ಮದುವೆಯ ಸಂದರ್ಭ. ಹಿಂದಿನ ದಿನ ಏನೋ ಕೆಲಸವಿದೆ ಅಂತ ಅಪ್ಪ ಹೊಲಕ್ಕೆ ಹೋಗಿದ್ದರು. ಬರುವಾಗ ಒಂದು ಸಣ್ಣ ಮಣ್ಣಿನ ಭರಣಿಯಲ್ಲಿ ಹೊಲದ ಮಣ್ಣನ್ನು ತುಂಬಿ ತಂದಿದ್ದರು. ಅಕ್ಕ ಗಂಡನ ಮನೆಗೆ ಹೊರಡುವಾಗ ಹಿರಿಯರೆಲ್ಲರ ಕಾಲಿಗೆ ನಮಸ್ಕರಿಸುತ್ತಾ, ಅಪ್ಪನ ಕಾಲಿಗೂ ನಮಸ್ಕರಿಸಿ ಎ¨ªಾಗ ಅಪ್ಪಆ  ಕರಡಿಗೆಯನ್ನು ಕೈಗಿಟ್ಟರು. ಅಕ್ಕ ಅದನ್ನ ಅಪ್ಪನ ಜೀವವೇ ತನ್ನ ಕೈನಲ್ಲಿದೆ ಎನ್ನುವಂತೆ ಎದೆಗವುಚಿ ಹಿಡಿದುಕೊಂಡು ಗಂಡನ ಮನೆಗೆ ಹೊರಟು ಹೋದಳು.

ಯಾವುದೋ ಒಂದು ಸಣ್ಣ ವಿಷಯವನ್ನು ದೊಡ್ಡದು ಮಾಡಿ ಅವಳ ಗಂಡನ ಮನೆಯವರು ಅಕ್ಕನನ್ನು ಮೂರು ವರ್ಷ ನಮ್ಮ ಮನೆಗೆ ಕಳುಹಿಸಲಿಲ್ಲ. ಮುಂದೆ ಒಂದು ದಿನ ಬ್ಯಾಂಕಿನಲ್ಲಿ ಅಡವಿಟ್ಟಿದ್ದ ಅವರ ಆಸ್ತಿ ಹರಾಜಿಗೆ ಬಂದು ಅದನ್ನು ಅಪ್ಪಬಿಟ್ಟು ಬೇರೆ ಯಾರೂ ಪರಿಹರಿಸಲು ಸಾಧ್ಯವಿಲ್ಲ ಎನ್ನುವಂಥಾದಾಗ ಅವರ ಮನೆಯವರು ನಮ್ಮ ಮನೆಗೆ ಬರಲು ಒಲವು ತೋರಿಸಿದರು. ಅಕ್ಕ ಇದೇ ವಿಷಯವಾಗಿ ಕೊರಗಿ ಕೊರಗಿ ಒಣಗಿದ ಕಟ್ಟಿಗೆಯಂತಾಗಿದ್ದಳು.

ವಿಷಯ ಗೊತ್ತಾದ ತಕ್ಷಣ ಅಪ್ಪನನ್ನನ್ನು ಅವಳ ಮನೆಗೆ ಕಳುಹಿಸಿ ಕರೆದುಕೊಂಡು ಬಾ ಎಂದರು. ನಾನು ಹೋಗಿ ಕರೆದುಕೊಂಡು ಬಂದೆ. ಮನೆಗೆ ಬಂದ ಅಕ್ಕನನ್ನು ನೋಡಿದ ತಕ್ಷಣ ಅಪ್ಪಹೇಳಿದ್ದು ಒಂದೇ ಮಾತು,  “ಬಂದದ್ದು ಬರ್ಲಿ… ನಾನ್‌ ನೋಡ್ಕೊàತೀನಿ…. ನೀನು ತಿಂದುಂಡು ಗಟ್ಟಿಯಾಗಿರು’ ಎಂದು.

ಅವಳು ಗಂಡನ ಮನೆಗೆ ಹೋಗಿದ್ದು, ವಾಪಸ್ಸು ಮನೆಗೆ ಬಂದದ್ದು ಎರಡೂ ರಾಮನವಮಿ ದಿನ.
 ಮನೆಯಲ್ಲಿ ಸಣ್ಣಪುಟ್ಟ ಕಾರಣಕ್ಕೆ ಸಿಟ್ಟಾಗಿ ಕೂರುತ್ತಿದ್ದ ನನ್ನ ರಮಿಸಲು ಅಪ್ಪ, “ನಾ ಅಡಿ ಇಡುವ ನನ್ನ ಹೊಲದ ಹಸುರು ನೀ. ಮುನಿಸೇಕೆ ಕೂಸೇ?’ ಎನ್ನುತ್ತಿದ್ದರು. ಕಲಿತು, ನೌಕರಿ ಹಿಡಿದು ಬದುಕು ಕಟ್ಟಿಕೊಳ್ಳಲು ಊರು ಬಿಟ್ಟು, ಮಹಾನಗರಗಳೆಂಬ ಪರದೇಶಿಗಳ ಸಂತೆಯಲ್ಲಿ ಸಣ್ಣದೊಂದು ಗೂಡು ಕಟ್ಟಿಕೊಳ್ಳಲು ಹೆಣಗಾಡಿದ್ದು ಸಾಕಾಗಿ, ಊರಿಗೆ ವಾಪಸ್ಸು ಬಂದು, ಅಪ್ಪಓಡಾಡಿದ ಹೊಲದಲ್ಲಿ ನೆಲೆ ನಿಂತು, “ನೀವು ಅಡಿಯಿಡುವ ನಿಮ್ಮ ಹೊಲದ ಹಸುರಾಗಿ ಬದುಕಲು ಬಂದಿದ್ದೇನೆ’ ಎಂದು ಹೇಳಿದ್ದು ಈ ಸಲದ ರಾಮನವಮಿಯದಲ್ಲಿ. ಹೀಗಾಗಿ ನನಗೆ ರಾಮನವಮಿ ಎಂದರೆ ಮೌನಿಯೊಬ್ಬನ ಧ್ಯಾನದಂತೆ ಬದುಕುತ್ತಿರುವ ಕಡಲ ಗಾಂಭೀರ್ಯದ ಅಪ್ಪ ನೆನಪಾಗುತ್ತಾರೆ.

– ಮೈಥಿಲಿ ಧರ್ಮಣ್ಣ

Advertisement

Udayavani is now on Telegram. Click here to join our channel and stay updated with the latest news.

Next