Advertisement

ವಿದ್ಯುನ್ಮಾನ ಮಾಧ್ಯಮದ ಜಾಹೀರಾತಿಗೆ ಅನುಮತಿ ಕಡ್ಡಾಯ

08:37 AM Feb 26, 2019 | Team Udayavani |

ಚಿತ್ರದುರ್ಗ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಮುದ್ರಣ ಮಾಧ್ಯಮವನ್ನು ಹೊರತುಪಡಿಸಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ನೀಡುವಾಗ ಸಮಿತಿಯಿಂದ ಪೂರ್ವಾನುಮತಿ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಹಾಗೂ ಕೇಬಲ್‌ ಆಪರೇಟರ್‌ಗಳು, ಚಿತ್ರಮಂದಿರ ಮಾಲೀಕರು, ಮುದ್ರಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಟಿವಿಗಳಲ್ಲಿ, ಕೇಬಲ್‌ನಲ್ಲಿ ಹಾಗೂ ಚಿತ್ರಮಂದಿರಗಳಲ್ಲಿ ಜಾಹೀರಾತು ನೀಡುವಾಗ ಜಿಲ್ಲಾ ಮಟ್ಟದ ಮೀಡಿಯಾ ಸರ್ಟಿಫಿಕೇಷನ್‌ ಸಮಿತಿಯಿಂದ ಮುಂಚಿತವಾಗಿ ಅನುಮತಿ ಪಡೆದಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವಾಗ ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕು. ಒಂದು ವೇಳೆ ಪ್ರಮಾಣಪತ್ರ ಪಡೆಯದೆ ಪ್ರಸಾರ ಮಾಡಿದಲ್ಲಿ ಅಂತಹ ಅಭ್ಯರ್ಥಿಗಳ ಮೇಲೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಲಿದೆ ಎಂದು ಎಚ್ಚರಿಸಿದರು.

ಚುನಾವಣಾ ಸಂದರ್ಭದಲ್ಲಿ ಮುದ್ರಿಸುವ ಕರಪತ್ರಗಳಲ್ಲಿ ಮುದ್ರಕರು ಕಡ್ಡಾಯವಾಗಿ ಮುದ್ರಣ ಸಂಖ್ಯೆಗಳನ್ನು ಪ್ರತಿ ಪುಟದ ಹಿಂಬದಿಯಲ್ಲಿ ಮುದ್ರಣ ಮಾಡಿರಬೇಕು. ಮುದ್ರಣ ಮಾಡಿದ ನಂತರ ನಿಯಮಾನುಸಾರ ಅನುಬಂಧದಂತೆ ವಿವರವನ್ನು ಚುನಾವಣಾಧಿಕಾರಿಗೆ ನೀಡುವುದು ಕಡ್ಡಾಯ ಎಂದರು. ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ರೀತಿಯಿಂದಲೂ ಸಜ್ಜಾಗಿದೆ.

ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳು ನೇಮಕ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ತರಬೇತಿ ನೀಡಲಾಗಿದೆ. ಅಗತ್ಯ ತಂಡಗಳು ಹಾಗೂ ವಿದ್ಯುನ್ಮಾನ ಮತಯಂತ್ರಗಳನ್ನು ಸಿದ್ಧಪಡಿಸಲಾಗಿದೆ. ಮತಯಂತ್ರಗಳ ಬಳಕೆ ಕುರಿತಂತೆ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

Advertisement

ಅಪರ ಜಿಲ್ಲಾಧಿಕಾರಿ ಕೆ. ಸಂಗಪ್ಪ ಮಾತನಾಡಿ, ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ 25 ವರ್ಷ ಆಗಿರಬೇಕು. ರಾಷ್ಟ್ರೀಯ ಮತ್ತು ಅಧಿಕೃತ ರಾಜ್ಯದ ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಒಬ್ಬರು ಸೂಚಕರಿರಬೇಕು.

ಇತರೆ ರಾಜಕೀಯ ಪಕ್ಷಗಳು ಅಥವಾ ಪಕ್ಷೇತರ ಅಭ್ಯರ್ಥಿಗಳಿಗೆ ಕನಿಷ್ಠ 10 ಜನ ಸೂಚಕರು ಇರಬೇಕು. ಕ್ರಿಮಿನಲ್‌ ಹಿನ್ನೆಲೆ ಇದ್ದಲ್ಲಿ ಅದರ ವಿವರ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಬೇಕು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸಭೆ, ಸಮಾರಂಭ, ರ್ಯಾಲಿ ಕೈಗೊಳ್ಳಲು ಪೂರ್ವಾನುಮತಿ ಪಡೆಯಬೇಕು. 

ಭದ್ರತಾ ಠೇವಣಿಯನ್ನು ಸಾಮಾನ್ಯ ಅಭ್ಯರ್ಥಿಗಳಿಗೆ 25 ಸಾವಿರ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ 12,500 ರೂ. ನಿಗದಿಪಡಿಸಲಾಗಿದೆ ಎಂದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು, ಮುದ್ರಣಾಲಯಗಳ ಮಾಲೀಕರು, ಚಿತ್ರಮಂದಿರ ಮಾಲೀಕರು, ಕೇಬಲ್‌ ಆಪರೇಟರ್‌ಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next