Advertisement

ಸಸ್ಯಮೇವ ಜಯತೇ

06:25 AM Nov 24, 2018 | |

 ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿದವರು ನಾವು. ಇಂದು ಬ್ರಿಟಿಷರಿಲ್ಲ. ಅವರ ಸ್ಥಾನದಲ್ಲಿ ನಾವಿದ್ದೇವೆ. ಪ್ರಕೃತಿಯನ್ನು ಮನುಷ್ಯನಿಂದ ಕಾಪಾಡಬೇಕಾಗಿರುವ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸ. ಇಂಥ ಹೊತ್ತಿನಲ್ಲಿ ಹಸಿರು ಸತ್ಯಾಗ್ರಹವೊಂದರ ಕುರಿತು ನಾವೆಲ್ಲರೂ ತಿಳಿದುಕೊಳ್ಳಲೇ ಬೇಕಿದೆ. ಇದು “ಅದಮ್ಯ ಚೇತನದ ಸಸ್ಯಾಗ್ರಹ’.

Advertisement

“ಭೂಮಿ ಮೇಲಿಂದ ಜೇನುನೊಣಗಳು ನಶಿಸಿದ ನಾಲ್ಕೇ ವರ್ಷಗಳಲ್ಲಿ ಮನುಷ್ಯ ಸಂತತಿಯೂ ನಿರ್ನಾಮವಾಗುತ್ತದೆ’- ಇದು ಜಗದ್ವಿಖ್ಯಾತ ಭೌತಶಾಸ್ತ್ರಜ್ಞ ಅಲ್ಬರ್ಟ್‌ ಐನ್‌ಸ್ಟಿàನ್‌ ಅವರು ಹೇಳಿದ ಮಾತು. ಜೇನುನೊಣಗಳು ಅಳಿಯುವುದಕ್ಕೂ ಮನುಷ್ಯನ ಉಳಿವಿಗೂ ಎತ್ತಣಿಂದೆತ್ತ ಸಂಬಂಧವಯ್ಯ ಎಂದೆನಿಸುವುದು ಸಹಜ. ಜೀವಜಾಲದ ಸರಪಣಿಯಲ್ಲಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿದೆ. ಜೇನುನೊಣಗಳಿಲ್ಲದೇ ಹೋದರೆ ಹೂಗಳ ಪರಾಗಸ್ಪರ್ಶ ಕ್ರಿಯೆಗೆ ತೊಂದರೆಯಾಗುವುದು. ಅಂಥ ವಾತಾವರಣದಲ್ಲಿ ಗಿಡಮರಗಳು ಹುಟ್ಟುವುದೆಲ್ಲಿಂದ? ಆಹಾರೋತ್ಪಾದನೆ ನಿಂತಾಗ ಮನುಷ್ಯನಿಗೆ ಕುತ್ತು ಬರುವುದು ವಿದಿತ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಭವಿಷ್ಯವಾಣಿಯ ಅವಶ್ಯಕತೆಯಿಲ್ಲ. ಇದನ್ನು ಚೆನ್ನಾಗಿ ಅರಿತಿದ್ದರು ಕೇಂದ್ರ ಸಜಿವ ದಿ. ಅನಂತಕುಮಾರ್‌ರವರು. ಇಲ್ಲದೇ ಹೋಗಿದ್ದರೆ “ಸಸ್ಯಾಗ್ರಹ’ ಎನ್ನುವ ಹಸಿರು ಆಂದೋಲನವನ್ನವರು ರೂಪಿಸುತ್ತಿರಲಿಲ್ಲ. 

ಗ್ರೀನ್‌ ಸಂಡೇ ಪರಿಕಲ್ಪನೆ
30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಬ್ಬ ಮನುಷ್ಯನಿಗೆ ಒಂದು ಮರವಿತ್ತಂತೆ. ಇಂದು 7 ಮಂದಿಗೆ ಒಂದು ಮರವಿದೆ. ಐಐಎಸ್‌ಸಿ ಸಂಸ್ಥೆಯ ತಜ್ಞರ ಸಹಾಯದಿಂದ ಈ ಮಾಹಿತಿಯನ್ನು ಕಲೆ ಹಾಕಿದ್ದು ಅನಂತಕುಮಾರ್‌. ಆ ಕ್ಷಣವೇ ಬೆಂಗಳೂರನ್ನು ಮತ್ತೆ ಹಸಿರಾಗಿಸಬೇಕೆಂದು ಪಣ ತೊಟ್ಟಿದ್ದರು. ಅವರ ಕನಸು ನನಸಾಗುತ್ತಿರುವುದು ತೇಜಸ್ವಿನಿ ಅನಂತಕುಮಾರ್‌ ಅವರ ಅದಮ್ಯ ಚೇತನ ಎಂಬ ಲಾಭರಹಿತ ಸಂಸ್ಥೆಯ ಮೂಲಕ. ಝೀರೋ ವೇಸ್ಟ್‌, ಎಕೋ ಫ್ರೆಂಡ್ಲಿ ಅಡುಗೆಮನೆಯಂಥಾ ಹತ್ತು ಹಲವು ಪರಿಸರಸ್ನೇಹಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆಯಲ್ಲಿ ಸಸ್ಯಾಗ್ರಹ ಕೂಡಾ ಒಂದು ಭಾಗ. 2017ರಲ್ಲಿ ಶುರುವಾದಂದಿನಿಂದಲೂ ಪ್ರತೀ ಭಾನುವಾರ “ಗ್ರೀನ್‌ ಸಂಡೇ’ ಪರಿಕಲ್ಪನೆಯಡಿ, ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಗಿಡಗಳನ್ನು ನೆಡುತ್ತಲೇ ಬಂದಿದ್ದಾರೆ. 1 ಕೋಟಿ ಗಿಡಗಳನ್ನು ನೆಡುವುದು ಸಂಸ್ಥೆಯ ಗುರಿ. ಇದುವರೆಗೂ ಸುಮಾರು ಎರಡೂವರೆ ಲಕ್ಷ ಗಿಡಗಳನ್ನು ಸಂಸ್ಥೆ ವಿತರಿಸಿದೆ. ಪ್ರತಿ ವಾರಾಂತ್ಯದಂದು ನೂರಾರು ಮಂದಿ ಅದಮ್ಯ ಚೇತನದ ಸ್ವಯಂ ಸೇವಕರು ಗಿಡ ನೆಡುತ್ತಾರೆ. ಬರುವವರು ಜೊತೆಯಲ್ಲಿ ತಮ್ಮ ಸ್ನೇಹಿತರನ್ನು ಕರೆತರುತ್ತಾರೆ. ಈಗ ಅನೇಕ ಸಂಘ ಸಂಸ್ಥೆಗಳೂ ಅದಮ್ಯ ಚೇತನದೊಂದಿಗೆ ಕೈಜೋಡಿಸುತ್ತಿವೆ. ಕಳೆದ ಭಾನುವಾರವಷ್ಟೇ ಸಸ್ಯಾಗ್ರಹ 150ನೇ ವಾರವನ್ನು ಆಚರಿಸಿಕೊಂಡಿದೆ. ಹೇಳಬೇಕೆಂದರೆ, ಬೆಂಗಳೂರಿನ ಹಳೆ ವೈಭವವನ್ನು ಮರಳಿ ತರುವ ಮಹತ್ಕಾರ್ಯದಲ್ಲಿ ಸಂಸ್ಥೆ ತೊಡಗಿದೆ. 

Advertisement

ವೈಜ್ಞಾನಿಕವಾಗಿ ಗಿಡಗಳ ಆಯ್ಕೆ
ಗಿಡಗಳನ್ನು ನೆಡುವಾಗ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸುವುದು ಸಂಸ್ಥೆಯ ಹೆಗ್ಗಳಿಕೆ. ಅರಳಿ, ಆಲ, ಅತ್ತಿ, ಹೊಂಗೆ, ಬೇವು, ಬೂರಗ, ಅಂಟುವಾಳ, ನಂದಿ, ಆಕಾಶ ಮಲ್ಲಿಗೆ ಹುಣಸೆ, ಬಿಲ್ವಪತ್ರೆ, ಸೀತಾ ಅಶೋಕ, ನಾಗ ಸಂಪಿಗೆ ಸೇರಿದಂತೆ ಸುಮಾರು 25 ಬಗೆಯ ಗಿಡಗಳನ್ನು ಸಂಸ್ಥೆ ಬೆಂಗಳೂರಿನಾದ್ಯಂತ ನೆಟ್ಟಿದೆ. ಇದುವರೆಗೂ ನೋಡಲು ಚೆಂದ ಕಾಣುತ್ತದೆ ಎಂಬ ಕಾರಣಕ್ಕೆ ಗಿಡ  ನೆಟ್ಟ ಉದಾಹರಣೆಯೇ ಇಲ್ಲ. ಪಕ್ಷಿಗಳಿಗೆ ಸಹಾಯವಾಗಬೇಕು, ಅವುಗಳಿಂದ ಮರದ ಬೀಜಗಳು ಬೇರೆಡೆ ಹರಡಿ ಆ ಮರದ ಸಂಖ್ಯೆ ವೃದ್ಧಿಸುತ್ತದೆ ಎನ್ನುವುದು ಇದರ ಹಿಂದಿನ ಕಾರಣ. ಮತ್ತೆ ಅಂತರ್ಜಲ ಹೆಚ್ಚಬೇಕು ಎನ್ನುವ ಉದ್ದೇಶವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಗಿಡಗಳನ್ನು ನೆಡುವ ಮುನ್ನ ಸ್ಥಳ ಪರಿವೀಕ್ಷಣೆ ನಡೆಸಲಾಗುತ್ತದೆ. ಅದನ್ನು ಆಧರಿಸಿ ಯಾವ ಗಿಡಗಳನ್ನು ನೆಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.  ನೀರಿಲ್ಲದೆ ತುಂಬಾ ಸಮಯ ಇರಬಲ್ಲ, ಪ್ರತಿಕೂಲ ಹವಾಮಾನವನ್ನು ತಡೆದುಕೊಂಡು ನೂರಾರು ವರ್ಷಗಳ ಕಾಲ ಬದುಕಬಲ್ಲ ಮರಗಳನ್ನೇ ಹೆಚ್ಚಾಗಿ ಆರಿಸಲಾಗುತ್ತದೆ. 

ಟ್ರಾಫಿಕ್‌ ಮತ್ತು ಕಟ್ಟಡಗಳಿದ್ದ ಜಾಗಗಳಲ್ಲಿ ಅಡ್ಡಲಾಗಿ ಬೆಳೆಯುವ ಮರಗಳಿಗಿಂತ, ಉದ್ದವಾಗಿ ಬೆಳೆಯುವಂಥ ಮರಗಳನ್ನೇ ಹೆಚ್ಚಾಗಿ ಆರಿಸಲಾಗುತ್ತದೆ. ಒಮ್ಮೆ ಎರಡು ಲೇನ್‌ ರಸ್ತೆಯ ಮಧ್ಯ ಗಿಡ ನೆಡಬೇಕಾಗಿ ಬಂದಿತ್ತು. ಆವಾಗ ಆರಿಸಿದ್ದು ಶಿವನಿ ಮರವನ್ನು. ಅದಕ್ಕೆ ಕಾರಣ, ಅದರ ಬೇರುಗಳು ನೆಲಮಟ್ಟದಲ್ಲಿ ಹರಡಿಕೊಳ್ಳದೆ ನೇರವಾಗಿ ಭೂಮಿಯ ಆಳಕ್ಕೆ ಇಳಿಯುತ್ತಾ ಬೆಳೆಯುತ್ತದೆ ಎನ್ನುವುದು. ಇದರಿಂದ ಭವಿಷ್ಯದಲ್ಲಿ ರಸ್ತೆಗೆ ಯಾವುದೇ ರೀತಿಯ ತೊಂದರೆ ಎದುರಾಗದು ಎಂಬ ದೂರದೃಷ್ಟಿ. 

ನೆಟ್ಟ ನಂತರದ ನಂಟು
ಸಂಸ್ಥೆಯ ಗಮನ ನೆಡುವುದಕ್ಕೆ ಸೀಮಿತವಾಗಿಲ್ಲ. ನೆಟ್ಟ ನಂತರವೂ ಸ್ವಯಂಸೇವಕರು ಗಿಡದ ಪೋಷಣೆಯಲ್ಲಿ ನೆರವಾಗುತ್ತಾರೆ. ಅಲ್ಲದೆ ಗಿಡ ನೆಟ್ಟ ಜಾಗದ ಸುತ್ತಮುತ್ತ ವಾಸಿಸುವ ನಾಗರಿಕರನ್ನು ತಮ್ಮ ಕೆಲಸದಲ್ಲಿ ಸೇರಿಸಿಕೊಂಡು ಅವರಲ್ಲಿ ಜಾಗೃತಿ ಮೂಡಿಸುತ್ತಾರೆ. ಇದರಿಂದ ಪ್ರೇರಣೆ ಪಡೆದುಕೊಂಡು ಸ್ಥಳೀಯ ನಾಗರಿಕರೇ ತಮ್ಮ ಪ್ರದೇಶದಲ್ಲಿ ನೆಟ್ಟ ಗಿಡಗಳ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಒಮ್ಮೆ ಅದಮ್ಯ ಚೇತನ ಜೊತೆ ಕೈಜೋಡಿಸಿದ ಸ್ಥಳೀಯರು ಈ ನಿಸ್ಪೃಹ ಕಾರ್ಯದಲ್ಲಿ ಆತ್ಮಸಂತೋಷವನ್ನು ಕಂಡುಕೊಂಡು ಸ್ವಯಂಸೇವಕರಾಗಿ ಸೇರಿಕೊಳ್ಳುತ್ತಿರುವುದರಿಂದ ಸ್ವಯಂಸೇವಕರ ಸಂಖ್ಯೆಯೂ ವೃದ್ಧಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಸಂಸ್ಥೆಯ ಹಿರಿಯ ಸ್ವಯಂಸೇವಕ ರಾಜು ಬನ್ನೂರು. ಇದು, ನಿಜಾರ್ಥದ ಖಟrಛಿಚಛಜಿnಜ ಜಚಟಟಜಿnಛಿss.

ಹಣ್ಣಿನ ಗಿಡಗಳನ್ನೇಕೆ ನೆಡುವುದಿಲ್ಲ?
ಅಚ್ಚರಿಯ ಸಂಗತಿ ಎಂದರೆ ಗಿಡಗಳನ್ನು ನೆಡುವಾಗ ಅದಮ್ಯ ಚೇತನ ಸಂಸ್ಥೆಯವರು ವೈಜ್ಞಾನಿಕ ಮನೋಧರ್ಮ ಮಾತ್ರವೇ ತೋರುವುದಿಲ್ಲ, ಸಾಮಾಜಿಕ ಮನೋಧರ್ಮವನ್ನು ಕೂಡಾ ತೋರುತ್ತಾರೆ. ಸಾಮಾನ್ಯವಾಗಿ ಹಣ್ಣುಗಳನ್ನು ಬಿಡುವ ಮರಗಳನ್ನು ನೆಡುವುದಿಲ್ಲ. ಆ ಮರಗಳನ್ನು ಮನುಷ್ಯ ಆರ್ಥಿಕ ಲಾಭದ ದೃಷ್ಟಿಯಿಂದ ನೋಡುತ್ತಾನೆ ಎಂದು. 

ಅಕ್ಕಿ ತೊಳೆದ ನೀರು ಲಾಲ್‌ಬಾಗಿಗೆ
“ಅದಮ್ಯ ಚೇತನ’ ಸಾವಿರಾರು ಮಕ್ಕಳಿಗೆ ಮಧ್ಯಾಹ್ನದ ಉಚಿತ ಊಟ ವ್ಯವಸ್ಥೆಯನ್ನು ಮಾಡುತ್ತದೆ. ಇಷ್ಟು ದೊಡ್ಡ ಪ್ರಮಾಣದ ವ್ಯವಸ್ಥೆಯಲ್ಲಿ ಇಂಧನ ಬಳಕೆಯಿಂದ ಹಿಡಿದು, ತ್ಯಾಜ್ಯ ಮರುಬಳಕೆಯವರೆಗೆ ಎಲ್ಲೆಲ್ಲಿ ಸಾಧ್ಯವೋ ಅವೆಲ್ಲಾ ವಿಭಾಗಗಳಲ್ಲಿ ಪರಿಸರ ಸ್ನೇಹಿ ಮಾರ್ಗಗಳನ್ನು ಅಳವಡಿಸಿಕೊಂಡಿದೆ ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ ತಾಂತ್ರಿಕ ಉಸ್ತುವಾರಿಯನ್ನು ವಹಿಸಿಕೊಂಡಿರುವ ಹಿರಿಯ ಸ್ವಯಂಸೇವಕ ಎಸ್‌.ಎನ್‌.ಎ ಪ್ರಸಾದ್‌. ಸಂಸ್ಥೆಯ ಬೃಹತ್‌ ಅಡುಗೆಮನೆಯಲ್ಲಿ ಕ್ವಿಂಟಾಲ್‌ಗ‌ಟ್ಟಲೆ ಅಕ್ಕಿಯನ್ನು ತೊಳೆಯಲಾಗುತ್ತದೆ. ಅಕ್ಕಿ ತೊಳೆದ ನೀರು ನೇರವಾಗಿ ಚರಂಡಿ ಸೇರುವುದಿಲ್ಲ. ಅದನ್ನು ಪೈಪಿನ ಮೂಲಕ ಕಂಟೇನರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಅಕ್ಕಿ ತೊಳೆದ ನೀರು ನೇರವಾಗಿ ಹೋಗುವುದು ಲಾಲ್‌ಬಾಗಿಗೆ. ಅಲ್ಲಿನ ಗಿಡಮರಗಳಿಗೆ ಅದಮ್ಯ ಚೇತನದ ಅಕ್ಕಿ ತೊಳೆದ ನೀರುಣಿಸಲಾಗುತ್ತದೆ. ಅದಮ್ಯ ಚೇತನದ ಎಲ್ಲಾ ಚಟುವಟಿಕೆಗಳೂ ಯಾವ ಮಟ್ಟಿಗೆ ಪರಿಸರಸ್ನೇಹಿ ಎನ್ನುವುದಕ್ಕೆ ಉತ್ತಮ ನಿದರ್ಶನವಿದು. 

ಮಕ್ಕಳನ್ನು ಒಂದಾಗಿಸುವ ಗೋಡೆ ಪತ್ರಿಕೆ
ಒಮ್ಮೆ ಸಂಸ್ಥೆಯಲ್ಲಿ ಚರ್ಚೆ ನಡೆದಿತ್ತು. ಶಾಲಾ ಮಕ್ಕಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವುದು ಹೇಗೆ ಎಂಬ ವಿಷಯದ ಕುರಿತು. ಕಡೆಗೆ ಪರಿಸರ ಕಾಳಜಿ ಕುರಿತಾದ ಪತ್ರಿಕೆಯನ್ನು ಮಕ್ಕಳಿಗೆ ಹಂಚುವುದೆಂದಾಯಿತು. ಅಷ್ಟೂ ಮಕ್ಕಳಿಗೆ ಸಾವಿರಾರು ಪತ್ರಿಕೆಗಳನ್ನು ಹಂಚುವುದೆಂದರೆ ಮುದ್ರಣಕ್ಕಾಗಿ ಅಷ್ಟೊಂದು ಕಾಗದ ಮತ್ತು ಪರಿಸರ ಮಲಿನಗೊಳಿಸಿದಂತೆ ಎನ್ನುವುದು ತೇಜಸ್ವಿನಿ ಅನಂತ ಕುಮಾರ್‌ರವರ ಅಭಿಪ್ರಾಯವಾಗಿತ್ತು. ಸಂಸ್ಥೆಯ ಕಾಳಜಿಗೆ ವಿರುದ್ಧವಾಗಿ ಹೋದಂತಾಗುತ್ತದೆ ಎನ್ನುವುದು ಅವರ ಇಂಗಿತ. ಆಗ ಹೊಳೆದಿದ್ದೇ “ಚಿಣ್ಣರ ಚೇತನ’ ಎಂಬ ಗೋಡೆ ಪತ್ರಿಕೆಯ ಉಪಾಯ. ಸಂಸ್ಥೆ ನಂಟು ಹೊಂದಿರುವ ಸರ್ಕಾರಿ ಶಾಲೆಗಳಲ್ಲಿ ನೋಟಿಸ್‌ ಬೋರ್ಡ್‌ಗಳಲ್ಲಿ ಈ ಪತ್ರಿಕೆಯನ್ನು ತೂಗು ಹಾಕುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಮಕ್ಕಳು ಗುಂಪುಗಟ್ಟಿ ಚರ್ಚಿಸುತ್ತಾ ಓದುವುದರಿಂದ ಜ್ಞಾನ ಹರಡುತ್ತದೆ ಎಂಬ ಆಶಯವೂ ಇದೆ.

“ಅದಮ್ಯ ಚೇತನ’ ಶುರುವಾಗುವುದಕ್ಕೆ ವರ್ಷಗಳಷ್ಟು ಹಿಂದಿನಿಂದಲೇ ಅನಂತ್‌ ಕುಮಾರ್‌, ತೇಜಸ್ವಿನಿ, ನಾನು ಮತ್ತು ಕೆಲ ಕುಟುಂಬಸ್ಥರು ಗಿಡಗಳನ್ನು ನೆಡುತ್ತಿದ್ದೆವು. ಅನಂತ್‌ ಅವರು ಪರಿಸರದ ಕುರಿತು ಎಷ್ಟು ಕಾಳಜಿ ಹೊಂದಿದ್ದರೆಂದರೆ ಗಿಡ ನೆಡುವ ಸ್ವಯಂಸೇವಕರಿಗೆ ವಾಕಿಂಗ್‌ ಅಥವಾ ಸೈಕಲ್‌ ಮೂಲಕ ಬನ್ನಿ ಎನ್ನುತ್ತಿದ್ದರು. ಒಂದು ಗಿಡ ನೆಡುವುದಕ್ಕಾಗಿ ಕೆ.ಜಿ ಗಟ್ಟಲೆ ಕಾರ್ಬನ್‌ ಮೋನೋ ಆಕ್ಸೆ„ಡ್‌ ಬಿಡುಗಡೆಗೆ ಕಾರಣವಾಗುವುದರಲ್ಲಿ ಅರ್ಥವಿಲ್ಲ. ಕಡೇಪಕ್ಷ ರಿûಾದಲ್ಲಿ ಬರುತ್ತಾ ಮೂರು ನಾಲ್ಕು ಮಂದಿಯನ್ನು ಜೊತೆಗೆ ಕರೆದುಕೊಂಡಾದರೂ ಬನ್ನಿ ಎನ್ನುತ್ತಿದ್ದರು. ಅವರ ದೂರದೃಷ್ಟಿ ಮತ್ತು ತೇಜಸ್ವಿನಿಯವರ ಮಾರ್ಗದರ್ಶನದಲ್ಲಿ ಸಂಸ್ಥೆ ಮುಂದುವರಿಯಲಿದೆ.
– ಛಾಯಾ ಬಾಪಟ್‌, ಹಿರಿಯ ಸ್ವಯಂಸೇವಕಿ, ತೇಜಸ್ವಿನಿ ಅನಂತಕುಮಾರ್‌ ಸಹೋದರಿ
 

Advertisement

Udayavani is now on Telegram. Click here to join our channel and stay updated with the latest news.

Next