Advertisement

Adjustment: ಹೊಂದಾಣಿಕೆಯೇ ಜೀವನ

03:57 PM May 31, 2024 | Team Udayavani |

ಜೀವನವು ಸುಖಮಯವಾಗಿರಬೇಕಾದರೆ ಹೊಂದಾಣಿಕೆ ಅತ್ಯಗತ್ಯ. ಹೊಂದಾಣಿಕೆಯೇ ಜೀವನ ಎಂದು ಮನಶ್ಯಾಸ್ತ್ರಜ್ಞರು ಹೇಳುತ್ತಾರೆ.  ಮನುಷ್ಯ ಸಂಘಜೀವಿ, ಎಲ್ಲರೊಂದಿಗೆ ಬೆರೆತು ಬಾಳಬೇಕು. ಆದರೆ ಅದು ಯಾವಾಗಲೂ ಎಲ್ಲರೊಂದಿಗೂ ಸಾಧ್ಯವಾಗುವುದಿಲ್ಲ. ಮನುಷ್ಯನಿಗೆ ಅಹಂಕಾರ ಅಡ್ಡಿ ಬರುತ್ತದೆ. ನಾವೇ ಏಕೆ ಹೊಂದಿಕೊಂಡು ಹೋಗಬೇಕು? ನಮ್ಮಿಛೆಯಂತೆಯೇ ಆಗಬೇಕು ಎಂದೆನಿಸುತ್ತದೆ. ಆದರೆ ನಾವು ಹೊಂದುಕೊಂಡು ಹೋದರೆ ನಮ್ಮ ಅಕ್ಕ ಪಕ್ಕದವರೂ ಅನುಸರಿಸುತ್ತಾರೆ. ಆಗ ಸಾಮರಸ್ಯದ ಬದುಕು ನಮ್ಮದಾಗುತ್ತದೆ.

Advertisement

ಹೊಂದಾಣಿಕೆ ಮತ್ತು ಪರಸ್ಪರ ಸಹಕಾರಿ ಮನೋಭಾವನೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಇದರಿಂದ ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಹೊಂದಾಣಿಕೆಯ ಅವಶ್ಯಕತೆ ಇದೆ.

ಒಂದು ಕುಟುಂಬದಲ್ಲಿ ಹೊಂದಾಣಿಕೆ ಇದ್ದರೆ ಮದುವೆ, ಮುಂಜಿ ಮುಂತಾದ ಸಮಾರಂಭಗಳು ಸಂಭ್ರಮದಿಂದ ನೆರವೇರುತ್ತದೆ. ಸಂಸಾರದಲ್ಲಿ ಅತ್ತೆ-ಮಾವ, ಗಂಡ-ಹೆಂಡತಿ, ನಾದಿನಿ-ಮೈದುನ , ಮಕ್ಕಳು ಹೀಗೆ ಎಲ್ಲರೊಂದಿಗೆ ಹೊಂದಾಣಿಕೆ ಇದ್ದರೆ ನೆಮ್ಮದಿಯಿಂದ ಜೀವನವನ್ನು ಸಾಗಿಸಬಹುದು. ವಯಸ್ಸಿನ ಅಂತರದಿಂದಾಗಿ ಭಿನ್ನಾಭಿಪ್ರಾಯಗಳು ಮೂಡಬಹುದು, ಅದು ಸಹಜವೂ ಹೌದು. ಆದರೆ ಕೂತು ಮಾತನಾಡಿ ಹೊಂದಾಣಿಕೆಯಿಂದ ಬಗೆಹರಿಸಿಕೊಂಡರೆ ಸುಖ ಸಂಸಾರಕ್ಕೆ ನಾಂದಿಯಾಗುತ್ತದೆ. ಸಮರಸದ ಹೊಂದಾಣಿಕೆಯ ಅವಶ್ಯಕತೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಇನ್ನೂ ಯಾವ ಕ್ಷೇತ್ರದಲ್ಲೆ ಆಗಲಿ, ಉದಾಹರಣೆಗೆ ಕ್ರೀಡೆಯನ್ನೇ ತೆಗೆದುಕೊಳ್ಳೋಣ, ಸಹ ಆಟಗಾರ ನಡುವೆ ಹೊಂದಾಣಿಕೆ ಇಲ್ಲದ್ದಿದ್ದಲ್ಲಿ ಒಂದು ತಂಡವಾಗಿ ಉಳಿಯುವುದು ಕಷ್ಟ ಸಾಧ್ಯ . ಆಗ ಯಶಸ್ಸು ಮರೀಚಿಕೆಯಾಗುತ್ತದೆ. ಹೊಂದಾಣಿಕೆ, ಪರಸ್ಪರ ಗೌರವ ಸಹಾರಗಳೇ ತಂಡವನ್ನು ಗೆಲುವಿನ ದಡ ಸೇರಿಸುತ್ತದೆ.

ನಮ್ಮ ಮನಸ್ಸನ್ನು ಸದಾ ನಿರ್ಲಿಪ್ತವಾಗಿ ಆರಾಮಾಗಿ ಇಟ್ಟುಕೊಳ್ಳಬೇಕು. ಆಗ ನಾವು ಬೇರೆಯವರೊಡನೆ ಶಾಂತಿಯಿಂದ, ಸಮಾಧಾನದಿಂದ ವ್ಯವಹಾರಿಸಲು ಸಾಧ್ಯವಾಗುತ್ತದೆ.

Advertisement

ಇತರರೊಡನೆ ಮುಕ್ತ ಮನಸ್ಸಿನಿಂದ ಆಸಕ್ತಿಯಿಂದ ಯಾವುದೇ ಚಂಚಲತೆ ಇಲ್ಲದೆ ಸಂಭಾಷಿಸಿದರೆ ಹೊಂದಾಣಿಕೆ ತಾನಾಗಿಯೇ ಮೂಡುವುದು. ಆಡಳಿತ ಕ್ಷೇತ್ರದಲ್ಲಂತೂ ಹೊಂದಾಣಿಕೆಯ ಕೊರತೆಯಿಂದ ಇಲಾಖೆಯಲ್ಲಿನ ಸಹದ್ಯೋಗಿಗಳು ಪರಸ್ಪರ ವಿಶ್ವಾಸದಿಂದ ವ್ಯವಹರಿಸುವುದಿಲ್ಲ. ಇದರಿಂದ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಇನ್ನು ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆ ನಾವು ರಸ್ತೆ ಕಾಮಗಾರಿಯಲ್ಲೇ ಕಾಣಬಹುದು. ಇಂದು ಡಾಂಬರೀಕರಿಸಿದ ರಸ್ತೆಗೆ ಮರುದಿನವೇ ಜಲಮಂಡಲಿಯು ರಸ್ತೆ ಅಗೆಯುವ ಕಾರ್ಯವನ್ನು ಕೈಗೆತ್ತಿಕೊಂಡಿರುತ್ತದೆ.

ಹೊಂದಾಣಿಕೆಯನ್ನು ಕಾಣದ ಜೀವಸಂಕುಲಗಳು ಪ್ರಕೃತಿಯಲ್ಲಿ ಕಾಲಕ್ರಮೇಣ ನಶಿಸುತ್ತದೆ. ಇದು ಪ್ರಕೃತಿ ನಿಯಮ. ಆದ್ದರಿಂದ ಪ್ರಾಣಿಗಳು ನಿತ್ಯ ಹೊಂದಾಣಿಕೆಯಲ್ಲೇ ಬದುಕುತ್ತವೆ. ಇರುವೆಗಳು ಸೈನಿಕರಂತೆ ಪರಸ್ಪರ ಹೊಂದಾಣಿಕೆಯಿಂದ ಒಟ್ಟಿಗೆ ಆಹಾರ ಸಂಗ್ರಹಣೆಗೆ ಹೊರಡುತ್ತದೆ. ಪ್ರಾಣಿಗಳೆಲ್ಲವೂ ಗುಂಪು ಗುಂಪಾಗೆ ಸಹಚರಿಸುತ್ತವೆ. ಗುಂಪಿನಿಂದ ಬೇರ್ಪಟ್ಟ ಜಿಂಕೆ, ಮಂದೆಯನ್ನು ತೊರೆದ ಕುರಿ ಹುಲಿ ಸಿಂಹಗಳ ಬಾಯಿಗೆ ಸುಲಭವಾಗಿ ಆಹಾರವಾಗುದನ್ನು ನಾವು ಕಾಣಬಹುದು.

ಹೀಗೆ ಪ್ರಾಣಿಗಳಿಗಿರುವ ಹೊಂದಾಣಿಕೆ , ಅದರ ಮಹತ್ವದ ಅರಿವು ಪ್ರಾಣಿ ಕುಲದಲ್ಲೇ ಶ್ರೇಷ್ಠನಾದ ಮಾನವನಲ್ಲಿ ಮರೆಯಾಗುತ್ತಿರುವುದು ವಿಪರ್ಯಾಸ ಹಾಗೂ ವಿಷಾದನೀಯ. ಆದ್ದರಿಂದ ಪರಸ್ಪರ ಹೊಂದಾಣಿಕೆಯನ್ನು ಮೈಗೂಡಿಸಿಕೊಂಡು ಸಹಬಾಳ್ವೆಯಿಂದ ಬಾಳಿದಲ್ಲಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಿ, ದ್ವೇಷ ಅಸೂಯೆ ಕ್ಷಯಿಸುತ್ತದೆ. ನಮ್ಮ ಬಾಳು ಹಾಗೂ ಬದುಕು ಬಂಗಾರವಾಗುತ್ತದೆ.ಆದರಿಂದ ಹೊಂದಾಣಿಕೆಯಿಂದ ಬಾಳೋಣ …ಬೆಳೆಯೋಣ….

-ಚೇತನ ಭಾರ್ಗವ

ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next