Advertisement

ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ

03:09 PM Dec 24, 2020 | Suhan S |

ಗದಗ: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮಂಗಳವಾರ ನಡೆದ ಮೊದಲನೇ ಹಂತದ ಗ್ರಾ.ಪಂ. ಚುನಾವಣೆಯಲ್ಲಿ ಒಟ್ಟು 1,96,863 ಮತದಾರರು ಹಕ್ಕು ಚಲಾಯಿಸಿದ್ದು, ಶೇ.79.43 ರಷ್ಟು ಮತದಾನ ದಾಖಲಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 2216 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಗ್ರಾಮೀಣ ಭಾಗದಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

Advertisement

ಜಿಲ್ಲೆಯ 3 ತಾಲೂಕುಗಳಲ್ಲಿ 1,25,209 ಪುರುಷರು, 1,22,625 ಮಹಿಳೆಯರು ಸೇರಿದಂತೆಒಟ್ಟು 2,47,834 ಮತದಾರರಿದ್ದಾರೆ. ಈ ಪೈಕಿ ಗದಗ ತಾಲೂಕಿನಲ್ಲಿ 54,819 ಪುರುಷರು,51,347 ಮಹಿಳೆಯರು ಸೇರಿ 1,06,166 ಜನ ಮತ ಚಲಾಯಿಸಿದ್ದಾರೆ. ಲಕ್ಷ್ಮೇಶ್ವರದಲ್ಲಿ 22,040 ಪುರುಷರು, 20,442 ಮಹಿಳೆಯರು ಸೇರಿ 42,482, ಶಿರಹಟ್ಟಿಯಲ್ಲಿ 25,139 ಪುರುಷರು, 23,076 ಮಹಿಳೆಯರು ಸೇರಿ 48,215 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆಯಾಗಿ 1,96,863 ಮಂದಿಮತದಾನ ಮಾಡಿದ್ದಾರೆ. ಇದು ಕಳೆದ ಬಾರಿಗಿಂತ ಶೇ.76 ರಷ್ಟು ಮತದಾನ ದಾಖಲಾಗಿದ್ದು, ಈ ಬಾರಿಶೇ.4 ರಷ್ಟು ಹೆಚ್ಚಿದೆ ಎನ್ನಲಾಗಿದೆ. ಮತದಾನದಬಳಿಕ ಆಯಾ ತಾಲೂಕಿನ ಸ್ಟ್ರಾಂಗ್‌ ರೂಂಗಳಲ್ಲಿ ಮತಪೆಟ್ಟಿಗೆಗಳನ್ನು ಭದ್ರಪಡಿಲಾಗಿದೆ.

ಅಭ್ಯರ್ಥಿಗಳ ತೀರ್ಥಯಾತ್ರೆ: ಗ್ರಾ.ಪಂ. ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ಪಂಚಾಯತಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದಅಭ್ಯರ್ಥಿಗಳು ಹಾಗೂ ಮುಖಂಡರು ಚುನಾವಣೆ ಮುಗುಯುತ್ತಿದ್ದಂತೆ ಕೆಲವರು ಧರ್ಮಸ್ಥಳ, ಬದಾಮಿ ಬನಶಂಕರಿ, ಸವದತ್ತಿ ಯಲ್ಲಮ್ಮದೇಗುಲಗಳತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿಯ ಪಂಚಾಯಿತಿ ಚುನಾವಣೆಯಲ್ಲಿ ವಿಜಯ ಮಾಲೆಗಾಗಿ ದೇವರಲ್ಲಿ ಪ್ರಾರ್ಥಿಸಿ, ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇನ್ನೂ ಕೆಲವರು ಮನೆಯಲ್ಲೇ ಉಳಿದುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಂಬಲಿತ ಪಕ್ಷಗಳ ನಾಯಕರ ಬಳಿಗೆ ತೆರಳಿ, ಚುನಾವಣೆ ಹಾಗೂ ಮತದಾನದ ವರದಿ ಒಪ್ಪಿಸುತ್ತಿದ್ದಾರೆ.

ಸೋಲು-ಗೆಲುವಿನ ಲೆಕ್ಕಾಚಾರ: ಮೊದಲ ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗೆ ಮತದಾನ ಪ್ರಕ್ರಿಯ ಪೂರ್ಣಗೊಳ್ಳುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ತಮ್ಮ ಗ್ರಾ.ಪಂ.ಗಳಿಗೆ ಸ್ಪ ರ್ಧಿಸಿರುವ ಅಭ್ಯರ್ಥಿಗಳ ಸೋಲು- ಗೆಲುವಿನ ಚರ್ಚೆ ಜೋರಾಗಿದೆ. ಗ್ರಾಮದ ದೇವಸ್ಥಾನಗಳ ಜಗುಲಿ, ಅರಳಿ ಮರದ ಕಟ್ಟೆ, ಬಸ್‌ ನಿಲ್ದಾಣ ಹಾಗೂ ಚಹ ಅಂಗಡಿಗಳಲ್ಲಿ ಹಳ್ಳಿ ರಾಜಕೀಯದ ಫಲಿತಾಂಶದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ.

ಇನ್ನೂ ಕೆಲವರು ಅಭ್ಯರ್ಥಿಗಳು ಬೆಂಬಲಿತ ಪಕ್ಷ, ಜಾತಿ ಹಾಗೂ ಸ್ಥಳೀಯ ಪ್ರಭಾವವನ್ನು ಆಧರಿಸಿ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ತಮ್ಮ ನೆಚ್ಚಿನಅಭ್ಯರ್ಥಿ ಹಾಗೂ ಎದುರಾಳಿ ಪರ ಆಗಿರಬಹುದಾದಮತಗಳನ್ನು ಕೂಡಿಸಿ, ಕಳೆದು, ಗುಣಿಸಿ, ಭಾಗಿಸುವಸಂಖ್ಯಾಶಾಸ್ತ್ರದ ಪರಿಣಿತಿಯನ್ನು ಪ್ರದರ್ಶಿಸುತ್ತಿದ್ದಾರೆ.ಅದರೊಂದಿಗೆ ನೆಚ್ಚಿನ ಅಭ್ಯರ್ಥಿಗಳ ಪರ 100, 500 ರೂ. ಪಣಕ್ಕಿಟ್ಟು, ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

Advertisement

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next