Advertisement

ಪಿಒಪಿ ಮೂರ್ತಿ ನಿಷೇಧಕ್ಕೆ ಸಹಮತ

09:57 AM Aug 20, 2017 | Team Udayavani |

ಹುಬ್ಬಳ್ಳಿ: ಪ್ಲಾಸ್ಟರ್‌ ಆಫ್ ಪ್ಯಾರಿಸ್‌(ಪಿಒಪಿ) ಗಣೇಶಮೂರ್ತಿಗಳ ನಿಷೇಧಕ್ಕೆ ಸಹಮತ ಹಾಗೂ ಹಬ್ಬವನ್ನು ಶಾಂತಿ-ಸೌಹಾರ್ದದಿಂದ ಆಚರಿಸಲು ಸೌಹಾರ್ದ ಸಭೆಯಲ್ಲಿ ತೀರ್ಮಾನಿಸಲಾಯಿತು. ಗಣೇಶ ಹಾಗೂ ಬಕ್ರೀದ್‌ ಹಬ್ಬಗಳ
ಅಂಗವಾಗಿ ಮಹಾನಗರ ಕಮಿಷನರೇಟ್‌ ನಿಂದ ಶನಿವಾರ ಸಂಜೆ ಇಲ್ಲಿನ ಕಾರವಾರ ರಸ್ತೆಯ ಹಳೆ ಸಿಎಆರ್‌ ಮೈದಾನದಲ್ಲಿ ಆಯೋಜಿಸಿದ್ದ ಸೌಹಾರ್ದ ಸಭೆಯಲ್ಲಿ ಮಠಾಧೀಶರು, ಧರ್ಮಗುರುಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು, ಸಂಘ-ಸಂಸ್ಥೆಗಳವರು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಆರೋಗ್ಯ ಹಾಗೂ ಪರಿಸರ
ಸಂರಕ್ಷಣೆ ದೃಷ್ಟಿಯಿಂದ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಬೇಡ ಎಂಬುದರ ಬಗ್ಗೆ ಬಹುತೇಕರು ಅನಿಸಿಕೆ
ವ್ಯಕ್ತಪಡಿಸಿದರು. ಹಬ್ಬದ ಸಂದರ್ಭಗಳಲ್ಲಿ ಸಮಾಜದ ಶಾಂತಿ-ಸಾಮರಸ್ಯ ಕದಡುವ ಸಮಾಜಘಾತುಕ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲ ಧರ್ಮೀಯರು ಸಾಮರಸ್ಯದಿಂದ ಹಬ್ಬದ ಆಚರಣೆಯಲ್ಲಿ ತೊಡಗಬೇಕು ಎಂಬುದು ಧಾರ್ಮಿಕ ಗುರುಗಳ ಆಶಯವಾಗಿತ್ತು.

Advertisement

ಮಣ್ಣಿನ ಮೂರ್ತಿ ಮಹತ್ವ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಣ್ಣಿನ ಮೂರ್ತಿ ಪೂಜೆಗೆ ಮಹತ್ವವಿದೆ. ಬದಲಾದ ಕಾಲಘಟ್ಟದಲ್ಲಿ ಮೂಲ ಉದ್ದೇಶ ನಶಿಸಿ ಹಬ್ಬಗಳು ಕೇವಲ ಮನರಂಜನೆಗೆ ಸೀಮಿತವಾಗುತ್ತಿವೆ. ನಮ್ಮ ಪುರಾತನ ಸಂಪ್ರದಾಯದಂತೆ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಶ್ರೇಷ್ಠವಾಗಿದೆ ಎಂದರು. ಉತ್ತಮ ಆರೋಗ್ಯ, ಒಳ್ಳೆಯ ಪರಿಸರದ ದೃಷ್ಟಿಯಿಂದ ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆ ಕೈಬಿಡಬೇಕು. ಜಿಲ್ಲಾಡಳಿತ ಕೈಗೊಂಡಿರುವ ಕ್ರಮಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಆದರೆ ಕಾನೂನು ಹಾಗೂ ಆರೋಗ್ಯದ ದೃಷ್ಟಿಯಿಂದ ಪಿಒಪಿ ಒಳ್ಳೆಯದಲ್ಲ. ಇದು ಆಂದೋಲನದ ರೂಪ ಪಡೆದುಕೊಂಡು ಮುಂದಿನ ಹಬ್ಬದ ವೇಳೆಗೆ ಸಂಪೂರ್ಣವಾಗಿ ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆ ಕೈಬಿಡಬೇಕು. ಎಲ್ಲರೂ ಸಹಕಾರದಿಂದ ಹಬ್ಬ ಆಚರಿಸೋಣ. ಯಾವುದೇ ಅಹಿಕರ ಘಟನೆಗಳಿಗೆ ಕಿವಿಗೊಡದೆ ಸಂಭ್ರಮದಿಂದ ಹಬ್ಬ ಆಚರಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, ಶಾಂತಿಯುತ ಹಾಗೂ ಸಂಭ್ರಮದ ಆಚರಣೆಗೆ
ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸದಾ ಸಹಕಾರ ನೀಡುತ್ತದೆ. ಶಾಂತಿಯಿಂದ ಹಬ್ಬ ಆಚರಿಸಿ ನಿಮ್ಮ ರಕ್ಷಣೆಗೆ ನಾವಿದ್ದೇವೆ. ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುವುದರಿಂದ ಯಾವುದೇ ಸಮಸ್ಯೆಯುಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಶೇಷ ವ್ಯವಸ್ಥೆ ಕಲ್ಪಿಸುವಂತೆ ಗಣೇಶ ಉತ್ಸವ ಸಮಿತಿ
ಪ್ರಮುಖರಿಗೆ ಸೂಚಿಸಿದರು. ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ
ಮಾತನಾಡಿ, ಕೋಮು ಸೌಹಾರ್ದಕ್ಕೆ ಹು-ಧಾ ಜನತೆ ಹೆಚ್ಚು ಒತ್ತು ನೀಡುತ್ತಾರೆ. ಎಲ್ಲಾ ಹಬ್ಬಗಳನ್ನು ಎಲ್ಲಾ ಧರ್ಮೀಯರು ಆಚರಣೆ ಮಾಡುವ ಸಂದರ್ಭದಲ್ಲಿ ಶಾಂತಿಗೆ ಭಂಗ ತರುವಂತ ಕೆಲಸಗಳು ನಡೆಯುವುದಿಲ್ಲ. ರಾಜ್ಯಕ್ಕೆ ಹೆಸರುವಾಸಿಯಾಗಿರುವ ಇಲ್ಲಿನ ಗಣೇಶ ಹಬ್ಬವನ್ನು ಎಲ್ಲರೂ ಸೇರಿಕೊಂಡು ಶಾಂತಿ ಸಂಭ್ರಮದಿಂದ ಆಚರಿಸೋಣ
ಎಂದರು. ಧರ್ಮಗುರುಗಳಾದ ತಾಜುದ್ಧೀನ್‌ ಖಾದ್ರಿ, ಗ್ಯಾನಿ ಸಿಂಗ್‌, ಎಸ್‌.ಎಚ್‌. ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ತಹಶೀàಲ್ದಾರ ಶಶಿಧರ ಮಾಡ್ಯಾಳ, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಇಸ್ಮಾಯಿಲ್‌ಸಾಬ್‌ ಕಾಲೆಬುಡ್ಡೆ, ಮುಖಂಡರಾದ ನೀಲಕಂಠ ಜಡಿ, ಮಹೇಂದ್ರ ಸಿಂ , ಪಿತಾಂಬ್ರಪ್ಪ ಬಿಳಾರ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮುಖಂಡರು ಸೇರಿದಂತೆ ವಿವಿಧ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next