Advertisement

ಸಮಾಗಮಮ್‌ನಲ್ಲಿ ಸಾಹಸ ಲೋಕ ಅನಾರವಣ

09:41 PM Jan 15, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಅಲ್ಲಿನ ಸಮಾಗಮಮ್‌ ಕ್ರೀಡಾಂಗಣದಲ್ಲಿ ಸಂಗಮವಾದ ವಿದ್ಯಾರ್ಥಿಗಳ ಸಾಹಸ, ಶೌರ್ಯ, ಕಲೆ ಕೌಶಲ್ಯಗಳ ಪ್ರದರ್ಶನ. ಮೈನವಿರೇಳಿಸುವಂತೆ ಎಲ್ಲರ ಗಮನ ಸೆಳೆಯಿತು. ಆಗಸದಲ್ಲಿ ಚಮತ್ಕಾರದ ಯೋಗಾಸನ ಪ್ರದರ್ಶನ, ಕುದುರೆ, ಬೈಕ್‌ ಸವಾರಿ. ಕ್ರೀಡಾಂಗಣದಲ್ಲಿ ಉಕ್ಕಿದ ಸಂಭ್ರಮೋಲ್ಲಾಸದ ನಡುವೆ ವಿದ್ಯಾರ್ಥಿಗಳ ಸಾಹಸ, ಶೌರ್ಯ, ಶಕ್ತಿ, ಯುಕ್ತಿಗಳ, ಕಲೆ ಪ್ರದರ್ಶನಕ್ಕೆ ತಲೆದೂಗಿದ ಪೋಷಕರು, ಸಾಯಿ ಭಕ್ತರು.

Advertisement

ಹೌದು, ಮಕರ ಸಂಕ್ರಾಂತಿ ದಿನವಾದ ಬುಧವಾರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದ ಸಮಾಗಮಮ್‌ ಕ್ರೀಡಾಂಗಣದಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಸಮೂಹ ಸಂಸ್ಥೆಗಳು ಆಯೋಜಿಸಿದ್ದ 45ನೇ ವಾರ್ಷಿಕ ಕ್ರೀಡಾಕೂಟ ಹಾಗೂ ಕಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮೂಡಿ ಬಂದ ಹಲವು ರೋಮಾಂಚನಕಾರಿ ಆಟೋಟಗಳು ಸಮಾಗಮಮ್‌ ಕ್ರೀಡಾಂಗಣದಲ್ಲಿ ಸಾಹಸ ಲೋಕವನ್ನೇ ತೆರೆದಿಟ್ಟಿತು.

ಕ್ರೀಡಾಕೂಟ, ಕಲೋತ್ಸವಕ್ಕೆ ಚಾಲನೆ: ಕ್ರೀಡಾಕೂಟ ಉದ್ಘಾಟನೆ ಪ್ರಯುಕ್ತ ಸತ್ಯಸಾಯಿ ಸಮಾಗಮಮ್‌ ಕ್ರೀಡಾಂಗಣದ ಪಶ್ಚಿಮ ದಿಸೆಯಲ್ಲಿರುವ ಸಾನರಾಯಿ ಬೆಟ್ಟದ ಮೇಲೆ ಸ್ಥಾಪಿತವಾದ ಅಗ್ನಿಕುಂಡಕ್ಕೆ ಜ್ಯೋತಿರ್‌ವಾಹನ ಶ್ವೇತ ನಂದಿ ಕ್ರೀಡಾ ಜ್ಯೋತಿ ಹೊತ್ತೂಯ್ದು ನಿರಂತರ ಐದು ದಿನಗಳ ಕಾಲ ಪ್ರಜ್ವಲಿಸುವ ಪ್ರಕಾಶಕ್ಕೆ ಸಾಂಕೇತಿಕ ಚಾಲನೆ ನೀಡುವುದರೊಂದಿಗೆ ಕ್ರೀಡಾಕೂಟ ಹಾಗೂ ಕಲೋತ್ಸವ ವಿದ್ಯುಕ್ತವಾಗಿ ಪ್ರಾರಂಭವಾದವು.

4000 ವಿದ್ಯಾರ್ಥಿಗಳು ಭಾಗಿ: ರಾಜ್ಯದ 17 ಜಿಲ್ಲೆಗಳ ಮತ್ತು ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಲ್ಲಿ ಕಾರ್ಯಪ್ರವರ್ತಿಸುತ್ತಿರುವ ಒಟ್ಟು 30 ವಿದ್ಯಾಸಂಸ್ಥೆಗಳ 4000 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಒಲಂಪಿಕ್‌ ಕ್ರೀಡಾಕೂಟ ನೆನೆಪಿಸುವ ಮಾದರಿಯಲ್ಲಿ ಪಥಸಂಚಲನ ನಡೆಸಿ ಕ್ರೀಡೋತ್ಸವದಲ್ಲಿ ತಮ್ಮ ತಮ್ಮ ವಿದ್ಯಾನಿಕೇತನಗಳ ಪ್ರಾತಿನಿಧ್ಯವನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಸಾಹಸ ಪ್ರದರ್ಶನ: ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂಕವಿಸ್ಮಿತರನ್ನಾಗಿಸುವ ಬಗೆಬಗೆಯ ಯೋಗ ಭಂಗಿಗಳು, ಪ್ರಾದೇಶಿಕ ಸೊಗಡನ್ನು ಬಿಂಬಿಸುವ ಜಾನಪದ ಕಲೆಗಳು, ಭಾರತದ ನೃತ್ಯ ಪ್ರಕಾರಗಳು, ಕರಾಟೆ ಪ್ರದರ್ಶನ, ನೆರೆಯ ಕೇರಳ ರಾಜ್ಯದ ವೀರಕಲೆ ಕಲರಿ ಯುದ್ಧ ಪ್ರಾತ್ಯಕ್ಷಿಕೆ, ಜಾರುಗಾಲಿ ಚಮತ್ಕಾರ, ವಾಯುಕ್ರೀಡೆ, ಮೋಟಾರ್‌ ಸೈಕಲ್‌ ಸವಾರಿ ಪ್ರದರ್ಶನ ಬೆರಗುಗೊಳಿಸುವಂತಿತ್ತು.

Advertisement

ಏಕ ಚಕ್ರ ಸೈಕಲ್‌ ಸವಾರಿ, ಬಗೆಬಗೆಯ ಯೋಗಾಂಗ ಸಾಧನೆಗಳು, ಕ್ರಿಕೆಟ್‌ ಆಟದ ಚಮತ್ಕಾರಿಕ ತಂತ್ರಗಳು, ಭೂಕೇಂದ್ರಿತ ಬಹುರೂಪಿ ಕಸರತ್ತು, ವರ್ತುಲ ವಿನ್ಯಾಸದ ರಚನೆಯಲ್ಲಿ ಸಾಹಸ ಪ್ರದರ್ಶನ ಆರಂಭೋತ್ಸವದಲ್ಲಿ ಪ್ರದರ್ಶನಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ದೂರದ ಉತ್ತರಾಖಂಡದ ನಗರಾಭಿವೃದ್ಧಿ ಸಚಿವ ಮದನ್‌ ಕೌಶಿಕ್‌, ಶಿಕ್ಷಣ ತಜ್ಞ ಅತುಲ್‌ ಕೊಠಾರಿ, ನಾನಾ ರಾಜ್ಯಗಳ ಹಲವು ಶಾಸಕರು, ವಿನಯಾನಂದ ಸ್ವಾಮೀಜಿ, ಆಂಟನಿ ಟ್ಯಾನಿ, ಡೇವಿಡ್‌ ಕಾರ್ನ್ಸ್ವೀಟ್‌, ಪೊ›.ಶಶಿಧರ್‌ ಪ್ರಸಾದ್‌, ಬಿ.ಎನ್‌.ನರಸಿಂಹಮೂರ್ತಿ, ಬಿ.ನಾರಾಯಣ ರಾವ್‌, ಕರಾಯ ಸಂಜೀವ ಶೆಟ್ಟಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌ ಉಪಸ್ಥಿತರಿದ್ದರು.

ಸಮಾಗಮಮ್‌ನಲ್ಲಿ ಗಮನ ಸೆಳೆದ ಸಾಹಸ ಕ್ರೀಡೆ: ಸಮಾಗಮಮ್‌ ಕ್ರೀಡಾಂಗಣದ ಮಧ್ಯೆ 120 ಅಡಿ ಎತ್ತರದಲ್ಲಿ ಹಾಟ್‌ಏರ್‌ ಬಲೂನ್‌ ಮೂಲಕ ವಿದ್ಯಾರ್ಥಿಗಳು ಮಾಡಿದ ಕಸರತ್ತು ನೆರದಿದ್ದವರನ್ನು ವಿಸ್ಮಯಗೊಳಿಸಿದರೆ, ಸತ್ಯಸಾಯಿ ಮಾನವ ಅಭ್ಯುದಯ ಕೇಂದ್ರದ ವಿದ್ಯಾರ್ಥಿಗಳು ಕ್ರೀಡಾಂಗಣದ ಸುತ್ತಲೂ ಬಗೆಬಗೆಯ ಭಂಗಿಗಳಲ್ಲಿ ಕುದುರೆ ಸವಾರಿಗೈದರು. ಕುದುರೆಗಳನ್ನು ಅದ್ಭುತವಾಗಿ ನಿಯಂತ್ರಿಸುತ್ತಾ ನಾಗಾಲೋಟ, ಅಡೆತಡೆ ಓಟ, ನೆಗೆತಗಳನ್ನು ರೋಮಾಂಚನಕಾರಿಯಾಗಿ ಪ್ರದರ್ಶಿಸಿ ಸಾಹಸ ಮೆರೆದರು.

ಸುಮಾರು 25 ಅಡಿ ಎತ್ತರದ ಕ್ರೇನ್‌ನಲ್ಲಿ ತೂಗು ಹಾಕಲಾದ ಕಬ್ಬಿಣದ ಚೌಕಟ್ಟಿನಲ್ಲಿ ಅಳವಡಿಸಿದ ಹಗ್ಗ ಮತ್ತು ಚಕ್ರಗಳಲ್ಲಿ ವಿದ್ಯಾರ್ಥಿಗಳು ದೇಶೀ ಕಲೆಯಾದ ಯೋಗಾಸನವನ್ನು ವಿವಿಧ ಭಂಗಿಗಳಲ್ಲಿ ಪ್ರದರ್ಶಿಸಿದರು. ಅಗ್ನಿಚಕ್ರದ ಮಧ್ಯೆ ಬೈಕ್‌ನಲ್ಲಿ ನೆಗೆದು ಮುಂದಕ್ಕೆ ಸಾಗುವ ದೃಶ್ಯ ಬೆರಗುಗೊಳಿಸಿತು. ಉಳಿದಂತೆ ಸಿಂಗಾಪುರದ ಸಿಂಹ ನೃತ್ಯ, ಮಾರ್ಷಲ್‌ ಆರ್ಟ್ಸ್ ಗಮನ ಸೆಳೆಯಿತು.

ಸುಮಾರು 4 ಸಾವಿರ ಮಕ್ಕಳು ಮೂರುವರೆ ಗಂಟೆಕಾಲ ಪಥ ಸಂಚಲನದಿಂದ ಕೊನೆ ಕ್ರೀಡೆಯವರೆಗೂ ನಡೆಸಿಕೊಟ್ಟ ವಿವಿಧ ಸಾಹಸ ಕ್ರೀಡೆಗಳು ಅವಿಸ್ಮರಣೀಯ. ಇಂತಹ ಕ್ರೀಡಾಕೂಟಗಳು ಮಕ್ಕಳಲ್ಲಿ ಸಾಹಸ ಪ್ರವೃತ್ತಿಗೆ ಪ್ರೇರಣೆ ಕೊಡುತ್ತವೆ. ಸರ್ಕಾರಿ ಶಾಲೆಗಳಲ್ಲಿ ಕೂಡ ಜಿಲ್ಲೆಗೆ ಒಂದು ಶಾಲೆಯಲ್ಲಿ ಈ ರೀತಿಯ ಸಾಹಸ ಕ್ರೀಡೆಗಳನ್ನು ಕಲಿಸಬೇಕಿದೆ.
-ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next