Advertisement

10ರಂದು ಅಘನಾಶಿನಿ ಉಳಿಸಿ ಸಮಾವೇಶ

10:53 AM Jul 07, 2019 | Suhan S |

ಶಿರಸಿ: ಅಘನಾಶಿನಿ ಕಣಿವೆ ಅರಣ್ಯಗಳನ್ನು ಶಿವಮೊಗ್ಗದ ಶರಾವತಿ ಅಭಯಾರಣ್ಯಕ್ಕೆ ಸೇರಿಸಿರುವ ಸರಕಾರದ ಆದೇಶ ರದ್ದುಪಡಿಸಲು ಆಗ್ರಹಿಸಿ ಅಘನಾಶಿನಿ ಉಳಿಸಿ ಸಮಾವೇಶ ಸಿದ್ದಾಪುರ ತಾಲೂಕಿನ ನೆಲೆಮಾವು ಮಠದ ಸಭಾಭವನದಲ್ಲಿ ಜು.10ರ ಮಧ್ಯಾಹ್ನ 3ಕ್ಕೆ ಆಯೋಜಿಸಲಾಗಿದೆ.

Advertisement

ಅಘನಾಶಿನಿ ಕಣಿವೆ ಸಂರಕ್ಷಣಾ ಹೋರಾಟ ಸಮಿತಿ, ಬೇಡ್ತಿ-ಅಘನಾಶಿನಿ ಕೊಳ್ಳ ಸಮಿತಿ, ನೆಲಮಾವು ಮಠ, ಸಿದ್ಧಿವಿನಾಯಕ ದೇವಾಲಯ ಹೇರೂರು ಇವುಗಳ ಸಹಯೋಗದಲ್ಲಿ ಸಮಾವೇಶ ನಡೆಯಲಿದೆ. ಶರಾವತಿ ಅಭಯಾರಣ್ಯಕ್ಕೆ ಅಘನಾಶಿನಿ ಅರಣ್ಯಗಳ ಸೇರ್ಪಡೆ ವಿರೋಧಿಸಿ ನಡೆಯುವ ಈ ಸಭೆ ಮುಂದಿನ ಹೋರಾಟದ ಸ್ವರೂಪ ನಿರ್ಧರಿಸಲಿದೆ. ಸಮಾವೇಶದಲ್ಲಿ ಬೇಡ್ತಿ ಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿ ಗೌರವ ಅಧ್ಯಕ್ಷ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡುವರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಕುಮಟಾ ಶಾಸಕ ದಿನಕರ ಶೆಟ್ಟಿ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಪ್ರೊ| ಬಿ.ಎಂ. ಕುಮಾರಸ್ವಾಮಿ, ಪ್ರೊ| ಸುಭಾಸ್‌ಚಂದ್ರನ್‌, ಕೇಶವ ಕೊರ್ಸೆ, ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ. ಅಘನಾಶಿನಿ ಜೊತೆ ಕಾಳಿ ಕಣಿವೆ, ಶರಾವತಿ, ಬೇಡ್ತಿ ಕಣಿವೆ ಪ್ರದೇಶದ ಹೋರಾಟದ ಪ್ರಮುಖರನ್ನೂ ಸಭೆಗೆ ಆಹ್ವಾನಿಸಲಾಗಿದೆ ಎಂದು ಅಘನಾಶಿನಿ ಕಣಿವೆ ಸಂರಕ್ಷಣಾ ಹೋರಾಟ ಸಮಿತಿ ತಿಳಿಸಿದೆ. ಇಡೀ ಪಶ್ಚಿಮ ಘಟ್ಟದಲ್ಲಿ ಭಾರೀ ವಿರೋಧ ಎದುರಿಸುತ್ತಿರುವ ಲಿಂಗನಮಕ್ಕಿ ನೀರು ಬೆಂಗಳೂರಿಗೆ ಸಾಗಿಸುವ ಯೋಜನೆ, ಬೇಡ್ತಿ-ವರದಾ, ಅಘನಾಶಿನಿ-ವರದಾ, ಅಘನಾಶಿನಿ-ಬೆಂಗಳೂರು, ಕಾಳಿ- ಘಟಪ್ರಭಾ ಮುಂತಾದ ಯೋಜನೆಗಳ ಕುರಿತೂ ಧ್ವನಿ ಎತ್ತಲಾಗುತ್ತಿದೆ ಎಂದು ಸಮಿತಿ ವಿವರಿಸಿದೆ. ಅಘನಾಶಿನಿ ಉಳಿಸಿ ಸಮಾವೇಶ ಪೂರ್ವಭಾವಿಯಾಗಿ ನಗರದಲ್ಲಿ ಪರಿಸರ ಕಾರ್ಯಕರ್ತರ ಸಭೆ ನಡೆಯಿತು. ಸಮಾವೇಶದಲ್ಲಿ ಪಾಲ್ಗೊಳ್ಳಲು ನಾಗರಿಕರಿಗೆ ಮನವಿ ಮಾಡಲಾಯಿತು. ಸಿದ್ದಾಪುರ ತಾಲೂಕಿನ ಜನಪ್ರತಿನಿಧಿಗಳು ಅಭಯಾರಣ್ಯಕ್ಕೆ ಅಘನಾಶಿನಿ ಸೇರ್ಪಡೆ ವಿರೋಧಿಸಿ ನಿರ್ಣಯ ಕೈಗೊಂಡಿದ್ದಾರೆ ಎಂದು ಹೋರಾಟ ಸಮಿತಿ ಕಾರ್ಯದರ್ಶಿ ಮಹಾಬಲೇಶ್ವರ ಹೆಗಡೆ ತಿಳಿಸಿದರು.

ಜು.10 ರ ನೆಲೆಮಾವು ಸಮಾವೇಶ ಪೂರ್ವ ಸಂಪರ್ಕ ಅಭಿಯಾನ ಸಿದ್ದಾಪುರ ತಾಲೂಕಿನ ಎಲ್ಲ ಪಂಚಾಯತಗಳಲ್ಲಿ ನಡೆಯಲಿದೆ ಎಂದು ಸಂಚಾಲಕ ಗೋಪಾಲಕೃಷ್ಣ ತಂಗಾರ್ಮನೆ ತಿಳಿಸಿದರು. ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ, ಅರಣ್ಯ ಇಲಾಖೆ ಈವರೆಗೆ ನಮ್ಮ ಅಹವಾಲಿನ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅವರನ್ನು ವೃಕ್ಷಲಕ್ಷ ನಿಯೋಗ ಭೇಟಿ ಮಾಡಿ ಅಹವಾಲು ನೀಡಿದೆ. ಅಭಯಾರಣ್ಯ ಸೇರ್ಪಡೆ ವಿಷಯವಾಗಿ ಅರಣ್ಯ-ಪರಿಸರ ಮಂತ್ರಾಲಯದ ಪ್ರಮುಖರ ಜೊತೆ ಮಾತುಕತೆ ನಡೆಸುವ ಭರವಸೆಯನ್ನು ಸಂಸದರು ನೀಡಿದ್ದಾರೆ. ಮಾಜಿ ಪರಿಸರ ಸಚಿವ ರಾಜ್ಯಸಭಾ ಸದಸ್ಯ ಜೈರಾಂ ರಮೇಶ ಅವರನ್ನು ಭೇಟಿ ಮಾಡಿ ಗಮನ ಸೆಳೆದಿದ್ದೇವೆ ಎಂದು ಅಶೀಸರ ವಿವರಿಸಿದರು.

ಪ್ರೊ| ಆರ್‌.ವಿ. ಭಾಗ್ವತ, ವಿಜ್ಞಾನಿ ಪಿ.ಆರ್‌. ಭಟ್, ವಿ.ಪಿ. ಹೆಗಡೆ, ಮಧುಮತಿ ಹೆಗಡೆ, ಈಶಣ್ಣ ನೀರ್ನಳ್ಳಿ, ಎನ್‌.ಆರ್‌. ಹೆಗಡೆ, ಗಣಪತಿ ಕೆ. ಮುಂತಾದವರು ಪಾಲ್ಗೊಂಡಿದ್ದರು. ಸಮಾವೇಶದ ಯಶಸ್ಸಿಗೆ ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next