Advertisement

ಚತುರ್ವಿಧ ಪ್ರಾರ್ಥನ ಯೋಜನೆ; ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು

12:05 AM Dec 07, 2019 | Sriram |

ಉಡುಪಿ: ಅದಮಾರು ಮಠದ ಪರ್ಯಾಯದಲ್ಲಿ ಕಾಲೇ ವರ್ಷತು ಪರ್ಜನ್ಯಃ| ಪೃಥಿವೀ ಸಸ್ಯಶಾಲಿನಿ|| ದೇಶಃ ಅಯಂ ಕ್ಷೋಭರಹಿತಃ| ಸಜ್ಜನಾಃ ಸಂತು ನಿರ್ಭಯಾಃ|| ಎಂಬಂತೆ ಈ ನಾಲ್ಕು ವಿಷಯಗಳ ಕುರಿತು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಿಳಿಸಿದರು.

Advertisement

ಪರ್ಯಾಯೋತ್ಸವಕ್ಕೆ ಮುನ್ನ ನಡೆಯುವ ನಾಲ್ಕನೆಯದಾದ ಭತ್ತ ಮುಹೂರ್ತ ಶುಕ್ರವಾರ ಜರುಗಿದಾಗ ಆಶೀರ್ವಚನ ನೀಡಿದ ಶ್ರೀಗಳು, ಇವೇ ನಮ್ಮ ಪರ್ಯಾಯ ಕಾಲದ ಯೋಜನೆಗಳು ಎಂದರು.

ಕಾಲಕಾಲಕ್ಕೆ ಮಳೆ ಬರಬೇಕು. ಅತ್ತ ಮೂಲ ಸೌಕರ್ಯ ವಿಸ್ತಾರ, ಇತ್ತ ಪರಿಸರವಾದಿಗಳ ಅಡೆತಡೆ -ಇವು ಕಂಡುಬರುತ್ತಿರುವಾಗ ಸಸ್ಯ ಶ್ಯಾಮಲೆ ವೃದ್ಧಿಯಾಗಲಿ, ಯುದ್ಧ ಇತ್ಯಾದಿಗಳು ನಡೆಯದೆ ಕ್ಷೋಭೆ ರಹಿತವಾಗಿ ಇರಲಿ, ಸಜ್ಜನರಿಗೆ ನೆಮ್ಮದಿ, ದುರ್ಜನರು ನಿಯಂತ್ರಣದ ಲ್ಲಿ ಇರುವಂತೆ ಆಡಳಿತ ವಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

2 ವರ್ಷಗಳ ಪರ್ಯಾಯ ನಿರ್ವಿಘ್ನವಾಗಿ ನಡೆಯಲಿ ಎಂದು ಪ್ರಾರ್ಥಿಸಿ 4 ಮುಹೂರ್ತಗಳನ್ನು ವಾದಿರಾಜಸ್ವಾಮಿಗಳು ಆರಂಭಿಸಿ ದರು. ಅದರಂತೆ ನಾಲ್ಕೂ ಮುಹೂರ್ತ ಗಳು ನಡೆದಿವೆ. ನಾವು ಗುರುಶಿಷ್ಯರು ಸೇರಿ ಪರ್ಯಾಯ ಪೂಜೆಯನ್ನು ನಡೆಸಲಿದ್ದೇವೆ ಎಂದರು.

ಆರಂಭದಲ್ಲಿ ಅದಮಾರು ಮಠದಿಂದ ಪ್ರಾರ್ಥನೆ ಸಲ್ಲಿಸಿ ಅಕ್ಕಿಮುಡಿ ಗಳನ್ನು ಶ್ರೀ ಚಂದ್ರೇಶ್ವರ, ಶ್ರೀ ಅನಂತೇಶ್ವರ ದೇಗುಲ, ಶ್ರೀ ಕೃಷ್ಣ ಮಠಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಅಕ್ಕಿಮುಡಿಗಳನ್ನು ಬಡಗು ಮಾಳಿಗೆಯಲ್ಲಿರಿಸಿ ಪೂಜಿಸಲಾಯಿತು. ಕಟ್ಟಿಗೆ ರಥಕ್ಕೆ ಶಿಖರ ಪ್ರತಿಷ್ಠೆಯನ್ನು ನಡೆಸಲಾಯಿತು.

Advertisement

ಶಾಸಕ ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಹಿರಿಯರಾದ ಎ.ಜಿ. ಕೊಡ್ಗಿ, ಶ್ರೀಕೃಷ್ಣ ಸೇವಾ ಬಳಗದ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಉಪಸ್ಥಿತರಿದ್ದರು.

ಕೊನೆಯದು ಭತ್ತ ಮುಹೂರ್ತ
ಪರ್ಯಾಯ ಪೂಜಾ ಕೈಂಕರ್ಯ ವಹಿಸಿಕೊಳ್ಳುವುದಕ್ಕೆ ಪೂರ್ವಭಾವಿ ಯಾಗಿ ಬಾಳೆಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತಗಳನ್ನು ನಡೆಸುವುದು ಉಡುಪಿಯ ಅಷ್ಟ ಮಠಗಳ ಪರಂಪರೆ. ಶ್ರೀಕೃಷ್ಣ ಮಠ ಮತ್ತು ಪರ್ಯಾಯ ಕಾಲದಲ್ಲಿ ಅನ್ನದಾನಕ್ಕೆ ಮಹತ್ವವಿರುವುದರಿಂದ ಅದಕ್ಕೆ ಸಂವಾದಿಯಾಗಿ ಈ ನಾಲ್ಕು ಮುಹೂರ್ತಗಳಿವೆ.

ಸಾಮಾನ್ಯವಾಗಿ ಭತ್ತದ ಮುಹೂರ್ತದಲ್ಲಿ ಸ್ವಾಮೀಜಿಯವರು ಇರುವುದಿಲ್ಲ. ಆದರೆ ಈ ಬಾರಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಪರ್ಯಾಯಕ್ಕೆ ಸನ್ನಿಹಿತವಾದ ಮುಹೂರ್ತ ಇದು. ಮೊದಲ 3 ಮುಹೂರ್ತಗಳು ಪರ್ಯಾಯ ಮಠದಲ್ಲಿ ನಡೆದರೆ ಕೊನೆಯ ಮುಹೂರ್ತ ಶ್ರೀಕೃಷ್ಣ ಮಠದ ಉಗ್ರಾಣದಲ್ಲಿ ನಡೆಯುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next