Advertisement

ಕಾನೂನು, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ ಪದವಿ ಪಡೆದ ಜೈಲು ಹಕ್ಕಿ

01:32 AM Apr 16, 2019 | mahesh |

ಸುಬ್ರಹ್ಮಣ್ಯ: ಕೊಲೆ ಆರೋಪಕ್ಕೆ ಗುರಿಯಾದ ವ್ಯಕ್ತಿಯೋರ್ವ ಜೈಲು ಪಾಲಾಗಿ, ಕಂಬಿನ ಹಿಂದೆಯೇ ಓದಿ ಕಾನೂನು ಪದವಿ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದು ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಂಡು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. 1996ರಲ್ಲಿ ಗುತ್ತಿಗಾರು ಪೇಟೆಯಲ್ಲಿ ನ್ಯಾಯವಾದಿ ಶಿವಪ್ರಸಾದ್‌ ಮುಂಡೋಡಿ ಅವರಿಗೆ ಚೂರಿ ಇರಿದು ಕೊಲೆ ಮಾಡಿದ ಆರೋಪದಲ್ಲಿ ಗುತ್ತಿಗಾರಿನ ಛತ್ರಪ್ಪಾಡಿ ನಿವಾಸಿ ಬಾಲಪ್ಪ ಗೌಡ ಹಾಗೂ ಅವರ ಮಗ ಪದ್ಮನಾಭ ಛತ್ರಪ್ಪಾಡಿ ಜೈಲು ಸೇರಿದ್ದರು.

Advertisement

ಅಡಿಕೆ ಜಗಳ ಕೊಲೆಯಲ್ಲಿ ಅಂತ್ಯ
ಶಿವಪ್ರಸಾದ್‌ ಮುಂಡೋಡಿ ಮತ್ತು ಅವರ ಸಹೋದರ ಶಿವಾನಂದ ಮುಂಡೋಡಿ ಅವರ ಮಧ್ಯೆ ಅಡಿಕೆಯ ವ್ಯವಹಾರದಲ್ಲಿ ತಕರಾರಿತ್ತು. ಇವು ಸಣ್ಣ ಪುಟ್ಟ ಜಗಳಕ್ಕೆ ಕಾರಣವಾಗಿತ್ತು. ಸರಕಾರಿ ಅಭಿಯೋಜಕರಾಗಿದ್ದ ಶಿವಾನಂದ ಮುಂಡೋಡಿಯವರ ಕೃಷಿ ತೋಟದ ಉಸ್ತುವಾರಿಯನ್ನು ಛತ್ರಪ್ಪಾಡಿ ಪದ್ಮನಾಭ ಅವರ ತಂದೆ ಬಾಲಪ್ಪ ಗೌಡ ಅವರು ನೋಡಿಕೊಳ್ಳುತ್ತಿದ್ದರು. ಅಡಿಕೆ ಮಾರಾಟದ ವ್ಯವಹಾರವನ್ನು ಬಾಲಪ್ಪ ಗೌಡರಿಗೆ ಶಿವಾನಂದ ಮುಂಡೋಡಿ ವಹಿಸಿದ್ದರು. ಅಡಿಕೆ ವ್ಯವಹಾರದಲ್ಲಿ ಸಹೋದರರಲ್ಲಿ ಮನಸ್ತಾಪ ಉಂಟಾಗಿತ್ತು. ಬಾಲಪ್ಪ ಅಡಿಕೆ ಮಾರಾಟ ಮಾಡಿ ಬರುವ ವೇಳೆ ಶಿವಪ್ರಸಾದ್‌ ಮುಂಡೋಡಿ ಮತ್ತು ಬಾಲಪ್ಪ ಗೌಡರ ಮಧ್ಯೆ ಮಾತಿನ ಚಕಮಕಿ ನಡೆದು ಹೊಡೆದಾಟವಾಗಿತ್ತು. ಅನಂತರ ಗುತ್ತಿಗಾರು ಪೇಟೆಯಲ್ಲೂ ಬಾಲಪ್ಪ ಮತ್ತು ಶಿವಪ್ರಸಾದ್‌ ಮಧ್ಯೆ ಹೊಡೆದಾಟ ನಡೆಯುವ ಹಂತದಲ್ಲಿ ಪದ್ಮನಾಭ ಛತ್ರಪ್ಪಾಡಿಯವರು ತಡೆದಿದ್ದರು. ಈ ವೇಳೆ ಬಾಲಪ್ಪ ಗೌಡರು ತನ್ನಲ್ಲಿದ್ದ ಚೂರಿಯಿಂದ ಶಿವಪ್ರಸಾದ್‌ರಿಗೆ ಇರಿದಿದ್ದರು. ಪರಿಣಾಮ ಶಿವಪ್ರಸಾದ್‌ ಅವರು ಸ್ಥಳದಲ್ಲೆ ಸಾವಿಗೀಡಾಗಿದ್ದರು.

ಅಡೆತಡೆ ಮೆಟ್ಟಿ ಬಂದರು
16 ವರ್ಷಗಳಿಂದ ಕಂಬಿಯ ಹಿಂದೆ ಜೀವನ ಸಾಗಿಸಿಕೊಂಡುವುದರ ಜತೆಗೆ ಕಾನೂನು ಪದವಿ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಸುಳ್ಯ ಗುತ್ತಿಗಾರಿನ ಛತ್ರಪಾಡಿಯ ಪದ್ಮನಾಭ ಅವರು ಸನ್ನಢತೆಯ ಆಧಾರದಲ್ಲಿ ಬಿಡುಗಡೆ ಹೊಂದಿದರು. ಹಲವು ಅಡೆತಡೆ ಬಂದರೂ ಮೇಲಾಧಿಕಾರಿಗಳ ಮತ್ತು ಕೋರ್ಟ್‌ ಸಹಾಯದಿಂದ ಎದುರಿಸಿ ಪದವಿಯನ್ನು ಪೂರ್ಣಗೊಳಿಸಿದರು. ಇದಕ್ಕೆಲ್ಲ ಅವರಿಗೆ ನೆರವಾಗಿದ್ದು ನಿವೃತ್ತ ಅಂಚೆಪಾಲಕ ನಂದರಾಜ್‌ ಸಂಕೇಶ ಅವರು.

ಉತ್ತಮ ನಾಟಕ ಕಲಾವಿದ
ಪದ್ಮನಾಭ ಅವರು ಜೈಲು ಹಕ್ಕಿಗಳಿಗೆ ನಡೆದ ನಾಟಕದಲ್ಲಿ ಅಭಿನಯಿಸಿದ್ದು, ಅವರ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. 16 ವರ್ಷದ ಬಳಿಕ ಜೈಲಿನಿಂದ ಬಿಡುಗಡೆಗೊಂಡಿರುವ ಪದ್ಮನಾಭ ಅವರು ಗುತ್ತಿಗಾರಿನಲ್ಲಿ ಕೃಷಿ, ಸೊದ್ಯೋಗ ಇತ್ಯಾದಿ ಕೆಲಸ-ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಬಾಲಾಪರಾಧಿಯಾಗಿದ್ದರು
ಪ್ರಕರಣದಲ್ಲಿ ಬಾಲಪ್ಪ ಗೌಡ ಮತ್ತು ಅವರ ಮಗ ಪದ್ಮನಾಭ ಛತ್ರ ಪ್ಪಾಡಿ ಕೊಲೆ ಆರೋಪದ ಮೇಲೆ ಬಂಧನಕ್ಕೊಳಗಾದರು. ಈ ಸಂದ‌ರ್ಭ ಪದ್ಮನಾಭ ಛತ್ರಪ್ಪಾಡಿ ಬಾಲಾಪಾರಾಧಿಯಾಗಿದ್ದು, 17 ವರ್ಷ ವಯಸ್ಸಾಗಿತ್ತು. ಪದ್ಮನಾಭ ಅವರು ಮತ್ತು ಅವರ ತಂದೆ ಜೈಲು ಶಿಕ್ಷೆ ಅನುಭವಿಸಿದ ವೇಳೆ ಪದ್ಮನಾಭ ಛತ್ರಪ್ಪಾಡಿ ಅವರಿಗೆ ಜಾಮೀನು ಸಿಕ್ಕಿತ್ತು. ಅನಂತರದ ದಿನಗಳಲ್ಲಿ ಅವರ ಆರೋಪ ಸಾಬೀತಾಗಿ 4ವರ್ಷದ ಬಳಿಕ ಪದ್ಮನಾಭ ಛತ್ರಪ್ಪಾಡಿ ಮತ್ತೆ ಜೈಲು ಸೇರಿದರು. ಈ ಮಧ್ಯೆ ತಂದೆ ಬಾಲಪ್ಪ ಗೌಡರು ಹಿರಿಯರ ವಯಸ್ಸಿನ ಸನ್ನಢತೆ ಆಧಾರದಲ್ಲಿ ಬಿಡುಗಡೆಗೊಂಡು ಅನಂತರ ನಿಧನ ಹೊಂದಿದರು.

Advertisement

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next