Advertisement

ಅಯೋಧ್ಯೆಯ ಬಿಗಿ ಉರುಳಲ್ಲಿ ಆಡ್ವಾಣಿ, ಜೋಶಿ ಕೊರಳು

10:01 AM Apr 26, 2017 | Team Udayavani |

ಮೋದಿ ಸರಕಾರ ಮತ್ತು ಬಿಜೆಪಿ, “ಕಾನೂನು ತನ್ನದೇ ಕ್ರಮದಲ್ಲಿ ಕಾರ್ಯನಿರ್ವಹಿಸುತ್ತದೆ’ ಎಂಬ ನಿಲುವಿಗೆ ಅಂಟಿಕೊಂಡು ಆಡ್ವಾಣಿ, ಮುರಳೀ ಮನೋಹರ ಜೋಶಿಯವರಂಥ ಮಾರ್ಗದರ್ಶಕರನ್ನು ಹಾಗೂ ಉಮಾ ಭಾರತಿಯವರಂಥ ಮುಂದಾಳುಗಳನ್ನು ನಡುನೀರಿನಲ್ಲಿ ಕೈಬಿಡುವಂತಿಲ್ಲ.

Advertisement

1992ರ ಡಿ. 6ರಂದು ಸಂಭವಿಸಿದ ವಿವಾದಿತ ಆಯೋಧ್ಯಾ ಕಟ್ಟಡದ ನೆಲಸಮ ಘಟನೆ, ಇಷ್ಟು ವರ್ಷಗಳ ಬಳಿಕವೂ ಬಿಜೆಪಿ ನಾಯಕರಾದ ಎಲ್‌. ಕೆ. ಆಡ್ವಾಣಿ ಹಾಗೂ ಡಾ. ಮುರಳೀ ಮನೋಹರ ಜೋಶಿಯವರನ್ನು ತೀವ್ರವಾಗಿ ಕಾಡುತ್ತಿದೆ. ಸರ್ವೋಚ್ಚ ನ್ಯಾಯಾಲಯ ನ್ಯಾಯಪೀಠವು ಆಡ್ವಾಣಿ, ಜೋಶಿ, ಕೇಂದ್ರ ಸಚಿವೆ ಉಮಾಭಾರತಿ ಮತ್ತಿತರರನ್ನು ವಿವಾದಿತ ಬಾಬ್ರಿ ಮಸೀದಿ ಕಟ್ಟಡದ ನೆಲಸಮ ಘಟನೆಗೆ ಸಂಬಂಧಿಸಿದ ಪ್ರಕರಣದ ಕುರಿತು ಮರುವಿಚಾರಣೆ ನಡೆಸಬೇಕೆಂಬ ಆದೇಶದ ಮೂಲಕ ತನ್ನ ಸಾಂವಿಧಾನಿಕ ಅಧಿಕಾರವನ್ನು ಪ್ರಯೋಗಿಸಿ ಸಂಚಲನವನ್ನುಂಟು ಮಾಡಿದೆ. 

ನ್ಯಾಯಾಲಯದ ಯಾವುದೇ ಆದೇಶವನ್ನು ವಿರೋಧಿಸಬೇಕೆಂಬ ನಿಲುವನ್ನು ಈ ಅಂಕಣಕಾರ ಇದುವರೆಗೆ ವ್ಯಕ್ತಪಡಿಸಿಲ್ಲವಾದರೂ ಅಯೋಧ್ಯಾ ಪ್ರಕರಣ ಮೇಲಿನ ಮಾತಿಗೆ ಕೊಂಚ”ಅಪವಾದ’ವೆನ್ನಿಸುವ ರೀತಿಯಲ್ಲಿದೆ ಅನ್ನಿಸುತ್ತಿದೆ. ಅನುಕೂಲಕರವಲ್ಲದ ಆದೇಶಗಳನ್ನು ಹಾಸಿ ಹೊದ್ದು ಮಲಗುವ ವಿಚಾರದಲ್ಲಿ ಬಹುತೇಕ ಸರಕಾರಗಳದೂ ಒಂದೇ ನಿಲುವು. ಕೋರ್ಟ್‌ ತೀರ್ಪುಗಳನ್ನು ಅವು ರಾಜಾರೋಷವಾಗಿಯೇ ಧಿಕ್ಕರಿಸುತ್ತವೆ. 

ವಿವಾದ ಅಂತ್ಯಕ್ಕೆ ಸಕಾಲ: ಉತ್ತರಪ್ರದೇಶದ ಆದಿತ್ಯನಾಥ್‌ ಸರಕಾರ ಅಯೋಧ್ಯಾ ಕೇಸಿಗೆ ಮಂಗಳ ಹಾಡಲು ಇದು ಸಕಾಲವಾಗಿದೆ. ಶ್ರೀರಾಮ ಮಂದಿರ ನಿರ್ಮಾಣದ ಭರವಸೆಯನ್ನು ರಾಜಕೀಯ ಟ್ರಂಪ್‌ಕಾರ್ಡ್‌ ಆಗಿ ಬಳಸಿಕೊಳ್ಳುವ ಪರಿಪಾಠಕ್ಕೆ ಪೂರ್ಣವಿರಾಮ ನೀಡಬೇಕಾಗಿದೆ. ಇತ್ತೀಚಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೂಡ, ಬಿಜೆಪಿ ತನ್ನ ಪ್ರಚಾರದ ವೇಳೆ ಈ ಭರವಸೆಯನ್ನು ನೀಡಿತ್ತು. ಅಲಹಾಬಾದ್‌ ಉಚ್ಚ ನ್ಯಾಯಾಲಯ 2010ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸುವ ಪ್ರತ್ಯೇಕ ಖಟ್ಲೆಯೊಂದು ಸರ್ವೋಚ್ಚ ನ್ಯಾಯಾಲಯದಲ್ಲಿದೆ ಎಂಬುದನ್ನು ಅಗತ್ಯವಾಗಿ ಗಮನಿಸಬೇಕು. ಅಲಹಾಬಾದ್‌ ನ್ಯಾಯಾಲಯ ತನ್ನ ತೀರ್ಪಿನಲ್ಲಿ, ಈ ವಿವಾದಕ್ಕೆ ಸಂಬಂಧಿಸಿದ ಕಕ್ಷಿಗಳೆದುರು ರಾಜೀ ಪಂಚಾಯತಿಯ ಪ್ರಸ್ತಾವ ಇರಿಸಿತ್ತು. ಅಯೋಧ್ಯಾ ವಿವಾದದ ಇತ್ಯರ್ಥಕ್ಕೆ ಪ್ರಧಾನ ಅಡ್ಡಿಯೆಂದರೆ, ಉತ್ತರ ಪ್ರದೇಶದ ಮುಸ್ಲಿಮರ ಒಂದು ವರ್ಗ ಈ ವಿವಾದ ಕುರಿತಂತೆ ತನ್ನ ವಿರೋಧವನ್ನು ಸಜೀವವಾಗಿ ಇರಿಸಿಕೊಂಡಿರುವುದು. 

16ನೆಯ ಶತಮಾನದಲ್ಲಿ ಸಮ್ರಾಟ ಅಕºರನ ಸೇನಾಧಿಕಾರಿ ಮೀರ್‌ ಬಾಕಿಯು ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸುವ ಸಲುವಾಗಿ ಶ್ರೀರಾಮನ ಹಳೆಯ ಮಂದಿರವೊಂದನ್ನು ನೆಲಸಮಗೊಳಿಸಿದ್ದನೆಂಬ ಸತ್ಯವನ್ನು ರಾಜ್ಯದ ಮುಸ್ಲಿಮರ ಒಂದು ವರ್ಗ ಒಪ್ಪಿಕೊಳ್ಳಲು ತಯಾರಿಲ್ಲ.ಕ್ರಿಮಿನಲ್‌ ಪ್ರಕರಣಗಳನ್ನು ರದ್ದು ಮಾಡುವ ಪ್ರಕ್ರಿಯೆಗೆ ದೇಶದ ಅಪರಾಧ ದಂಡ ಸಂಹಿತೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬುದನ್ನು ಗಮನಿಸಬೇಕಾಗಿದೆ. ರಾಜ್ಯ ಸರಕಾರಗಳು ತಮ್ಮ ಸಂಪುಟ ಸಭೆಗಳಲ್ಲಿ ಸಾಮಾನ್ಯವಾಗಿ ಇಂಥ ನಿರ್ಧಾರ ತೆಗೆದುಕೊಂಡಿರುವುದುಂಟು. ಉದಾಹರಣೆಗೆ, ಸಿಆರ್‌ಪಿಸಿಯ 321ನೆಯ ಸೆಕ್ಷನ್‌, ಸಂಬಂಧಿತ ವಿಚಾರಣಾ ನ್ಯಾಯಾಲಯದಲ್ಲಿ ದಾವೆ ಹಿಂದೆಗೆದುಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಸರಕಾರ ದಾವೆ ಹೂಡಿಕೆಯ ಗೋಜಿಗೆ ಹೋಗುವುದಿಲ್ಲವೆಂದೇ ಇದರರ್ಥ. ಆದರೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸಲ್ಲಿಸುವ ಇಂಥ ಮನವಿಗೆ ವಿಚಾರಣಾ ನ್ಯಾಯಾಲಯಗಳು ಸಮ್ಮತಿ ಸೂಚಿಸಬೇಕಷ್ಟೇ.

Advertisement

ಆಡ್ವಾಣಿ ಮತ್ತಿತರ ವಿರುದ್ಧದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಿ ಅಲಹಾಬಾದ್‌ ಉಚ್ಚ ನ್ಯಾಯಾಲಯ (2001ರಲ್ಲಿ) ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಅಗತ್ಯದ ಕಾನೂನು ಕ್ರಮಕ್ಕೆ ಮುಂದಾದ ಸಿಬಿಐಯ ನಡೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರಕಾರ ಮೂಗು ತೂರಿಸಿಲ್ಲ ಎಂಬುದು ಶ್ಲಾಘನೀಯ. ಆದರೆ, ಅಯೋಧ್ಯಾ ಚಳವಳಿಯನ್ನು ರಾಜಕೀಯ ಆಂದೋಲನವೆಂದು ಬಿಜೆಪಿ ಪರಿಗಣಿಸುತ್ತ ಬಂದಿರುವುದರಿಂದ ಇದೀಗ ಈ ಪ್ರಕರಣದಲ್ಲಿ ಸಿಬಿಐ ಮುಂದುವರಿಯದಂತೆ ಅದನ್ನು ತಡೆಯುವ ಸಂದರ್ಭ ಈಗ ಕೇಂದ್ರದ ಬಿಜೆಪಿ ಸರಕಾರಕ್ಕೆ ಒದಗಿಬಂದಿದೆ. ಈಗ ಅಧಿಕಾರದಲ್ಲಿರುವ ಬಿಜೆಪಿಯು ಅಯೋಧ್ಯಾ ಅಥವಾ ರಾಮ ಮಂದಿರ ನಿರ್ಮಾಣದ ಆಂದೋಲನದ ಮುಂಚೂಣಿಯಲ್ಲಿದ್ದುದು ತಾನು, ಆರೆಸ್ಸೆಸ್‌ ಹಾಗೂ ವಿಹಿಂಪ ಎಂಬುದನ್ನು ಸುಲಭವಾಗಿ ಮರೆಯುವ ಹಾಗಿಲ್ಲ. ಈ ಆಂದೋಲನವೇ ಅದನ್ನು ಈಗ ಅಧಿಕಾರದ ಉತ್ತುಂಗದಲ್ಲಿ ಕೂರಿಸಿರುವುದು. ಯಾರೇ ಒಪ್ಪಲಿ ಅಥವಾ ಬಿಡಲಿ;- ಹಿಂದುತ್ವ ಸಿದ್ಧಾಂತ, ಅಲ್ಪಸಂಖ್ಯಾಕರ ಓಲೈಕೆಯ ವಿರೋಧ ಹಾಗೂ ಢೋಂಗಿ ಜಾತ್ಯತೀತ ನಿಲುವಿಗೆ ನಕಾರ – ಈ ಮೂರು ಲಕ್ಷಣಗಳು ಬಿಜೆಪಿಯನ್ನು ಇತರ ಪಕ್ಷಗಳಿಗಿಂತ ಭಿನ್ನವಾಗಿಸಿವೆ. ಇಲ್ಲದಿದ್ದರೆ ಅದು ವಂಶಾಡಳಿತ ಹೊರತುಪಡಿಸಿ, ಕಾಂಗ್ರೆಸ್‌ನಂತೆಯೇ ಇನ್ನೊಂದು ಪಕ್ಷ ಎಂದು ಪರಿಗಣಿತವಾಗಿರುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ “ಹಿಂದೂಗಳ ಪಕ್ಷ’ವಾಗಿದ್ದ ಕಾಂಗ್ರೆಸ್‌ ಎಷ್ಟೋ ವರ್ಷಗಳ ಹಿಂದೆಯೇ ಸಮಾಜವಾದಕ್ಕೆ ಎಳ್ಳುನೀರು ಬಿಟ್ಟು, ಈಗ ಜಾತ್ಯತೀತತೆಯ ಪುಂಗಿ ಊದುತ್ತಿದೆ. ಕೋಮು ದೃಷ್ಟಿಕೋನದ ಫ‌ಲವಾಗಿ ಭಾರತ ಇಂದು ಹೋಳಾಗಿದ್ದರೆ, ಇದಕ್ಕೆ ಕಾರಣ ಕಾಂಗ್ರೆಸ್‌. ಆದರೆ ಆರ್ಥಿಕ ಉದಾರೀಕರಣ, ಜಾಗತೀಕರಣದಂಥ ವಿಷಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಿಲುವು ಒಂದೇ ಆಗಿದೆ.

ರಾಮಮಂದಿರ ಚಳವಳಿಯ ನೇತೃತ್ವವನ್ನು ಆಡ್ವಾಣಿ ವಹಿಸಿಕೊಂಡಿದ್ದರೇನೋ ಹೌದು. 1991ರಲ್ಲಿನ ರಾಜಕೀಯ ಸಂದರ್ಭ ಬಿಜೆಪಿಯ ಪರವಾಗಿಯೇ ಇತ್ತಾಗಿ, ಅಧಿಕಾರಕ್ಕೆ ಬಂದೇ ಬರುವ ತೀವ್ರ ನಿರೀಕ್ಷೆ ಹಾಗೂ ನಂಬಿಕೆಯನ್ನು ಅದು ಇರಿಸಿಕೊಂಡಿತ್ತು. ಆದರೆ, ರಾಜೀವ್‌ ಹತ್ಯೆಯಿಂದಾಗಿ ಅದರ ಲೆಕ್ಕಾಚಾರ ತಲೆಕೆಳಗಾಯಿತು. “”ಪ್ರಸಕ್ತ ಸಂದರ್ಭದಲ್ಲಿ ಭಾರತದ ಸಂವಿಧಾನ ಪ್ರಣೀತ ಜಾತ್ಯತೀತ ವ್ಯವಸ್ಥೆಯನ್ನು ನಡುಗಿಸುವಂತೆ ಮಾಡುವ ಅಪರಾಧಗಳು…” ಎಂಬ ಸುಪ್ರೀಂ ಕೋರ್ಟಿನ ಇತ್ತೀಚಿನ ತೀರ್ಪಿನಲ್ಲಿನ ಮಾತನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಅಯೋಧ್ಯೆಯ ವಿವಾದಿತ ಕಟ್ಟಡದ ನೆಲಸಮ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಅಭಿಪ್ರಾಯ ಇದು. 

ಭಯೋತ್ಪಾದಕರು ಹಾಗೂ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಪಾಕಿಸ್ಥಾನ ಕೇವಲ ಒಂದು ಇಸ್ಲಾಮೀ ರಾಷ್ಟ್ರವೆಂಬ ಕಾರಣಕ್ಕಾಗಿ ಅದರೊಂದಿಗೆ ಸೇರ್ಪಡೆಗೊಳ್ಳಬೇಕೆಂದು ಪ್ರತಿಪಾದಿಸುತ್ತಲೇ ಇದ್ದಾರೆ. ಅವರು “ಕಾಶ್ಮೀರಿಯತ್‌’ ಬಗೆಗೂ ಮಾತಾಡುತ್ತಿದ್ದಾರೆ; ರಾಜ್ಯಕ್ಕೆ ಸ್ವಾಯತ್ತೆ ಬೇಕೆಂದೂ ವಾದಿಸುತ್ತಾರೆ.  ದೇಶದಲ್ಲಿ ಕೋಮುಗಲಭೆಗಳು ಭುಗಿಲೆದ್ದದ್ದು ಅಯೋಧ್ಯಾ ಘಟನೆಯ ಬಳಿಕ ಹೇಳಿದರೆ ಸಮಸ್ಯೆಯನ್ನು ಸರಳಗೊಳಿಸಿದಂತಾಗುತ್ತದಷ್ಟೆ. ಅಯೋಧ್ಯಾ ಘಟನೆಯ ಹಿಂದೆಯೂ, ಅದಾದ ಬಳಿಕವೂ ದೇಶದಲ್ಲಿ ಅದಕ್ಕಿಂತಲೂ ಘೋರವಾದ ಕೋಮು ಘಟನೆಗಳು ಸಂಭವಿಸಿವೆ. ಇಂಥ ಎಲ್ಲ ದಂಗೆ – ಗಲಭೆಗಳೂ ರಾಷ್ಟ್ರವಿಭಜನೆಯ ಹಿಂಚುಮುಂಚಿನ ವರ್ಷಗಳಲ್ಲಿ ನಡೆದ ಘಟನೆಗಳೆದುರು ತೀರಾ ಪೇಲವ! ಅನಧಿಕೃತ ಅಂಕಿಅಂಶದ ಪ್ರಕಾರ ದೇಶ ವಿಭಜನೆಯ ಕಾಲದಲ್ಲಿನ  ಸಾವಿನ ಸಂಖ್ಯೆ 8 ಲಕ್ಷ (ಅಧಿಕೃತ ಸಂಖ್ಯೆ 2.5 ಲಕ್ಷ). ಇನ್ನು, ಕಾಶ್ಮೀರ ಕಣಿವೆಯಿಂದ, ಕಾಶ್ಮೀರಿ ಪಂಡಿತರನ್ನು ಹೊರಗೋಡಿಸುವ ಮೂಲಕ “ಜನಾಂಗೀಯ ಶುದ್ಧೀಕರಣ’ ಮಾಡಲಾದ ಘಟನೆಗೆ ನಾವೆಲ್ಲರೂ ಸಾಕ್ಷಿಗಳೇ.

ಅಯೋಧ್ಯಾ ಘಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಇನ್ನೊಂದು ವಿಭಜನೆ ನಡೆಯಲಿದೆ ಎಂದು ಕೆಲ ಬುರುಡೆ ಭವಿಷ್ಯಕಾರರು ಅಂದು ಸಾರಿದ್ದುಂಟು. ಆದರೆ ಅಂಥ ಘಟನೆ ನಡೆದಿಲ್ಲ. ಒತ್ತಿ ಹೇಳಲೇಬೇಕಾದ ಮಾತೆಂದರೆ, ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಆಂದೋಲನಕ್ಕೂ ಅಯೋಧ್ಯಾ ಘಟನೆಗೂ ಏನೂ ಸಂಬಂಧವಿಲ್ಲ.

ಸ್ವಾತಂತ್ರ್ಯ ಚಳವಳಿ ಮತ್ತು ಹಿಂಸೆ: ಭಾವೋದ್ರೇಕಭರಿತ ರಾಜಕೀಯ ಚಳವಳಿಗಳು ಹಿಂಸಾತ್ಮಕ ಹಾಗೂ ಅನಪೇಕ್ಷಿತ ಘಟನೆಗಳಿಗೆ ಹಾದಿ ಮಾಡಿಕೊಡುವುದು ಅಪರೂಪವಲ್ಲ. ಅಯೋಧ್ಯೆಯಲ್ಲಿ ನಡೆದಿರುವುದು ಇದೇ. ಅಸಹಕಾರ ಚಳವಳಿ, ಕ್ವಿಟ್‌ ಇಂಡಿಯಾದಂಥ ಚಳವಳಿಗಳನ್ನು ಕಾಂಗ್ರೆಸ್‌ ನಡೆಸಿದ್ದ ಸಂದರ್ಭಗಳಲ್ಲಿ ಅಗಾಧ ಪ್ರಮಾಣದ ಹಿಂಸಾತ್ಮಕ ಘಟನೆಗಳು ಸಂಭವಿಸಿದ್ದುಂಟು. ಇಂದಿನ ದಿನಗಳಲ್ಲಿ ಕೂಡ “ಶಾಂತಿಯುತ’ ಪ್ರತಿಭಟನೆಗಳು ಸರಕಾರಿ ಬಸ್ಸುಗಳಿಗೆ ಕಲ್ಲೆಸೆತದ ಘಟನೆಗಳಲ್ಲಿ ಪರ್ಯವಸಾನವಾಗುತ್ತಿರುವುದನ್ನು ನೋಡುತ್ತಲೇ ಇದ್ದೇವೆ. 

ಮೋದಿ ಸರಕಾರ ಹಾಗೂ ಅವರ ಪಕ್ಷವಾದ ಬಿಜೆಪಿ, ಈಗ “ಕಾನೂನು ತನ್ನದೇ ಕ್ರಮದಲ್ಲಿ ಕಾರ್ಯನಿರ್ವಹಿಸುತ್ತದೆ’ ಎಂಬ ನಿಲುವಿಗೆ ಅಂಟಿಕೊಂಡು ಆಡ್ವಾಣಿ, ಮುರಳೀ ಮನೋಹರ ಜೋಶಿಯವರಂಥ ಮಾರ್ಗದರ್ಶಕರನ್ನು ಹಾಗೂ ಉಮಾ ಭಾರತಿಯವರಂಥ ಮುಂದಾಳುಗಳನ್ನು ನಡುನೀರಿನಲ್ಲಿ ಕೈಬಿಡುವಂತಿಲ್ಲ. ಅಯೋಧ್ಯಾ ಪ್ರಕರಣದಲ್ಲಿ ಕಾನೂನು ಈಗ ಅನುಸರಿಸುತ್ತಿರುವ ಸರಿಪಡಿಸಬೇಕಾದುದು ಪ್ರಧಾನಿ ಹಾಗೂ ಅವರ ಪಕ್ಷದ ಕರ್ತವ್ಯ. ಆಡ್ವಾಣಿ ಹಾಗೂ ಜೋಶಿಯವರ ವ್ಯಕ್ತಿತ್ವದ ಉನ್ನತಿಕೆಗೆ ಹಾಗೂ ಘನಸ್ಥಿಕೆಗೆ ಸರಿದೊರೆಯೆನಿಸುವ ನಾಯಕರು ಬಿಜೆಪಿಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಈ ನಾಯಕದ್ವಯರ ನಿಲುವುಗಳು ಬಿಜೆಪಿಯ ಸೀಮಿತ ಗುರುತುಗೆರೆಯ ಆಚೆಗೂ ವ್ಯಾಪಿಸಿರುವಂಥವು. 

1984ರಲ್ಲಿ ಕೇವಲ ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿದ್ದ ಬಿಜೆಪಿ 1991ರಲ್ಲಿ 91 ಸ್ಥಾನಗಳನ್ನು ಸಂಪಾದಿಸುವಂತೆ ಮಾಡಿದ ಶ್ರೇಯಸ್ಸು ಆಡ್ವಾಣಿಯವರಿಗಲ್ಲದೆ ಬೇರೆ ಯಾರಿಗೆ ಸಲ್ಲಬೇಕು? ಆ ದಿನಗಳಲ್ಲಿ ಮೋದಿ ಅವರೆಲ್ಲಿದ್ದರೆಂದೇ ಜನರಿಗೆ ಗೊತ್ತಿರಲಿಲ್ಲ. ಆಡ್ವಾಣಿ ಹಾಗೂ ಜೋಶಿಯವರನ್ನು ರಾಷ್ಟ್ರಪತಿಗಳಾಗಲು ಅರ್ಹರೆಂದು ಮೋದಿ ಅಥವಾ ಆರೆಸ್ಸೆಸ್‌ ನಾಯಕರು ಪರಿಗಣಿಸುತ್ತಾರೆಯೇ ಇಲ್ಲವೇ ಎಂಬುದು ಬೇರೆ ಮಾತು. ಈ ಇಬ್ಬರೂ ಖಂಡಿತವಾಗಿ ಪಕ್ಷದಲ್ಲಿನ ಇತರ ನಾಯಕರಿಗಿಂತ ಹೆಚ್ಚು ಎತ್ತರದಲ್ಲಿದ್ದಾರೆ. ಮೋದಿಯವರೀಗ ದೇಶಕ್ಕೆ ಅಷ್ಟೊಂದು ಪರಿಚಿತೆಯಲ್ಲದ, ಆದಿವಾಸಿ ನಾಯಕಿ ಹಾಗೂ ಜಾರ್ಖಂಡ್‌ ಹಾಲಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರ ಹೆಸರನ್ನು ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ಪರಿಗಣಿಸಲು ಮುಂದಾಗಿದ್ದಾರಂತೆ.

– ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next