Advertisement

ಹೆಚ್ಚುವರಿ ಬೌಲರ್‌ಗಾಗಿ ಗೇಲ್‌ ಹೊರಕ್ಕೆ: ವೆಟರಿ

10:34 AM Apr 18, 2017 | Team Udayavani |

ಬೆಂಗಳೂರು: ಸ್ಫೋಟಕ ಬ್ಯಾಟ್ಸ್‌ ಮನ್‌ ಕ್ರಿಸ್‌ ಗೇಲ್‌ ಅವರನ್ನು ಪುಣೆ ಪಂದ್ಯ ದಿಂದ ಹೊರಗಿರಿಸಿದ್ದನ್ನು ಆರ್‌ಸಿಬಿ ಕೋಚ್‌ ಡೇನಿಯಲ್‌ ವೆಟರಿ ಸಮರ್ಥಿಸಿದ್ದಾರೆ. ಹೆಚ್ಚುವರಿ ಬೌಲರ್‌ಗಾಗಿ ಈ ನಿರ್ಧಾರಕ್ಕೆ ಬರಲಾಯಿತು ಎಂದಿದ್ದಾರೆ.

Advertisement

“ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯ ದಲ್ಲಿ ನಮಗೆ ಓರ್ವ ಬೌಲರ್‌ನ ಕೊರತೆ ಕಾಡಿತು. ಶೇನ್‌ ವಾಟ್ಸನ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡಕ್ಕೂ ಸೈ ಎನಿಸಿದ್ದರಿಂದ ಇಲ್ಲಿ ಅವರಿಗೆ ಮರಳಿ ಅವಕಾಶ ಕಲ್ಪಿಸಲಾಯಿತು. ಅವರು ಟಿ-20 ಕ್ರಿಕೆಟಿನ ಅದ್ಭುತ ಆಲ್‌ರೌಂಡರ್‌…’ ಎಂಬುದಾಗಿ ತಂಡದ ಸೋಲಿನ ಬಳಿಕ ವೆಟರಿ ಹೇಳಿದರು. 

ಆದರೆ ಪುಣೆ ವಿರುದ್ಧ ವಾಟ್ಸನ್‌ ಎರಡೂ ವಿಭಾಗಗಳಲ್ಲಿ ಶೋಚನೀಯ ವೈಫ‌ಲ್ಯ ಕಂಡದ್ದು ಮಾತ್ರ ಆರ್‌ಸಿಬಿಯ ದುರದೃಷ್ಟಕ್ಕೆ ಸಾಕ್ಷಿ. 4 ಓವರ್‌ಗಳಿಂದ 44 ರನ್‌ ಬಿಟ್ಟುಕೊಟ್ಟ ಅವರು ಒಂದೇ ವಿಕೆಟ್‌ ಉರುಳಿಸಿದರು. ಬ್ಯಾಟಿಂಗ್‌ ವೇಳೆ 18 ಎಸೆತಗಳಿಂದ ಕೇವಲ 14 ರನ್‌ ಮಾಡಿ ನಿರ್ಗಮಿಸಿದರು. ಹೊಡೆದದ್ದು ಒಂದೇ ಬೌಂಡರಿ.

“18 ಓವರ್‌ ತನಕವೂ ನಮ್ಮ ಬೌಲಿಂಗ್‌ ಯೋಜನೆಯಂತೆಯೇ ಸಾಗಿತ್ತು. ಆದರೆ ಕೊನೆಯ 2 ಓವರ್‌ಗಳಲ್ಲಿ 30 ರನ್‌ ಸೋರಿ ಹೋಯಿತು. ಕನಿಷ್ಠ 15 ರನ್ನನ್ನು ನಾವು ಹೆಚ್ಚು ನೀಡಿದೆವು…’ ಎಂದು ವೆಟರಿ ಅಭಿಪ್ರಾಯಪಟ್ಟರು.

ಚಿನ್ನಸ್ವಾಮಿ ಟ್ರ್ಯಾಕ್‌ನಲ್ಲೇಕೆ ಈಗ ರನ್‌ ಹರಿದು ಬರುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೆಟರಿ, “ಇದು ಟಿ-20 ಕ್ರಿಕೆಟಿನ ಕಳಪೆ ಟ್ರ್ಯಾಕ್‌ ಏನೂ ಅಲ್ಲ. ಬೌಲರ್‌ಗಳಿಗೆ ಉತ್ತಮ ನೆರವು ನೀಡುತ್ತಿದೆ. ಈವರೆಗೆ ಇಲ್ಲಿ ಆಡಲಾದ ಪಂದ್ಯಗಳೆಲ್ಲವೂ ರೋಮಾಂಚಕಾರಿಯಾಗಿ ಸಾಗಿವೆ. ಪಿಚ್‌ ಹೇಗೆಯೇ ಇರಲಿ, ಇದಕ್ಕೆ ನಾವು ಹೊಂದಿಕೊಳ್ಳುವುದು ಮುಖ್ಯ…’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next