Advertisement

ಶಾಲೆಗಳಲ್ಲಿ ಕೃಷಿ ಶಿಕ್ಷಣ

06:00 AM Dec 14, 2018 | |

ಈಚೆಗೆ ತಮ್ಮನ ಮದುವೆ ತವರುಮನೆ ಸಮೀಪದ ಭಜನಾ ಮಂದಿರವೊಂದರಲ್ಲಿ ನಡೆಯಿತು. ಅಲ್ಲಿಗೆ ಹೋಗುವ ದಾರಿಯಲ್ಲಿ ನಾನು ಕಲಿತ ಶಾಲೆ ಇದೆ. ಮದುವೆ ಮುಗಿಸಿ ಬರುವಾಗ “ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕೆದಿಲ’ ಬೋರ್ಡ್‌ ಕಂಡದ್ದೇ ನಾನು ಗಂಡನ ಹತ್ತಿರ ಜೀಪು ನಿಲ್ಲಿಸಲು ಹೇಳಿ ತಕ್ಷಣ ಕೂತಲ್ಲಿಂದ ಕೆಳಗೆ ಹಾರಿದೆ. ಪುಟ್ಟ ಮಕ್ಕಳಂತೆ ಓಡುತ್ತ ಶಾಲೆಗೆ ಒಂದು ಸುತ್ತು ಹಾಕಿದೆ. ಶತಮಾನ ಕಳೆದ ಎಂತೆಂಥ ಮಹಾನುಭಾವರು ಕಲಿತ ನನ್ನ ಶಾಲೆ ಸೊರಗಿ ಹೋದದ್ದು ಹೊರನೋಟಕ್ಕೆ ಗೋಚರಿಸಿತು.

Advertisement

    ನಾನು ಮೂವತ್ತೆ„ದು ವರ್ಷಗಳ ಹಿಂದೆ ಕಲಿತ ಶಾಲೆ ಅಂದು ಇದ್ದಂತೆ ಈಗ ಇರಲಿಲ್ಲ. ನಾನು ಗೆಳತಿಯರ ಜತೆ ಸೇರಿ ಆಟವಾಡುತ್ತಿದ್ದ ಜಾರುಬಂಡಿ ಮಾಯವಾಗಿತ್ತು. ಶಾಲೆಯ ಹಿಂಭಾಗದಲ್ಲಿ ನಾನು, ಸಹ ವಿದ್ಯಾರ್ಥಿಗಳು ಗಿಡ ನೆಟ್ಟು ಬಾವಿಯಿಂದ ನೀರು ಸೇದಿ ಗಿಡಗಳಿಗೆ ಎರೆದು ಬೆಳೆಸಿದ ಕೈತೋಟ ಎಲ್ಲಿ ಹೋಯಿತೋ ! ಅಲ್ಲಿ ಹುಡುಕಿದರೂ ಒಂದು ಹೂವಿನ ಗಿಡ ಸಿಗಲಿಲ್ಲ. ಅಂದು ಅಲ್ಲಿ ನಂದಿಬಟ್ಟಲು ಗಿಡಗಳಿದ್ದವು. ಕರವೀರದ ಮರಗಳು ನಿತ್ಯ ಹೂವಿನಿಂದ ತುಂಬಿರುತ್ತಿದ್ದವು. ಈಗ ಅದರ ಬದಲು ಮುಳ್ಳುಕಂಟಿಗಳು. ಹಿಂದಿನ ವೈಭವಕ್ಕೆ ಸಾಕ್ಷಿಯೋ ಎಂಬಂತೆ ಬಾವಿಯೇನೊ ಇತ್ತು. ಆದರೆ, ನೀರು ಸೇದಲು ಹಗ್ಗ, ರಾಟೆ ಇರಲಿಲ್ಲ. ಬಹುಶಃ ಕುಡಿಯಲು ನಲ್ಲಿ ನೀರನ್ನು ಅವಲಂಬಿಸಿರಬಹುದು ಅಂದುಕೊಂಡೆ. ಶಾಲೆಯ ಮುಂದೆ, ಹಿಂದೆ ಜಾಗ ಬೇಕಾದಷ್ಟಿರುವಾಗ ಅದೂ ಹಳ್ಳಿಯಲ್ಲಿ ಪುಟ್ಟದಾದರೂ ಒಂದು ಕೈತೋಟ ಇಲ್ಲವಲ್ಲ ಎಂದು ನನಗೆ ಬಹಳ ಬೇಸರವಾಯಿತು. ಕೈತೋಟ ಮಾಡದೆ ಇರಲು ಕಾರಣವೇನು? ಎಂದು ಕೇಳ್ಳೋಣವೆಂದರೆ ಅಂದು ಆದಿತ್ಯವಾರ, ರಜಾ ದಿನ.

ಯಾವುದೇ ಮಕ್ಕಳನ್ನು “ಮುಂದೇನಾಗ ಬಯಸುತ್ತಿ’ ಎಂದು ಕೇಳಿದರೆ ತಟ್ಟಂತ ಬರುವ ಉತ್ತರ ಎಂಜಿನಿಯರ್‌, ಡಾಕ್ಟರ್‌ ಎಂದೇ. ಅಧ್ಯಾಪಕ, ಸಿನೆಮಾ ನಟ, ಹಾಡುಗಾರ, ಅಧಿಕಾರಿ ಹೀಗೆ ಬೇರೆ ಬೇರೆ ವೃತ್ತಿಯನ್ನು ಬಯಸುವವರೂ ಇರಬಹುದು. ಆದರೆ, “ನಾನು ಒಬ್ಬ ಉತ್ತಮ ಕೃಷಿಕನಾಗಬೇಕೆಂದು ಇದ್ದೇನೆ’ ಎಂದು ಯಾವ ವಿದ್ಯಾರ್ಥಿಯೂ ಹೇಳುವುದಿಲ್ಲ. ಎಕರೆಗಟ್ಟಲೆ ತೋಟ ಇರುವ ಹೆತ್ತವರೂ ತಮ್ಮ ಮಗ ರೈತನಾಗಬೇಕೆಂದು ಇಚ್ಛಿಸುವುದಿಲ್ಲ. ಇದಕ್ಕೆಲ್ಲ ಮೂಲಕಾರಣ ಶಿಕ್ಷಣ ನೀತಿ. ಭಾರತ ಕೃಷಿಯನ್ನೇ ನಂಬಿದ ದೇಶ. ಆದರೆ, ಇಂದಿನ ಯುವಜನತೆ ಕೃಷಿಯನ್ನು ಬಿಟ್ಟು ನಗರದತ್ತ ಆಕರ್ಷಿತರಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಈಗಿನ ವಿದ್ಯಾಭ್ಯಾಸ ಪದ್ಧತಿಯನ್ನು ನೋಡಿದರೆ ಅದು ನಗರಕೇಂದ್ರಿತವೆಂದು ನಿಸ್ಸಂಶಯವಾಗಿ ಹೇಳಬಹುದು. ಕೃಷಿ, ಹಳ್ಳಿ ಸಂಸ್ಕೃತಿಗಳು ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಕೃಷಿಗೆ ಕೈಗಾರಿಕೆಗಳಿಂತಲೂ ಹೆಚ್ಚಿನ ಸ್ಥಾನಮಾನ ನೀಡುವುದು ಅಗತ್ಯ. “ನಮ್ಮ ದೇಶದ ಹೃದಯ ಹಳ್ಳಿಗಳಲ್ಲಿ ಅಡಗಿದೆ. ಹಳ್ಳಿಗಳ ಉದ್ಧಾರವಾಗದೆ ದೇಶ ಉದ್ಧಾರವಾಗದು’ ಎಂಬ ಮಹಾತ್ಮಗಾಂಧಿಯವರ ಮಾತನ್ನು ಮನಗಾಣಬೇಕು. ಹಳ್ಳಿಯಲ್ಲಿಯೇ ನಮ್ಮ ಯುವಕ ಯುವತಿಯರು ಉಳಿಯುವಂತಹ ಶಿಕ್ಷಣವನ್ನು ಎಳವೆಯಲ್ಲಿಯೇ ನೀಡಬೇಕಾದುದು ಇಂದಿನ ತುರ್ತು. ಯುವಕರ ಅವಗಣನೆಗೆ ಕೃಷಿವಲಯ ತುತ್ತಾಗಿದೆ. ರಸಗೊಬ್ಬರ, ಕೀಟನಾಶಕಗಳಿಂದಲೇ ಉತ್ತಮ ಬೆಳೆ ಸಾಧ್ಯ ಎಂಬಂತಾಗಿದೆ. ಪರಿಣಾಮ ತಾಜಾತನ ಕಳೆದುಕೊಂಡ ತರಕಾರಿ, ಹಣ್ಣು, ಕಾಳು, ಸೊಪ್ಪು$ಗಳನ್ನೇ ತಿನ್ನುವ ಅನಿವಾರ್ಯತೆ ಒದಗಿದೆ. ಆಹಾರದ ಕೊರತೆ ನೀಗಿಕೊಳ್ಳಲು ಶಾಲಾ ಮಕ್ಕಳಿಗೆ ಕೃಷಿ ಪಾಠ ಹೇಳಬೇಕು. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?’ ಎಂಬ ಮಾತಿನಂತೆ ಚಿಕ್ಕಂದಿನಲ್ಲಿಯೇ ಮಕ್ಕಳಲ್ಲಿ ಕೃಷಿ ಪ್ರೀತಿ ಬೆಳೆಸದಿದ್ದರೆ ದೊಡ್ಡವರಾದ ಮೇಲೆ ಸಾಧ್ಯವೇ? ಪ್ರಾಥಮಿಕ ಶಿಕ್ಷಣದಿಂದ ತೊಡಗಿ ಉನ್ನತ ವಿದ್ಯಾಭ್ಯಾಸಗಳಲ್ಲಿ ಕೃಷಿ ವಿಷಯವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಯುವಜನಾಂಗದಲ್ಲಿ ಕೃಷಿಯ ಬಗ್ಗೆ ಆಸಕ್ತಿಯನ್ನು ಬೆಳೆಸಬೇಕು. 

    ಅನಾದಿ ಕಾಲದಿಂದಲೂ ಮನುಷ್ಯ ಹಸಿರಿನ ನಡುವೆಯೇ ಬೆಳೆದವನು. ಅಂದರೆ ಬೇರು- ಕಾಂಡ- ಎಲೆ ಇದಾವುದೂ ಅವನಿಗೆ ಹೊಸತಲ್ಲ. ಆದರೆ ಖಾಸಗೀಕರಣ, ಉದಾರೀಕರಣ, ಜಾಗತೀಕರಣದ ಭರಾಟೆ ಅವನನ್ನು ಮಣ್ಣಿನ ನಂಟಿನಿಂದ ಬೇರ್ಪಡಿಸಿದವು. ಕೃಷಿ ಕೆಲಸ ನೇಪಥ್ಯಕ್ಕೆ ಸರಿಯತೊಡಗಿತು. ನಾವಿವತ್ತು ಸೇವಿಸುತ್ತಿರುವ ಹೆಚ್ಚಿನ ಆಹಾರಗಳು ರಾಸಾಯನಿಕ ಗೊಬ್ಬರ, ವಿಷ ಔಷಧಿಗಳಿಂದ ಬೆಳೆದಂಥವುಗಳು. ಹಾಗಾಗಿ, ಹೆಚ್ಚಿನ ರೋಗಗಳು ಮಧ್ಯವಯಸ್ಸಿಗೆ ನಮಗೆ ಹತ್ತಿರವಾಗಿ ಬಿಡುತ್ತವೆ. ಸಾವಯವ ಕೃಷಿಯಿಂದ ದೂರ ಸರಿದುದರ ಪರಿಣಾಮ ಇದು. ಪ್ರತಿಮನೆ, ಅಪಾರ್ಟ್‌ಮೆಂಟುಗಳಲ್ಲಿ ತರಕಾರಿ, ಸೊಪ್ಪಿನ ಪುಟ್ಟ ತೋಟಗಳ ನಿರ್ಮಾಣ ಮಾಡಿದರೆ ಬೊಜ್ಜಿನ ದೇಹದ ಮಕ್ಕಳಿಗೆ ವ್ಯಾಯಾಮವಾಗಿಯೂ, ಅತಿ ಒತ್ತಡದಿಂದ ನರಳುವ ಪಟ್ಟಣಿಗರಿಗೆ ಒತ್ತಡ ತಗ್ಗಿಸುವಲ್ಲಿಯೂ ಅಲ್ಲದೆ ಮನೆಮಂದಿಯೆಲ್ಲ ಸವಿಯುವ ಆಹಾರವಾಗಿಯೂ ಉಪಯುಕ್ತ.

    ನಮ್ಮ ಮಕ್ಕಳಿಗೆ ಇಂಗ್ಲಿಷ್‌ ಕಲಿಸುತ್ತೇವೆ. ಅದೇ ರೀತಿ ಗಿಡ, ಮರಗಳನ್ನು ಬೆಳೆಯಬೇಕು. ಅವುಗಳನ್ನು ಉಳಿಸಬೇಕು ಎಂದು ಹೇಳುತ್ತೇವೆಯೇ? ಮಕ್ಕಳಿಗೆ ವಾಟ್ಸಾಪ್‌, ಫೇಸ್‌ಬುಕ್‌ ಗೊತ್ತಿದೆ. ಅದರಲ್ಲಿ ಇಡೀ ದಿನ ಕಳೆಯುತ್ತಾರೆ. ನಮ್ಮ ಸುತ್ತಮುತ್ತ ಇರುವ ಗಿಡಗಳ ಹೆಸರು, ಅವುಗಳ ಉಪಯೋಗ ಗೊತ್ತಿದೆಯೆ? ಎಷ್ಟು ಮನೆಗಳಲ್ಲಿ ಮಕ್ಕಳಿಗೆ ಗಿಡಕ್ಕೆ ನೀರುಣ್ಣಿಸುವ ಅಭ್ಯಾಸ ಮಾಡಿಸಿರುತ್ತೇವೆ? ಶಾಲೆಗೆ ರಜೆ ಇದ್ದ ದಿನಗಳಲ್ಲಿ ಮಕ್ಕಳ ಹತ್ತಿರ ಗದ್ದೆ, ತೋಟದ ಕೆಲಸವನ್ನು ಮಾಡಿಸಬೇಕು. ಶಾಲೆ-ಕಾಲೇಜಿಗೆ ಹೋಗುವ ಮಾತ್ರಕ್ಕೆ ತೋಟದಿಂದ ದೂರವಿರಬೇಕಿಲ್ಲ. ನಾವು ಮಕ್ಕಳನ್ನು ಕೃಷಿಯಿಂದ ದೂರ ಮಾಡಬಾರದು.

Advertisement

    ಶಾಲಾ ಕಾಲೇಜುಗಳು, ವಿದ್ಯಾರ್ಥಿನಿಲಯಗಳ ಆವರಣ ಕೈತೋಟಕ್ಕೆ ಬಹು ಸೂಕ್ತ. ಬಿಸಿಯೂಟ ನಡೆಸುವ ಶಾಲೆಗಳು ಕಾಯಿಪಲ್ಲೆಗಳನ್ನು ಸ್ವತಃ ಬೆಳೆದುಕೊಳ್ಳಬಹುದು. ಅನಾನಸು, ಬಾಳೆ, ನೆಲ್ಲಿ, ಪಪ್ಪಾಯಿಯಂತಹ ಹೆಚ್ಚು ನಿಗಾ ಬೇಡದ, ಉತ್ಕೃಷ್ಟ ಗುಣಗಳನ್ನು ಹೊಂದಿರುವ ಹಣ್ಣುಗಳನ್ನೂ ಬೆಳೆಯಬಹುದು. ತುಳಸಿ, ಪಾರಿಜಾತ, ಲೋಳೆಸರಗಳಂಥ ಔಷಧಿ ಗಿಡಗಳನ್ನು ಬೆಳೆಸಿದರೆ ಮಕ್ಕಳಿಗೂ ಅವುಗಳ ಪರಿಚಯವಾಗುತ್ತದೆ. ಅಲ್ಲದೆ ಕೃಷಿಯಲ್ಲಿ ಅಭಿರುಚಿ ಮೂಡಿಸಿದಂತಾಗುತ್ತದೆ. ಕೈತೋಟದಲ್ಲಿ ಮಕ್ಕಳು ತಮಗೆ ಗೊತ್ತಿರುವ ಕೆಲಸವನ್ನು ಮಾಡಬಹುದು. ಗೊತ್ತಿಲ್ಲದ್ದನ್ನು ಕಲಿಯಬಹುದು. ಮಕ್ಕಳಲ್ಲಿ ಪ್ರಕೃತಿ, ಪರಿಸರ, ತೋಟಗಾರಿಕೆಯ ಬಗ್ಗೆ ಪ್ರೀತಿ ಮೂಡಿಸುವುದು, ಅದನ್ನು ಪೋಷಿಸುವ ಬಗ್ಗೆ ತಿಳುವಳಿಕೆ ಕೊಡುವುದೂ ಈ ಕೈತೋಟದ ಉದ್ದೇಶ. ನುರಿತ ಕೃಷಿ ಅಧ್ಯಾಪಕರು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡರೆ ಹೊಸ ಬಗೆಯ ಹಸಿರು ಕ್ರಾಂತಿ ಸಾಧ್ಯ.

    ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದೆ. ಅದು ನವೆಂಬರ್‌ ತಿಂಗಳ ಕೊನೆ. ಅಲ್ಲಿವರೆಗೂ ಹಸಿರಿದ್ದ ಗಿಡಮರಗಳ ಎಲೆ ಎಲ್ಲವೂ ಈಗ ಬಣ್ಣಬಣ್ಣ. ಕೊನೆಗೆ ಎಲೆಗಳೆಲ್ಲ ಉದುರಿ ಭೂಮಿಗೆ ಕೆಂಪು, ಕಿತ್ತಳೆ, ಹಳದಿ ಬಣ್ಣದ ಹಾಸಿಗೆ. ಈ ಬಿದ್ದ ಎಲೆಗಳನ್ನು ಸಂಗ್ರಹಿಸಿ ಶಾಲೆಗೆ ತೆಗೆದುಕೊಂಡು ಬರಲು ಪ್ರೀಸ್ಕೂಲ್‌(ಅಂಗನವಾಡಿ) ಮಕ್ಕಳಿಗೆ ಅಧ್ಯಾಪಕಿಯಿಂದ ಸೂಚನೆ. ಹಾಗೆ ಮಕ್ಕಳು ಹೆಕ್ಕಿ ತಂದ ಎಲೆಗಳನ್ನು ಮುಂದಿಟ್ಟುಕೊಂಡು ಯಾಕೆ ಚಳಿಗಾಲದಲ್ಲಿ ಎಲೆಗಳು ಬಣ್ಣ ಬದಲಾಯಿಸಿ ಉದುರುತ್ತವೆ? ಎಂಬುದರ ಬಗ್ಗೆಯೇ ಆ ಒಂದು ಪಿರಿಯಡ್‌ ಮಕ್ಕಳಿಗೆ ಪಾಠ. ಮಾತ್ರವಲ್ಲ, ಉದುರುವ ಬಣ್ಣದ ಎಲೆ ಕುರಿತು ಪದ್ಯ-ನೃತ್ಯ. ಆ ಎಲೆಗಳನ್ನು ಕಾಗದದ ಹಾಳೆಗಳಿಗೆ ಅಂಟಿಸುವ ಆಟ. ನಾನೂ ಆ ತರಗತಿಯಲ್ಲಿ ಕುಳಿತಿದ್ದೆ. ಪ್ರಕೃತಿ ಪ್ರೇಮವನ್ನು ಅಲ್ಲಿ ಪುಟ್ಟ ಮಕ್ಕಳಿರುವಾಗಲೇ ಕಲಿಸಲಾಗುತ್ತದೆ.

ಕೆಲವು ವರ್ಷಗಳ ಹಿಂದಿನ ಮಾತು. ಮಳೆಗಾಲದಲ್ಲಿ ನಮ್ಮ ಕರಾವಳಿ, ಕೊಡಗಿನ ಬಹುತೇಕ ಗದ್ದೆಗಳು ಹಸಿರು ತುಂಬಿಕೊಂಡು ಕಂಗೊಳಿಸುತ್ತಿದ್ದವು. ಆದರೆ, ಇಂದು ಕಾಲ ಬದಲಾಗಿದೆ! ಭತ್ತದ ಗದ್ದೆಗಳಿದ್ದ ಜಾಗದಲ್ಲಿ ಅಡಿಕೆ, ರಬ್ಬರ್‌ ಮರಗಳು ತಲೆಯೆತ್ತಿವೆ. ನಗರದಲ್ಲಿ ಹುಟ್ಟಿ ಬೆಳೆದ ಈಗಿನ ಬಹುತೇಕ ಮಕ್ಕಳಿಗೆ ಭತ್ತದ ಪೈರು ಹೇಗೆ ಇರುತ್ತದೆ? ತೆನೆ ಹೇಗೆ ಕಟ್ಟುತ್ತದೆ? ಎಂಬುದೇ ಗೊತ್ತಿಲ್ಲ. ನಗರ ಮಾತ್ರ ಏಕೆ ಹಳ್ಳಿಯಲ್ಲೇ ಹುಟ್ಟಿ ಬೆಳೆದ ಮಕ್ಕಳ ಪಾರಂಪರಿಕ ಕೃಷಿ ಪಾಠದ ಕೊಂಡಿಯೂ ಕಳಚಿದೆ. ಇಂದು ಹಳ್ಳಿಯ ಮಕ್ಕಳೂ ಗದ್ದೆಗಿಳಿಯುವುದು ಕಡಿಮೆಯಾಗಿದೆ. 

ಶಾಲೆಯ ಪಠ್ಯ ಚಟುವಟಿಕೆಗೆ ತೊಂದರೆಯಾಗದ ಹಾಗೆ ಶನಿವಾರ ಮಧ್ಯಾಹ್ನ ನಂತರ ವಿದ್ಯಾರ್ಥಿಗಳಿಗೆ ಕೃಷಿ ತರಬೇತಿ ನೀಡಬಹುದು. ಅದು ಕಷ್ಟ ಅನಿಸಿದರೆ ವಾರದಲ್ಲಿ ಒಂದು ಗಂಟೆ ಸಮಯವಾದರೂ ಕೈತೋಟ ರಚಿಸುವಲ್ಲಿ ತರಬೇತಿ ಇರಬೇಕು. ಬದಲಾದ ಜೀವನ ಕ್ರಮದಲ್ಲಿ ಪ್ರಚಲಿತವಾಗಿರುವ ತಾರಸಿ ಮೇಲಿನ ಕೃಷಿಯಿಂದ ಹಿಡಿದು ಸಾಂಪ್ರದಾಯಿಕ ಕೃಷಿ ತರಬೇತಿಯನ್ನೂ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಸಾವಯವ ಕೃಷಿ, ಸಾವಯವ ಗೊಬ್ಬರ ತಯಾರಿ, ಬೆಳೆಗಳ ರಕ್ಷಣೆಯ ಅರಿವನ್ನೂ ಮೂಡಿಸಬೇಕು. ಮಕ್ಕಳಿಗೆ ಕೃಷಿ ಪ್ರಬಂಧ ಸ್ಪ$ರ್ಧೆ- ರಸಪ್ರಶ್ನೆ ಸ್ಪ$ರ್ಧೆಯನ್ನು ಏರ್ಪಡಿಸಬೇಕು. ಕೃಷಿ ಪ್ರವಾಸ, ಗದ್ದೆ- ತೋಟದ ಭೇಟಿ ಮುಂತಾದ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಹಾಕಿಕೊಂಡರೆ ವಿದ್ಯಾರ್ಥಿಗಳಿಗೆ ಕೃಷಿ ಕುರಿತು ಒಲವು ಮೂಡುತ್ತದೆ.

ಸಹನಾ ಕಾಂತಬೈಲು

Advertisement

Udayavani is now on Telegram. Click here to join our channel and stay updated with the latest news.

Next