Advertisement

ಗುಡ್ಡ ಕಡಿದು ಗದ್ದೆ ಮಾಡಿದ ಸಾಹಸಿ!

10:23 AM Jul 01, 2018 | Team Udayavani |

ಆಲಂಕಾರು: ಗತಕಾಲದ ಬೇಸಾಯಯದ ಸೊಬಗು ಮರುಕಳಿಸಬೇಕು. ತನ್ನ ಜಮೀನಿನಲ್ಲಿ ಓಬೇಲೆ, ಪಾಡ್ಡನದಂತಹ ಜಾನಪದ ಗೀತೆಗಳು ಮತ್ತೊಮ್ಮೆ ಮೊಳಗಬೇಕು ಎಂಬ ಮಹದಾಸೆ ಇಟ್ಟು ಕೊಂಡ ವ್ಯಕ್ತಿ ಯೊಬ್ಬರು ಗುಡ್ಡವನ್ನೇ ಸಮತಟ್ಟು ಮಾಡಿ, ಗದ್ದೆ ರೂಪಿಸಿದ ಸಾಹಸದ ಕತೆಯೊಂದು ಬೆಳಕಿಗೆ ಬಂದಿದೆ. ಗದ್ದೆ ಕಡಿದು ವಾಣಿಜ್ಯ ಬೆಳೆಗಳನ್ನು ಬೆಳೆಯಲು ರೈತರು ಉತ್ಸುಕರಾಗಿರುವ ಈ ದಿನಗಳಲ್ಲಿ ಕಡಬ ತಾಲೂಕು ಆಲಂಕಾರು ಗ್ರಾಮದ ನಾರಾಯಣ ಪೂಜಾರಿ ಅವರ ಸಾಧನೆ ಮೆಚ್ಚತಕ್ಕದ್ದು. ಜಮೀನು ವಿಭಜನೆ ವೇಳೆ ತಮಗಿದ್ದ ಗದ್ದೆ ಕುಟುಂಬಸ್ಥರ ಪಾಲಾದ ಮೇಲೆ ಬೇಸಾಯ ಇವರಿಂದ ದೂರವಾಯಿತು. ಆದರೆ, ಬೇರೆಲ್ಲ ರೈತರಂತೆ ಕುಟುಂಬಸ್ಥರೂ ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾದರು. ಆದರೆ, ಆರಂಭದಿಂದಲೂ ಬೇಸಾಯದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದ ನಾರಾಯಣ ಅವರಿಗೆ, ತಾವು ಮತ್ತೆ ಗದ್ದೆ ಬೇಸಾಯ ಮಾಡಬೇಕೆಂಬ ಆಸೆ ಬಲವಾಯಿತು.

Advertisement

ಒಂದು ಮುಡಿ ಗದ್ದೆ
ತಮ್ಮ ಗುಡ್ಡದ ಜಾಗವನ್ನು ನಾಲ್ಕು ಅಡಿಗಳಷ್ಟು ಅಗೆದು ಸಮತಟ್ಟು ಮಾಡಿ, 50 ಸೆಂಟ್ಸ್‌ ವಿಸ್ತೀರ್ಣದಲ್ಲಿ ಗದ್ದೆ ರೂಪಿಸಿ ದರು. ಜೆಸಿಬಿ ಹಾಗೂ ಟಿಪ್ಪರ್‌ ಬಳಸಿ 15 ದಿವಸ ಕೆಲಸ ಮಾಡಿದ್ದು, ಅದಕ್ಕಾಗಿಯೇ 1.64 ಲಕ್ಷ ರೂ. ಖರ್ಚು ಮಾಡಿದ್ದಾರೆ. ಆರಂಭಿಕ ಹಂತವಾಗಿ ಗದ್ದೆಗೆ ಹಟ್ಟಿ ಗೊಬ್ಬರ ಹಾಗೂ ಸೊಪ್ಪು ಹಾಕಿ ಹದ ಮಾಡಿದ್ದು, ಈಗ ಬೇಸಾಯಕ್ಕೆ ಬೇಕಾದ ನೇಜಿಯನ್ನೂ ತಯಾರು ಮಾಡಿದ್ದಾರೆ. ಒಂದು ವಾರದೊಳಗೆ ಟ್ರ್ಯಾಕ್ಟರ್‌ ಉಳುಮೆ ಮಾಡಿ, ನೇಜಿ ನಾಟಿ ಮಾಡಲು ತಯಾರಿ ನಡೆಯುತ್ತಿದೆ. ವರ್ಷಕ್ಕೆ ಎರಡು ಬಾರಿ (ಏನೆಲು ಮತ್ತು ಸುಗ್ಗಿ) ಬೇಸಾಯ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಒಂದು ಮುಡಿ ಗದ್ದೆ ಇದಾಗಿದ್ದು, 20 ಮುಡಿ ಭತ್ತದ ಫ‌ಸಲು ನಿರೀಕ್ಷಿಸಲಾಗಿದೆ. ಪ್ರಥಮ ಬಾರಿಯ ಬೇಸಾಯದಲ್ಲಿ ಇಷ್ಟು ಫ‌ಸಲು ಬಾರದಿದ್ದರೂ ಸುಗ್ಗಿ ಬೇಸಾಯದಲ್ಲಿ ಉತ್ತಮ ಬೆಳೆ ನಿರೀಕ್ಷಿಸಲಾಗಿದೆ. ಈ ಗದ್ದೆಗೆ ಯಾವುದೇ ರಸಗೊಬ್ಬರ ಬಳಸದೆ ಕೇವಲ ಸಾವಯವ ಪದ್ಧತಿಯಲ್ಲಿ ಬೇಸಾಯ ಮಾಡಲು ನಿರ್ಧರಿಸಿದ್ದಾರೆ.

ಮುಂದಿನ ಪೀಳಿಗೆಗೆ ಪೂರಕ
ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿಗಳು ಸಂಪೂರ್ಣ ನಾಶವಾಗಿವೆ. ಅನಾದಿ ಕಾಲದಿಂದ ತುಳುನಾಡಿನಲ್ಲಿ ಅನುಸರಿಸಿಕೊಂಡು ಬರುತ್ತಿದ್ದ ಹೊಸ ಅಕ್ಕಿ ಊಟ (ಪುದ್ವಾರ್‌), ಕೊರಳು ಕಟ್ಟುವ ಕಾರ್ಯಗಳು ಇಂದು ಮರೆಯಾಗಿವೆ. ತುಳುನಾಡಿನ ಆಚಾರ, ವಿಚಾರಗಳು ಮಾಯವಾಗಿವೆ. ಈ ನಿಟ್ಟಿನಲ್ಲಿ ಮುಂದಿನ ಜನಾಂಗಕ್ಕೆ ನಮ್ಮ ಪೂರ್ವಜರು ಆಚರಿಸಿಕೊಂಡು ಬರುತ್ತಿದ್ದ ತುಳುನಾಡಿನ ಸಂಸ್ಕಾರಗಳನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಗದ್ದೆ ಮಾಡುವ ಸಾಹಸಕ್ಕೆ ಕೈಹಾಕಿದೆ.
 - ನಾರಾಯಣ ಪೂಜಾರಿ,ಕೃಷಿಕ

ಖುಷಿ, ಭೀತಿ
20 ವರ್ಷಗಳ ಹಿಂದೆ ನನ್ನ ತವರು ಮನೆಯಲ್ಲಿ ಬೇಸಾಯ ಕೃಷಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಇದೀಗ ಬಹಳ ಕಾಲದ ನಂತರ ಬೇಸಾಯದಲ್ಲಿ ತೊಡಗುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದ್ದೆ. ದುಬಾರಿ ವೆಚ್ಚ ಭರಿಸಿ ಗದ್ದೆ ಮಾಡಲಾಗಿದೆ. ಆದರೆ, ಕಾಡು ಪ್ರಾಣಿಗಳ ಜೊತೆಗೆ ಹಕ್ಕಿಗಳ ಉಪಟಳ ಹೆಚ್ಚಾಗುವ ಭೀತಿಯಿದೆ. ಆದರೂ ಹಗಳಿರುಳು ಕಾವಲು ನಿಂತು ನಮ್ಮ ಬೆಳೆಯನ್ನು ರಕ್ಷಿಸಿಕೊಳ್ಳುತ್ತೇನೆ.
 – ಶಕುಂತಳಾ,
ನಾರಾಯಣ ಪೂಜಾರಿ ಪತ್ನಿ

ಸದಾನಂದ ಆಲಂಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next