Advertisement

ಅವಶೇಷ ಮೇಲೆತ್ತದಿದ್ದರೆ ಮತ್ತೆ ಅಪಾಯ!

08:38 AM Dec 04, 2020 | Suhan S |

ಮಹಾನಗರ, ಡಿ. 3: ಮಂಗಳೂರಿನಲ್ಲಿ ಸಂಭವಿಸಿದ ಬೋಟ್‌ ದುರಂತ ಪ್ರಕರಣದಂತೆ, ಈ ಹಿಂದೆಯೂ ವಿವಿಧ ಕಾರಣಗಳಿಂದ ಮುಳು ಗಡೆಯಾದ ಬೋಟ್‌ಗಳ ಪೈಕಿ ಕೆಲವು ಬೋಟ್‌ಗಳನ್ನು ಮಾತ್ರ ಸಮುದ್ರದಿಂದ ತೆಗೆಯಲಾಗಿದ್ದು, ಉಳಿದ ಹಲವು ಬೋಟ್‌ಗಳು ಇನ್ನೂ ನೀರಿನಲ್ಲಿಯೇ ಬಾಕಿಯಾಗಿವೆ.  ಇದರಿಂದಾಗಿ ಸದ್ಯ ಮೀನುಗಾರಿಕೆ ನಡೆಸುತ್ತಿರುವ ಇತರ ಬೋಟ್‌ಗಳಿಗೆ ಅಪಾಯ ಎದುರಾಗುತ್ತಿದೆ.

Advertisement

ಮಂಗಳೂರಿನ ಮೀನುಗಾರಿಕ ಮುಖಂಡರು ಹೇಳುವ ಪ್ರಕಾರ ದಕ್ಕೆಯ ಸುತ್ತ-ಮುತ್ತಲಿನ ಕಡಲಿನಲ್ಲಿ ಸುಮಾರು 10ಕ್ಕೂ ಅಧಿಕ ಬೋಟ್‌ಗಳು ಇನ್ನೂ ನೀರಿನಲ್ಲಿಯೇ ಇವೆ. ಕಡಲಿನ ಆಳಕ್ಕೆ ಹೋಗಿರುವ ಇಂತಹ ಬೋಟ್‌ಗಳ ತೆರವು ಕಾರ್ಯಾಚರಣೆ ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ಹೀಗಾಗಿ ಸದ್ಯ ಮೀನುಗಾರಿಕೆ ನಡೆಸುತ್ತಿರುವ ಬೋಟ್‌ಗಳ ಸಂಚಾರಕ್ಕೆ ಸಂಚಕಾರ ಎದುರಿಸುವಂತಾಗಿದೆ. ಒಂದು ವರ್ಷದಲ್ಲಿ ಸುಮಾರು 12 ಬೊಟ್‌ಗಳು ಮಂಗಳೂರು ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಮುಳು ಗಡೆಯಾಗಿದ್ದು, ಈ ಪೈಕಿ ಎಲ್ಲವನ್ನೂ ನೀರಿನಿಂದ ತೆಗೆಯಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ. ಆದರೆ ಕೆಲವು ಬೋಟ್‌ಗಳು ಇನ್ನೂ ನೀರಲ್ಲಿ ಇದೆ ಎಂದು ಮೀನುಗಾರರು ಆಪಾದಿಸುತ್ತಿದ್ದಾರೆ. ಬೋಟ್‌ಗಳಿಗೆ ವಿಮೆ ಸೌಲಭ್ಯ ಇದ್ದರೂ ಬೋಟ್‌ ತೆರವು ಮಾಡುವ ವೆಚ್ಚ  ದುಬಾರಿ ಆಗುವ ಕಾರಣದಿಂದ ಬಹುತೇಕ ಬೋಟ್‌ಗಳು ನೀರಿನಲ್ಲಿಯೇ ಬಾಕಿಯಾಗಿವೆ ಎಂಬ ದೂರು ಕೇಳಿ ಬಂದಿದೆ.

ಬೋಟ್‌ಗಳು ಮುಳುಗಡೆಯಾಗಿರುವ ಪ್ರದೇಶ ವನ್ನು ಜಿಪಿಎಸ್‌ ಆಧಾರಿತವಾಗಿ ಮೀನುಗಾರಿಕೆ ಇಲಾಖೆ, ಮೀನುಗಾರ ಸಂಘಟನೆಗಳು ಗುರುತಿಸಿಕೊಂಡಿದ್ದು, ಬೋಯಿ ಎಂಬ ಸಾಧನವನ್ನು ಗುರುತಿಗಾಗಿ ಇರಿಸಲಾಗುತ್ತದೆ. ಇದರ ಆಧಾರದಲ್ಲಿ ಬೋಟ್‌ ಮುಳುಗಡೆಯಾದ ಪ್ರದೇಶಗಳಿಗೆ ತೆರಳದಂತೆ ಮುನ್ನೆಚ್ಚರಿಕೆ ವಹಿ ಸಲಾಗುತ್ತದೆ. ಆದರೂ ಕಡಲಿನಲ್ಲಿ ಹವಾಮಾನ ವೈಪರೀತ್ಯ ಸಹಿತ ವಿವಿಧ ಸಮಸ್ಯೆ ಎದುರಾದಾಗ ಮುಳುಗಡೆಯಾದ ಬೋಟ್‌ಗಳಿಂದ ಸಮಸ್ಯೆ ಆಗುತ್ತದೆ. ಜತೆಗೆ ಮುಳುಗಡೆಯಾದ ಬೋಟ್‌ ಸುತ್ತಮುತ್ತ ಹೆಚ್ಚಿನ ಮೀನು ಇರುವಾಗ ಅದನ್ನು ಬಲೆ ಹಾಕಿ ಪಡೆಯಲೂ ಮೀನುಗಾರರಿಗೆ ಸಾಧ್ಯವಾಗುತ್ತಿಲ್ಲ ಎಂದು ಮೀನುಗಾರ ಮುಖಂಡ ಮೋಹನ್‌ ಬೆಂಗ್ರೆ ತಿಳಿಸಿದ್ದಾರೆ.

ಈ ಮಧ್ಯೆ ದಕ್ಕೆ, ಬೆಂಗ್ರೆ ವ್ಯಾಪ್ತಿಯ ನದಿಯಲ್ಲಿ ಹಲವು ಮೀನುಗಾರಿಕೆ ಬೋಟ್‌ಗಳನ್ನು ಹಲವು ವರ್ಷಗಳಿಂದ ನಿಲ್ಲಿಸಿರುವ ಪರಿಣಾಮ ಇತರ ಬೋಟ್‌ಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ಅಳಿವೆ ಬಾಗಿಲು ಎಂಬ ಅಪಾಯ! :

Advertisement

ಮೀನುಗಾರಿಕೆ ದೋಣಿಗಳ ಸಂಚಾರ, ಲಕ್ಷ ದ್ವೀಪಕ್ಕೆ ಮಿನಿ ಹಡಗುಗಳ ಸಂಚಾರಕ್ಕೆ ಮಂಗಳೂರು ಬಂದರಿನ ಅಳಿವೆಬಾಗಿಲಿನಲ್ಲಿ ತುಂಬಿರುವ ಬೃಹತ್‌ ಪ್ರಮಾಣದ ಹೂಳು ಬಹಳಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಇಲ್ಲಿ ಹಲವು ಅವಘಡಗಳು ಸಂಭವಿಸಿವೆ.  ಇಲ್ಲಿಯೂ ಕೆಲವು ಬೋಟ್‌ ಮುಳುಗಡೆ ಯಾಗಿತ್ತು. ಅವುಗಳನ್ನು ತೆರವು ಮಾಡಲಾಗಿದೆ ಎಂದು ಹೇಳುತ್ತಿದ್ದರೂ ಪೂರ್ಣ ತೆರವು ಆಗಿಲ್ಲ ಎನ್ನಲಾಗಿದೆ.

ಮುಳುಗಿದ ಪ್ರಮುಖ ಹಡಗುಗಳು :

ಇರೀಟ್ರಿಯಾ ದೇಶದ “ಡೆನ್‌ ಡೆನ್‌’ ಹಡಗು 2007 ಜೂ. 23ರಂದು ನವಮಂಗಳೂರು ಬಂದರಿನಿಂದ ಹೊರಟು ತಣ್ಣೀರುಬಾವಿ ಬಳಿ ಅಪಾಯಕ್ಕೆ ಸಿಲುಕಿ ಮುಳುಗಡೆಯಾಗಿತ್ತು. 2008 ಜು. 17ರಂದು ನವಮಂಗಳೂರು ಬಂದರಿನಿಂದ ಹೊರಟಿದ್ದ ಇತಿಯೋಪಿಯಾದ “ಏಶಿಯನ್‌ ಫಾರೆಸ್ಟ್‌’ ಹಡಗು ತಣ್ಣೀರುಬಾವಿ ಕಡೆಗೆ ಚಲಿಸಿ ಅಪಾಯಕ್ಕೆ ಸಿಲುಕಿ ಮರುದಿನ (ಜು. 18) ಅರಬಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. 2017ರಲ್ಲಿ ಆಂಧ್ರಪ್ರದೇಶ ಮೂಲದ “ಧರ್ತಿ’ ಕಂಪೆನಿಗೆ ಸೇರಿದ ಬಾರ್ಜ್‌ ಅನ್ನು ಉಳ್ಳಾಲಕ್ಕೆ ತರಿಸಲಾಗಿತ್ತು. ಅಲೆಗಳ ಹೊಡೆತಕ್ಕೆ ಬಾರ್ಜ್‌ ಸಮುದ್ರದೊಳಗೆ ಮುಳುಗಿತ್ತು.

ತೆರವಿಗೆ ಕ್ರಮ : ಬೋಟ್‌ ತೆರವಿಗೆ ಸಂಬಂಧಿಸಿ ವಿಶೇಷ ಕ್ರಮ ವಹಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಡಿ. 1ರಂದು ಮುಳುಗಡೆಯಾದ ಬೋಟ್‌ ತೆರವಿಗೆ ಸಂಬಂಧಿಸಿ ಸೋಮೇಶ್ವರದಲ್ಲಿ ಎಡಿಬಿ ಕಾಮಗಾರಿ ನಡೆಸುತ್ತಿರುವ ಬಾರ್ಜ್‌, ಕ್ರೇನ್‌ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುವುದು. -ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next