Advertisement

ತೊಗರಿ ಬೆಳೆಗೆ ಗೊಡ್ಡು ರೋಗದ ಬಾಧೆ

11:38 AM Jan 05, 2022 | Team Udayavani |

ಜೇವರ್ಗಿ: ತಾಲೂಕಿನ ಹಲವೆಡೆ ತೊಗರಿ ಬೆಳೆಗೆ ಗೊಡ್ಡು ರೋಗದ ಬಾಧೆ ಕಾಣಿಸಿಕೊಂಡಿದ್ದು, ರೈತಾಪಿ ವರ್ಗ ಮತ್ತೆ ಆತಂಕ ಎದುರಿಸುವಂತಾಗಿದೆ.

Advertisement

ಈ ಹಿಂದೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಲ್ಲದೇ ಕಳೆದ ವರ್ಷದ ಭೀಮಾನದಿಯ ಭೀಕರ ಪ್ರವಾಹ ಸಾವಿರಾರು ರೈತರ ಬದುಕು ಬೀದಿಗೆ ತಂದು ನಿಲ್ಲಿಸಿದೆ.

ಪ್ರಸಕ್ತ ವರ್ಷ ಸುರಿದ ಮಳೆಯಿಂದ ಕೂಡ ಸಾಕಷ್ಟು ಬೆಳೆಹಾನಿಯಾಗಿದೆ. ಈಗ ಅಳಿದುಳಿದ ಬೆಳೆಗೂ ಗೊಡ್ಡು ರೋಗದ ಬಾಧೆ ಆವರಿಸಿಕೊಂಡಿದೆ. ಹೀಗಾಗಿ ತಾಲೂಕಿನಲ್ಲಿ ತೊಗರಿ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ. ಸಾವಿರಾರು ರೂ. ಖರ್ಚು ಮಾಡಿ ಬೆಳೆಯಲಾಗಿರುವ ಬೆಳೆಯು ವಿವಿಧ ಕಾರಣಗಳಿಂದ ಹಾಳಾಗುತ್ತಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲೂಕಿನ ರೇವನೂರ ಗ್ರಾಮದ ಬಳಿಯ ಅಬ್ದುಲ್‌ ಹಮೀದ್‌ ರಜಾಕಸಾಬ್‌ ಇನಾಂದಾರ ಎಂಬುವರು ರದ್ದೇವಾಡಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಳೆದ 2021ರ ಜೂನ್‌ 25ರಂದು 30 ಕೆಜಿ ತೊಗರಿ ಬೀಜ ಟಿಎಸ್‌-3 ಆರ್‌ ಖರೀದಿ ಮಾಡಿ 7.12 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಕೆವಿಕೆಯಿಂದ ಪಡೆದ ಬೀಜ ಬಿತ್ತನೆ ನಂತರ ಬೆಳೆಗೆ ಸಂಪೂರ್ಣ ಗೊಡ್ಡು ರೋಗದ ಬಾಧೆ ತಗುಲಿದೆ. 5 ರಿಂದ 6 ಅಡಿ ತೊಗರಿ ಗಿಡ ಬೆಳೆದರೂ ಒಂದೂ ಹೂ, ಕಾಯಿ ಬಿಟ್ಟಿಲ್ಲ. ಇದೇ ರೀತಿ ತಾಲೂಕಿನ ಹಲವಾರು ಕಡೆ ತೊಗರಿ ಬೆಳೆಗೆ ಗೊಡ್ಡು ರೋಗ ತಗುಲಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ:‘ಸರ್ಕಾರಿ ಸೇವೆಗಳು ನಿಮ್ಮ ಮನೆ ಬಾಗಿಲಿಗೆ’ಚಾಲನೆ

Advertisement

ರೈತ ಅಬ್ದುಲ್‌ ಹಮೀದ್‌ ಹಾಗೂ ಇನ್ನಿತರ ರೈತರು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದ ನಂತರ ರಾಯಚೂರ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ. ಆದರೆ ಇಲ್ಲಿಯವರೆಗೂ ಯಾವ ಕಾರಣಕ್ಕಾಗಿ ತೊಗರಿ ಬೆಳೆಗೆ ಗೊಡ್ಡು ರೋಗ ಬಾಧೆ ತಗುಲಿದೆ ಎಂಬ ವರದಿ ನೀಡುವಲ್ಲಿ ವಿಜ್ಞಾನಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡದೇ ಉಡಾಫೆ ಮಾಡುತ್ತಿದ್ದಾರೆ ಎಂದು ಟಿಪ್ಪು ಸುಲ್ತಾನ್‌ ಕಮಿಟಿ ಅಧ್ಯಕ್ಷ ಮೋಹಿಯುದ್ದೀನ್‌ ಇನಾಂದಾರ ಆರೋಪಿಸಿದ್ದಾರೆ.

ರೈತರು ಸಾಲಸೂಲ ಮಾಡಿ ಬೀಜ ಗೊಬ್ಬರ ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನೀಡಿದ ಬೀಜವೇ ಗೊಡ್ಡು ಇರುವಾಗ ರೈತರು ನಂಬ ಬೇಕು ಯಾರಿಗೆ? ಕೂಡಲೇ ಸಂಬಂಧ ಪಟ್ಟವರು ತಾಲೂಕಿನಲ್ಲಿ ಗೊಡ್ಡು ರೋಗಕ್ಕೆ ತುತ್ತಾದ ಎಲ್ಲ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ವಿಳಂಬ ಮಾಡಿದರೇ ರೈತರೊಂದಿಗೆ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಮೋಹಿಯುದ್ದೀನ್‌ ಇನಾಂದಾರ ಎಚ್ಚರಿಸಿದ್ದಾರೆ.

ರೈತರಿಂದ ದೂರು ಬಂದ ನಂತರ ರಾಯಚೂರ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೈತರ ಹೊಲಗಳಿಗೆ ಬಂದು ತೊಗರಿ ಬೆಳೆ ಪರಿಶೀಲನೆ ನಡೆಸಿ ಹೋಗಿದ್ದಾರೆ. ಶೀಘ್ರದಲ್ಲಿಯೇ ಜಂಟಿ ಕೃಷಿ ನಿರ್ದೇಶಕರಿಗೆ ವರದಿ ನೀಡಲಿದ್ದಾರೆ. -ಡಾ| ಸಂಜೀವ್‌ ಬೆಲ್ಲದ, ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡಗಿ

-ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next