Advertisement

15ರ ಬಳಿಕ ನಾಲೆಗೆ ನೀರು, ಕರೆ ಭರ್ತಿಗೆ ಕ್ರಮ

01:36 PM Aug 07, 2017 | Team Udayavani |

ಕೆ.ಆರ್‌.ನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆ.14ರಂದು ಕಾವೇರಿ ಕೊಳ್ಳದ ನಾಲೆಗಳಿಗೆ ನೀರು ಹರಿಸುವ ಸಂಬಂಧ ನಿರ್ಧಾರ ಕೈಗೊಳ್ಳಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಕರೆಯಲಾಗಿದೆ. 15ರ ನಂತರ ಹಾರಂಗಿ ಸೇರಿದಂತೆ ಇತರ ನಾಲೆಗಳಿಗೆ ನೀರು ಹರಿಯಬಿಡಲಾಗುತ್ತದೆ ಎಂದು ಶಾಸಕ ಸಾ.ರಾ.ಮಹೇಶ್‌ ಭರವಸೆ ನೀಡಿದರು.

Advertisement

ತಾಲೂಕಿನ ಚನ್ನಂಗೆರೆ ಗ್ರಾಪಂ ವ್ಯಾಪ್ತಿಯ ಚಿಕ್ಕಹನಸೋಗೆ, ಎರೆಮನುಗನಹಳ್ಳಿ, ಸಣ್ಣೇಗೌಡನಕೊಪ್ಪಲು, ಬಂಡಹಳ್ಳಿ ಮತ್ತು ಕೋಳೂರು ಗ್ರಾಮಗಳಲ್ಲಿ ತಾಲೂಕು ಅಧಿಕಾರಿಗಳೊಂದಿಗೆ ತೆರಳಿ ಶನಿವಾರ ಜನಸ್ಪಂದನಾ ಸಭೆ ನಡೆಸಿ ಅವರು ಮಾತನಾಡಿದರು. ನಾಲೆಗಳಿಗೆ ನೀರು ಹರಿಸಿದ ನಂತರ ಕೆರೆ ಕಟ್ಟೆಗಳನ್ನು ತುಂಬಿಸಲು ಆದ್ಯತೆ ನೀಡಲಿದ್ದು, ರೈತರು ಮತ್ತು ಸಾರ್ವಜನಿಕರು ನೀರಿನ ಲಭ್ಯತೆಯ ಆಧಾರದ  ಮೇಲೆ ಕೃಷಿ ಚಟುವಟಿಕೆ ಕೈಗೊಳ್ಳಬೇಕೆಂದು ಮನವಿ ಮಾಡಿದರು.

200 ಹಳ್ಳಿಗಳಿಗೆ ಶುದ್ಧ ನೀರು: ಕಳೆದ 9 ವರ್ಷಗಳಿಂದ ತಾನು ಶಾಸಕನಾಗಿ ಕೆಲಸ ನಿರ್ವಹಿಸುತ್ತಿದ್ದು,  ಈ ಅವಧಿಯಲ್ಲಿ ತಾಲೂಕಿನಲ್ಲಿ 200 ಗ್ರಾಮಗಳಿಗೆ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಲಾಳಂದೇವನಹಳ್ಳಿ ಮತ್ತು ಚನ್ನಂಗೆರೆ ಗ್ರಾಪಂ ವ್ಯಾಪ್ತಿಯ ಹಳ್ಳಿಗ‌ಳಿಗೆ ನೀರು ಸರಬರಾಜು ಮಾಡುವ ಕಾಮಗಾರಿಗಳಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತು ಹಣ ಬಿಡುಗಡೆಯಾಗಿದೆ.

ಈ ಎರಡು ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳು ಪೂರ್ಣಗೊಂಡರೆ ರಾಜ್ಯದಲ್ಲಿಯೇ ನದಿಯಿಂದ ನೀರು ಸರಬರಾಜು ಮಾಡುವ  ಹೆಗ್ಗಳ್ಳಿಕೆಗೆ ಕೆ.ಆರ್‌.ನಗರ ತಾಲೂಕು ಪಾತ್ರವಾಗಲಿದೆ ಎಂದು ತಿಳಿಸಿದರು. ಚನ್ನಂಗೆರೆ ಗ್ರಾಮಕ್ಕೆ 12 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, 30 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪರಿಮಿತಿಯಲ್ಲಿ ರಸ್ತೆಗಳ ಅಭಿವೃದ್ಧಿ ಹಾಗೂ ದೇವಾಲಯದ ಜೀರ್ಣೋದ್ಧಾರಕ್ಕೆ 10 ಲಕ್ಷ ರೂ, ನೀಡುವುದಾಗಿ ಘೋಷಿಸಿದರು.

ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ಇಲ್ಲದಿದ್ದರೂ ಉತ್ತಮ ಕೆಲಸ ಮಾಡಿದ ತೃಪ್ತಿ ತನಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಎರಡು ರೈತ ಕುಟುಂಬಗಳಿಗೆ ಸರ್ಕಾರದ ವತಿಯಿಂದ ನೀಡಲಾದ ಪರಿಹಾರ ಚೆಕ್‌ಗಳನ್ನು ವಿತರಿಸಿದರು. ಸಾರ್ವಜನಿಕರ ಅಹವಾಲು ಆಲಿಸಿ, ಅವುಗಳ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಆದೇಶಿಸಿದರು.

Advertisement

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ತಾರಕೇಶ್ವರಿ, ಸದಸ್ಯರಾದ ಮಲ್ಲಿಕಾರ್ಜುನ, ಮಂಜುನಾಥ್‌, ಟಿಎಪಿಸಿಎಂಎಸ್‌ ನಿರ್ದೇಶಕ ಎಸ್‌.ಟಿ.ಕೀರ್ತಿ, ತಾಪಂ ಸದಸ್ಯೆ ಸುನಿತಾ, ಸಹಕಾರ ಸಂಘದ ಮಾಜಿ ನಿರ್ದೇಶಕ ಸಿ.ಕೆ.ಜಗದೀಶ್‌, ಮುಖಂಡರಾದ ಬಸವರಾಜಪ್ಪ, ಗಂಗಾಧರ್‌, ತಹಶೀಲ್ದಾರ್‌ ಜಿ.ಎಚ್‌.ನಾಗರಾಜು, ಸಹಾಯಕ ಕೃಷಿ ನಿರ್ದೇಶಕ ರಂಗರಾಜು, ಬಿಇಒ ಎಂ.ರಾಜು, ಆಹಾರ ನಿರೀಕ್ಷಕ ಹನುಮಂತೇಗೌಡ, ಅಬಕಾರಿ ನಿರೀಕ್ಷಕಿ ರಮ್ಯಾ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಮೇಶ್‌, ಸತ್ಯನಾರಾಯಣ್‌, ಅರ್ಕೇಶ್ವರ್‌, ರಾಜಸ್ವ ನಿರೀಕ್ಷಕ ಕೋಟೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ ಇತರ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕೆಲಸ ಮಾಡದ ಅಧಿಕಾರಿಗಳಿಗೆ ಜಾಗವಿಲ್ಲ
ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸ್ವತ್ಛತೆ ಕಾಪಾಡಿ, ಮೂಲಭೂತ ಸವಲತ್ತು ಒದಗಿಸಬೇಕು. ಇಲ್ಲದಿದ್ದರೆ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಜನಸೇವೆ ಮಾಡದ ಅಧಿಕಾರಿಗಳಿಗೆ ತಾಲೂಕಿನಲ್ಲಿ ಜಾಗವಿಲ್ಲ ಎಂದು ಶಾಸಕ ಸಾ.ರಾ.ಮಹೇಶ್‌ ತರಾಟಗೆ ತೆಗೆದುಕೊಂಡರು.

ಶಾಸಕರು ಚನ್ನಂಗೆರೆ ಗ್ರಾಮಕ್ಕೆ ಆಗಮಿಸಿದಾಗ, ಪಿಡಿಒ ಅವಿನಾಶ್‌ ವಿರುದ್ಧ ದೂರುಗಳ ಸುರಿಮಳೆಗೈದು ಸಕಾಲಕ್ಕೆ ಕಚೇರಿಗೆ ಆಗಮಿಸುತ್ತಿಲ್ಲ. ಗ್ರಾಮದಲ್ಲಿ ನೈರ್ಮಲ್ಯ ಕೊರತೆಯಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ಇದರಿಂದ ಕೆಂಡಾಮಂಡಲರಾದ ಶಾಸಕ ಸಾ.ರಾ.ಮಹೇಶ್‌,  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ ನಾಳೆಯಿಂದಲೇ ಚನ್ನಂಗೆರೆ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವತ್ಛತಾ ಕಾರ್ಯಗಳನ್ನು ಕೈಗೊಂಡು ತಮಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು. ಜೊತೆಗೆ ಸ್ಥಳದಲ್ಲಿದ್ದ ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸಿ.ಚಂದ್ರು ಅವರಿಗೆ ಈ ಸಂಬಂಧ ಗಮನಹರಿಸಬೇಕೆಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next